ಎರಡು ಬಿರಿಯಾನಿ ಕಥೆಗಳು ಸುದ್ದಿಯಲ್ಲಿವೆ. ಅದರಲ್ಲಿ ಒಂದು ಕಥೆಯು ಮತ್ತೆ ಮತ್ತೆ ಕೇಳಿ ಬರುತ್ತಿದ್ದು, ಎರಡು ದಿನಗಳ ಹಿಂದೆ ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ಷಾ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ರ್ಯಾಲಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅದರ ಕುರಿತು ‘ದಿ ಕ್ವಿಂಟ್’ ವೆಬ್ ಪತ್ರಿಕೆಯು ವಿವರವಾದ ‘ಫ್ಯಾಕ್ಟ್ ಚೆಕ್’ ಮಾಡಿ ಸತ್ಯ ಸಂಗತಿ ತಿಳಿಸಿದ್ದಾರೆ. ಅದನ್ನು ಕೆಳಗೆ ನೀಡಲಾಗಿದೆ.
ಇನ್ನೊಂದು ಬಿರಿಯಾನಿ ಕಥೆ, ನರೇಂದ್ರ ಮೋದಿಯವರು ಆಹ್ವಾನವೇ ಇಲ್ಲದೇ ನವಾಜ್ ಷರೀಫ್ ಮನೆ ಮದುವೆಗೆ ಹೋಗಿ ಬಿರಿಯಾನಿ ತಿಂದರೆಂಬುದು. ಅದರ ಫ್ಯಾಕ್ಟ್ ಚೆಕ್ ನಾವು ಮಾಡಿದ್ದೇವೆ. ಅದನ್ನು ನಂತರ ತಿಳಿಸುತ್ತೇವೆ.
ಕ್ವಿಂಟ್ನ ವೆಬ್ಕೂಫ್ನಲ್ಲಿ ಬಂದದ್ದು.
ಷಾ ಮತ್ತು ಯೋಗಿ ಹೇಳುತ್ತಿರುವ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಲಾಯಿತು’ ಎಂಬುದು ಒಂದು ಸುಳ್ಳಿನ ಮೇಲೆ ಆಧರಿಸಿದ ಸುಳ್ಳು
ಮಾರ್ಚ್ 26ರಂದು ಉ.ಪ್ರದೇಶದ ಮೊರಾದಾಬಾದ್ನಲ್ಲಿ ಬಹಿರಂಗಸಭೆಯನ್ನುದ್ದೇಶಿಸಿ ಮಾತಾಡಿದ ಬಿಜೆಪಿಯ ಅಧ್ಯಕ್ಷ ಕಾಂಗ್ರೆಸ್ & ಇತರ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ಮಾಡುತ್ತಾ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲ ಹೋಯಿತು, ಈಗೇನಿದ್ದರೂ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೋದಿಯ ಕಾಲ’ ಎಂದು ಗುಡುಗಿದರು.
ಇದರ ಮೂಲ ಎಲ್ಲಿದೆ?
ವಾಸ್ತವದಲ್ಲಿ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ’ ಕಥೆ ಶುರುವಾಗುವುದು ಆಗಸ್ಟ್ 2009ರಲ್ಲಿ. 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ಅಜ್ಮಲ್ ಕಸಬ್ನ ವಿಚಾರಣೆ ನಡೆಯುತ್ತಿದ್ದಾಗ, ಪಿಟಿಐ ನ್ಯೂಸ್ ಏಜೆನ್ಸಿಯಿಂದ ಒಂದು ವರದಿ ಬಂದಿತು. ಆ ವರದಿಯನ್ನು ಇಂಡಿಯಾ ಟುಡೇ ಸೇರಿದಂತೆ ಹಲವರು ತಮ್ಮಲ್ಲೂ ಹಾಕಿಕೊಂಡರು. ಅದರಲ್ಲಿ ಕಸಬ್ ತನಗೆ ಮಟನ್ ಬಿರಿಯಾನಿ, ಬಾಸ್ಮತಿ ಅನ್ನ ಬೇಕೆಂದು ಕೇಳಿದನೆಂತಲೂ, ಅದನ್ನು ಪೂರೈಸಲಾಯಿತೆಂತಲೂ ಹೇಳಲಾಗಿತ್ತು. ಈ ಮಾತನ್ನು ಹೇಳಿದವರು, ಆ ಕೇಸಿನ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ. ಆ ವಿಚಾರಣೆಯ ನಂತರ ಆತ ತಪ್ಪಿತಸ್ಥೆನೆಂದು ಸಾಬೀತಾಯಿತು. ಮತ್ತು ಕೋರ್ಟ್ ಆದೇಶದಂತೆ ಗಲ್ಲಿಗೇರಿಸಲಾಯಿತು.
