Homeಚಳವಳಿ'ರೈತ ರಾಜಕೀಯಕ್ಕೆ ಮಣ್ಣಿನ ಮಗನ ಬೆಂಬಲವಿರಲಿ' - ದೇವನೂರು ಮಹಾದೇವ

‘ರೈತ ರಾಜಕೀಯಕ್ಕೆ ಮಣ್ಣಿನ ಮಗನ ಬೆಂಬಲವಿರಲಿ’ – ದೇವನೂರು ಮಹಾದೇವ

- Advertisement -
(ಚುನಾವಣಾ ಪ್ರಚಾರ ಭಾಷಣ ಅಂದರೇನೆ ರೇಜಿಗೆ ಹುಟ್ಟಿಸುತ್ತೆ. ಆರೋಪ – ಪ್ರತ್ಯಾರೋಪ, ಹಾರಾಟ- ಚೀರಾಟ ಮಾಮೂಲು. ಚುನಾವಣಾ ಪ್ರಚಾರದಲ್ಲಿ ಪ್ರಬುದ್ಧ – ಸಮತೋಲಿತ ಭಾಷೆ, ಭಾವ ಹೇಗೆ ಸಾಧ್ಯ ಎಂದು ವಕಾಲತ್ತು ವಹಿಸುವವರೇ ಹೆಚ್ಚು. ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯರಾಗಿರುವ ದೇವನೂರು ಮಹಾದೇವ ಅವರು ತಮ್ಮ ಪಕ್ಷದ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ಮಾಡಿದ ಚುಟುಕಾದ ಚುನಾವಣಾ ಭಾಷಣ ಇಲ್ಲಿದೆ. ಎದುರಾಳಿ ಪಕ್ಷದವರಿಗೂ ವಿನಂತಿ ಮಾಡಬಲ್ಲಂತಹ ನೈತಿಕತೆ ಬಹುಶಃ ದೇವನೂರು ಅಂಥವರಿಗೆ ಮಾತ್ರ ಸಾಧ್ಯ.)
ಈಗ ಒಂದು ಸುದ್ದಿ ಹರಿದಾಡುತ್ತಿದೆ- ದರ್ಶನ್ ಅಮೆರಿಕಕ್ಕೆ ಹೋಗಿ ಬಿಡುತ್ತಾರೆ ಎಂಬುದೇ ಆ ಸುದ್ದಿ. ಇಂಥ ಸುದ್ದಿ ಕಳೆದ ಚುನಾವಣೆಯಲ್ಲಿ ಪುಟ್ಟಣ್ಣಯ್ಯನವರ ಬಗೆಗೂ ಇತ್ತು. ಪುಟ್ಟಣ್ಣಯ್ಯನವರ ಜೀವದ ತುಡಿತ ಗೊತ್ತಿರುವವರು ಇಂಥ ಮಾತಾಡಲಾರರು. ಪುಟ್ಟಣ್ಣಯ್ಯ ಜತೆ ಪ್ರವಾಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಎಲ್ಲಿಗೆ ಹೋಗಲಿ, ಅವರು ನೆನಪಿಸಿಕೊಳ್ಳುತ್ತಿದ್ದುದು ಏನು ಗೊತ್ತೆ? ಪಾಂಡವಪುರದ ಬೋಂಡ, ಪಕೋಡ ಹಾಗೂ ಮದ್ದೂರು ಜೋಪಡಿ ಹೋಟೆಲ್ ದೋಸೆ. ಪಾಂಡವಪುರದ ಥರದ ಬೋಂಡವನ್ನು ಎಲ್ಲೂ ಮಾಡಲ್ಲ ಬಿಡಿ ಅಂತಿದ್ದರು. ಆಮೇಲೆ ನಮ್ಮ ರಾಣಿ ಮಾಡೋ ಇಡ್ಲಿ ಕೈಮ ಅಮೆರಿಕದಲ್ಲೂ ಮಾಡಲ್ಲ ಅಂತಿದ್ದರು. ಇಡ್ಲೀನ ಅಮೆರಿಕದಲ್ಲಿ ಮಾಡ್ತಾರ? ಅಷ್ಟೊಂದು ಮುಗ್ಧ ಕೂಡ ಅವರು. ಅವರು ಅಮೆರಿಕದಲ್ಲಿ ಮೂರು ತಿಂಗಳು ಇರಬೇಕಾಗಿ ಬಂದಾಗ ಅವರ ಮನಸ್ಸಲ್ಲಿ ಇದ್ದುದು ಒಂದೇ- ಕುಡಿಯುವ ನೀರಿನ ಸಮಸ್ಯೆ. ಅಮೆರಿಕದಲ್ಲಿ ಸಾವಿರಾರು ಕಿಲೋಮೀಟರ್ ನಾಲೆ ಮಾಡಿ ಕುಡಿಯುವ ನೀರು ತಂದು ಕೊಡುವುದಾದರೆ ನಮ್ಮಲ್ಲಿ ಏನಾಗಿದೆ? ಇದು ಅವರ ಚಿಂತೆಯಾಗಿತ್ತು. ದುದ್ದ ಹೋಬಳಿಗೆ ನೀರು ತರುವುದು ಹೇಗೆ? ಅದಕ್ಕಾಗಿ ಪುಟ್ಟಣ್ಣಯ್ಯ ತಪಸ್ಸು ಮಾಡುತ್ತಿದ್ದರು. ನನ್ನಿಂದಲೂ ಕೆಲವರಿಗೆ ಹೇಳಿಸಿದ್ದರು. ಇಂಥ ಮನಸ್ಥಿತಿಯ ಪುಟ್ಟಣ್ಣಯ್ಯನವರ ಮಗ ದರ್ಶನ್ ಅಮೆರಿಕ ಬಿಟ್ಟುಬಂದು, ಅಪ್ಪನ ಹೆಸರನ್ನು ಉಳಿಸಲು, ಅಪ್ಪನ ಕೆಲಸ ಕಾರ್ಯಗಳನ್ನು ಮುಂದುವರಿಸಲು ಪಣ ತೊಟ್ಟಿದ್ದಾರೆ. ದರ್ಶನ್ ನಿರ್ಧಾರದ ಗಟ್ಟಿತನ ನೋಡಿಯೆ ಸ್ವರಾಜ್ ಇಂಡಿಯಾ ಪಕ್ಷವು ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ದರ್ಶನ್‍ಗೆ ತಮ್ಮ ಆಶೀರ್ವಾದ ಬೇಕು.
ಈಗ ಕಾಂಗ್ರೆಸ್ ದರ್ಶನ್‍ಗೆ ಬೆಂಬಲಿಸಿದೆ, ಜೆಡಿಎಸ್ ನೇರ ಪ್ರತಿಸ್ಪರ್ಧಿಯಾಗಿದೆ. ಆದರೂ ನಮಗೆ ಸನ್ಮಾನ್ಯ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ನೈತಿಕ ಬೆಂಬಲವೂ ಬೇಕು. ಯಾಕೆಂದರೆ ದೇವೇಗೌಡರು ರಾಜಕಾರಣದಲ್ಲಿ ಭೀಷ್ಮ ಇದ್ದಂತೆ. ಅವರು ಎದುರು ಪಾರ್ಟಿಯಲ್ಲಿ ಇರಬಹುದು. ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳೂ ಇರಬಹುದು. ಪ್ರಧಾನಿಯಾಗಿದ್ದ ಆ ಕಾಲಾವಧಿಯಲ್ಲಿ ನಾನು ಅವರ ಬಹಿರಂಗ ಬೆಂಬಲಿಗನಾಗಿದ್ದೆ. ಅದು ಅವರಿಗೂ ಗೊತ್ತು. ಹಾಗೇ ಕಾವೇರಿ ನದಿ ನೀರಿನ ವಿವಾದದಲ್ಲಿ ಅವರ ಪಕ್ಷಾತೀತ ನಡೆಯನ್ನು ಮೆಚ್ಚಿ ಬರೆದಿದ್ದೆ. ಭಿನ್ನಾಭಿಪ್ರಾಯಗಳ ನಡುವೆ ಇಂಥವೂ ಇರುತ್ತದೆ. ರಾಜಕಾರಣದ ಭೀಷ್ಮರಾದ ಹೆಚ್.ಡಿ.ದೇವೇಗೌಡರ ಆಶೀರ್ವಾದ ಈ ಬಾಲಕ ದರ್ಶನ್ ಮೇಲೂ ಇರಲಿ ಎಂದು ವಿನಂತಿಸುವೆ.
