Homeಮುಖಪುಟಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್!

ಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್!

- Advertisement -
- Advertisement -

“ನಾನು ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ… ಕಾಂಗ್ರೆಸಲ್ಲಿ ದೇಶಪಾಂಡೆ ಕಾಟ ತಾಳಲಾಗದೆ ಹೊರಬರಬೇಕಾಯ್ತು…” ಎಂದು ಯಲ್ಲಾಪುರ ಮುಂಡಗೋಡ-ಬನವಾಸಿ ಕ್ಷೇತ್ರದಾದ್ಯಂತ ಗೋಳಾಡುತ್ತ ಪ್ರಚಾರ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ “ಅನರ್ಹ” ಶಾಸಕ ಶಿವರಾಮ ಹೆಬ್ಬಾರ್‌ ಮಾತನ್ನು ಯಾರೆಂದರೆ ಯಾರೂ ನಂಬುತ್ತಿಲ್ಲ.

2018ರ ಅಸೆಂಬ್ಲಿ ಎಲೆಕ್ಷನ್ ರಿಸಲ್ಟ್ ಬಂದ ಮರುಘಳಿಗೆಯೇ ಹೆಬ್ಬಾರ ವ್ಯವಹಾರ ಚತುರೆ ಹೆಂಡತಿ, ಗಂಡನ ಬಿಜೆಪಿಗೆ ಸೇರಿಸಲು ಯಡ್ಡಿ ಮಗ ವಿಜಯೇಂದ್ರ ಜತೆ ಡೀಲ್ ನಡೆಸಿದ್ದು ಆಡಿಯೋ ಕೇಳಿದರ‍್ಯಾರೂ ಮರೆತಿಲ್ಲ! ಹೆಬ್ಬಾರ್ ಮಂತ್ರಿಗಿರಿ ದುರಾಸೆಗೆ ಬಿದ್ದೇ ಪಕ್ಷಾಂತರ ಮಾಡಿ ಅನವಶ್ಯಕ ಎಲೆಕ್ಷನ್ ಜನರ ಮೇಲೆ ಹೇರಿದ್ದಾನೆಂಬ ಕೂಗು ಇಡೀ ಕ್ಷೇತ್ರದಲ್ಲಿದೆ. ಮೂಲ ಬಿಜೆಪಿಗರಂತೂ ಹೆಬ್ಬಾರ ಮುಸುಡಿ ಕಂಡರೆ ಮೂಗು ಮುರಿಯುತ್ತಾರೆ. ನೋಟಾ ಬಟನ್ನಾದರೂ ಒತ್ತುತ್ತೇವೆಯೇ ಹೊರತು ಕೊಳಕು ರಾಜಕೀಯ ಮಾಡುವ ಹೆಬ್ಬಾರ್‌ ಗೆಲ್ಲಿಸಲಾರೆವೆಂದು ಕಟ್ಟರ್ ಕಮಲಿಗರು ಕೆರಳಿದ್ದಾರೆ!!

ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕೆಂಬ ತೆವಲಿಗೆ ಬಿದ್ದಿರುವ ಹೆಬ್ಬಾರ್‌ ಲೆಕ್ಕಾಚಾರ ಸರಳ ಅಂಕಗಣಿತದಲ್ಲಿದೆ. ನಂಗೆ ಕಳೆದ ಬಾರಿ ಬಿದ್ದ ಮತದೊಂದಿಗೆ ಆಗಿನ ಎದುರಾಳಿ ವಿ.ಎಸ್.ಪಾಟೀಲ್ ಈಗ ಜತೆಗಿರುವುದರಿಂದ ಪ್ಲಸ್ ಆಗಿದೆ. ಸ್ವಜಾತಿ ಹವ್ಯಕರಲ್ಲಿ ಬೇಸರವಿದ್ದರೂ ಸ್ವರ್ಣವಲ್ಲಿ ಸ್ವಾಮಿಗಳ ಫರ್ಮಾನಿಂದ ಲಾಭ ಆಗ್ತದೆ. ಎದುರಾಳಿ ಕಾಂಗ್ರೆಸ್‌ನ ಭೀಮಣ್ಣ ನಾಯ್ಕಗೆ ಆತನ ದೀವರ ಜಾತಿ ಮತ ಬಿಟ್ಟರೆ ಬೇರಾರದೂ ಸಿಗದು. ಅದಿರು ವ್ಯವಹಾರದ ಕೊಪ್ಪರಿಗೆ ಹಣದಿಂದ ಪ್ರಚಾರ ಸಲೀಸಾಗುತ್ತದೆಂಬ ಅಂದಾಜು ಹೆಬ್ಬಾರ್ ಹಾಕಿದ್ದಾರೆ. ಆದರೆ ಅಷ್ಟು ಸರಳವಾಗಿಲ್ಲ ಉಪಚುನಾವಣಾ ಅಖಾಡ.

