- Advertisement -
| ಶಿವಾ |
ನೀರು, ನೆರಳಿಲ್ಲದ ಬರದ ಜಿಲ್ಲೆ ವಿಜಯಪುರದಲ್ಲಿ ರಾಜಕೀಯ ನಿಗೂಢ ಬೇರು ತುಂಬಾ ಆಳವಾದದ್ದು. ಇಲ್ಲಿ ಯಾರ ‘ಕೈ’ ಯಾರ ಜೇಬೊಳಗೋ ?, ಯಾರ ಜೇಬು ಯಾರ ಕೈಯಲ್ಲೋ ? ಎನ್ನುವುದು ಜನ ಸಾಮಾನ್ಯರ ತಲೆಗೆ ಹತ್ತದ ಮಾತು. ಇಲ್ಲಿ ಏನಿದ್ದರೂ ಒಳ ರಾಜಕಾರಣದ್ದೇ ಗರ್ದಿಗಮ್ಮತ್ತು !
ಈ ಹಿಂದೆ ಎರಡು ಬಾರಿಯ ವಿಜಯಪುರ ಮೀಸಲು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧ ಬಂಜಾರಾ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ರಾಠೋಡ ಸ್ಪರ್ಧೆ ಮಾಡಿ ಸೋಲು ಕಂಡಿದ್ದಾರೆ. ಆದರೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟಿದ್ದರಿಂದ, ಜೆಡಿಎಸ್ ಅಭ್ಯರ್ಥಿಯಾಗಿ ನಾಗಠಾಣ ಮೀಸಲು ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಅವರ ಧರ್ಮಪತ್ನಿ ಸುನೀತಾ ಚವ್ಹಾಣ ಸ್ಪರ್ಧಿಸಿದ್ದರೆ. ಬಿಜೆಪಿಯಿಂದ ಮತ್ತೆ ರಮೇಶ ಜಿಗಜಿಣಗಿ ಕಣಕ್ಕಿಳಿದಿದ್ದರೆ, ಬಿಎಸ್ಪಿಯಿಂದ ಯುವ ಹೋರಾಟಗಾರ ಶ್ರೀನಿವಾಸ ಪೂಜಾರಿ ಆಯ್ಕೆ ಬಯಸಿದ್ದಾರೆ.
ವಿಜಯಪುರ ರಾಜಕಾರಣದ ಚಿತ್ರಣವೇ ಬೇರೆ. ಇಲ್ಲಿ ಪಕ್ಷ, ವ್ಯಕ್ತಿಗಳಿಗಿಂತಲೂ ರಾಜಕಾರಣಿಗಳು ತಮ್ಮ ಅನುಕೂಲ ಸಿಂದುತ್ವದಡಿಯಲ್ಲಿ ರಾಜಕೀಯ ದಾಳ ಉರುಳಿಸುತ್ತಾರೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ. ಹಿಂದಿನ ಫಲಿತಾಂಶಗಳು ಕೂಡ ಅದನ್ನೇ ಸೂಚಿಸುತ್ತವೆ.
ಈ ಹಿಂದಿನ ಲೋಕಸಭೆ ಚುನಾವಣೆ ವೇಳೆ, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರದ ಪೈಕಿ 7 ಮತಕ್ಷೇತ್ರದಲ್ಲೂ ಕಾಂಗ್ರೆಸ್ ನಾಯಕರೆ ವಿಧಾನಸಭೆ ಸದಸ್ಯರಾಗಿದ್ದರು. ಇಂತಹ ಸಂದರ್ಭ ತಮ್ಮದೇ ಪಕ್ಷದ ಪ್ರಕಾಶ ರಾಠೋಡ ಅವರನ್ನು ಗೆಲ್ಲಿಸಲಾಗಲಿಲ್ಲ. ಎರಡು ಬಾರಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಆಯ್ಕೆಯಾಗಿರುವುದಕ್ಕೆ ಕಾಣದ ‘ಕೈ’ಗಳೇ ಕೆಲಸ ಮಾಡಿವೆ ಎನ್ನುವ ಆರೋಪಗಳು ಇಂದಿಗೂ ಕೇಳಿ ಬರುತ್ತಿವೆ. ಈ ಬಾರಿಯೂ ಮೂರು ಬಿಜೆಪಿ ಎಂಎಲ್ಎಗಳನ್ನು ಹೊಂದಿರುವ ಬಿಜೆಪಿ ಅದೇ ಜಯದ ನಿರೀಕ್ಷೆಯಲ್ಲಿದೆ.
ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಈ ಬಾರಿ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಫೈಟ್ ಕೊಡಬಹದು ಎನ್ನುತ್ತಿದ್ದಾರೆ. ಕಳೆದ ಬಾರಿಯ ಮೋದಿ ಅಲೆ ಈ ಬಾರಿ ಇಲ್ಲದಿರುವುದರಿಂದಲೂ ಇವರ ಪಾಲಿಗೆ ಪ್ಲಸ್ ಪಾಯಿಂಟ್. ಬಿಎಸ್ಪಿಯ ಶ್ರೀನಿವಾಸ ಪೂಜಾರಿ ಪ್ರಕಾರ ಮೋದಿ ಅಲೆ ಇಲ್ಲ, ಜೆಡಿಎಸ್ ಕಾಂಗ್ರೆಸ್ ಬಳಿ ಸಮರ್ಥ ಅಭ್ಯರ್ಥಿಯೇ ಇಲ್ಲ ಹಾಗಾಗಿ ಇದು ನಮಗೆ ವರದಾನವಾಗಲಿದೆ ಎಂದಿದ್ದಾರೆ.
ಇಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಎನ್ನುವ ಪಕ್ಷಗಳು ಕೇವಲ ನೆಪಕ್ಕೆ ಮಾತ್ರ. ಆದರೆ ಅಸಲಿಯತ್ತು, ಒಳ ರಾಜಕಾರಣದ ಹೂರಣವೇ ಇಲ್ಲಿ ಕೆಲಸ ಮಾಡುವುದು ಎನ್ನುವ ಮಾತೂ ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷದ ಗೃಹ ಸಚಿವ ಎಂ.ಬಿ. ಪಾಟೀಲ, ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಸಚಿವ ಶಿವಾನಂದ ಪಾಟೀಲ, ನಿಗಮ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹಾಗೂ ಜೆಡಿಎಸ್ನ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಮತ್ತು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ದೇವಾನಂದ ಚವ್ಹಾಣ ಅವರು ರಾಜ್ಯ ಸರ್ಕಾರದ ಪ್ರಮುಖ ಖಾತೆ ಹೊಂದಿದವರು. ಇದರಿಂದ ಜಿಲ್ಲೆಯಲ್ಲಿನ ಬಿಜೆಪಿ ಬಲಕ್ಕೆ ಹೋಲಿಸಿದರೆ, ಕಾಂಗ್ರೆಸ್- ಜೆಡಿಎಸ್ನ ಬಲ ಹೆಚ್ಚಿಗಿರುವುದು ನಿಚ್ಚಳವಾಗಿ ಕಂಡು ಬರುತ್ತದೆ. ಆದರೆ ಮೇಲ್ನೋಟಕ್ಕೆ ಮೂರು ಪಕ್ಷದ ಮುಖಂಡರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಂತಿಮ ಹಂತದಲ್ಲಿ ಇಲ್ಲಿನ ಮತದಾರರ ನಿಲುವು, ನಿಗೂಢ ನಡೆ ಯಾರ ಕಡೆಗೆ ಒಲಿಯಲಿದೆ ಎನ್ನುವುದು ಸದ್ಯ ಹೇಳಲಾಗುವುದಿಲ್ಲ.
- Advertisement -