Homeಅಂಕಣಗಳುದೇಹವೊಂದೇ ಎಲ್ಲವೂ ಅಲ್ಲ v

ದೇಹವೊಂದೇ ಎಲ್ಲವೂ ಅಲ್ಲ v

- Advertisement -
- Advertisement -

ಡಾ.ವಿನಯಾ ಒಕ್ಕುಂದ |

ಗೋಕರ್ಣದ ಕಲ್ಪನಾ ಟಾಕೀಸು ವರ್ಷದಲ್ಲಿ ಮೂರು ತಿಂಗಳು ಚಾಲೂ ಇದ್ದರೆ ಅದೇ ಸ್ವರ್ಗ ಎಂದುಕೊಂಡ ದಿನಗಳವು. ಸುತ್ತಲ ಹಳ್ಳಿಗೆ ಎಡವಿ ಬಿದ್ದರೆ ಸಿಗುವ ಪೇಟೆ ಗೋಕರ್ಣವೇ. ವರ್ಷಕ್ಕೊಮ್ಮೆ ಮಂಕಾಳಮ್ಮನ ಗುಡಿ ಪ್ರಸಾದ ಕೈಗೆ ಬಿದ್ದರೆ ಅಲ್ಲಿಗೆ, ನಾವು ನಮ್ಮ ಹಳ್ಳಿಯ ಜಂಬೂದ್ವೀಪದಿಂದ ಹೊರಲೋಕಕ್ಕೆ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ಸಾಕ್ಷಿ. ಹೆಣ್ಣುಮಕ್ಕಳು, ಫಾರೆನ್ನರ್ಸ್ ಬರುವ ಬೀಚುಗಳಿಗೆ ಹೋಗುವುದು ಎಂದರೆ, ಮನೆ ಹೊಸ್ತಿಲು ದಾಟುವಾಗ ತಮ್ಮ ಶ್ರಾದ್ಧದ ಅನ್ನ ತಾವೇ ಇಕ್ಕಿ ಹೋಗಬೇಕು ಅಷ್ಟೇ. ಹಾಗಂತ ಇದು ಕಳೆದ ಶತಮಾನದ ಆರಂಭದ ಕಥೆಯೇನಲ್ಲ. ಹೆಂಗಸರು ಶಿಕ್ಷಣ ಉದ್ಯೋಗಗಳಿಗೆ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗಿ, ಸಾಮಾಜಿಕ ಬದುಕಿನಲ್ಲಿ ಮನ್ವಂತರ ಸಂಭವಿಸಿದ ನಂತರದ್ದು, ಕರಾವಳಿ ಜಿಲ್ಲೆಯಲ್ಲಂತೂ ಹೆಣ್ಣುಮಗಳಿಗೆ ಡಿಗ್ರಿವರೆಗಾದರೂ ಓದಿಸುವುದು ಘನಸ್ತಿಕೆ ಎಂದು ತಿಳಿದ ದಿನಮಾನವದು. ಹಾಗಿರುವಾಗ, ಗೋಕರ್ಣದ ಟಾಕೀಸಿಗೆ ಮುಖಹಾಕದೆ ಬದುಕಲಾದೀತೆ? ಮನೆ, ಊರು ಹೇಗೆ ಹೇಗೆ ಹೆಣ್ಣುಮಕ್ಕಳನ್ನು ಬಿಗಿದಿಡುತ್ತಿತ್ತೋ ಹಾಗೆ ಹಾಗೆ ಆ ಬಿಗಿತದ ಗಂಟು ಸಡಲಿಸಿಕೊಳ್ಳಲು ಅವರು ಸಾಹಸಯಾತ್ರೆಯಲ್ಲಿ ಪರಿಣತರಾಗುತ್ತಿದ್ದರು. ನಮ್ಮ ಬ್ಯಾಗುಗಳಲ್ಲಿ ಚೂಪು ಟಾಚಣಗಳು ವರ್ಷದ ಮುನ್ನೂರೈವತ್ತು ದಿನವೂ ಕೈಯಲ್ಲಿ ಅಂಬ್ರೆಲಾ ಕೊಡೆಗಳು ಏನು ಚೆಂದಕಿರುತ್ತಿದ್ದವೇ? ಬಸ್ ಪ್ರಯಾಣವನ್ನು ಸಲೀಸುಗೊಳಿಸಿದ, ಟಾಕೀಸಿನ ಕತ್ತಲಲ್ಲೂ ಕೂತು ಸಿನಿಮಾ ನೋಡುವ ಧೈರ್ಯಕೊಟ್ಟ ಆಪ್ತಮಿತ್ರಗಣಗಳಲ್ಲವೇ ಅವು? ಶಿವರಾತ್ರಿಯ ನಾಟಕ ನೋಡಲು ಸಕುಟುಂಬ ಪರಿವಾರ ಸಮೇತ ಹೋಗುವುದು ಅನಿವಾರ್ಯವಾಗಿತ್ತು. ಬೆಳತನಾ ನಡೆವ ಯಕ್ಷಗಾನಗಳಿಗಂತೂ ಮನೇಲಿರೋವು ದೆವ್ವಗಳು ಮಾತ್ರ ಅಂತಾಗಿತ್ತು. ಆದರೆ ಅದ್ಯಾಕೋ ಸಿನಿಮಾ ಟಾಕೀಸಿಗೆ ಮಾತ್ರ ಗೆಳತಿಯರೊಡನಾಟ ಮಾತ್ರ ಸರಿಯೆನಿಸಿತ್ತು. ಆದರೇನು? ಹೆಣ್ಣುಮಕ್ಕಳಿಗೆ ಸರಿಯೆನಿಸಿದ್ದನ್ನು ಒಪ್ಪಲು ಅದೇನು ಸಂವಿಧಾನವೇ? ಅಂತೂ ನಂನಮ್ಮ ಮನೆಗಳಲ್ಲಿ ಸಿನಿಮಾ ವೀಕ್ಷಣೆಗೆ ಒಪ್ಪಿ, ನಾವು ಮೂರ್ನಾಲ್ಕು ಹುಡುಗಿಯರು ಕಲ್ಪನಾ ಟಾಕೀಸಿನ ಮೆಟ್ಟಲು ಹತ್ತುವುದರಲ್ಲಿ ಅದೆಷ್ಟು ಅವಸ್ಥಾಂತರಗಳು? ಊರಿಗೆ ಮಧ್ಯಾಹ್ನ ಬರುವ ಬಸ್ಸಿಗೆ ಹೀಗೆ ಶಾಲೆ ಕಲಿವ ಹುಡುಗಿಯರು ಹತ್ತಿದರು ಅಂದರೆ, ‘ಇದೆ, ತಂಗಿ ಎಲ್ಲಿಗ್ರೆ. ಸಿನೇಮಕೆ ಹೋತರೇನೇ?’ ಎಂದು ಯಾರಾದರೂ ಕೇಳುವುದೇ. ಪ್ರಶ್ನೆ ಬಸ್ಸಿನೊಳಗಿಂದ ತೂರಿ ಬಂದರೂ ಬಂತೇ. ಆಹಾ, ಅದೆಷ್ಟು ಅದ್ಭುತವಾಗಿ ಗುಂಪಿನ ಮುಖಂಡೆಯಾಗಿದ್ದವಳಿಂದ ಪ್ರತ್ಯುತ್ತರ! ‘ಇಲ್ಲಪ್ಪ, ನಾವ ನೋಟ್ಸ್ ಝರಾಕ್ಸ್ ಮಾಡ್ಸಕಂಡ ಬರ್ತೇವೆ’ ಅಂತಲೋ, ‘ಇದ್ಕ ಹುಷಾರಿಲ್ಲ. ಮಲ್ಲಣ್ಣ ಡಾಕ್ಟರ ಹತ್ರ ಇಂಜಕ್ಷನ್’ ಅಂತಲೋ, ಪಟಾಪಟ್ ಹೇಳಿಯಾಗಿರುತ್ತಿತ್ತು. ಕೇಳಿದವರಿಗೂ ಈ ಒಡಕು ರೀಲು ರೂಢಿಯಾಗಿರುತ್ತಿತ್ತೋ ಏನೋ? ನಾವು ಸಿನಿಮಾಕ್ಕೆ ಹೋಗವವರಲ್ಲ ಎಂದ ಮೇಲೂ ಆ ಹಿರಿಯ ಇನ್ಯಾರೊಂದಿಗೋ, ಯಾರೂ ಇರದಿದ್ದರೆ ಬಸ್ಸಿನ ಕಂಡಕ್ಟರನೊಂದಿಗೋ, ಸಿನಿಮಾ ನೋಡಿ ಕೆಟ್ಟವರ ಬಗ್ಗೆ ಪುರಾಣ ಶುರುಮಾಡಿ ಆಗಿರುತ್ತಿತ್ತು. ಇಷ್ಟೆಲ್ಲ ಆಗಿ, ಮೇಲಿನ ಸ್ಟಾಪಿನಲ್ಲಿ ಇಳಿದರೆ ಸಿನಿಮಾಕ್ಕೆ ಅಂತ ಅನುಮಾನ ಬಂದೀತೇನೋ ಅಂದು, ಕೆಳಗೆ ರಥಬೀದಿಯ ಬಸ್‍ಸ್ಟಾಪಿಗೇ ಇಳಿದು, ಅವಸರದ ಓಡು ನಡಿಗೆಯಲ್ಲಿ ಏರಿ ಏರಿ ಬಂದರೆ. . . ಊರಿಗೆ ಬಂದ ರಿಕ್ಷಾದಲ್ಲಿ ಕೂಗಿದ ಸಿನಿಮಾ ಹೆಸರೇ ಒಂದು; ಇಲ್ಲಿ ರಾರಾಜಿಸುತ್ತಿರುವುದೇ ಒಂದು-ಎಂಬಂತಾಗಿರುತ್ತಿತ್ತು. ಮಗಳನ್ನು ನೋಡಿ ಬಾ ಅಂದರೆ ಅವ್ವನನ್ನು ನೋಡಿ ಬಂದ ಮಳ್ಳನ ಹಾಗೆ ಪೆಕರು ಪೆಕರಾಗಿ ಟಾಕೀಸಿನೊಳಗೆ ನುಸುಳಿಕೊಂಡಿದ್ದೂ ಇದೆ. ಈ ಪರಿಷೆ ನಡೆಯುತ್ತಿದ್ದುದು ವರ್ಷಕ್ಕೆ ಒಂದೆರಡು ಬಾರಿ ಮಾತ್ರ.
ಇಂತಹ ಒಮ್ಮೆ- ಸಿನಿಮಾದ ಹೆಸರು ಮರೆತಿದೆ. ಅನಂತನಾಗ ಮತ್ತು ಗಾಯತ್ರಿ ಅಭಿನಯ. ಹೆಂಡತಿಗೆ ಸ್ಟೌವ್ ಬಸ್ರ್ಟ್ ಆಗಿಯೇನೋ ಮುಖದ ಒಂದು ಭಾಗ ಸುಟ್ಟು ಹೋಗಿರುತ್ತದೆ. ಅವರ ದಾಂಪತ್ಯದಲ್ಲಿ ಉಂಟಾದ ತಳಮಳವನ್ನು, ಹೆಂಡತಿಯೆಂಬ ಪ್ರೀತಿಯಿದ್ದರೂ ಪ್ರೇಮಿಸಲಾಗದವನ ಸ್ಥಿತಿಯ ತಾಪ ದಣೇ ಈಗ ನಾನು ಆ ಸಿನಿಮಾ ನೋಡಿದೆನೆಂಬಷ್ಟು ಗಾಢವಾಗಿ ನನ್ನ ಪ್ರಜ್ಞೆಯಲ್ಲಿ ಸೇರಿಹೋಗಿದೆ. ಸಿನಿಮಾದ ಒಟ್ಟೂ ಸಂದೇಶವೇನಿತ್ತೋ ನೆನಪಿಲ್ಲ. ಆದರೆ, ಹೆಣ್ಣಿನ ದೇಹ ಸೌಂದರ್ಯ ಹಾಳಾದರೆ, ಅವಳು ಬದುಕುವ ಹಕ್ಕನ್ನೂ ಕಳೆದುಕೊಳ್ಳುತ್ತಾಳೆ. ಕಳೆದುಕೊಳ್ಳಬೇಕು-ಅದು ಮೌಲ್ಯ ಎಂಬಂತಹ ಪಾಠವನ್ನು ಉನ್ನತೀಕರಿಸಿದ ಸಿನಿಮಾಗಳ ಕಾಲ ಅದು. ಅದಕ್ಕೆ ಪೂರಕ ಪಠ್ಯವೆಂಬಂತೆ ಬಂಡಿಹಬ್ಬ, ಜಾತ್ರೆ, ಹಬ್ಬಗಳಲ್ಲಿ ಒಟ್ಟುಗೂಡುವ ಮನೆಗಳಲ್ಲಿ ದೂರದೂರುಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ನೌಕರಿ ಮಾಡಿಕೊಂಡು ಸುಖವಾಗಿದ್ದಾರೆಂದು ಮೇಲ್ನೋಟಕ್ಕೆ ಕಾಣುವ ಸಂಸಾರಗಳ ಒಡಕು ಬಿಂಬಗಳು ಹೆಣ್ಣುಮಕ್ಕಳ ಪಿಸುಮಾತು-ಕಂಬನಿಗಳಲ್ಲಿ. . ಫಳಫಳಿಸುತ್ತಿತ್ತು. ಹೆಣ್ಣಿನ ಚೆಲುವಿಕೆಯ ಏಕರೂಪೀ ಸಂಹಿತೆ ಅದಾಗಲೇ ಚಾಲ್ತಿಗೆ ಬಂದ ದಿನಗಳವು. ಕುಮಟೆಗೆ ಹೋಗಿದ್ದ ನನ್ನ ಅಪ್ಪ ‘ಫೆರ್ ಆಂಡ್ ಲವ್ಲೀ’ಯನ್ನು ತಂದುಕೊಟ್ಟಿದ್ದ. ‘ತಕಾ, ಇದನ್ನರಾ ಹಚ್ಕಾ’ ಎಂದಿದ್ದ. ಆ ಮಾತಿನ ಅರ್ಥ ಆಗಂತೂ ಗೊತ್ತಾಗಿರಲಿಲ್ಲ. ಬಹುಶಃ ಟಿ.