Homeಸಾಮಾಜಿಕಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

ಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

- Advertisement -
- Advertisement -

ಶಿವಮೊಗ್ಗದ ಆಯನೂರು ಹೋಬಳಿಗೆ ಸೇರುವ ವೀರಣ್ಣನ ಬೆನವಳ್ಳಿ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳಿಗೆ ಮೊನ್ನೆ ಗತಿಸಿಹೋದ ಶನಿವಾರ ಎಂದಿನಂತಿರಲಿಲ್ಲ. ಆಸರೆ ಕೊಡಬೇಕಿದ್ದ ಸರ್ಕಾರವೇ ತಮ್ಮ ಬದುಕನ್ನು ಬೀದಿಗೆ ತಂದು ಎಸೆಯುತ್ತದೆ ಎಂಬ ಯಾವ ಅನುಮಾನವೂ ಇರದೆ ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಪೊಲೀಸ್ ಸರ್ಪಗಾವಲು, ಜೆಸಿಬಿ ಯಂತ್ರಗಳ ಸಮೇತ ಅವರ ಮೇಲೆ ದಾಳಿ ಮಾಡಿದ ಜಿಲ್ಲಾಡಳಿತ ಅವರ ಟೆಂಟುಗಳಂತಹ ಮನೆಗಳನ್ನು ಕಿತ್ತುಹಾಕಿ, ಹೆಂಗಸರು ಮಕ್ಕಳನ್ನು ಎಳೆದಾಡಿ, ಕಸ ತುಂಬಿದಂತೆ ಅವರು ಮತ್ತು ಅವರ ಸರಂಜಾಮುಗಳನ್ನೆಲ್ಲ ತುಂಬಿಕೊಂಡು ಬೇರೊಂದು ಜಾಗದಲ್ಲಿ ಸುರಿದುಹೋಗಿದೆ! ತನ್ನದೇ ನಾಗರಿಕರ ಜೊತೆ ನಮ್ಮ ಸರ್ಕಾರಗಳು ವರ್ತಿಸುವ ಪರಿ ಇದು. ಅದೂ, ಒಂದು ಅಲೆಮಾರಿ ಸಮುದಾಯದ ಮೇಲೆ!!
ಕಳೆದ ಹತ್ತು ವರ್ಷಗಳಿಂದ ಬೆನವಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್78ರಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಟೆಂಟು ನಿರ್ಮಿಸಿಕೊಂಡು ನೆಲೆಸಿದ್ದರು. ಅದು ಸರ್ಕಾರಿ ಸ್ವಾಮ್ಯದ ಜಾಗ. ಈ ನಿವೇಶನರಹಿತರಿಗೆ ಆಸರೆಯಾಗಲು ಹಿಂದಿನ ಸಿಎಂ ಸಿದ್ದರಾಮಯ್ಯನವರ ಸರ್ಕಾರ 2016ರಲ್ಲಿ ಆ 4 ಎಕರೆ ಭೂಮಿಯನ್ನು ಮಂಜೂರು ಮಾಡಿ ಕಾಯ್ದಿರಿಸಿತ್ತು. ಆದರೆ ನಿವೇಶನ ಹಂಚಿಕೆಗೆ ಜಿಲ್ಲಾಡಳಿತ ಇದುವರೆಗೆ ಮುಂದಾಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಅದ್ಯಾವ ಪ್ರಭಾವಿ ಕೈಗಳು ಕೆಲಸ ಮಾಡಿದವೋ ಗೊತ್ತಿಲ್ಲ, ಜುಲೈ 28ರ ಶನಿವಾರ ಸಂಜೆ ಹೊತ್ತಿಗೆ ಆವೇಶ ಮೈದಳೆದ ಜಿಲ್ಲಾಡಳಿತ ಭದ್ರಾವತಿ ಎಂಪಿಎಂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಅವರ ಬದುಕನ್ನೇ ಧ್ವಂಸ ಮಾಡಿದೆ.
ಈ ಸರ್ಕಾರಿ ಜನರ ದೌರ್ಜನ್ಯಕ್ಕೆ ಪ್ರತಿರೋಧ ತೋರಲು ಮುಂದಾದಾಗ ಪೊಲೀಸರು ಮಕ್ಕಳು, ವೃದ್ಧರು, ಗರ್ಭಿಣಿಯರು, ಹೆಂಗಸು-ಗಂಡಸರನ್ನೆದೆ ಪ್ರಾಣಿಗಳಿಗಿಂತ ಕಡೆಯಾಗಿ ಎಳೆದಾಡಿದ್ದಾರೆ. ಕೆಲ ಮಹಿಳೆಯರ ಸೀರೆ ಎಳೆದು ಅರೆಬೆತ್ತಲೆ ಮಾಡಲು ಮುಂದಾಗಿದ್ದರು. ಇದನ್ನೆಲ್ಲಾ ವೀಡಿಯೋ ಮಾಡಿಕೊಳ್ಳುತ್ತಿದ್ದ ಹಕ್ಕಿಪಿಕ್ಕಿಯವರ ಮೊಬೈಲ್‍ಗಳನ್ನು ಕಿತ್ತು ಜಜ್ಜಿಹಾಕಿದ್ದಾರೆ. ತಮ್ಮ ದೌರ್ಜನ್ಯದ ಯಾವ ಸಾಕ್ಷ್ಯವೂ ಉಳಿಯದಂತೆ ಜಿಲ್ಲಾಡಳಿತ ದಬ್ಬಾಳಿಕೆ ನಡೆಸುತ್ತಿದ್ದರೆ, ಅತ್ತ ಜೆಸಿಬಿ ಯಂತ್ರಗಳು ಕ್ಷಣಾರ್ಧದಲ್ಲಿ ಅವರ ತಲೆಮೇಲಿನ ಸೂರುಗಳನ್ನು ನೆಲಸಮ ಮಾಡಿ ಮುಗಿಸಿದ್ದವು.
ನಂತರ ಟ್ರ್ಯಾಕ್ಟರ್‍ಗಳಲ್ಲಿ ಅವರನ್ನು ತುಂಬಿತಂದು, ಶ್ರೀರಾಂಪುರದ ಬಳಿ ಇರುವ ಖಾಲಿ ಜಾಗಕ್ಕೆ ಬಿಸಾಕಿದ್ದಾರೆ. ಟೆಂಟ್ ಬಿಟ್ಟು ಕೆಲಸಕ್ಕೆ ಹೋಗಿದ್ದವರು ಪುನಃ ಬಂದು ನೋಡಿದರೆ ಟೆಂಟ್‍ಗಳೇ ಮಾಯವಾಗಿದ್ದವು. ಅಧಿಕಾರಿಗಳನ್ನು ವಿಚಾರಿಸಿದರೆ ಅಲ್ಲೆಲ್ಲೋ ಹಾಕಿದ್ದೇವೆ ಹೋಗಿ ಎಂಬ ಉಡಾಫೆಯ ಉತ್ತರ ಕೊಟ್ಟಿದ್ದರು.
ಎಸೆದುಹೋದ ಸ್ಥಳದಲ್ಲಿ ಕನಿಷ್ಠ ಪುನರ್ವಸತಿ ಸೌಲಭ್ಯವನ್ನೂ ಜಿಲ್ಲಾಡಳಿತ ಕಲ್ಪಿಸಿಲ್ಲ. ಟೆಂಟ್ ನಿರ್ಮಿಸಿಕೊಳ್ಳಲು ಇಟ್ಟುಕೊಂಡಿದ್ದ ಟಾರ್ಪಲ್‍ಗಳು ಪೊಲೀಸರ ದಾಳಿಗೆ ಹರಿದು ಚಿಂದಿಯಾಗಿವೆ. ಪಾತ್ರೆಪಗಡಗಳು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿದ್ದವು. ಹಾಲು ಕುಡಿವ ಕಂದಮ್ಮಗಳು, ಮಕ್ಕಳು ಹಸಿವು ತಾಳದೆ ಗೋಳಿಡುತ್ತಿರುವ ದೃಶ್ಯ ಸರ್ಕಾರಿ ಮನಸ್ಸುಗಳನ್ನು ಕಿಂಚಿತ್ತೂ ಕದಡಿದಂತೆ ಕಾಣಲಿಲ್ಲ.
ಈ ಹಕ್ಕಿಪಿಕ್ಕಿಗಳಿಗೆ ತಕ್ಷಣದಲ್ಲಿ ಯಾವುದೇ ಕಾನೂನಾತ್ಮಕವಾದ ನೆರವು ಸಿಗದಂತೆ ನೋಡಿಕೊಳ್ಳಲು ರಜಾದಿನದಂದೇ ಒಕ್ಕಲೆಬ್ಬಿಸುವಂತಹ ವ್ಯವಸ್ಥಿತ ಷಡ್ಯಂತ್ರವನ್ನು ಅಧಿಕಾರಿಗಳು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಇನ್ನು ಅಂತವರಿಂದ ಮನುಷ್ಯತ್ವವನ್ನು ನಿರೀಕ್ಷಿಸುವುದೇ ಅಪರಾಧ!
