ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯರಿಂದ ನೊಂದಿದ್ದೇನೆಂದೂ, ತಾನು ಮೊದಲ ವ್ಯಕ್ತಿಯೂ ಅಲ್ಲ, ಕಡೆಯವಳೂ ಅಲ್ಲ ಎಂದು ಮಹಿಳಾ ಉದ್ಯಮಿಯೊಬ್ಬರು ಮಾಡಿದ ಟ್ವೀಟ್ನ ನಂತರ, ಅದನ್ನು ಒಂದು ಸುದ್ದಿಯಾಗಿ ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು. ಟ್ವೀಟ್ ಮಾಡಿದ್ದು ನಿಜ, ಹಾಗಾಗಿ ಸುದ್ದಿಯೂ ಆಯಿತು. ಆದರೆ, ತನ್ನ ವಿರುದ್ಧ ಮಾಧ್ಯಮಗಳು ಏನನ್ನೂ ಪ್ರಕಟಿಸಬಾರದೆಂದು ತೇಜಸ್ವಿ ಕೋರ್ಟಿಗೆ ಹೋದರು.
ತಮಾಷೆಯೆಂದರೆ ಆತ ಮೊಕದ್ದಮೆ ಹೂಡಿದ ಮಾಧ್ಯಮಗಳ ಪಟ್ಟಿಯಲ್ಲಿ ನಾಲ್ಕು ಅಸ್ತಿತ್ವದಲ್ಲೇ ಇಲ್ಲ!
ಯಾವ ಮಾಧ್ಯಮಗಳು ತನ್ನ ಬಗ್ಗೆ ಸುದ್ದಿ ಪ್ರಕಟಿಸುತ್ತಿವೆಯೋ ಆ ಮಾಧ್ಯಮಗಳನ್ನೆಲ್ಲಾ ವಿರುದ್ಧ ಸುದ್ದಿ ಪ್ರಕಟಿಸುವುದು ಎಂದು ಒಬ್ಬ ವಕೀಲ ತಿಳಿದದ್ದೇ ವಿಚಿತ್ರ. ತೇಜಸ್ವಿ ಸೂರ್ಯ ಯಾವೆಲ್ಲಾ ಮಾಧ್ಯಮಗಳನ್ನು ಪ್ರತಿವಾದಿಗಳನ್ನಾಗಿಸಿದ್ದಾರೋ ಅವುಗಳಲ್ಲಿ ಹಲವು ಸುದ್ದಿಯನ್ನೇ ಪ್ರಕಟಿಸಿರಲಿಲ್ಲ. ಇನ್ನು ಮೂರು ಮಾಧ್ಯಮ ಸಂಸ್ಥೆಗಳು ಅಸ್ತಿತ್ವದಲ್ಲೇ ಇಲ್ಲ.
ಹಿಂದಿನ ಯಾವುದೋ ಸಮಯದ ಮಾಧ್ಯಮಗಳ ಪಟ್ಟಿಯನ್ನು ಎಲ್ಲಿಂದಲೋ ತೆಗೆದುಕೊಂಡರು, ಆ ಪಟ್ಟಿಯನ್ನು ಯಥಾವತ್ತಾಗಿ ಪ್ರತಿವಾದಿಗಳನ್ನಾಗಿ ಮಾಡಿದರು. ಅಷ್ಟೇ ಅಲ್ಲ ವಾಟ್ಸಾಪ್, ಫೇಸ್ಬುಕ್, ಯೂಟ್ಯೂಬ್, ಯಾಹೂ, ಗೂಗಲ್ಗಳನ್ನೂ ಪ್ರತಿವಾದಿಗಳನ್ನಾಗಿಸಿದರು.
