ಹಳ್ಳಿಯ ಜನರಿಗೆ ಗಾಂಧಿ ಕುರಿತು ಯಾವಾಗ ಬೇಕಾದರೂ ಹೇಳಬಹುದು. ಆದರೆ ನಮ್ಮೊಳಗೆ ಗಾಂಧಿಯನ್ನು ಎಷ್ಟು ಬಿಟ್ಟುಕೊಂಡಿದ್ದೇವೆ ಎಂಬುದನ್ನು ಪರೀಕ್ಷಿಸಲು ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ನ ಸಂತೋಷ್ ಕೌಲಗಿ ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಗಾಂಧಿ ವಿಚಾರ ಬಳಗದ ವತಿಯಿಂದ “ಗಾಂಧಿಯಡೆಗೆ ನಮ್ಮ ನಡಿಗೆ” ವಿಷಯವಾಗಿ ಮೇಲುಕೋಟೆಯಿಂದ ಮಂಡ್ಯದವರೆಗೆ ಮೂರು ದಿನಗಳ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನನಗೆ ದಕ್ಕಿದ ಗಾಂಧಿ ಎಷ್ಟು ಎಂಬುದರ ಬಗ್ಗೆ ವಿಮರ್ಶೆ ಮಾಡಿಕೊಳ್ಳಬೇಕಿರುವ ಕಾಲ ಇದಾಗಿದೆ ಎಂದ ಅವರು, ‘ಇಷ್ಟು ದಿನ ಗಾಂಧಿ ಬಗ್ಗೆ ನಾವು ಮತನಾಡದೇ ಬಹಳ ದೊಡ್ಡ ತಪ್ಪು ಮಾಡಿದ್ದೇವೆ ಎಂಬುದು ಪಾದಯಾತ್ರೆಯಲ್ಲಿ ಅರಿವಿಗೆ ಬಂತು‘ ಎಂದು ತಿಳಿಸಿದರು.
ಗಾಂಧಿ ಸಮಾಜದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ವಿಚಾರಗಳು ಪ್ರಖರವಾಗಿವೆ. ಆದರೆ ಆ ಹೊಳಪನ್ನು ನೋಡಲು ಸಿದ್ದವಿಲ್ಲದವರು ಕಸ–ಕಡ್ಡಿ ಹಾಕಿ ಮಸಕು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮಗೆ ಗಾಂಧಿ ವಿಚಾರಗಳು ಪ್ರಕಾಶಮಾನವಾಗಿ ಕಾಣುತ್ತಿವೆ ಎಂದರು.
ಈ ಪಾದಯಾತ್ರೆಯ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಗಾಂಧಿಯ ವಿಚಾರಕ್ಕೆ ಹೊಸ ಸಂಚಲನ ಶುರುವಾಗಲಿ. ಇದು ಇಲ್ಲಿಗೆ ಮುಗಿಯುವುದಿಲ್ಲ, ಸತತವಾಗಿ ನಡೆಯಬೇಕಾದ ಕ್ರಿಯೆ, ಈ ನಡಿಗೆ ಸಹಜವಾಗಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಗಾಂಧಿಯನ್ನು ದುಷ್ಟರು, ಸರಿಯಾದ ಚಿಂತನೆಯಿಲ್ಲದವರು ತೆಗೆದುಕೊಳ್ಳಲು ಬಿಡಬಾರದು. ಏಕೆಂದರೆ ಇಂದು ನಮ್ಮ ದೇಶ ದೇಶ ದೊಡ್ಡ ಕ್ಷೋಭೆಗೆ ಒಳಗಾಗಿದೆ. ಇಡೀ ಪ್ರಪಂಚವೇ ಬಡವರನ್ನು, ಶೋಷಿತರನ್ನು ಪ್ರಪಾತಕ್ಕೆ ತಳ್ಳುತ್ತಿದೆ. ಹಿಂಸಾವಾದಿ ಸರ್ವಾಧಿಕಾರಿಗಳು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಗಾಂಧಿಯ ವಿಚಾರಗಳನ್ನು ಮರೆಯದೇ ಮುನ್ನಲೆಗೆ ತರಬೇಕು ಎಂದರು.
ಗಾಂಧಿಯ ಮಾತುಗಳನ್ನು ಮೊದಲು ನಾವೆಲ್ಲರೂ ಪಾಲಿಸಬೇಕು. ಅವರ ವಿಚಾರಗಳನ್ನು ಹೇಳುವುದಕ್ಕಿಂತ ಹೆಚ್ಚಾಗಿ ಪಾಲಿಸಬೇಕಾಗಿದೆ. ಇದಕ್ಕೆ ನಮ್ಮ ಹೃದಯವೇ ಮೌಲ್ಯಮಾಪಕವಾಗಿದೆ. ದೇಶಕ್ಕೆ ಆವರಿಸಿರುವ ದೊಡ್ಡ ಕಗ್ಗತ್ತಲೆಯನ್ನು ಹೋಗಲಾಡಿಸಲಿಕ್ಕೆ ಹೃದಯ ಮುಟ್ಟಿ ನೋಡಿಕೊಳ್ಳುತ್ತಲೇ ಗಾಂಧಿಯೆಡೆಗೆ ನಮ್ಮ ನಡಿಗೆ ಮುಂದುವರೆಸಬೇಕು ಎಂದರು.