ಸರ್ಕಾರವೇ ಮಂಜೂರು ಮಾಡಿದ್ದ ಭೂಮಿಯಲ್ಲಿ ವಾಸವಿದ್ದ ಹಕ್ಕಿಪಿಕ್ಕಿಯವರನ್ನು ಒಕ್ಕಲೆಬ್ಬಿಸುವಂತೆ ಸ್ಥಳೀಯರೊಬ್ಬರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನು ಪರಿಶೀಲಿಸಿ ಸರ್ವೆ ನಂಬರ್ 78ರಲ್ಲಿ ವಾಸವಿದ್ದ ಹಕ್ಕಿಪಿಕ್ಕಿ ಸಮುದಾಯವರನ್ನು ಸ್ಥಳಾಂತರಿಸುವಂತೆ ಆದೇಶ ನೀಡಿದೆ. ಆದ್ದರಿಂದಾಗಿ ಒಕ್ಕಲೆಬ್ಬಿಸುತ್ತಿದ್ದೇವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ.
ಆದರೆ ಅದೇ ಕಾನೂನಿನ ಪ್ರಕಾರ ಹೀಗೆ ಒಕ್ಕಲೆಬ್ಬಿಸುವ ಮುನ್ನ ವಾಸವಿದ್ದವರಿಗೆ ತಿಳಿವಳಿಕೆ ಪತ್ರ ನೀಡಬೇಕು, ತಾತ್ಕಾಲಿಕವಾಗಿಯಾದರೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದರೆ ಜಿಲ್ಲಾಡಳಿತಕ್ಕೆ ಕಾನೂನಿನ ಆ ಅಧ್ಯಾಯಗಳು ಬೇಡವಾಗಿದ್ದವು. ಅಲೆಮಾರಿ ಬದುಕುಗಳನ್ನು ಒಕ್ಕಲೆಬ್ಬಿಸುವ ಒಕ್ಕಣೆಯಷ್ಟೇ ಅವರಿಗೆ ಸಾಕಾಗಿತ್ತು!
ಹಕ್ಕಿಪಿಕ್ಕಿ ಜನರ ವಸತಿಗಾಗಿ ಮೀಸಲಿಟ್ಟಿದ್ದ 4 ಎಕರೆ ಭೂಮಿಯಲ್ಲಿ ಎಂಪಿಎಂ ಕಾರ್ಖಾನೆಯ ನೆಡುತೋಪು ಇರುವ ಕಾರಣ ಈವರೆಗೂ ನಿವೇಶನ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಈ ಹಿಂದೆಯೂ ಇಲ್ಲಿರುವ ಮರಗಳು ಕಟಾವು ಆದ ನಂತರ ಆಯನೂರು ಪಂಚಾಯಿತಿ ನಿವೇಶನಗಳನ್ನು ನಿರ್ಮಿಸಿ, ಅರ್ಹ ಹಕ್ಕಿಪಿಕ್ಕಿ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡುತ್ತೆ, ಆಗ ನೀವು ಬಂದು ನೆಲೆಸಬಹುದು ಎಂದು ಇದೇ ಅಧಿಕಾರಿಗಳು ಆಶ್ವಾಸನೆಯನ್ನು ಕೊಟ್ಟಿದ್ದರು. ಇದಕ್ಕೆ ಒಪ್ಪಿದ ಹಕ್ಕಿಪಿಕ್ಕಿಗಳು ಬೇರೆಡೆಗೆ ಸ್ಥಳಾಂತರವಾಗಲು ಒಪ್ಪಿದ್ದರು. ಆದರೆ ಜಿಲ್ಲಾಡಳಿತ ಕೊಟ್ಟ ಮಾತು ಉಳಿಸಿಕೊಳ್ಳುವ ಯಾವ ಲಕ್ಷಣವನ್ನೂ ತೋರದಿದ್ದಾಗ, ಹಾಗೆ ಹೋಗಿದ್ದವರೆಲ್ಲ ವಾಪಾಸು ಬಂದು ಆ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಅವರಿಗೆ ಕನಿಷ್ಟ ಮಟ್ಟದ ಮೂಲಸೌಕರ್ಯಗಳೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಸವಿದ್ದವರನ್ನು ಒಕ್ಕಲೆಬ್ಬಿಸಿದ್ದು ಸರ್ಕಾರದ ಕ್ರೌರ್ಯವೆನ್ನದೇ ಇರಲಾಗದು.
