ನೆರೆ ಇಲ್ಲವೆ ಬರ ಪರಿಸ್ಥಿತಿ ಎದುರಿಸಿದ ಸಂದರ್ಭಗಳಲ್ಲಿ, ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಯಾವ ಕೇಂದ್ರ ಸರ್ಕಾರವೂ, ಯಾವ ಪ್ರಧಾನಿಯೂ ಕರ್ನಾಟಕ ರಾಜ್ಯವನ್ನು ಈ ರೀತಿ ನಿರ್ಲಕ್ಷಿಸಿಲ್ಲ. ಮುಖ್ಯಮಂತ್ರಿಗಳನ್ನು ಈ ರೀತಿ ಅವಮಾನಿಸಿಲ್ಲ. ಸ್ವಾಭಿಮಾನಿ, ಸ್ವಾವಲಂಬಿ ಕರ್ನಾಟಕ ಇದನ್ನು ಸಹಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರೋಕ್ಷವಾಗಿ ನರೇಂದ್ರ ಮೋದಿಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ನಿನ್ನೆ ಸಿಎಂ ಯಡಿಯೂರಪ್ಪನವರು ಪ್ರವಾಹ ಪರಿಹಾರಕ್ಕೆ ಮನವಿ ಸಲ್ಲಿಸಲು ದೆಹಲಿಗೆ ತೆರಳಿದ್ದರು. ಪ್ರಧಾನಿ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೂ ಕೇಂದ್ರ ಸರ್ಕಾರ ಯಾವುದೇ ಪರಿಹಾರ ನೀಡದೇ, ಅಧ್ಯಯನ ತಂಡ ಕಳಿಸುವುದಾಗಿ ಹೇಳಿದೆ. ಅಂದರೆ ಕರ್ನಾಟಕದ ಜನರ ಮೇಲೆ ವಿಶ್ವಾಸವಿಡದೇ ಇಂತಹ ಸಂಕಷ್ಟದ ಕಾಲದಲ್ಲಿ ಪರಿಹಾರ ನೀಡದೇ ಮುಂದೂಡುತ್ತಿರುವುದು ಸರಿಯಲ್ಲ ಎಂದು ಹಲವರು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
None of the previous govts or PMs, including Shri. Vajpayee, had ignored Karnataka during Natural calamities. But the attitude of @narendramodi towards Ktaka & @BSYBJP, inspite of 25 MPs, is disgraceful.
We Kannadigas shall never tolerate this callous attitude.@INCKarnataka
— Siddaramaiah (@siddaramaiah) August 17, 2019
ಕರ್ನಾಟಕದಿಂದ 25 ಎಂಪಿಗಳು ಬಿಜೆಪಿಯಿಂದ ಗೆದ್ದು ಹೋಗಿದ್ದರೂ ಸಹ ಬಿಜೆಪಿ ಕರ್ನಾಟಕಕ್ಕೆ ಅವಮಾನ ಮಾಡುತ್ತಿದೆ. ಅತಿ ದೊಡ್ಡ ಪ್ರವಾಹದಿಂದ ಕರ್ನಾಟಕ ನಲುಗಿಹೋಗಿರುವುದನ್ನು ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಕಣ್ಣಾರೆ ಕಂಡಿದ್ದಾರೆ. ಸಾಲದಕ್ಕೆ ಸದ್ಯ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ ಆದರೂ ಪರಿಹಾರಕ್ಕೆ ಮೀನಾಮೇಷ ಎಣಿಸುತ್ತಿರುವುದನ್ನು ಕನ್ನಡಿಗರು ಸಹಿಸುವುದಿಲ್ಲ ಎಂದಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರವು ಪ್ರಾರಂಭಿಸಿದ ಕೆಲವು ಜನರ ಪರವಾದ ಯೋಜನೆಗಳನ್ನು ಬಿಜೆಪಿ ಸರ್ಕಾರವು ಕಡಿತಗೊಳಿಸುತ್ತಿದೆ ಅಥವಾ ನಿರ್ಲಕ್ಷಿಸುತ್ತಿದೆ. ಅಂತಹ ಕ್ರಮವನ್ನು ಖಂಡಿಸುತ್ತೇವೆ ಮತ್ತು ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಕಾಪಾಡಲು ರಾಜ್ಯದ್ಯಂತ ವ್ಯಾಪಕವಾದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನರೇಂದ್ರ ಮೋದಿಯವರ ನೀತಿ ನಿರೂಪಣೆಯ ಕಡೆಗಿನ ನಿರ್ಲಕ್ಷ್ಯ ಮತ್ತು ಅಸಡ್ಡೆ ವಿಧಾನದಿಂದ ಉಂಟಾಗಿರುವ ಈ ಆರ್ಥಿಕ ಕುಸಿತದಲ್ಲಿಯೂ ನಾವು ತಂದಿದ್ದ ಯೋಜನೆಗಳು ಜನರಿಗೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಬಡವರ ಪರ ಯೋಜನೆಗಳಿಗೆ ಯಾವುದೇ ಅಡ್ಡಿ ಉಂಟು ಮಾಡಿದ್ದಲ್ಲಿ ಅನೇಕ ಕುಟುಂಬಗಳ ಜೀವನೋಪಾಯಕ್ಕೆ ಭಂಗ ತರುತ್ತದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.