ಕಳೆದ ಬಾರಿ ಕೇವಲ 1,400 ಮತದಂತರದಿಂದ ಗೆದ್ದಿದ್ದ ಹೆಬ್ಬಾರ್‌ಗೆ ದಡ ತಲುಪಿಸಿದ್ದೇ ಮುಸ್ಲಿಮ್, ಕ್ರಿಶ್ಚಿಯನ್ನರು. 20 ಸಾವಿರದಷ್ಟಿರುವ ಈ ಅಲ್ಪಸಂಖ್ಯಾತರ ಬೆಂಬಲ ಈ ಸಲ ಹೆಬ್ಬಾರ್‌ಗೆ ಸಿಗಲಾರದು. ಬಿಜೆಪಿಯಿಂದ ಶಾಸಕನಾಗಬೇಕೆಂದು ಕಳೆದ ಬಾರಿಯೇ ಬಿಜೆಪಿ ಪಾಲಾಗಿರುವ ಜಿಪಂ ಸದಸ್ಯ ಎಲ್.ಟಿ.ಪಾಟೀಲ್‌ಗೆ ಹೆಬ್ಬಾರ್ ಬಿಜೆಪಿಗೆ ಬಂದಿದ್ದು ಸಹಿಸಲಾಗುತ್ತಿಲ್ಲ. ಸುಮಾರು 25 ಸಾವಿರ ಮತದಾರರಿರುವ ಮರಾಠ ಸಮುದಾಯದ ಪಾಟೀಲ ಮೂಲತಃ ದೇಶಪಾಂಡೆಯ ಅತ್ಯಾಪ್ತ ಶಿಷ್ಯ. ಈ ಪಾಟೀಲ್ ಕಳೆದ ಬಾರಿ ದೊಡ್ಡ ಮೊತ್ತಕ್ಕೆ ಡೀಲಾಗಿ ಹೆಬ್ಬಾರ್‌ಗೆ ಹೆಲ್ಪ್ ಮಾಡಿದ್ದ. ಆದರೀಗ ದೇಶಪಾಂಡೆ ಕಣ್ಸನ್ನೆಗೇ ಉಲ್ಟಾ ಹೊಡೆಯುತ್ತಿದ್ದಾನೆ.

ಹಿಂದಿನ ಪ್ರತಿಸ್ಪರ್ಧಿ ವಿ.ಎಸ್.ಪಾಟೀಲ್ ಸ್ವಜಾತಿ ದೊರೆ ಯಡ್ಡಿ ಮುಲಾಜಿಗೆ ಬಹಿರಂಗವಾಗಿ ಓಡಾಡಿಕೊಂಡಿದ್ದಾನಾದರೂ ಒಳಗೊಳಗೇ ಹೆಬ್ಬಾರ್ ಸೋಲಲಿ ಎಂದೇ “ಹಾರೈಸು”ತ್ತಿದ್ದಾರೆ. ಈತನ ಮಗ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದು ಹೆಬ್ಬಾರ್‌ ರನ್ನು ದಂಗುಬಡಿಸಿದೆ.

