ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜಾಮೀನು ನೀಡಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸುಪ್ರೀಂಕೋರ್ಟ್, ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಅಷ್ಟೇ ಅಲ್ಲ, ಡಿಕೆಶಿ ಅವರಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಬೇರೆ ಯಾರನ್ನೂ ಬಂಧಿಸುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯದ ಮಹತ್ವದ ಆದೇಶ ನೀಡಿತು.
ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ಮತ್ತು ರವೀಂದ್ರ ಭಟ್ ಅವರಿದ್ದ ಪೀಠ ತೀರ್ಪು ಪ್ರಕಟಿಸಿತು. ಮಾಜಿ ಸಚಿವ ಪಿ.ಚಿದಂಬರಂ ಪ್ರಕರಣ ಉಲ್ಲೇಖಿಸಿ, ಡಿಕೆಶಿ ಬಂಧನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ ತುಷಾರ್ ಮೆಹ್ತಾ ಅವರ ಮೇಲೆ ನ್ಯಾ. ನಾರಿಮನ್ ಕೋಪಗೊಂಡರು. ಸುಪ್ರೀಂಕೋರ್ಟ್ಗೆ ನಿರ್ದೇಶನ ನೀಡಲು ಬರಬೇಡಿ. ಚಿದಂಬರಂ ಕೇಸ್ನ್ನು ಡಿಕೆಶಿ ಪ್ರಕರಣವನ್ನೂ ತಾಳೆ ಮಾಡಬೇಡಿ, ಕಟ್ & ಪೇಸ್ಟ್ ಮಾಡಬೇಡಿ ಎಂದು ಕೇಂದ್ರದ ಪರ ವಕೀಲರಿಗೆ ಬುದ್ಧಿ ಹೇಳಿದರು.
ಜಾರಿ ನಿರ್ದೇಶನಾಲಯ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿದರು. ಡಿಕೆಶಿ ಪರ ಅಭಿಷೇಕ್ ಮನುಸಿಂಘ್ವಿ ಮತ್ತು ಮುಕುಲ್ ರೋಹಟ್ಗಿಗೆ ವಾದ ಮಂಡಿಸಿದರು. ಇಡಿ ಅರ್ಜಿ ವಜಾಗೊಂಡ ಬಳಿಕವೂ ಸಿಬಿಐ ಪರ ವಕೀಲರು ವಾದ ಮಂಡನೆಗೆ ಮುಂದಾದಾಗ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಮೊದಲು ನೀವು ನಿಮ್ಮ ನಡೆ ಬದಲಿಸಿಕೊಳ್ಳಿ ಎಂದು ವಕೀಲರಿಗೆ ಹೇಳಿದರು. ಇದರ ಜತೆಗೆ ಕೇಂದ್ರ ಸರ್ಕಾರಕ್ಕೂ ಚಾಟಿ ಬೀಸಿದ ನ್ಯಾಯಾಲಯ, ಕೇಂದ್ರ ಸುಪ್ರೀಂಕೋರ್ಟ್ ತೀರ್ಪುಗಳ ಜತೆ ಆಟವಾಡುವಂತಿಲ್ಲ. ಶಬರಿಮಲೆ ತೀರ್ಪನ್ನೊಮ್ಮೆ ನೋಡಲು ನಿಮ್ಮ ಸರ್ಕಾರಕ್ಕೆ ಹೇಳಿ ಎಂದು ಚಾಟಿ ಬೀಸಿತು.
ಇನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಡಿಕೆಶಿ, 50 ದಿನಗಳವರೆಗೆ ತಿಹಾರ್ ಜೈಲಿನಲ್ಲಿದ್ದರು. ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್ ಡಿಕೆಶಿಗೆ ಜಾಮೀನು ಮಂಜೂರು ಮಾಡಿತ್ತು.