ಈ ಮೂಲಕ ಅವರು ತನ್ನ ನಿಜಮುಖವನ್ನು ವಾಟ್ಸಾಪ್ ಮೂಲಕ ಯಾರಾದರೂ ಫಾರ್ವರ್ಡ್ ಮಾಡಿದರೆ, ವಾಟ್ಸಾಪ್ಅನ್ನೇ ಅದಕ್ಕೆ ಹೊಣೆಗಾರನನ್ನಾಗಿಸುತ್ತೇನೆಂಬ ಸಂದೇಶ, ಇ-ಮೇಲ್ ಮೂಲಕ ಯಾರಾದರೂ ಯಾರಿಗಾದರೂ ಕಳಿಸಿದರೂ ಯಾಹೂ ಅಥವಾ ಗೂಗಲ್ಗಳನ್ನೂ ಹೊಣೆಗಾರರನ್ನಾಗಿಸುತ್ತೇನೆಂಬ ಬೆದರಿಕೆ ಒಡ್ಡಿದಂತಾಗಿದೆ!! ನ್ಯಾಷನಲ್ ಲಾ ಸ್ಕೂಲ್ನಂತಹ ದೇಶದ ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕಾನೂನು ಓದಿರುವ ತೇಜಸ್ವಿ ಕೋರ್ಟಿನಲ್ಲಿ ಈ ರೀತಿಯ ತನ್ನ ಬಾಲಚೇಷ್ಟೆಗಳ ಮೂಲಕ ಸಂಸ್ಥೆಯ ಮರ್ಯಾದೆಯನ್ನೂ ಕಳೆಯುತ್ತಿದ್ದಂತಿದೆ.
ಅಂದರೆ ಕೋಟಿ ಕೋಟಿ ಜನರು ಬಳಸುತ್ತಿರುವ, ಖಾಸಗಿ ಸಂದೇಶಗಳನ್ನೂ ಕಳಿಸಲು ಬಳಸುವ ಇಮೇಲ್, ವಾಟ್ಸಾಪ್ಗಳನ್ನು ಯಾರಾದರೂ ಮಾನಿಟರ್ ಮಾಡಲು ಸಾಧ್ಯವೇ? ಈ ರೀತಿ ಖಾಸಗಿ ಸಂದೇಶಗಳನ್ನೂ ನಿರ್ಬಂಧಿಸಬೇಕೆಂದು ಒಬ್ಬ ವಕೀಲ ಭಾವಿಸುತ್ತಾರೆಯೇ?
ಇಂತಹ ಕೇಸುಗಳು ಪ್ರತಿವಾದಿಗಳ ಗೈರುಹಾಜರಿಯಲ್ಲಿ – ಎಕ್ಸ್ ಪಾರ್ಟೇ – ತಕ್ಷಣದ ಆದೇಶ ಪಡೆದುಕೊಳ್ಳುತ್ತವಾದ್ದರಿಂದ, ಅದರ ಲಾಭ ಪಡೆಯಲು ದುರುದ್ದೇಶಪೂರ್ವಕವಾದ ಕ್ರಮಕ್ಕೆ ತೇಜಸ್ವಿ ಮುಂದಾಗಿದ್ದಾರೆ. ಹಾಗೆ ಮಾಡುವಾಗ, ಇಲ್ಲದ ಪ್ರತಿವಾದಿಗಳನ್ನೂ ಹೆಸರಿಸುವ ಅಜ್ಞಾನವೂ ವ್ಯಕ್ತವಾಗಿದೆ.
ಈಗಾಗಲೇ ಇಂಡಿಯನ್ ಎಕ್ಸ್ಪ್ರೆಸ್ ಸದರಿ ಕೇಸಿನ ಕುರಿತು ಸಂಪಾದಕೀಯವನ್ನೇ ಬರೆದು ಖಂಡಿಸಿದೆ. ದೇಶಾದ್ಯಂತ ಕೋಟಿ ಕೋಟಿ ಫೇಕ್ ನ್ಯೂಸ್ಗಳನ್ನು ಹಬ್ಬಿಸುವ ಜಾಲದ ಪ್ರಮುಖರಾಗಿರುವ ತೇಜಸ್ವಿ ತನ್ನ ವಿರುದ್ಧ ಸತ್ಯವನ್ನೂ ಬರೆಯದಂತೆ ಕೋರ್ಟಿನ ಮೊರೆ ಹೋಗಿರುವುದು ವಿಪರ್ಯಾಸವಾಗಿದೆ.