ಸ್ವಜಾತಿಯ ಸ್ವ-ಪಕ್ಷದ ಹಿತಶತ್ರುಗಳಾದ ಪ್ರಮೋದ್ ಹೆಗಡೆ. ಗುರುಮುರಿಗೆ ಸಂಸದ ಅನಂತ್ಮಾಣಿಗಳ ಅರ್ಥವಾಗದ ಅಂತರಾಳ ಹೆಬ್ಬಾರ್‌ರನ್ನು ಅಂಜಿಸುತ್ತಲೇ ಇದೆ. ಬಿಜೆಪಿ ಜಿಲ್ಲಾಧ್ಯಕ್ಷನಾಗಿದ್ದಾಗಲೇ ಅನಂತ್ಮಾಣಿಯಿಂದ ಕೆನ್‌ಕೆನ್ನೆಗೆ ಬಾರಿಸಿಕೊಂಡು ಬಿಜೆಪಿ ಸೇರಿದ್ದ ಹೆಬ್ಬಾರ್‌ರಿಗೆ ಆತನ ಸಹಕಾರ ಸಿಗುವುದಾದರೂ ಹೇಗೆ? ಅನಂತ್ಮಾಣಿಗೆ ಸ್ವ-ಪಕ್ಷದ ಹೆಬ್ಬಾರ್‌ಗಿಂತಲೂ ವಿರೋಧಿ ಪಡೆಯ ಭೀಮಣ್ಣ ನಾಯ್ಕ ಎಂದರೇನೇ ಕಾಳಜಿ ಜಾಸ್ತಿ. ಸ್ಪೀಕರ್ ಕಾಗೇರಿಯಂತೂ ತನ್ನ ಮಂತ್ರಿಗಿರಿಗೆ ಸಂಚಕಾರ ತರುವ, ಸ್ವ-ಜಾತಿ ಹವ್ಯಕರಲ್ಲಿ ಪ್ರತಿಸ್ಪರ್ಧಿಯಾಗುವ ಹೆಬ್ಬಾರ್ ಗೆಲ್ಲುವುದು ಸಹಜವಾಗೇ ಬೇಡವಾಗಿದೆ. ಇಷ್ಟಾಗಿಯೂ ಈ ಹವ್ಯಕ ಲೀಡರ್‌ಗಳೆಲ್ಲ ತಮ್ಮ ಕುಲಗುರು ಸ್ವರ್ಣವಲ್ಲಿ ಸ್ವಾಮಿ ಮಂತ್ರಾಕ್ಷತೆಗೆ ಮಣಿದರೆ ಹವ್ಯಕರ ಮತ ಸಿಗಬಹುದೇ ಹೊರತು ಅಹಿಂದ ಮತ ತರಲು ಸಾಧ್ಯವೇ ಇಲ್ಲ.

ಇದೆಲ್ಲಕ್ಕಿಂತ ಕೈ ಕಮಾಂಡ್ ದೇಶಪಾಂಡೆಯ ಜಿದ್ದೊಂದೇ ಅಖಾಡದಲ್ಲಿ ಹೆಬ್ಬಾರ್‌ರನ್ನು ಹೈರಾಣಾಗಿಸಿದೆ. ದೇಶಪಾಂಡೆ ತನ್ನ ರಾಜಕೀಯ ಇತಿಹಾಸದಲ್ಲಿ ಯಾರನ್ನೂ ಗೆಲ್ಲಿಸಲು ಪ್ರಯತ್ನಿಸಿದ್ದೇ ಇಲ್ಲ. ಆತನದೇನಿದ್ದರೂ ಸೋಲಿಸುವ ಕರಾಮತ್ತು. ಆದರೆ ಈ ಬಾರಿ ದೇಶಪಾಂಡೆ ಹೇಗಾದರೂ ಮಾಡಿ ಹೆಬ್ಬಾರ್‌ರನ್ನು ಹೆಡೆಮುರಿ ಕಟ್ಟಿ ಬೇಡ್ತಿ ನದಿಯಲ್ಲಿ ಬಿಡಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ತನ್ನನ್ನು ಕಾಂಗ್ರೆಸಲ್ಲಿದ್ದಾಗಲೂ ಕೆಣಕುತ್ತಿದ್ದ ಹೆಬ್ಬಾರ್ ಪಾರ್ಟಿ ಬಿಡಲಿಕ್ಕೆ ತಾನೇ ಕಾರಣವೆಂದು ಹೇಳಿದ್ದು ಕೆರಳಿಸಿದೆ. ಕ್ಷೇತ್ರದ ಮುಂಡಗೋಡದಲ್ಲಿ ದೇಶಪಾಂಡೆಗೆ ಹಿಡಿತವಿದೆ. ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಮುಂಡಗೋಡ ದೇಶಪಾಂಡೆಯ ಹಳಿಯಾಳ ಕ್ಷೇತ್ರದ ಜತೆಗಿತ್ತು. ಇಲ್ಲಿಯೇ ಬಿಡಾರ ಹೂಡಿರುವ ದೇಶಪಾಂಡೆ ಹೆಬ್ಬಾರ್‌ನ ಸೋಲಿಸಲು ಸಕಲ ಸ್ಟ್ರಾಟರ್ಜಿ ಮಾಡುತ್ತಿದ್ಧಾರೆ. ಬ್ರಾಹ್ಮಣೇತರ ಮರಾಠ, ಗೌಳಿ, ಸಿದ್ದಿ, ಬುಡಕಟ್ಟು, ದಲಿತ ಮತ ಬ್ಯಾಂಕ್ ಮೇಲೆ ದೇಶಪಾಂಡೆ ಗಮನ ಕೇಂದ್ರೀಕರಿಸಿರುವುದು ಹೆಬ್ಬಾರ್‌ಗೂ ಗೊತ್ತಾಗಿದೆ.

