ಸಿಖ್ಖರ ಪವಿತ್ರ ಯಾತ್ರಾ ಸ್ಥಳಕ್ಕೆ ಪ್ರಯಾಣ ಬೆಳೆಸುವ ಕರ್ತಾರ್ಪುರ ಕಾರಿಡಾರ್ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ವಾರ್ಷಿಕೋತ್ಸವದ ಅಂಗವಾಗಿ ಮೊದಲ ಹಂತವಾಗಿ 550 ಸಿಖ್ ಯಾತ್ರಾರ್ಥಿಗಳು ಕರ್ತಾರ್ಪುರ ಕಾರಿಡಾರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕರ್ತಾರ್ಪುರ ಸಾಹೀಬ್ ಗುರುದ್ವಾರ್ಗೆ ಸಂಚಾರ ಕಲ್ಪಿಸುವ ಕಾರಿಡಾರ್ನ್ನು ಚೆಕ್ಪೋಸ್ಟ್ ಬಳಿ ಪ್ರಧಾನಿ ಮೋದಿ ಚಾಲನೆ ನೀಡಿದರು. ಸಿಖ್ಖರ ಪವಿತ್ರ ಯಾತ್ರಾ ಸ್ಥಳ ಡೇರಾಬಾದ್ ನಾನಕ್ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಕಾರಿಡಾರ್ನ್ನು ಅಭಿವೃದ್ಧಿಪಡಿಸಿದೆ. ಸುಮಾರು 4.7 ಕಿ.ಮೀ ದೂರದವರೆಗೆ ಕಾರಿಡಾರ್ ನಿರ್ಮಾಣ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಪ್ರಧಾನಿ ಮೋದಿ, ಲೋದಿಯ ಸುಲ್ತಾನ್ಪುರದಲ್ಲಿರುವ ಬೇರ್ ಸಾಹೀಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೊದಲ ಹಂತವಾಗಿ ಗುರುದ್ವಾರಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಅಕಾಲಿ ತಖ್ತ್ನ ಗಿಯಾನಿ ಹರ್ಪ್ರೀತ್ ಸಿಂಗ್, ಹರ್ಸಿಮ್ರತ್ ಕೌರ್ ಬಾದಲ್, ಶಿರೋಮನಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಬಾದಲ್ ಸೇರಿದಂತೆ ಅನೇಕ ಶಾಸಕರು, ಸಂಸದರು ಪ್ರಯಾಣ ಬೆಳೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗುರುನಾನಕ್ ದೇವ್ ಜೀ ಎಲ್ಲರಿಗೂ ಸಂತಸ ನೀಡಲಿ. ಭಾರತೀಯರ ಭಾವನೆಗಳನ್ನು ಗೌರವಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕರ್ತಾರ್ಪುರಗೆ ತೆರಳುವಾಗ ನಿಮ್ಮಲ್ಲಿ ಮೂಡುವ ಭಾವನೆಗಳೇ ನನ್ನಲ್ಲೂ ಮೂಡುತ್ತವೆ. ಇದು ನಮ್ಮ ಸಂತ ಪರಂಪರೆಯ ಪ್ರಸಾದ. ಈ ಸನ್ಮಾನವನ್ನು ಗುರುನಾನಕ್ರ ಚರಣಗಳಿಗೆ ಅರ್ಪಿಸುತ್ತೇನೆ. ಕಾರ್ತಿಕ ಪೂರ್ಣಿಮೆಯ ಪರ್ವದಲ್ಲಿ ಕಾರಿಡಾರ್ ತೆರೆಯುತ್ತಿದ್ದು, ಮತ್ತಷ್ಟು ಝಗಮಗಿಸಲಿದೆ ಎಂದು ಹೇಳಿದರು.
ಅತ್ತ ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಕಾರಿಡಾರ್ ಉದ್ಘಾಟಿಸಿದ್ದು, ಯಾತ್ರಾರ್ಥಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಇನ್ನು ಪ್ರಯಾಣಿಸುವ ಭಾರತೀಯರು ಪಾಸ್ಪೋರ್ಟ್ ಹೊಂದಿರುವುದು ಕಡ್ಡಾಯವಾಗಿದೆ. 72 ವರ್ಷಗಳಿಂದ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ವ್ಯವಸ್ಥೆ ಕಲ್ಪಿಸುವಂತೆ ಮಾಡಿ ಎನ್ನುವುದು ಸಿಖ್ಖ್ ಸಮುದಾಯದ ಮನವಿಯಾಗಿತ್ತು.