ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರದ ವರದಿಗಳು ಬಂದಿವೆ ಎಂದು ಹೇಳಿಕೆ ನೀಡಿದ ರಾಹುಲ್ ಗಾಂಧಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ತಿರುಗೇಟು ನೀಡಿದ್ದು ಅದಕ್ಕೆ ಮತ್ತೆ ರಾಹುಲ್ ಗಾಂಧಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲು ರಾಹುಲ್ ಗಾಂಧಿಯವರು ಕಣಿವೆ ಪ್ರದೇಶದಲ್ಲಿ ಹಿಂಸಾಚಾರದ ವರದಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆಗ ರಾಜ್ಯಪಾಲರು “ನಾನು ನಿಮಗೆ ವಿಮಾನವನ್ನು ಕಳುಹಿಸುತ್ತೇನೆ ಮತ್ತು ಇಲ್ಲಿಗೆ ಬರಲು ರಾಹುಲ್ ಗಾಂಧಿಯನ್ನು ಆಹ್ವಾನಿಸಿದ್ದೇನೆ. ಬಂದು ಪರಿಸ್ಥಿತಿಯನ್ನು ಗಮನಿಸಿ, ನಂತರ ಮಾತನಾಡಿ. ನೀವು ಜವಾಬ್ದಾರಿಯುತ ವ್ಯಕ್ತಿ ಮತ್ತು ನೀವು ಈ ರೀತಿ ಮಾತನಾಡಬಾರದು” ಎಂದು ಮಲಿಕ್ ಹೇಳಿದ್ದರು.
ಇದಕ್ಕೆ ರಾಹುಲ್ ಗಾಂಧಿಯವರು
“ಆತ್ಮೀಯ ರಾಜ್ಯಪಾಲರಾದ ಮಲಿಕ್ ರವರೆ,
ವಿರೋಧ ಪಕ್ಷದ ನಾಯಕರ ನಿಯೋಗದೊಂದಿಗೆ ನಾನು ಜಮ್ಮು ಕಾಶ್ಮೀರ ಮತ್ತು ಲಡಾಖ್ಗೆ ಭೇಟಿ ನೀಡುವ ನಿಮ್ಮ ಮನೋಹರ ಆಹ್ವಾನವನ್ನು ಸ್ವೀಕರಿಸುತ್ತೇನೆ.
ನಮಗೆ ನಿಮ್ಮ ವಿಮಾನ ಅಗತ್ಯವಿಲ್ಲ. ಆದರೆ ಅದಕ್ಕೂ ಮೊದಲು ಅಲ್ಲಿನ ಜನರನ್ನು, ಮುಖ್ಯವಾಹಿನಿಯ ನಾಯಕರು ಮತ್ತು ನಮ್ಮ ಸೈನಿಕರು ಭೇಟಿ ಮಾಡಲು ಸ್ವಾತಂತ್ರ್ಯ ಮತ್ತು ಪ್ರಯಾಣದ ಸ್ವಾತಂತ್ರ್ಯವನ್ನು ಖಚಿತಪಡಿಸುವಿರಾ” ಎಂದು ಪ್ರಶ್ನಿಸಿದ್ದಾರೆ.
Dear Governor Malik,
A delegation of opposition leaders & I will take you up on your gracious invitation to visit J&K and Ladakh.
We won’t need an aircraft but please ensure us the freedom to travel & meet the people, mainstream leaders and our soldiers stationed over there. https://t.co/9VjQUmgu8u
— Rahul Gandhi (@RahulGandhi) August 13, 2019
ಅಲ್ಲಿನ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿಡಲಾಗಿದೆ. ಕಾಶ್ಮೀರದ ಪರಿಸ್ಥಿತಿ ವೀಕ್ಷಿಸಲು ಬಂದಿದ್ದ ಸಿಪಿಐ ಮತ್ತು ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಡಿ.ರಾಜ ಮತ್ತು ಸೀತಾರಾಂ ಯೆಚೂರಿಯವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಹಿಡಿದು ಬಲವಂತವಾಗಿ ವಾಪಸ್ ಕಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಇದೇ ರಾಜ್ಯಪಾಲರಿಗೆ ಅವರು ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆಗಸ್ಟ್ 08ರಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ರವರು ಶ್ರೀನಗರಕ್ಕೆ ಪ್ರಯಾಣಿಸಿದಾಗಲೂ ಅವರನ್ನು ತಡೆದು ವಾಪಸ್ ಕಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಲ್ಲಿನ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.