ದೇಶಪಾಂಡೆ ತಂತ್ರಗಾರಿಕೆಗೆ ಹೆಬ್ಬಾರ್ ಒಂಥರಾ ಡೆಸ್ಟರೇಟ್ ಆದಂತಿದೆ. ಅರಣ್ಯ ಅತಿಕ್ರಮಣದಾರರ ಸಂಘಟಕ ರವೀಂದ್ರ ನಾಯ್ಕರನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ದೇಶಪಾಂಡೆ ಕರೆತಂದಿದ್ದಾರೆ. ಬಹುತೇಕ ಜಿ.ಪಂ- ತಾ.ಪಂ- ಗ್ರಾಪಂ.ನ ಕಾಂಗ್ರೆಸ್ ಮೆಂಬರ್‌ಗಳು ಹೆಬ್ಬಾರ್ ಜತೆಗಿದ್ದರೂ ದೇಶಪಾಂಡೆಯ “ಋಣ” ಇರುವುದರಿಂದ ಆತನ ರಹಸ್ಯ ನಿರ್ದೇಶನಕ್ಕೆ ಬದ್ಧರಾಗಿದ್ದಾರೆಂಬುದು ಎಲೆಕ್ಷನ್ ವಿಶ್ಲೇಷಕರ ಆಂಬೋಣ.

ಕಾಂಗ್ರೆಸ್ ಕ್ಯಾಂಡಿಡೇಟ್ ಭೀಮಣ್ಣ ನಾಯ್ಕ ಪಾಪದ ಆಸಾಮಿ. ಹಲವು ಎಲೆಕ್ಷನ್‌ನಲ್ಲಿ ಸೋತವನೆಂಬ ಸಿಂಪಥಿ ಕ್ಷೇತ್ರದಲ್ಲಿದೆ. ’ಮಾಜಿ ಸಿಎಂ ಬಂ’ ಭಾಮೈದನೆಂಬ ಅಂಶ ಆತನಿಗೆ ಸ್ವಜಾತಿ ದೀವರ 15 ಸಾವಿರದಷ್ಟಿರುವ ಮತದಲ್ಲಿ ಹೆಚ್ಚಿನದು ಪಡೆಯಲು ಅನುಕೂಲವಾಗಿದೆ. ನೆರೆ ಬಂದಾಗ ಸಮ್ಮಿಶ್ರ ಸರ್ಕಾರ ಉರುಳಿಸಲು ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ “ಆಟ” ಆಡುತ್ತಿದ್ದ ಹೆಬ್ಬಾರ್ ಬಗ್ಗೆ ಕ್ಷೇತ್ರದಲ್ಲಿ ಸಿಟ್ಟಿದೆ. ಮೂಲಸೌಕರ್ಯ, ರಸ್ತೆಯಂಥ ಸೌಲಭ್ಯ ಒದಗಿಸುವ ಹೆಬ್ಬಾರ್‌ನ ಭರವಸೆ ಎರಡು ಬಾರಿ ಶಾಸಕರಾದರೂ ಈಡೇರಿಲ್ಲವೆಂಬ ಬೇಸರ ಜನರಿಗಿದೆ.

