Homeಅಂಕಣಗಳುಥೂತ್ತೇರಿ | ಯಾಹೂಬಲೆ ಹಾಕಿ ನರಿ ಹಿಡದಂಗೆ ಹಿಡಿತರೆ ಹುಶಾರು : ಯಾಹೂ

ಬಲೆ ಹಾಕಿ ನರಿ ಹಿಡದಂಗೆ ಹಿಡಿತರೆ ಹುಶಾರು : ಯಾಹೂ

- Advertisement -
- Advertisement -

ಭಾರತದ ಪಾರ್ಲಿಮೆಂಟಿಗೆ ಪರ್ಯಾಯವಾಗಿ, ಆಗಾಗ್ಗೆ ಉಡುಪಿಯಲ್ಲಿ ಸೇರುವ ಅಷ್ಟ ಮಠಾಧಿಪತಿಗಳ ಧರ್ಮ, ಸಂಸತ್ ಈಚೆಗೆ ಸಾರ್ವಜನಿಕರು ಕತ್ತೆ, ನಾಯಿ, ಹಂದಿ, ಮಾಂಸ ತಿನ್ನುವಂತೆ ಉಪದೇಶ ಮಾಡಿರುವ ಬಗ್ಗೆ. ವಯೋವೃದ್ಧರು, ಜ್ಞಾನವೃದ್ಧರು ಹಾಗೂ ಪ್ರಾಬ್ಲಂ ವೃದ್ಧರೂ ಆದ ಪೇಜಾವರ ಶ್ರೀಗಳನ್ನ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ ‘ಕೃಷ್ಣಾ… ನೀ ಬೇಗನೆ ಬಾರೋ, ಬೇಗನೆ ಬಂದು ಮುಖವನು ತೋರೊ.

“ಹಲೋ ಯಾರು”
“ಸ್ವಾಮೀಜಿ ನಾನು ನಿಮ್ಮ ಭಕ್ತ ಯಾಹೂ.”
“ಹಿಂದೆ ನೀವು ಫೋನ್ ಮಾಡಿದ್ದಿರಲ್ಲವೆ.”
“ಹೌದು ಸ್ವಾಮೀಜಿ, ತಮ್ಮ ದನಿ ಕೇಳಬೇಕು ಅನ್ನಿಸಿದಾಗೆಲ್ಲ ಮಾತನಾಡ್ತಿನಿ.”
“ಈಗ ಯಂತಕ್ಕೆ ಫೋನ್ ಮಾಡಿದ್ದು.”
“ಉಷಾರಾಗಿದೀರ ಸ್ವಾಮೀಜಿ.”
“ನನಗೆಂತ ಆಗಿಲ್ಲ.”
‘ಅಲ್ಲ ನಿಮ್ಮ ದನಿ ಹಾಳುಬಾವಿಯಿಂದ ಕೇಳಿದಂಗೆ ಕೇಳತಾಯಿತ್ತು. ಅದಕ್ಕೆ ಮೊನ್ನೆ ಬಂದಿದ್ರಲ್ಲಾ ಸ್ವಾಮಿ ಅವುರಿದ್ದಾರ?”
“ಆ ಇವುನು ಸ್ವಾಮಿ. ಪೊಲೀಸರಿಂದ ತಪ್ಪಿಸಿಗಳಕ್ಕೆ ಚೂಡಿದಾರ ಇಕ್ಕಂಡು ಪರಾರಿಯಾಗಿದ್ದರಲ್ಲ?”
‘ಅಂತವರಾರು ಇಲ್ಲಿ ಬಂದಿರಲಿಲ್ಲ.’
“ಆ ಇವುನು ಸ್ವಾಮೀಜಿ ಮೈದಾನದಲ್ಲಿ ಕೂತಗಂಡು ಮೈನ್ಯಲ್ಲ ಮುರುದು ಮಟ್ಟಿಕಟ್ಟತನೆ, ಸೊಟ್ಟಬಾಯಿ ಗೊತ್ತಾಗಬಾರ್ದು ಅಂತ ಗಡ್ಡಬಿಟ್ಟವನೆ.”
“ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ.”
“ಸಹಿಸಿಕೋಬೇಕಾಗುತ್ತೆ ಸ್ವಾಮಿ.’
“ಯಂತಕ್ಕೆ.”