ಚಿಂತಕರಾದ ಜಗದೀಶ್ ಕೊಪ್ಪರವರು ಮಾತನಾಡಿ ‘ಗಾಂಧಿ ವಿಚಾರಧಾರೆಯನ್ನು ನಾವಿಂದು ಎದೆಗೆ ಇಳಿಸಿಕೊಳ್ಳಬೇಕಗಿದೆ. ಏಕೆಂದರೆ ಇಂದು ನಾವು ಸ್ವಾರ್ಥಿಗಳಾಗಿದ್ದೇವೆ. ನಮ್ಮೊಳಗಿನ ಬೌದ್ಧಿಕ ದಿವಾಳಿತನತನದಿಂದ ಇಂದು ಗಾಂಧಿಯವರು ನಕಾರತ್ಮಕವಾಗಿ ಬಿಂಬಿಸಲ್ಪಡುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.
ನಮ್ಮ ಅಂತರಂಗದಲ್ಲಿ ಉಂಟಾಗಿರುವ ಸಂಕ್ಷೋಬೆ ಹೋಗಲಾಡಿಸಲು ಗಾಂಧಿ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕಿದೆ. ನಮ್ಮ ವಯಕ್ತಿಕ ಸ್ವಾರ್ಥಕ್ಕಾಗಿ ನಾವು ಪರಿಸರವನ್ನು ಹಾಳು ಮಾಡಿದ್ದೇವೆ. ಆದರೆ ವಯಕ್ತಿಕ ಹಿತಾಸಕ್ತಿಯಿಂದ ಸಮಾಜ ಉದ್ದಾರ ಆಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಇಂದು ಕಲವು ದಲಿತರು ಗಾಂಧಿಯನ್ನು ಶತ್ರು ರೀತಿಯಲ್ಲಿ ನೋಡುತ್ತಿದ್ದಾರೆ. ಪೂನಾ ಒಪ್ಪಂದ ಬಿಟ್ಟು ಗಾಂಧಿಯನ್ನು ನೋಡಿದರೆ ಗಾಂಧಿಯ ಜಾತಿವಿರೋಧಿ ಮನಸ್ಥಿತಿ ಅರ್ಥವಾಗುತ್ತದೆ ಎಂದರು.
ಸಬರಮತಿ ಆಶ್ರಮದಲ್ಲಿ ಗಾಂಧಿಯವರ ಪತ್ನಿ ಕಸ್ತೂರಬಾ ರವರು ನಿಧನಹೊಂದಿದ್ದಾಗ ಗಾಂಧಿಯೊಡನೆ ಹಲವು ಹೆಣ್ಣುಮಕ್ಕಳು ಚಿತೆಗೆ ಬೆಂಕಿ ಸ್ಪರ್ಶ ಮಾಡಿದರು. ಆಗ ಕಸ್ತೂರಬಾರವರು ಧರಿಸಿದ್ದ ಆಭರಣಗಳನ್ನು ದಲಿತ ಬಾಲಕನಿಗೆ ದಾನ ಮಾಡಲಾಯಿತು ಇದೆಲ್ಲದನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.
ಗಾಂಧಿಯವರು ಸ್ಥಾಪಿಸಿದ್ದ ಹರಿಜನ ಸೇವಕ ಸಂಘಕ್ಕೆ ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಒಬ್ಬರೂ ದಲಿತರಿಲ್ಲದ ದಲಿತ ಸೇವಕ ಸಂಘ ಇದು ಎಂದು ಟೀಕಿಸಿದ್ದರು. ಆಗ ಗಾಂಧಿಯವರು “ದಲಿತರ ಸೇವೆಯನ್ನು ದಲಿತೇತರರೆ ಮಾಡಬೇಕು“, ಶೋಷಿತ ದಲಿತರ ಪರವಾಗಿ ಸವರ್ಣೀಯರು ನಿಲ್ಲಬೇಕು ಎಂದು ಗಾಂಧಿ ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಗಾಂಧಿ ತಮ್ಮ ಕೊನೆಗಾಲದಲ್ಲಿ ಅಂತರ್ಜಾತಿ ವಿವಾಹಗಳನ್ನು ಹೊರತುಪಡಿಸಿ ಬೇರೆ ಯಾವ ವಿವಾಹಗಳಿಗೂ ತಾನು ಹೋಗುವುದಿಲ್ಲ ಎಂದ ತೀರ್ಮಾನಿಸಿದ್ದರು. ಕಾಶಿಯ ವಿಶ್ವನಾಥ ದೇವಾಲಯಕ್ಕೆ ಹರಿಜನರಿಗೆ ಪ್ರವೇಶ ಇಲ್ಲದಿದ್ದರೆ ತನಗೂ ಬೇಡವೆಂದು ಘೋಷಿಸಿದ್ದರು.ಉಡುಪಿಯ ಕೃಷ್ಣ ಮಂದಿರದ ಮುಂದೆ ಹೋದರೂ ಸಹ ಇದೇ ಕಾರಣಕ್ಕೆ ದೇವಾಲಯ ಪ್ರವೇಶಿಸಲಿಲ್ಲ ಅಲ್ಲವೇ? ಎಂದು ಜಗದೀಶ್ ಕೊಪ್ಪ ತಿಳಿಸಿದರು.
ಪಾದಯಾತ್ರೆಯಲ್ಲಿ ಭಗಾವಹಿಸಿದ್ದ ಹಲವು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಿರಿಯ ಗಾಂಧಿವಾದಿಗಳಾದ ಹೆಗ್ಗೋಡು ಪ್ರಸನ್ನರವರು ಉಪಸ್ಥಿತರಿದ್ದರು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