ಇಂದು ದೇಶದ ರಾಜಕಾರಣ ಕೆಟ್ಟಿದೆ. ಎಷ್ಟು ಕೆಟ್ಟಿದೆ ಅಂದರೆ ಕೆ.ಆರ್.ಎಸ್ ಡ್ಯಾಂಗೆ ಡೈನಮೆಟ್ ಇಟ್ಟರೂ ಸರಿಯೇ- ಎಲ್ಲರೂ ಕೊಚ್ಚಿಕೊಂಡು ಹೋದರೂ ಸರಿಯೇ- ನಾನು ನನ್ನ ಬಂಧುಬಳಗ ಬದುಕಬೇಕು, ಈ ರೀತಿ ಇದೆ ಇಂದಿನ ರಾಜಕಾರಣ. ಸಾರ್ವಜನಿಕ ಸಂಪತ್ತು ಸಮುದಾಯಕ್ಕೆ ಸೇರಬೇಕು. ಆದರೆ ಅದರ ಲೂಟಿ ಮಾಡಲು ದರೋಡೆಕೋರರು ರಾಜಕಾರಣದಲ್ಲಿ ಹೆಚ್ಚಾಗಿ ಪ್ರವೇಶಿಸುತ್ತಿದ್ದಾರೆ. ಇದು ಎಲ್ಲೆಲ್ಲು ಇದೆ. ಈ ದರೋಡೆ ರಾಜಕಾರಣವನ್ನು ಮತದಾರ ತಡೆಗಟ್ಟಬೇಕು. ತಡೆಗಟ್ಟದಿದ್ದರೆ ಉಳಿಗಾಲವಿಲ್ಲ.
ಈಗ ಜನಬಲ ಮತ್ತು ಹಣಬಲದ ನಡುವೆ ಸ್ಪರ್ಧೆ ನಡೆಯುತ್ತಿದೆ. ಹಣವು ಮದದಿಂದ ಜನರನ್ನು ಜಾನುವಾರುಗಳು ಎಂಬಂತೆ ಭಾವಿಸಿ ಕೊಂಡುಕೊಳ್ಳಬಹುದು ಅಂದುಕೊಂಡಿದೆ. ಹಣದ ಮದ ಮುರಿಯಬೇಕು. ಹಣದ ಗರ್ವಭಂಗವಾಗಬೇಕು. ಇದಾದಾಗಲೇ ಜನಸಾಮಾನ್ಯರು ಉಸಿರಾಡಲು ಸಾಧ್ಯ. ಅದಕ್ಕಾಗಿ ಮತದಾರರು ದರ್ಶನ್‍ರನ್ನು ಗೆಲ್ಲಿಸಬೇಕು, ಕೈ ಹಿಡಿದು ನಡೆಸಬೇಕು. ಇದು ನನ್ನ ಪ್ರಾರ್ಥನೆ.
ಕೊನೆಯದಾಗಿ ಇನ್ನೊಂದು ಮನವಿ: ದರ್ಶನ್‍ಗೆ ಪ್ರಚಾರವನ್ನು ಹೇಗೆ, ಎಲ್ಲಿಂದ ಮಾಡಬೇಕು? ನೆನಪಿಡಿ- ಸುಳ್ಳು ಹಬ್ಬಿಸುತ್ತಾರೆ. ನೆನಪಿಡಿ- ಒಡಕು ಉಂಟುಮಾಡುತ್ತಾರೆ. ಇಂಥಲ್ಲಿ ಹೇಗೆ ಪ್ರಚಾರ? ಎಲ್ಲಿದ್ದೀರೊ ಅಲ್ಲೆ ಪ್ರಚಾರ ಮಾಡಬೇಕು. ನಂನಮ್ಮ ಮನೆಯಿಂದಲೇ ಆರಂಭಿಸಬೇಕು. ನಂನಮ್ಮ ಬೀದಿಯಲ್ಲೇ ಪ್ರಚಾರ ಆಗಬೇಕು. ಎಲ್ಲಿದ್ದೀವೋ ಅಲ್ಲೇ ಪ್ರಚಾರ. ಈ ರೀತಿ ಪ್ರಚಾರವನ್ನು ಮೇಲುಕೋಟೆ ಕ್ಷೇತ್ರದ ಯುವಕರು ಕೈಗೊಂಡರೆ ಇದೇ ರಾಜ್ಯದ ಚುನಾವಣಾ ರೀತಿರಿವಾಜಿಗೆ ಒಂದು ಮಾದರಿಯಾಗಿ ನಾಡಿಗೆ ಕೊಡುಗೆ ಕೊಟ್ಟಂತಾಗುತ್ತದೆ. ದರ್ಶನ್ ಗೆಲುವಿನ ಜೊತೆಗೆ ಈ ಮಾದರಿಯನ್ನೂ ಹುಟ್ಟುಹಾಕಿ ಎಂದು ಮೇಲುಕೋಟೆ ಕ್ಷೇತ್ರದ ನಮ್ಮ ಯುವಕರಲ್ಲಿ ವಿನಂತಿಸುವೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...