“ಮಾಂಸಾಹಾರಿಗಳಿಗೆ ಆತ, ಕತ್ತೆ ನಾಯಿ ಹಂದಿ ತಿನ್ನಿ ಅಂದವುನೆ.”
“ಗೋಮಾಂಸದ ಬದಲು ತಿನ್ನಿ ಅಂತ ಹೇಳಿದ್ದು.”
“ಅದವುರ ಅನುಭವದ ಮಾತ ಸಾಮೀಜಿ?”
“ಅನುಭವ ಆಗಲೇಬೇಕು ಅಂತ ಇಲ.”
“ಶಂಕರಾಚಾರ್ಯರು ಅನುಭವ ಪಡದು ಉಪದೇಶ ಮಾಡಿದ್ರಂತೆ.”
“ಅದು ಬೇರೆ ಇದು ಬೇರೆ.”
“ಎರಡೂ ಒಂದೆ ಬಾಬಾ ರಾಮದೇವ ಆಯುರ್ವೇದ ಪಂಡಿತರು ಯೋಗಪಟು ದೇಹದ ಅಂಗಾಂಗವೃದ್ಧಿಗೆ ಕೆಲವು ಪದಾರ್ಥನೂ ಮಾರ್ತರೆ. ಆ ಮಹಾಮಹಿಮರು ಕತ್ತೆ, ನಾಯಿ ಹಂದಿ, ತಿನ್ನಿ ಅನ್ನಬೇಕಾದ್ರೆ ಸುಮ್ಮಸುಮ್ಮನೆ ಹೇಳಿಲ್ಲ ಸ್ವಾಮಿ”
‘ಗೋವನ್ನು ಉಳಿಸಬೇಕಾದರೆ ಹಾಗೆ ಮಾಡಿ ಅಂತ ಹೇಳಿದ್ದು ‘ಅದರಿಂದ ಜಾಗತಿಕ ತಾಪಮಾನ ಕಡಮೆಯಾಗುತ್ತ?”
“ಹೌದು ಅವರು ಹಾಗೆ ಹೇಳಿದ್ದು.”
“ನಮ್ಮ ಜನ ಈಗಾಗ್ಲೆ ಕತ್ತೆ ನಾಯಿ ಹಂದಿ ತಿಂತಾಯಿದಾರೆ ಸ್ವಾಮಿ.”
“ಕತ್ತೆ ತಿನ್ನುವುದುಂಟ!?”
“ಮಲೆನಾಡು ಭಾಗದಲ್ಲಿ ಒಬ್ಬ ಹೋಟ್ಳು ಮಾಡಿಕೊಂಡು ಕಡವೆ ಮಾಂಸ ಅಂತ ಹೇಳಿ ಕತ್ತೆ ಮಾಂಸ ತಿನ್ನುಸ್ತಿದ್ದ. ಕತ್ತೆ ಖಾಲಿಯಾದ ಮೇಲೆ ಸಿಕ್ಕಿದ ಸ್ವಾಮಿ.”
“ಹಾಗಾದರೆ ಅವನು ಕೆಟ್ಟವನು.“
“ಮತ್ತೆ ರಾಮದೇವ ಕತ್ತೆ ತಿನ್ನಿ ಅಂದರೆ ನೀವು ಕೆಟ್ಟವನು ಅಂತಿರಿ?”
“ಪ್ರಾಣಿಗಳಿಗೆ ನಿಮ್ಮಷ್ಟೇ ಬದುಕುವ ಹಕ್ಕುಂಟು.”
“ಇದ್ಯಾವ ಸೀಮೆ ಮಾತು ಸ್ವಾಮಿ, ತಿನ್ನಿ ಅನ್ನಾರು ನೀವೆಯ, ಪ್ರಾಣಿಗಳು ನಿಮ್ಮಂಗೆ ಬದುಕಬೇಕು ಅನ್ನೋರು ನೀವೆಯ, ನಾಯಿ ತಿನ್ನಿ ಅಂತ ರಾಮದೇವ ಹೇಳಬೇಕಾದ್ರೆ ಅವುರು ತಿಂದಿದ್ದರೆ ಸ್ವಾಮಿ.”
“ಮಾತಿಗೆ ಹೇಳಿದ್ದನ್ನ ನೀವು ನಿಜ ಅಂತ ಹೇಳುವುದೆ?”
