- Advertisement -
“ಭೀತಿ ಮತ್ತು ದ್ವೇಷದ ವಿರುದ್ಧ ಮಹಿಳೆಯರು” ಎಂಬ ಘೋಷವಾಕ್ಯದಡಿ ಏಪ್ರಿಲ್ 04ರಂದು ದೇಶಾದ್ಯಂತ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ಐದು ವರ್ಷದಲ್ಲಿ ಮೋದಿ ಸರ್ಕಾರದ ತಂದ ಫಾಸಿವಾದ ಮತ್ತು ನವ ಉದಾರೀಕರಣದ ನೀತಿಗಳು ಮಹಿಳೆಯರು ಮತ್ತು ಅಂಚಿಗೆ ತಳಲ್ಪಟ್ಟವರ ಮೇಲೆ ಭಾರೀ ದುಷ್ಪರಿಣಾಮಗಳನ್ನು ಬೀರಿದ್ದು, ಈ ಬಾರಿ ನಮ್ಮ ಸಮುದಾಯಗಳ ಬದಲಾವಣೆಗಾಗಿ ಮತ ಚಲಾಯಿಸೋಣ ಎಂದು ಸಂಕಲ್ಪ ಮಾಡಿದ್ದಾರೆ.
ಮಹಿಳೆ ಮತ್ತು ಅಂಚಿಕೆ ದೂಡಲ್ಪಟ್ಟ ಸಮುದಾಯಗಳ ನಡಿಗೆ (ವುಮೆನ್ಸ್ ಮಾರ್ಚ್ – ವುಮೆನ್ ವೋಟ್ ಫಾರ್ ಚೇಂಜ್) ಹೆಸರಿನಲ್ಲಿ ಇಂದು ದೇಶಾದ್ಯಂತ ಪ್ರತಿಭಟನೆ, ಮೆರವಣಿಗೆ, ಬಹಿರಂಗ ಕಾರ್ಯಕ್ರಮಗಳು ನಡೆದಿದ್ದು ಲಕ್ಷಾಂತರ ಮಹಿಳೆಯರು ಪಾಲ್ಗೊಂಡಿದ್ದಾರೆ. ಆ ಮೂಲಕ ಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ನಿರ್ಣಯ ಕೈಗೊಂಡಿದ್ದಾರೆ.
ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ಮುಸ್ಲಿಮರು, ದಲಿತರು ಮತ್ತು ಕ್ರೈಸ್ತರ ವಿರುದ್ಧ ಸುಳ್ಳು ಎನ್ಕೌಂಟರ್ಗಳು, ಮತ್ತು ಗೋ ರಕ್ಷಣೆಯ ಹೆಸರಿನಲ್ಲಿ ಸಾಮೂಹಿಕ ಹತ್ಯೆಗಳನ್ನು ನಡೆಸುವುದಲ್ಲದೇ ಭಯ ಮತ್ತು ಅಸುರಕ್ಷತೆಯ ವಾತವಾರಣ ನಿರ್ಮಿಸಿರುವುದು, ಅದರೊಟ್ಟಿಗೆ ಟ್ರಾನ್ಸ್ ಜನರಿಗೆ ಪ್ರಜೆಯ ಸ್ಥಾನಮಾನ ನೀಡದೆ ಟ್ರಾನ್ಸ್ ಪೋಬಿಯಾ ಬೆಳೆಸುವ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಮಹಿಳಾ ಸಬಲೀಕರಣ ಮತ್ತು ಭೇಟಿ ಬಚಾವೋ ಎಂಬ ಖಾಲಿ ಮತ್ತು ಕೆಲಸಕ್ಕೆ ಬಾರದ ಆಶ್ವಾಸನೆಗಳ ವಿರುದ್ಧ ಭಾರತದ ಮಹಿಳೆಯರು ದನಿ ಎತ್ತಿ ಪ್ರಶ್ನೆಗಳನ್ನು ಕೇಳಬೇಕಾಗಿದೆ, ಈ ಐದು ವರ್ಷಗಳಲ್ಲಿ ಮೋದಿ ಸರ್ಕಾರವು ಮಹಿಳೆಯರಿಗಾಗಿ ಸುರಕ್ಷಿತ ಮತ್ತು ಘನತೆಯುಕ್ತ ಕೆಲಸವಾಗಲಿ, ಅಥವಾ ವೇತನವಾಗಲಿ ನೀಡುವುದರಲ್ಲಿ ವಿಫಲರಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ನಿರುದ್ಯೋಗವೂ 45 ವರ್ಷಗಳಲ್ಲಿ ಅತಿ ಹೆಚ್ಚಾಗಿದೆ ಏಕೆ? ರೈತರು ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಏಕೆ? ಏಕಮುಖಿಯಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುತ್ತಾ ಮೀಸಲಾತಿಯನ್ನು ತಳಸಮುದಾಯಗಳಿಂದ ಕಿತ್ತುಕೊಳ್ಳುತ್ತಿರುವುದು ಏಕೆ? ದೇವಸ್ಥಾನಗಳಿಗೆ ಮಹಿಳೆಯರಿಗೆ ಪ್ರವೇಶ ಏಕಿಲ್ಲ? ಕಥುವಾ ಮತ್ತು ಉನಾವ್ ಜಿಲ್ಲೆಗಳಲ್ಲಿ ನಡೆದ ಅತ್ಯಾಚಾರಗಳನ್ನು ಆಳುತ್ತಿರುವ ಬಿಜೆಪಿ ಸರ್ಕಾರವು ಏಕೆ ಸಮರ್ಥಿಸಿಕೊಂಡಿದೆ? ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ನೀತಿಗಳನ್ನು ಜಾರಿ ಮಾಡುತ್ತಿರುವುದೇಕೆ? ಎಂಬ ಪ್ರಶ್ನೆಗಳನ್ನು ನಾವು ಕೇಳುತ್ತಿದ್ದೇವೆ ಎಂದು ಸಾರಿ ಹೇಳಿದ್ದಾರೆ.
ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು, ಯೋಜನಾ ಕಾರ್ಮಿಕರುಗಳ ಮತ್ತು ಗುತ್ತಿಗೆ ಕಾರ್ಮಿಕರ ಖಾಯಮಾತಿಯಾಗಲಿ ಅಥವಾ ಕನಿಷ್ಠ ವೇತನವಾಗಲಿ ಸರ್ಕಾರಗಳು ಏಕೆ ಪೂರೈಸುತ್ತಿಲ್ಲ? ಮಲದ ಗುಂಡಿಗಳಲ್ಲಿ ಪೌರಕಾರ್ಮಿಕರು ಸತ್ತರು ಅವರಿಗೆ ಏನು ಮಾಡಿಲ್ಲ? ಮಧ್ಯ ನಿಷೇಧಕ್ಕಾಗಿ ಮಹಿಳೆಯರ ಪಾದಯಾತ್ರೆಗೆ ಏಕೆ ಸ್ಪಂದಿಸಲಿಲ್ಲ? ನಿರ್ಭೀತ ಪತ್ರಕರ್ತೆ ಗೌರಿ ಲಂಕೇಶರನ್ನು ಹತ್ಯೆ ಮಾಡಿದ್ದಲ್ಲದೆ, ಟ್ರೋಲ್ ಮಾಡಿ ಚಾರಿತ್ರ್ಯವಧೆ ಮಾಡುತ್ತಿರುವ ಪಕ್ಷ ಯಾವುದು? ಮಹಿಳಾ ಹೋರಾಟಗಾರರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಅತ್ಯಾಚಾರ ಎಸೆಗುವಂತಹ ಟೀಕೆಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಯಾವ ಪಕ್ಷ ಪ್ರೋತ್ಸಾಹಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಮನುವಾದಿ, ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳನ್ನು ಸೋಲಿಸುವ ದಿಕ್ಕಿನಲ್ಲಿ ನಮ್ಮ ಮತವನ್ನು ಹಾಕಬೇಕಾಗಿರುವ ಸಂದರ್ಭವು ಈಗ ಬಂದಿರುತ್ತದೆ! ನಮ್ಮ ಮತವನ್ನು ಜಾತ್ಯಾತೀತತೆಯನ್ನು, ಸಮಾನತೆಯನ್ನು ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ ಚಲಾಯಿಸೋಣ. ನಮ್ಮ ಮಾನವೀಯತೆಯನ್ನು ಮರಳಿ ತರಲು ನಾವು ಮತ ಚಲಾಯಿಸೋಣ, ನೆನಪಿಡಿ ಇಂದು ಪಣಕ್ಕೆ ಒಡ್ಡಿರುವುದು ಪ್ರಜಾಪ್ರಭುತ್ವ ಮಾತ್ರವಲ್ಲ, ಮಾನವೀಯತೆಯೂ ಸಹ ಎಂದು ಘೋಷಿಸಿದ್ದಾರೆ.
ನೂರಾರು ಮಹಿಳಾ ಮತ್ತು ಅಲ್ಪಸಂಖ್ಯಾತ ಸಮುದಾಯ ಸಂಘಟನೆಗಳ ನೇತೃತ್ವದಲ್ಲಿ ಮಹಿಳೆಯರು ಮತ್ತು ಅಂಚಿಗೆ ದೂಡಲ್ಪಟ್ಟ ಸಮುದಾಯಗಳ ನಡಿಗೆ – ಬೆಂಗಳೂರು ಸಹ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ನೂರಾರು ಮಹಿಳೆಯರು, ಪ್ರಜ್ಞಾವಂತರು ಭಾಗವಹಿಸಿ ದನಿ ಎತ್ತಿದ್ದಾರೆ. ಚಿತ್ರನಿರ್ದೇಶಕಿ ಕವಿತಾ ಲಂಕೇಶ್, ಅಕೈ ಪದ್ಮಶಾಲಿ ಮುಂತಾದವರು ನೇತೃತ್ವ ವಹಿಸಿದ್ದರು.
- Advertisement -