ಇದನ್ನು ಖಂಡಿಸಿ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸದಸ್ಯರು ಈ ಸಮುದಾಯದವರೊಂದಿಗೆ ಜುಲೈ 30ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅವರ ಕಚೇರಿಗೆ ಬಂದು ಸುಮಾರು ಎರಡು ಗಂಟೆ ಧರಣಿ ಕೂತರು ಯಾವೊಬ್ಬ ಅಧಿಕಾರಿಯೂ ಇವರನ್ನು ಕ್ಯಾರೇ ಅನ್ನಲಿಲ್ಲ. ಕೊನೆಗೆ ಡಿಸಿ ಸಾಹೇಬರ ಸಹಾಯಕ ಅಧಿಕಾರಿಯೊಬ್ಬ ಬಂದು ಕಾಟಾಚಾರಕ್ಕೆ ಮನವಿ ಸ್ವೀಕರಿಸಲು ಮುಂದಾಗಿದ್ದ. ಜಿಲ್ಲಾಧಿಕಾರಿಗಳೇ ಬರಲಿ ಅಂತ ಅವರೆಲ್ಲ ಪಟ್ಟು ಹಿಡಿದಾಗ `ಜಿಲ್ಲಾಧಿಕಾರಿಗಳು ಊರಲ್ಲಿಲ್ಲ, ಎರಡು ದಿವಸ ಅವರು ಬರುವುದಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿಗಳೂ ಕಚೇರಿಯಲ್ಲಿ ಇಲ್ಲ’ ಎಂಬ ಉತ್ತರ ಕೊಟ್ಟಿದ್ದ. ಅದನ್ನು ನಂಬಿದ ಆ ಅಲೆಮಾರಿಗಳು ಮನವಿ ಕೊಟ್ಟು ವಾಪಾಸು ಬರುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳು ಕಚೇರಿ ಆವರಣದಲ್ಲೇ ಕಾಣಿಸಿಕೊಂಡಿದ್ದರು! ಅರೆ, ಭೇಟಿಯಾಗಿ ಮನವಿ ಕೊಡಲು ಬಂದ ತಮ್ಮನ್ನು ಹೀಗೆ ಸುಳ್ಳಿನ ಮೂಲಕ ಸಾಗಹಾಕಲು ನಾವೇನು ತಾಲಿಬಾನಿ ಉಗ್ರರಾ ಅಂತ ಆ ಅಲೆಮಾರಿಗಳು ಕೇಳುವ ಪ್ರಶ್ನೆ ಇಡೀ ಸರ್ಕಾರವನ್ನು ಅಣಕಿಸುವಂತಿತ್ತು.
ಸಾಮಾನ್ಯವಾಗಿ ಆಯಾ ಜಿಲ್ಲಾಧಿಕಾರಿಗಳೇ ‘ಜಿಲ್ಲಾ ಪರಿಶಿಷ್ಟ ಜಾತಿ, ಅಲೆಮಾರಿ, ಅರೆಅಲೆಮಾರಿ ಮತ್ತು ಅತೀ ಸೂಕ್ಷ್ಮ ಸಮುದಾಯದ ಅಭಿವೃದ್ಧಿ ಕೋಶ’ದ ಅಧ್ಯಕ್ಷರೂ ಆಗಿರುತ್ತಾರೆ. ಅವರೇ ಇಂಥಾ ಸಮುದಾಯಗಳ ಮೇಲೆ ದಾಳಿ ಮಾಡಿದರೆ ಏನಾಗಬೇಕು? ಈ ರೀತಿಯ ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸಲು ಸಿದ್ದರಾಮಯ್ಯ ಸರ್ಕಾರ 320 ಕೋಟಿ ಬಿಡುಗಡೆ ಮಾಡಿತ್ತು. ಅಶಕ್ತ ಸಮುದಾಯದವರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದು ಆ ಅನುದಾನದ ಇರಾದೆ. ಆದರೆ ಅದು ಖಜಾನೆಯಲ್ಲಿ ಖರ್ಚಾಗದೆ ಹಾಗೇ ಉಳಿದಿದೆ. ಪುನರ್ವಸತಿ ಸಮಿತಿಯ ಸದಸ್ಯರಾದ ಜಾವಡೆ ಲೋಕೇಶ್ ಮೊದಲಾದವರು ಜುಲೈ 16ರಂದು ನಡೆದ ಸಭೆಯೊಂದರಲ್ಲಿ ಈ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿವೇಶನವನ್ನು ಗುರುತಿಸಿಕೊಡಬೇಕೆಂದು ಕೇಳಿಕೊಂಡ ನಂತರವೂ ಜಿಲ್ಲಾಡಳಿತ ಹೀಗೆ ವರ್ತಿಸುತ್ತಿದೆಯೆಂದರೆ ಇದರ ಹಿಂದೆ ಬಲಾಢ್ಯ ಜನಪ್ರತಿನಿಧಿಗಳು ರಿಯಲ್ ಎಸ್ಟೇಟ್ ಹುನ್ನಾರ ಇರಬಹುದೆನ್ನುವ ಗುಮಾನಿ ಮೂಡುತ್ತಿದೆ.

– ರವಿ ಸಿದ್ಲಿಪುರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...