“ಸ್ವಾಮೀಜಿ. ನಮ್ಮ ಜನ ಆಗ್ಗೆ ನಾಯಿ ತಿಂತಾ ಅವುರೆ. ಬೆಂಗಳೂರಲ್ಲಿ ತಿಂತರೆ. ತಮುಳು ನಾಡಲ್ಲಯ ನಾಯಿ ಮಾಂಸ ರಪ್ತು ಮಾಡುವಾಗ್ಲೆ ಸಿಕ್ಕಿ ಬಿದ್ರು”
“ಜನಗಳು ಇಷ್ಟೊಂದು ಕೆಟ್ಟುಹೋಗಿದ್ದಾರೆ ಒಹ್ ದೇವರೇ”
“ಹೌದು ಸ್ವಾಮಿ ಜಾಸ್ತಿ ಮಾತಾಡಿದ್ರೇ, ಸ್ವಾಮಿಗಳನೂ ಬಲೆಹಾಕಿ ನರಿ ಹಿಡದಂಗೆ ಹಿಡಿದು ಕುಯ್ಕೊಂಡು ತಿಂತಾರೆ. ಹುಶಾರು ಒಬ್ಬೊಬ್ಬರೆ ತಿರುಗಾಡುಬೇಡಿ.”
“ನೀವು ಮಾಂಸಾಹಾರಿಗಳ?’
“ಹೌದು, ನನಗೆ ಹಂದಿ ತುಂಬ ಪ್ರಿಯವಾದ ಪ್ರಾಣಿ. ಅದನುಕಂಡ್ರೆ ನಡೆದಾಡೋ ಕೇಕ್ ತರ ಕಾಣುತ್ತೆ ಸ್ವಾಮಿ.”
“ಅಸಹ್ಯವಾಗಿ ಮಾತನಾಡಬೇಡಿ.”
“ಕೃಷ್ಣನ ವರಾಹವತಾರಕ್ಕೆ ನೀವು ಗೌರವಕೊಡ್ತಿರಿ ತಾನೆ?”
“ಹೌದು, ಪರಮಾತ್ಮನ ಆ ಅವತಾರದಿಂದಲೇ ಈ ಭೂಮಿ ಉಳಿದದ್ದು.”
“ಪರಮಾತ್ಮ ವರಾಹ ಅವತಾರ ಎತ್ತಿದ ಕಾರಣಕ್ಕೆ ವರಾಹದ ಮಾಂಸಕ್ಕೆ ಅಷ್ಟೊಂದು ರುಚಿ ಬಂದಿದ್ದು. ನನಗನ್ನಿಸಿದಂಗೆ ಈ ಜಗತ್ತಿನಲ್ಲಿ ಯಾವ ಪ್ರಾಣಿ ಮಾಂಸನೂ ಹಂದಿ ಮಾಂಸದಷ್ಟು ರುಚಿಯಾಗಿಲ್ಲ, ಯಾಕೆ ಅಂದ್ರೆ ಅದು ಕೃಷ್ಣಪರಮಾತ್ಮನ ಅವತಾರ.”
“ಅವತಾರವನ್ನು ಗೌರವಿಸಿ ಪೂಜೆ ಮಾಡಬೇಕು, ಅದನ್ನು ತಿನ್ನಲಿಕ್ಕೆ ಹೋಗಬಾರ್ದು”
“ಸ್ವಾಮೀಜಿ, ಕೃಷ್ಣ ಪರಮಾತ್ಮ ವರಾಹ ಅವತಾರ ತಾಳಿದ್ದ ಕಾರಣಕ್ಕೆ ಹಂದಿ ಮಾಂಸದಲ್ಲಿ ಯಾವುದೇ ಪ್ರಾಣಿ ಮಾಂಸದಲ್ಲಿ ಇರದೆ ಇರುವ ಥೈಮನ್ ಅಂತ ಒಂದಂಶ ಇದೆ. ಇದಕ್ಕೆ ಔಷಧಿ ಗುಣ ಇದೆ. ಮಲೆನಾಡು ಜನ ಕಡ್ಡಾಯವಾಗಿ ತಿಂತರೆ. ಬಯಲುಸೀಮೆ ಜನ ಗೊತ್ತಿಲ್ದೆ ತಿಂತಾರೆ. ಒಂದು ಕೆ.ಜಿ ತಿಂದ್ರೂ ಏನೂ ಆಗಲ್ಲ. ಈಚೆಗೆ ನಾನು ಎರಡು ಕೆ.ಜಿ ತಿಂದಿದ್ದೆ, ಆದ್ರೂ ಆರಾಮಾಗಿದ್ದೆ. ನಿದ್ರೆ ವಿಷಯದಲ್ಲಿ ಸ್ವಲ್ಪ ಹಂದಿ ನಡವಳಿಕೆ ಇರುತ್ತೆ ಅಷ್ಟೇ, ನೀವು ಗೋವುಗಳನ್ನ ಮಾಂಸಾಹಾರಿಗಳಿಂದ ಕಾಪಾಡಬೇಕಾದ್ರೆ, ವರಾಹ ಫಾರಂ ಮಾಡಿ, ಇಲ್ಲಿಂದ್ಲೆ ವಿತರಿಸಿದರೆ ಗೋ ಸಂತತಿ ವೃದ್ಧಿಯಾಗುತ್ತೆ.”