ಬಿಜೆಪಿಯ ಟಾಪ್ ಲೀಡರ್‌ಗಳು ಎರಡೆರಡು ಬಾರಿ ಸಂಧಾನ ಸಭೆ ನಡೆಸಿದರೂ ಬಿಜೆಪಿಯ ಬಹುತೇಕ ಘಟಕಗಳಿನ್ನೂ ಫೀಲ್ಡಿಗೆ ಇಳಿದಿಲ್ಲ. ಹೆಬ್ಬಾರ್ ಗ್ಯಾಂಗಿನ ಜತೆ ಸೇರಲು ಮೂಲ ಬಿಜೆಪಿಗರ ಮನಸು ಒಪ್ಪುತ್ತಿಲ್ಲ. ಹೊರನೋಟಕ್ಕೆ ಹೆಬ್ಬಾರ್ ಹವಾ ಜೋರಿರುವಂತೆ ಕಂಡರೂ ಆತನಿಗೆ ಸ್ವಜಾತಿ ಹವ್ಯಕರು ಮತ್ತು ಯಡ್ಡಿ ದೆಸೆಯಿಂದ 25 ಸಾವಿರದಷ್ಟಿರುವ ಲಿಂಗಾಯತರ ಮತ ಬಿಟ್ಟರೆ ಉಳಿದ ಯಾವ ಸಮುದಾಯದ ಮತವೂ ದೊಡ್ಡ ಪ್ರಮಾಣದಲ್ಲಿ ದಕ್ಕಲಾರದು.

ಕ್ಷೇತ್ರ ವ್ಯಾಪ್ತಿಯ ಏಳು ಜಿಪಂ ಕ್ಷೇತ್ರಗಳ ಪೈಕಿ ನಾಲ್ಕು ಬಿಜೆಪಿ (ಇಬ್ಬರು ಕಾಂಗ್ರೆಸ್‌ನಿಂದ ಹೋದವರು) ಪರವಿದ್ದರೆ ಮೂರು ಕಾಂಗ್ರೆಸ್ ಕಡೆಗಿದೆ. ದೇಶಪಾಂಡೆ ಕರಾರುವಾಕ್ಯ ದಾಳ ಉರುಳಿಸಿದಂತೆ ಕಾಂಗ್ರೆಸ್ ಕ್ಯಾಂಡಿಡೇಟ್ ಬಲಗೊಳ್ಳುತ್ತಿದ್ದಾರೆ. ಸದ್ಯಕ್ಕೆ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಕ್ಷೇತ್ರ ಯಾವ ಮೂಲೆಯಲ್ಲಿ ನಿಂತು ಕಣ್ಣು ಹಾಯಿಸಿದರೂ ಪಕ್ಷಾಂತರಿ ಹೆಬ್ಬಾರ್‌ಗೆ ಅಖಾಡ ಕಠಿಣ ಆಗುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶಪಾಂಡೆ ಇದೇ ನಿಷ್ಠೆ-ಬದ್ಧತೆ-ಹಠದಿಂದ ಕಡೆವರೆಗೂ ಹೋರಾಡಿದರೆ ಕ್ಷೇತ್ರಕ್ಕೆ ಮೋಸ-ವಂಚನೆ ಮಾಡಿದ ಹೆಬ್ಬಾರ್‌ಗೊಂದು ನೈತಿಕ ಪಾಠವಾಗೋದು ಗ್ಯಾರಂಟಿ ಎಂಬುದು ಕ್ಷೇತ್ರದಲ್ಲಿ ಕೇಳಿಬರುವ ಸಾಮಾನ್ಯ ಮಾತು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...