ನೋಟು ನಿಷೇಧ ಜಾರಿಯಾಗಿ ಇಂದಿಗೆ ೩ ವರ್ಷಗಳಾಗಿವೆ. ಬಿಜೆಪಿ ಸರ್ಕಾರ ನವೆಂಬರ್ ೦೮-೨೦೧೬ರಂದು ಯಾವುದೇ ಮುಂಜಾಗ್ರತೆಯಿಲ್ಲದೆ ರಾತ್ರೋರಾತ್ರಿ ನೋಟು ನಿಷೇಧ ಮಾಡಿತ್ತು. ನೋಟ್ ಬ್ಯಾನ್ ನಂತರ ಅಭಿವೃದ್ಧಿ ಕುಂಠಿತಗೊಳ್ಳುತ್ತಾ ಹೋಯಿತು. ಆದರೆ ನೋಟ್ ಬ್ಯಾನ್ ದೊಡ್ಡ ಸಾಧನೆಯೆಂದು ಬಿಂಬಿಸಿರುವ ಬಿಜೆಪಿ, ಆರ್ಥಿಕ ಅಧೋಗತಿಗೆ ಕಾರಣವಾಗಿದೆ ಎಂದು ವಿಪಕ್ಷಗಳು ಹರಿಹಾಯ್ದಿವೆ.
ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಈ ದಿನವನ್ನು ನೋಟು ನಿಷೇಧಗೊಂಡ ದಿನ ಎನ್ನುವುದಕ್ಕಿಂತ, ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡ ದಿನವೆನ್ನುವುದೇ ಸೂಕ್ತ ಎಂದು ಟೀಕಿಸಿದ್ದಾರೆ.
ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ಅಂದು ಬ್ಯಾಂಕುಗಳ ಮುಂದಿನ ಸರತಿ ಸಾಲಿನಲ್ಲಿ ಆರಂಭಗೊಂಡ ಸಾವಿನ ಸರಪಳಿ ಮುಂದುವರೆದು ಇಂದಿಗೂ ಜನರ ವ್ಯಾಪಾರ, ಉದ್ಯೋಗವನ್ನು ಕಸಿದುಕೊಳ್ಳುತ್ತಾ ಬಡಜನರ ಬಲಿ ಪಡೆಯುತ್ತಲೇ ಇದೆ ಎಂದು ಡಿಮಾನಿಟೈಸೇಷನ್ ಡಿಸಾಸ್ಟರ್ ಹ್ಯಾಶ್ಟ್ಯಾಗ್ ಮಾಡಿ, ತಿವಿದಿದ್ದಾರೆ.
ಸರಿಯಾದ ಪೂರ್ವ ತಯಾರಿಯಿಲ್ಲದ ನೋಟು ನಿಷೇಧದಿಂದಾಗಿ ಇದುವರೆಗೂ ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಉದ್ಯೋಗ ಸೃಷ್ಟಿಸಬೇಕಿದ್ದ ಸರ್ಕಾರ ಯುವ ಜನರಿಗೆ ಪಕೋಡ ಮಾರುವಂತೆ ಸಲಹೆ ನೀಡಿರುವುದು ಬಹುದೊಡ್ಡ ದುರಂತ ಎಂದಿದ್ದಾರೆ.