Homeಅಂಕಣಗಳುಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

ಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

- Advertisement -
- Advertisement -

ಸಾರ ಅಬೂಬಕ್ಕರ್ |

ಇದೇ ಡಿಸೆಂಬರ್ ತಿಂಗಳ ದಿನಾಂಕ 10ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಮುಸ್ಲಿಮರ ‘ಶರಿಯತ್ ರಕ್ಷಣ್’ ಎಂಬ ವಿಷಯದ ಕುರಿತು ಸಾರ್ವಜನಿಕ ಸಭೆ ಕರೆಯಲಾಗಿದ್ದು ರಾಜ್ಯಾದ್ಯಂತದಿಂದ ಮುಸ್ಲಿಂ ಪುರುಷರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದನ್ನು ಅನುಸರಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ಮುಸ್ಲಿಂ ಪುರುಷರು ಆಗಮಿಸಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೇರಳದ ಹಲವಾರು ಧರ್ಮ ಗುರುಗಳು ಬಂದು ಈ ಜನರಿಗೆ ಮಾರ್ಗದರ್ಶನ ನೀಡಿದರು.
1985ರ ಸಂದರ್ಭದಲ್ಲಿ ಶಾಬಾನು ಎಂಬ ಮಹಿಳೆ, ಐದು ಮಕ್ಕಳ ತಾಯಿಯು ವಕೀಲನಾಗಿದ್ದ ಆಕೆಯ ಗಂಡ ತ್ರಿವಳಿ ತಲಾಖ್ ನೀಡಿ ಹೊರ ಹಾಕಿದಾಗ ಆಕೆ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ನ್ಯಾಯಾಲಯ ಆಕೆ ಮತ್ತು ಮಕ್ಕಳಿಗೆ ತಿಂಗಳಿಗೆ 185ರೂ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದಾಗ ಆಗ ಆಕೆಯ ಗಂಡನು ದೇಶಾದ್ಯಂತ ಎಲ್ಲ ಮುಸ್ಲಿಮರನ್ನು ಈ ತೀರ್ಪಿನ ವಿರುದ್ಧ ಎತ್ತಿ ಕಟ್ಟಿ, ತಲಾಖ್ ನೀಡಿದ ಬಳಿಕ ಹೆಂಡತಿಗೆ ಜೀವನಾಂಶ ನೀಡುವುದು ಧರ್ಮ ವಿರುದ್ಧವೆಂದು ಹೋರಾಟವನ್ನಾರಂಭಿಸಿದರು. ಆಗ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ದಾರಿ ತಪ್ಪಿಸಿ ‘ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ ಎಂಬ ಹೊಸ ನಿಯಮವನ್ನು ಜಾರಿಗೊಳಿಸಿದರು. ಈ ನಿಯಮದಂತೆ ತಲಾಖ್ ಪೀಡಿತ ಮಹಿಳೆಯರನ್ನು ಅವಳ ಸಂಬಂಧಿಕರು ನೋಡಿಕೊಳ್ಳಬೇಕು ಯಾರೂ ಇಲ್ಲವಾದರೆ ವಕ್ಸ್ ಮಂಡಳಿಯನ್ನು ಆಕೆ ಕೇಳಿಕೊಳ್ಳಬೇಕು. ಈ ನಿಯಮ ತೀರಾ ಹಾಸ್ಯಾಸ್ಪದ ಎಂಬಂತಾಯಿತು. ಹಕ್ಕೇ ಇಲ್ಲದ ಮುಸ್ಲಿಂ ಮಹಿಳೆಯರ ಯಾವ ಹಕ್ಕುಗಳನ್ನು ಈ ನಿಯಮ ರಕ್ಷಿಸುತ್ತದೆ? ವಕ್ಪ್ ಮಂಡಳಿಯ ಅನ್ಯ ಪುರುಷರೊಡನೆ ಆಕೆ ತನಗೆ ಜೀವನಾಂಶ ಕೊಡಿ ಎಂದು ಕೇಳತೊಡಗಿದರೆ ಪರಿಣಾಮವೇನಾಗಬಹುದು ಎಂಬುದನ್ನು ನಾನು ವಿವರಿಸಬೇಕಾಗಿಲ್ಲ. ಇಷ್ಟಕ್ಕೂ ಖುರಾನಿನ 2ನೇ ಸೂರದ 241ನೇ ವಾಕ್ಯ ಸ್ಪಷ್ಟವಾಗಿ ತಲಾಖ್ ಪೀಡಿತ ಮಹಿಳೆಯ ಮುಂದಿನ ಬದುಕಿಗಾಗಿ ಆಕೆಗೆ ಜೀವನಾಂಶ ನೀಡಬೇಕೆಂದು ಬರೆದಿದೆ. ಮುಸ್ಲಿಂ ಪುರುಷರು ಈ ಖುರ್‍ಆನಿನ ಈ ವಾಕ್ಯವನ್ನೇ ಜನರ ಕಣ್ಣಿನಿಂದ ಮಶಿಮಾ ಡಿ, ತಲಾಖ್ ಪೀಡಿತೆಗೆ ಜೀವನಾಂಶ ಧರ್ಮ ವಿರುದ್ಧ. ತಮ್ಮ ಧರ್ಮದಲ್ಲಿ ಸರಕಾರದ ಹಸ್ತಕ್ಷೇಪ ಎಂದು ಘೋಷಣೆ ಕೂಗಿದರು. ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರು ಬದುಕಿನ ಹಾದಿಯನ್ನು ಮುಂಬೈಯ ಕೆಂಪು ದೀಪದ ಅಡಿಯಲ್ಲಿ ಕಂಡುಕೊಂಡರು. ಧರ್ಮ ರಕ್ಷಕರೆಂಬ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎಂಬ ಸಂಸ್ಥೆ ಧರ್ಮ ರಕ್ಷಣೆ ಆಯಿತೆಂದು ಸಂಭ್ರಮಾಚರಿಸಿದರು. ತಲಾಖ್ ಪೀಡಿತ ಮಹಿಳೆಯರ ಗತಿ ಏನಾಯಿತೆಂದು ಈ ಪುರುಷರು ಯೋಚಿಸುವ ಗೋಜಿಗೆ ಇಂದಿನವರೆಗೂ ಹೋಗಿಯೇ ಇಲ್ಲ. ಈ ಹೊಸ ನಿಯಮದ ವಿರುದ್ಧ ಹೋರಾಡಿದ ವಿದ್ಯಾವಂತ ಮುಸ್ಲಿಂ ಮಹಿಳೆಯರ ಮೇಲೆ ಕೂಡಾ ಈ ಜನರು ಜಾತಿ ಭ್ರಷ್ಟತೆಯ ಆರೋಪ ಹೊರಸಿದರು.
ಈಗಲೂ ತ್ರಿವಳಿ, ಬಾಯಿಮಾತಿನ ತಲಾಖನ್ನು ಕೇಂದ್ರ ಸರಕಾರ ನಿಷೇಧಿಸಿದ ಕಾರಣ ನೀಡಿ ಈ ಜನರು ಶರಿಯತ್ ರಕ್ಷಣೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ರದ್ಧತಿ ನಿಯಮದಿಂದ ಹಿಂದೆ ಸರಿಯಬಾರದೆಂದು ನನ್ನ ಕಳಕಳಿಯ ಮನವಿ.
ನಮ್ಮ ಸಂವಿಧಾನವು ಎಲ್ಲರಿಗೂ ತಮ್ಮ ಧಾರ್ಮಿಕ ನಿಯಮಗಳನ್ನು ಪಾಲಿಸುವ ಅಧಿಕಾರವನ್ನು ನೀಡಿದೆ. ಆದರೆ ಯಾವ ಧರ್ಮ ಕೂಡಾ ಮನುಷ್ಯರನ್ನು ಬದುಕಿನಲ್ಲಿ ಸಂಕಟ ಪಡುವಂತಹ ನಿಯಮಗಳನ್ನು ರೂಪಿಸುವುದಿಲ್ಲ. 1500 ವರ್ಷಗಳ ಹಿಂದೆ ಪ್ರವಾದಿಗಳು ಹೆಂಡತಿ ಬೇಡವಾದರೆ ಬೀದಿಗೆಸೆಯಿರಿ ಎಂದು ಹೇಳಿಯೂ ಇರಲಿಲ್ಲ. ಅವರು ಪುರುಷರಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ನೋಡಿಯೇ ಇಸ್ಲಾಂ(ಶಾಂತಿ) ಎಂಬ ಧರ್ಮ ಸ್ಥಾಪನೆ ಮಾಡಿದರು.
ಧರ್ಮದ ನಿಯಮಗಳು 1500 ವರ್ಷಗಳ ಹಿಂದೆ ನಡೆಯುತ್ತಿದ್ದಂತೆ ಈಗಲೂ ಇರಬೇಕೆನ್ನುವುದೇ ಮೂರ್ಖತನವಾಗುತ್ತದೆ. ಶರಿಯತ್ ರಕ್ಷಣೆಗೆ ಹೊರಟವರಿಗೆ ಶರಿಯತ್ ಎಂಬ ಕರ್ಮ ಶಾಸ್ತ್ರ ಯಾವಾಗ ಜಾರಿಯಾಯಿತೆಂದು ತಿಳಿದಿದೆಯೇ? ಪ್ರವಾದಿಗಳ ಮರಣಾನಂತರ 150 ವರ್ಷಗಳ ಬಳಿಕವಷ್ಟೆ ಧಾರ್ಮಿಕ ಗುರುಗಳು ಶರಿಯತ್‍ನ್ನು ಜಾರಿಗೊಳಿಸಿದರು. ಇಸ್ಲಾಂ ಧಾರ್ಮಿಕ ನಿಯಮಗಳು ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಪುರುಷರಿಗೆ ಸಾಧ್ಯವಾಗುವಂತಹ ನಿಯಮಗಳನ್ನು ಶರಿಯತ್ ಎಂಬ ಹೆಸರಿನಲ್ಲಿ ಜಾರಿಗೊಳಿಸಿದರು.
ನಮ್ಮ ಸಂವಿಧಾನ ಸರ್ವರಿಗೂ ಸಮಾನತೆ ನೀಡಿದೆ. ವಿವಿಧ ಧಾರ್ಮಿಕ ನಿಯಮಗಳಿಂದಾಗಿ ಈ ಸಮಾನತೆ ಮುಸ್ಲಿಂ ಮಹಿಳೆಯರಿಗೆ ದೊರೆಯುತ್ತಿಲ್ಲ. ವಿವಾಹ, ವಿಚ್ಛೇದನ ಇವು ಯಾವುದು ಧಾರ್ಮಿಕ ನಿಯಮಗಳಲ್ಲ. ಇವೆಲ್ಲವೂ ಸಾಮಾಜಿಕ ನಿಯಮಗಳು ಇಂತಹ ಸಾಮಾಜಿಕ ನಿಯಮಗಳು ಮಹಿಳೆಯರಿಗೆ ಬದುಕಲು ಸಾಧ್ಯವಾಗದ ರೀತಿಯಲ್ಲಿ ಅವರಿಗೆ ಉಸಿರುಗಟ್ಟುವಂತಾದರೆ ಅವುಗಳನ್ನು ಕಾಲಕ್ಕನುಸಾರವಾಗಿ ಬದಲಾಯಿಸಬಹುದು. ನೀವು ಯಾವ ದೇಶದಲ್ಲಿ ಬದುಕುತಿದ್ದೀರೋ ಆ ದೇಶದ ಸಾಮಾಜಿಕ ನಿಯಮವನ್ನು ಅನುಸರಿಸಬಹುದು ಎಂಬುದು ಪ್ರವಾದಿಗಳ ಬೋಧನೆಯಾ.