ವಿ. ಮನೆಯೊಳಗೆ ಬಂದು ಕೂತಿರದಿದ್ದರೆ, ರಾಮಾಯಣ-ಮಹಾಭಾರತ ಸೀರಿಯಲ್ಲುಗಳನ್ನು ಮಿಂದು ಮಡಿಯುಟ್ಟು ಕೂತು ನೋಡುತ್ತಿದ್ದ ಜನರಿಗೆ, ತರಹೇವಾರಿ ಜಾಹೀರಾತಿನ ಪಾಠ ಸಿಗದಿದ್ದರೆ. . . ನಮ್ಮಂತಹ ಹೆಣ್ಣುಮಕ್ಕಳ ಕೈಗೆ ಫೇರ್ ಆಂಡ್ ಲವ್ಲಿಯೂ ಸಿಗುತ್ತಿರಲಿಲ್ಲವೇನೋ, ಫೇರ್ ಮತ್ತು ಲವ್ಲಿಯ ಸರಿಯಾದ ಅರ್ಥ ಆಗುವ ಹೊತ್ತಿಗೆ ನಾವು ಬಳಸಿ ಬಿಸಾಕಿದ ಟ್ಯೂಬ್‍ಗಳು ಈ ಭೂಮಿಯ ಗರ್ಭವನ್ನು ಅದೆಷ್ಟು ನೋಯಿಸಿರಬಹುದು ಎನಿಸುತ್ತಿದೆ.
ಯಾಕೆ ಇದೆಲ್ಲ ನೆನಪಾಗುತ್ತಿದೆಯೆಂದರೆ- ಭಾರತೀಯ ಸಿನಿಮಾ ರಂಗದಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ತಥಾಕಥಿತ ಪಿತೃತ್ವವು ರೂಪಿಸಿಟ್ಟ ದೇಹಸೌಂದರ್ಯದಾಚೆ ವಿಸ್ತರಿಸಿದ ಎರಡು ಸಂಗತಿಗಳು ಇತ್ತೀಚೆಗೆ ನಡೆದಿವೆ. ದೀಪಿಕಾ ಪಡುಕೋಣೆ ‘ಚಪಾಕ್’ ಸಿನಿಮಾದ ನಾಯಕಿಯಾಗಿ, ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆಯ ಹೋರಾಟದ ಬದುಕನ್ನು ಸಾಬೀತುಪಡಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಸಿನಿಮಾ ಇದು. ದೀಪಿಕಾ ಅವರ ಬಗ್ಗೆ ಅಭಿಮಾನ ಮೂಡಲು ಕಾರಣಗಳಿವೆ- ದೀಪಿಕಾ ಈಗ ನಟನೆಯ ಮತ್ತು ವೈವಾಹಿಕ ಬದುಕಿನ ವಸಂತದಲ್ಲಿದ್ದಾರೆ. ಕಲಾವಿದೆಯಾಗಿ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲೇಬೇಕಾದ ಅಗತ್ಯವೇನೂ ಅವರಿಗಿಲ್ಲ. ಎರಡೆರಡು ಬಾರಿ ಫಿಲ್ಮಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು. ಚಪಾಕ್ ಚಿತ್ರದ ಪಾತ್ರ ನಿರ್ವಹಣೆಯಲ್ಲಿ, ಗಂಡಸಿನ ವಿಕೃತ ಮನಸ್ಸಿಗೆ ದೇಹವನ್ನು ಕುರೂಪವಾಗಿಸಿಕೊಂಡು ಬದುಕಬೇಕಾದ ಹೆಣ್ಣಿನ ತಲ್ಲಣದ ಕಂಪನಗಳನ್ನು ಸ್ಪರ್ಶಿಸಬೇಕಿದೆ. ಚಪಾಕ್ ಚಿತ್ರ ಲಕ್ಷ್ಮಿ ಅಗರವಾಲ್ ಎಂಬ ಸಂತ್ರಸ್ತೆಯ ಬದುಕಿನ ಕಥೆ ಎಂದು ಹೇಳಲಾಗುತ್ತಿದೆ. 15 ವರ್ಷದ ಎಳೆಯ ಸುಂದರಿ, ಆ್ಯಸಿಡ್ ಹಲ್ಲೆಯಿಂದ ವಿಕಾರಗೊಂಡು ಯಾತನೆ, ಹಿಂಸೆಗಳಿಂದ ತತ್ತರಿಸುತ್ತಾಳೆ. ಗೌರವಾನ್ವಿತ ಬಾಳಿಗಾಗಿ ಆ ನಂತರವೂ ಪ್ರಯತ್ನಿಸುತ್ತಾಳೆ. ವಿಕಾರ ರೂಪಕ್ಕೆ ಕಾಲಿಟ್ಟಲೆಲ್ಲಾ ಸೋಲು, ಆದರೆ ಧೃತಿಗೆಡದೆ ಆ್ಯಸಿಡ್ ಸಂತ್ರಸ್ತೆಯರಿಗಾಗಿ ನಿರಂತರ ಹೋರಾಡಿ – ಆ್ಯಸಿಡ್ ಸುಲಭ ಸಾಧ್ಯ ಲಭ್ಯವಾಗದ ಹಾಗೆ ಮಾಡುವ ಕಾನೂನು ತರುವಲ್ಲಿ ಯಶಸ್ವಿಯಾಗುತ್ತಾರೆ. 2013ರಲ್ಲಿ ನಮ್ಮ ದೇಶದಲ್ಲಿದು ಕಾನೂನಾಯಿತು. ಈ ಲಕ್ಷ್ಮಿ ಅಗರವಾಲ್ 2014ರಲ್ಲಿ ಅಮೇರಿಕಾದಿಂದ ‘‘International Woman of Courage’’ ಪ್ರಶಸ್ತಿ ಪಡೆದರು. ಪತಿ ಅಲೋಕ್ ದೀಕ್ಷಿತ್, ಮಗು ಪಿಹೂ ಜೊತೆ ಬಾಳುತ್ತಿದ್ದಾರೆ. ಲಕ್ಷ್ಮೀ ಅಗರವಾಲ್ ಎನ್‍ಜಿಓ ನಡೆಸುತ್ತಿದ್ದಾರೆ. ಲಕ್ಷ್ಮೀ ಬಾಳು- ಚೆಲುವಿನ ಮಾಪನ ದೇಹಸಂಬಂಧಿಯೋ, ವ್ಯಕ್ತಿತ್ವ ಸಂಬಂಧಿಯೋ ಎಂಬ ತಾತ್ವಿಕತೆಯನ್ನು ಮುಂದಿಟ್ಟಿದೆ. ಇದನ್ನು ಕಲಾತ್ಮಕವಾಗಿ ಜನಮಾನಸಕ್ಕೆ ತಲುಪಿಸುವ ಕೆಲಸವನ್ನು ಚಪಾಕ್ ಮಾಡಬಲ್ಲದು. ಹೆಣ್ಣಿನ ದೇಹವನ್ನೇ ಬಂಡವಾಳವಾಗಿಸಿಕೊಂಡು ಅದನ್ನೇ ಪ್ರತಿಪಾದಿಸುತ್ತ ಬಂದ ಸಿನಿಮಾರಂಗಕ್ಕೆ ಮಾತ್ರ ಮುರಿವ ಶಕ್ತಿಯಿದೆ. ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಮತ್ತು ಮೇಘನಾ ಗುಲ್ಜಾರ ಅಭಿನಂದನಾರ್ಹರು.