ಅಲ್ಲಿಂದ ಶುರುವಾಯಿತು ಬಿರಿಯಾನಿ ಕಥೆ
ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಿರಿಯಾನಿಯ ಕಥೆಯನ್ನು ಹಲವು ಸಾರಿ ಹೇಳಿದ್ದಾರೆ. ಮಾರ್ಚ್ 26ರಂದು ಗೋರಖ್ಪುರದಲ್ಲಿ ಇನ್ನು ಹೇಳಿದ್ದಾರೆ, ಸಹ್ರಾನ್ಪುರದಲ್ಲಿ ಮಾರ್ಚ್ 24ರಂದು ನಡೆದ ರ್ಯಾಲಿಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ‘ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿತ್ತು, ಮೋದಿ ಸರ್ಕಾರ ಬುಲೆಟ್, ಬಾಂಬುಗಳನ್ನು ತಿನ್ನಿಸಿದೆ’.
ನವೆಂಬರ್ 2018ರಲ್ಲೂ ರಾಜಸ್ತಾನದ ಮಕ್ರಾನಾದಲ್ಲಿ ನಡೆದ ಸಭೆಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ಆಗಸ್ಟ್ 2012ರಲ್ಲಿ ಬಿಜೆಪಿ ನಾಯಕ ಮುಕ್ತಾರ್ ನಕ್ವಿ ಸಹಾ ಇದೇ ಮಾತನ್ನು ಹೇಳಿ, ‘ಬಿರಿಯಾನಿ ತಿನ್ನಿಸಿದ್ದು ಸಾಕು, ಬೇಗನೇ ಗಲ್ಲಿಗೇರಿಸಬೇಕು’ ಎಂದಿದ್ದರು.
ವಾಸ್ತವವೇನು?
ಮಾರ್ಚ್ 2015ರಲ್ಲಿ ಉಜ್ವಲ್ ನಿಕಮ್ ಅವರು ವರದಿಗಾರರಿಗೆ (ಟೈಮ್ಸ್ ಆಫ್ ಇಂಡಿಯಾದಲ್ಲಿ ವಿವರವಾಗಿ ಪ್ರಕಟಗೊಂಡಿದೆ) ಹೇಳಿದ ಮಾತು ಏನಿತ್ತು ನೋಡೋಣ. ‘ಕಸಬ್ನ ಪರವಾಗಿ ಒಂದು ಭಾವನಾತ್ಮಕ ಅಲೆ ಏಳುತ್ತಿದೆಯೆಂದು ನನಗೆ ಅನ್ನಿಸಿತು. ರಕ್ಷಾಬಂಧನದ ದಿನ ಆತನ ಕಣ್ಣುಗಳಲ್ಲಿ ನೀರಿತ್ತು ಎಂದೆಲ್ಲಾ ಪತ್ರಕರ್ತರು ಬರೆಯುತ್ತಿದ್ದರು. ಆಗ ನಾನು ಆತ ಬಿರಿಯಾನಿ ಕೇಳಿದನೆಂದೂ, ಅದನ್ನು ಒದಗಿಸಲಾಗಿದೆಯೆಂದೂ ಒಂದು ಸುಳ್ಳನ್ನು ಹರಿಯಬಿಟ್ಟೆ. ಅವತ್ತು ಅದರ ಅಗತ್ಯವಿತ್ತೆಂದು ನನಗನ್ನಿಸಿತು’
ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ‘ಅವರಿಗೆ ಬಿರಿಯಾನಿಯೇಕೆ ಉಣ್ಣಿಸಬೇಕು?’ ಎಂಬ ಟೈಟಲ್ ಜೊತೆಗೆ ಬಂದ ವರದಿಯು ಸಾರ್ವಜನಿಕ ವಲಯದಲ್ಲಿ ಸಿಟ್ಟೆಬ್ಬಿಸುತ್ತು. ಉಜ್ವಲ್ ನಿಕಂರ ಈ ಹೇಳಿಕೆಯ ಕುರಿತು ಮಹಾರಾಷ್ಟ್ರ ಸರ್ಕಾರವು ಸ್ಪಷ್ಟೀಕರಣ ಕೇಳಿತ್ತೆಂದು ಹೇಳಲಾಗುತ್ತಿದೆ. ಇದೊಂದು ಸುಳ್ಳು ಕಥೆಯಾಗಿತ್ತು.
ಇನ್ನು ಎರಡನೇ ಸುಳ್ಳು ಬಿರಿಯಾನಿ ಕಥೆ.
ಪ್ರಧಾನಿ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ನವಾಜ್ ಷರೀಫ್ರ ಹುಟ್ಟು ಹಬ್ಬದ ದಿನ ಲಾಹೋರಿನ ಅವರ ಮನೆಗೆ ಭೇಟಿ ಕೊಟ್ಟಾಗ ಬಿರಿಯಾನಿ ತಿಂದುಬಂದರೆಂಬುದು. ಇದೂ ಸುಳ್ಳು. ನರೇಂದ್ರ ಮೋದಿಯವರು ಸಸ್ಯಾಹಾರಿಯಾಗಿದ್ದು, ಅವರು ಬಿರಿಯಾನಿ ತಿಂದಿಲ್ಲ. ಅಂದು ನವಾಜ್ ಷರೀಫ್ರ ಮನೆಯಲ್ಲಿ ಮೋದಿಯವರಿಗೆ ಅವರ ಇಷ್ಟದ ಸಾಗ್, ದಾಲ್ ಅನ್ನು ಬಡಿಸಲಾಗಿತ್ತು. ಷರೀಫ್ರ ಮನೆಗೆ ಅಂದು ಮೋದಿಯವರ ಜೊತೆಗೆ ಬಂದಿದ್ದ 11 ಜನರಿಗೆ ಅಲ್ಲಿ ಈ ತಿನಿಸನ್ನು ಶುದ್ಧ ತುಪ್ಪದಿಂದ ಮಾಡಿ ಬಡಿಸಲಾಯಿತೆಂದು ಅವರ ಮನೆ ಜಾತಿ-ಉಮ್ರ್ನ ಮೂಲಗಳು ಹೇಳಿದ್ದನ್ನು ಪಿಟಿಐ ವರದಿ ಮಾಡಿತ್ತು.
ಮೋದಿಯವರು ನವಾಜ್ ಷರೀಫ್ರ ಮನೆಗೆ ಹೋಗಿದ್ದು ನಿಜ, ಅಲ್ಲಿ ಅವರಿಗಿಷ್ಟವಾದ ತಿಂಡಿಯನ್ನು ಮಾಡುವಷ್ಟು ಪೂರ್ವನಿರ್ಧಾರಿತವಾಗಿ ಆ ಭೇಟಿ ಇದ್ದಿತ್ತು. ಆದರೆ ಬಿರಿಯಾನಿ ತಿನ್ನಲಿಲ್ಲ.