ಇಂದು ನಮ್ಮ ಸುತ್ತಮುತ್ತಲಿನ ಸುಮಾರು ಹತ್ತಿಪ್ಪತ್ತು ದೇಶಗಳಲ್ಲಿ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಪಡಿಸಲಾಗಿದೆ. ಅಲ್ಲಿ ಯಾರೂ ನಮ್ಮ ಧರ್ಮದಲ್ಲಿ ಹಸ್ತಕ್ಷೇಪವೆಂದು ಕಿರುಚಾಡಲಿಲ್ಲವಲ್ಲಾ? ಇತರ ಮುಸ್ಲಿಂ ರಾಷ್ಟ್ರಗಳು ಇಂತಹ ಅನ್ಯಾಯದ ನಿಯಮವನ್ನು ತಿದ್ದುಪಡಿ ಮಾಡಿದರೆ ಇಂಡಿಯಾ ಕೂಡಾ ಅದನ್ನು ಮಾಡಲು ಯಾರ ಅನುಮತಿಯನ್ನು ಪಡೆಯಬೇಕಾಗಿಲ್ಲ.
ನಾವೆಲ್ಲರೂ ನಮ್ಮ ಸಂವಿಧಾನಕ್ಕನುಸಾರವಾಗಿ ಬದುಕಬೇಕು. ನಮಗೆ ನಮ್ಮ ಧರ್ಮವೆನ್ನುವುದಾದರೆ ಮುಸ್ಲಿಮೇತರರೂ ಮನುಧರ್ಮಶಾಸ್ತ್ರ ನಮ್ಮ ಧರ್ಮವೆನ್ನುತ್ತಾರೆ. ಪೇಜಾವರ ಗುರುಗಳು ಹಾಗೂ ವಾರಣಾಸಿಯ ಧರ್ಮಗುರುಗಳೂ ನಮಗೆ ಸಂವಿಧಾನದಲ್ಲಿ ವಿಶ್ವಾಸವಿಲ್ಲ. ನಾವು ಮನುವಾದವನನುಸರಿಸುತ್ತೇವೆ ಎಂದು ಹೇಳತೊಡಗಿದ್ದಾರೆ. ನಮ್ಮ ದೇಶದಲ್ಲಿ ಅತ್ಯುತ್ತಮ ಸಂವಿಧಾನವಿದೆ. ನಾವೆಲ್ಲರೂ ಸೌಹಾರ್ದದಿಂದ ಈ ಸಂವಿಧಾನಕ್ಕನುಸಾರವಾಗಿ ವರ್ತಿಸತೊಡಗಿದರೆ ದೇಶದಲ್ಲಿ ಶಾಂತಿ ನೆಲೆಯೂರಬಹುದು. ಮುಸ್ಲಿಮರು ಎಷ್ಟು ಮಸೀದಿ ಕಟ್ಟಿಸಿಕೊಳ್ಳಲೂ ಅಭ್ಯಂತರವಿಲ್ಲ. ಒಂದೇ ಬೀದಿಯಲ್ಲಿ ಮೂರೋ ನಾಲ್ಕೋ ಮಸೀದಿಗಳಿರುವುದೂ ಇದೆ. ನಮ್ಮ ಧಾರ್ಮಿಕ ನಿಯಮಗಳನ್ನು ಯಾರೂ ತಡೆಯಲಾರರು. ನಮಗೆ ಎಲ್ಲರನ್ನು ಅರ್ಥ ಮಾಡಿಕೊಳ್ಳುವಂತಹ ಹೃದಯ ವಾತ್ಸಲ್ಯತೆ ಇರಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...