ಸಾಯಿಪಲ್ಲವಿ ಎಂಬ ನಟಿಯ ದಿಟ್ಟ ನಿರ್ಧಾರವೊಂದು, ಹೆಣ್ಣಿನ ಅಸಲಿತನವನ್ನು ದೇಹಕ್ಕೆ ಲಗತ್ತಿಸುವ ರಾಜಕಾರಣವನ್ನು ತಳ್ಳಿಹಾಕಿದೆ. ಜಾಹೀರ ನಾಮೆ ಸ್ವತಃ ವೈದ್ಯೆಯಾಗಿರುವ, ಮೇಕಪ್‍ನ್ನು ನಿರಾಕರಿಸಿ ಅಭಿನಯಿಸುವ ಈ ಚೆಲುವೆ, ಕಾಸ್ಮೆಟಿಕ್ ಕಂಪನಿಯೊಂದರ 2 ಕೋಟಿ ರೂಪಾಯಿಯ ಜಾಹೀರಾತು ಆಫರ್‍ನ್ನು ತಿರಸ್ಕರಿಸಿದ್ದಾರೆ. ಹೆಣ್ಣೆಂದರೆ ತಮ್ಮ ಪ್ರೊಡಕ್ಟ್‍ಗಳ ಪ್ರಯೋಗ ಭೂಮಿ ಎಂಬ ಬಂಡವಾಳಶಾಹಿ ಅಹಂನ್ನು, ಹೆಣ್ಣೆಂದರೆ ದೇಹ ಸೌಂದರ್ಯ ಎಂಬ ಪಿತೃತ್ವದ ತಪ್ಪನ್ನು ಏಕಕಾಲದಲ್ಲಿ ವಿರೋಧಿಸಿದ ತೀರ್ಮಾನವಿದು. ಹೆಣ್ಣು ಎಂದರೆ ದೇಹ,ಆದೇಹ ಸಂರಕ್ಷಣೆ ಮತ್ತು ಆಕರ್ಷಣೆಯನ್ನು ಕಾಪಾಡುವುದು ಮಾರ್ಕೆಟ್ಟಿನ ಸೌಂದರ್ಯವರ್ಧಕಗಳ ಜವಾಬ್ದಾರಿ ಎಂಬ ಸಾಮಾಜಿಕ ಫೋಬಿಯಾದ ಕಾಲವನ್ನು ಒಂದಿಷ್ಟಾದರೂ ತಡೆಯಲು ಈ ಮಾತು ಸಹಾಯಕವಾದೀತೇನೋ.
ಈಗ ನಮ್ಮ ಗೋಕರ್ಣದ ಕಲ್ಪನಾ ಟಾಕೀಸು ನಡೆಯುತ್ತಿಲ್ಲ. ಅದೀಗ ಯಾವುದೋ ಗೋಡೌನ್ ಆಗಿದೆ. ನಮ್ಮ ಹಾಗೆ, ಆದರೆ ಏನೆಲ್ಲ ರಾದ್ಧಾಂತಗಳ ಮೂಲಕ ಸಿನಿಮಾ ನೋಡುವ ಗರಜು ನಮ್ಮ ಮಕ್ಕಳಿಗಿಲ್ಲ. ಅವರೀಗ ಸ್ವತಂತ್ರರು. ಯಾರ ಒಪ್ಪಿಗೆಯ ಹಂಗಿಲ್ಲದೆ, ಏನೆಲ್ಲವನ್ನೂ ತಮ್ಮ ಪ್ರಜ್ಞೆಗೆ ತಂದುಕೊಳ್ಳಬಲ್ಲವರು. ಅವರಿಗೆ ಚಪಾಕ್‍ನಂತಹ ಸಿನಿಮಾಗಳು, ಇಂತಹ ನಿರ್ಣಯಗಳು ಬದುಕನ್ನು ನೋಡುವ ಹೊಸ ಕಣ್ಣೋಟವನ್ನು ಕೊಡಲಿ. ಹೆಣ್ಣುಗಳು ಭಯ ಅಪಮಾನಗಳಿಂದ ಕುಗ್ಗುವುದು ನಿಲ್ಲಲಿ. ಗಂಡುಮಕ್ಕಳಿಗೆ ಹೆಣ್ಣೆಂದರೆ ದೇಹವಲ್ಲ ಎಂಬ ತಿಳಿವು ಸಿಗಲಿ. ಸಿನಿಮಾ ನಮ್ಮ ಭಾವವಲಯವನ್ನು ಮೀಟುವುದಕ್ಕೆ ಯಶಸ್ವಿಯಾದಷ್ಟು ಬೇರೆ ಯಾವ ಮಾಧ್ಯಮವೂ ಯಶಸ್ವಿಯಾಗದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...