“ಯಂತ ಹೇಳುವುದು ನೀವು, ನಾವು ಹಂದಿ ಸಾಕುವುದ?”
“ಕೃಷ್ಣನ್ನೆ ಸಾಕ್ತಾಯಿದ್ದಿರಿ. ಅವನ ಅವತಾರ ಸಾಕಕ್ಕಾಗಲ್ಲವೆ. ಇದು ಕೂಡ ಗೋರಕ್ಷಣೆಯ ಒಂದು ಚಳವಳಿ. ವರಾಹ ಚಳವಳಿ.”
“ಗೋ ರಕ್ಷಣೆಗೆ, ಯಂತ ಚಳವಳಿ ಮಾಡಬೇಕು ಅಂತ ನಮಗೆ ಗೊತ್ತುಂಟು. ನೀವು ಹೇಯವಾದ ಸಲಹೆಗಳನ್ನು ಕೊಡುವುದು ಬೇಡ.”
“ಸ್ವಾಮೀಜಿ ಇನ್ನೊಂದು ವಿಷಯ. ನಿಮ್ಮ ಶಿಷ್ಯನಂತಿರೊ ಮೋದಿ ಈಗಾಗ್ಲೆ ಎರಡನೇ ಅವಧಿಗೆ ಪ್ರಧಾನಿಯಾಗವುರೆ. ಅವುರಿಂದ್ಲೆ ಗೋಹತ್ಯೆ ನಿಷೇಧ ಸಾಧ್ಯವಾಗಿಲ್ಲ. ಯಾಕಂದ್ರೆ ಗೋಮಾಂಸ ರಪ್ತಿನ ವರ್ತಕರೆಲ್ಲಾ ಬಿ.ಜೆ.ಪಿಗಳಂತೆ.”
“ಅದು ನಮಗೆ ಬೇಡ. ಗೋಹತ್ಯೆ ನಿಲ್ಲಬೇಕಷ್ಟೆ.”
“ಆಮೇಲೆ, ಗಂಗೆ ಶುದ್ಧೀಕರಣದ ಮಾತಾಡ್ತಿರಿ. ಮೋದಿ ಮೊದಲ ಬಾರಿಗೆ ಬಂದಾಗ್ಲಿಂದ ಇಲ್ಲಿವರಿಗೂ ಶುದ್ಧಿ ಮಾಡಕ್ಕಾಗಿಲ್ಲ. ಆಗದೆಯಿರೊ ಕೆಲಸ ಹೇಳ್ತಿರಿ. ಆಮೇಲೆ ಇನ್ನೊಂದು ವಿಷಯ ನಿಮ್ಮ ಧರ್ಮನೂ ಮುಸ್ಲಿಮ್ ಧರ್ಮನೂ ಒಂದೇ ಮಾಡಕ್ಕೊಂಟಿದ್ದಿರಂತಲ್ಲಾ?”
“ಯಾರು ಹೇಳಿದ್ದು?”
“ನೀವೇ ಹೇಳಿದ್ದಿರಿ. ಮಸೀದಿಗೆ ಹೇಗೆ ಮಹಿಳೆ ಪ್ರವೇಶ ಇಲ್ಲವೊ ಹಾಗೆ ಅಯ್ಯಪ್ಪನ ದೇವಸ್ಥಾನಕ್ಕೆ ಮಹಿಳೆ ಹೋಗುವುದು ಬೇಡ ಅಂತೆ. ಅಂತೂ ಮುಸ್ಲಿಂ ಧರ್ಮ ನಿಮಗೆ ಆದರ್ಶ ಆಯ್ತು. ಯಾ ಹಲ್ಲಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...