ವಿದ್ಯಾರ್ಥಿ ಹೋರಾಟಗಳ ತವರಿನಂತಿದ್ದ ಉಸ್ಮಾನಿಯಾ ಯುನಿವರ್ಸಿಟಿಯ ಕ್ರಾಂತಿಕಾರಿ ಚಿಂತನೆಯುಳ್ಳ, ವಿದ್ಯಾರ್ಥಿ ಹೋರಾಟಗಾರ ಜಾರ್ಜ್ ರೆಡ್ಡಿಯ ಜೀವನಾಧಾರಿತ ಸಿನೆಮಾ ತೆಲುಗಿನಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ತೆಲಂಗಾಣದಲ್ಲಿರುವ ಉಸ್ಮಾನಿಯ ವಿವಿಯಲ್ಲಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಪೂರ್ತಿಯಾಗಬಲ್ಲಂತಹ ವಿದ್ಯಾರ್ಥಿ ಹೋರಾಟಗಾರ ಜಾರ್ಜ್ರೆಡ್ಡಿ. 1965ರಿಂದ 1975ರವರೆಗೂ ಉಸ್ಮಾನಿಯಾ ವಿವಿಯಲ್ಲಿ ಓದಿದ ಈತನ ಚರಿತ್ರೆಯೇ ವಿಶಿಷ್ಟವಾದುದು. ಆತ ಮಾಡಿದ ವಿದ್ಯಾರ್ಥಿ ಹಕ್ಕುಗಳಿಗಾಗಿನ ಹೋರಾಟ ಮತ್ತು ಅಲ್ಲಿ ನಡೆದ ಘಟನೆಗಳನ್ನಾಧರಿಸಿ ಈ ಬಯೋಪಿಕ್ ತಯಾರಾಗಿದೆ.
ಓದಿನಲ್ಲಿ ಚಿನ್ನದ ಪದಕವನ್ನು ಕೊರಳಿಗಿಳಿಸಿಕೊಂಡಿದ್ದ ಈತ ಬಾಕ್ಸಿಂಗ್ನಲ್ಲಿ ಉತ್ತಮ ಕ್ರೀಡಾಪಟು ಕೂಡ ಆಗಿದ್ದವನು. ಕ್ರಾಂತಿಕಾರಿ ಭಗತ್ಸಿಂಗ್ ನಂತಹ ಯುವ ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಗಳಿಂದ ಜಾರ್ಜ್ರೆಡ್ಡಿ ಪ್ರೋಗ್ರೇಸಿವ್ ಡೆಮಾಕ್ರೇಟಿಕ್ ಸ್ಟೂಡೆಂಟ್ ಫೆಡರೇಷನ್(ಪಿಡಿಎಸ್ಯು) ಎಂಬ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿದ್ದರು.
ದೌರ್ಜನ್ಯಗಳನ್ನು ಶೋಷಣೆಯನ್ನು ನೇರವಾಗಿ ಖಂಡಿಸುತ್ತಿದ್ದ ಕಿಡಿ ಜಾರ್ಜ್ರೆಡ್ಡಿ. ಅಸಮಾನತೆಯ ವಿರುದ್ಧ ಯುವಜನರು ಸಂಕಲ್ಪ ತೊಟ್ಟು ಹೋರಾಟ ಮಾಡುವಂತೆ ಪ್ರೇರೇಪಿಸುತ್ತಿದ್ದ ಈತನನ್ನು ಆಂಧ್ರಪ್ರದೇಶದ ಚೇಗುವೇರಾ ಎಂದೇ ಕರೆಯಲಾಗುತ್ತಿತ್ತು.
ವಿದ್ಯಾರ್ಥಿ ಹಕ್ಕುಗಳು ಮತ್ತು ರಾಜಕಾರಣಿಗಳ ಮೋಸದ ಬಗ್ಗೆ ದನಿಯೆತ್ತಿದಾಗ ಈತನನ್ನು ಹಾಸ್ಟೆಲ್ನಲ್ಲಿ ಹತ್ಯೆ ಮಾಡಲಾಯಿತು. ಇಂತಹ ಯೂತ್ ಐಕಾನ್ ಬಗೆಗಿನ ಬಯೋಪಿಕ್ ಸಿನಿಮಾ ನಿರ್ಮಾಣವನ್ನು ಮಿಕ್ ಮೂವಿಸ್ ಸಂಸ್ಥೆಯ ಜೊತೆಗೂಡಿ ದಾಮುರೆಡ್ಡಿ ಮತ್ತು ಸುಧಾಕರ್ ಯಾಕ್ಕಂಟಿ ಮಾಡಿದ್ದಾರೆ. ಜಾರ್ಜ್ರೆಡ್ಡಿ ಪಾತ್ರವನ್ನು ಸಂದೀಪ್ ಕುಮಾರ್ ಅಭಿನಯಿದ್ದಾರೆ. ಈಗಾಗಲೇ ಟ್ರೈಲರ್ ಗಮನ ಸೆಳೆದಿದ್ದು, ವಿದ್ಯಾರ್ಥಿ ಹೋರಾಟಗಾರನೊಬ್ಬನ ಸಿನಿಮಾವನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುವಂತಾಗಿದೆ.