| ನಾನುಗೌರಿ ಡೆಸ್ಕ್ |
ದೆಹಲಿ ಸರ್ಕಾರಿ ಶಾಲೆಗಳಲ್ಲಿ ವಾರ್ಷಿಕ ವಿದ್ಯುತ್ ಬಿಲ್ 35000 ದಾಟುತ್ತಿತ್ತು. ಅದನ್ನು ತಪ್ಪಿಸಲು ಅಲ್ಲಿನ ಆಮ್ ಆದ್ಮಿ ಪಕ್ಷ ನೇತೃತ್ವದ ಮಾಡಿದ ಪ್ರಯೋಗ ಫಲ ನೀಡಿದೆ. ಹಾಲಿ 21 ಶಾಲೆಗಳಲ್ಲಿ ವಿದ್ಯುತ್ ಬಿಲ್ ಸೊನ್ನೆ ರೂಗಿಳಿದಿದೆ ಮಾತ್ರವಲ್ಲ ಹೆಚ್ಚುವರಿ ವಿದ್ಯುತ್ ಅನ್ನು ಉತ್ಪಾದಿಸುವ ಮಟ್ಟಕ್ಕೆ ಇಳಿದಿವೆ.
ಇದಕ್ಕಾಗಿ ಅವರೇನು ಹೋಮ ಹವನ ಮಾಡಲಿಲ್ಲ. ಮ್ಯಾಜಿಕ್ ಮಾಡಲಿಲ್ಲ, ಫ್ರಿ ವಿದ್ಯುತ್ ಸಹ ನೀಡಲಿಲ್ಲ. ವೈಜ್ಞಾನಿಕ ವಿಧಾನದಲ್ಲಿ 21 ಶಾಲೆಗಳ ಮಹಡಿ ಮೇಲೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿದ್ದು ಆ ಶಾಲೆಗಳು ಬಳಸಿ ಮಿಗುವಷ್ಟು ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯಾ “21 ಶಾಲೆಗಳ ನಮ್ಮ ಪ್ರಯೋಗ ಸಫಲವಾಗಿದೆ. 100 ಶಾಲೆಗಳಲ್ಲಿ ಸೋಲಾರ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. 500 ಶಾಲೆಗಳಿಗೆ ಶೀಘ್ರದಲ್ಲಿಯೇ ವಿಸ್ತರಿಸುತ್ತೇವೆ ಎಂದಿದ್ದಾರೆ.” ದೆಹಲಿಯು ಪೂರ್ಣ ವಿದ್ಯುತ್ ಸ್ವಾವಲಂಬಿಯಾಗುವತ್ತ ಇದೊಂದು ದೃಢ ಹೆಜ್ಜೆ ಎಂದು ಸಹ ಹೇಳಿದ್ದಾರೆ.
Successful pilot of terrace solar panels in #DelhiGovtSchools
Electricity bill of this school reduces from Rs.35,000 to Zero.
Already installed in 21, being installed in 100, plan is to install in a total of 500 schools
Important step towards power independence for Delhi! pic.twitter.com/42BMNVItox
— Education Minister (@Minister_Edu) June 11, 2019
ದೆಹಲಿಯಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2016-17ರಲ್ಲಿ ದೆಹಲಿಯ ಪ್ರತಿ ಮಗಿವಿನ ವಾರ್ಷಿಕ ಶಿಕ್ಷಣ ವೆಚ್ಚ 54,910/- ಗಳಿದ್ದು 2018-19ರ ವೇಳೆಗೆ 66,038/- ರೂಗಳಿಗೆ ಏರಿಕೆಯಾಗಿದೆ. ಹೊಸದಾಗಿ 300 ನರ್ಸರಿ ತರಗತಿಗಳನ್ನು ಆರಂಭಿಸಿರುವ ಅವರು 12,748 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಹಲವು ಹೊಸ ಕಟ್ಟಡಗಳ ಜೊತೆಗೇನೆ 52 ಶಾಲೆಗಳ ದುರಸ್ಥಿ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿದ್ದಾರೆ.
ದೆಹಲಿಯಲ್ಲಿ ಈ ಬಾರಿ ಬಿಸಿಲು ಮತ್ತು ಉಷ್ಣಾಂಶ ಮಿತಿ ಮೀರಿ ಏರಿಕೆಯಾಗಿದೆ. ಸಹಜವಾಗಿ ಸೆಕೆಯೂ ಹೆಚ್ಚಾಗಿದೆ. ಹಾಗಾಗಿ ಅಲ್ಲಿನ ಶಾಲೆಗಳಲ್ಲಿ ಉತ್ತಮ ಫ್ಯಾನ್ ಗಳು ಮತ್ತು ಕೂಲರ್ ಗಳನ್ನು ಅಳವಡಿಸಿ ಮಕ್ಕಳ ಹಿತ ಕಾಯಲಾಗುತ್ತಿದೆ. ಕರ್ನಾಟಕದಲ್ಲಿ ಎಷ್ಟೋ ಶಾಲೆಗಳಿಗೆ ವಿದ್ಯುತ್ ಸಹ ಇಲ್ಲದಿರುವ ಸಂಧರ್ಭದಲ್ಲಿ ನಾವು ಇದನ್ನೂ ಊಹಿಸಿಕೊಳ್ಳುವುದು ಸಹ ಕಷ್ಟವೇನೋ?
ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ. ಶಿಕ್ಷಕರಿಗೆ ವಿದೇಶಗಳಲ್ಲಿಯೂ ತರಬೇತಿ ನೀಡಲಾಗಿದೆ. ಸತತ ಪರಿಶ್ರಮದ ನಂತರ ದೆಹಲಿಯ ಮಕ್ಕಳು ಎಸ್ಎಸ್ಎಲ್ಸಿ, ಸಿಬಿಎಸ್ಸಿ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದರ ಹಿಂದೆ ಅತಿಶಿ ಮರ್ಲೀನಾ, ಮನೀಶ್ ಸಿಸೋಡಿಯ, ಅರವಿಂದ್ ಕೇಜ್ರಿವಾಲ್ರವರ ಇಚ್ಛಾಶಕ್ತಿ ಕೆಲಸ ಮಾಡಿತ್ತು.
ಸರ್ಕಾರಿ ಶಾಲೆಗಳನ್ನು ವಿಶ್ವದರ್ಜೆಗೆ ಏರಿಸಿದ್ದು, ಹೊಸ ಹೈಟೆಕ್ ಶಾಲೆಗಳನ್ನು ಸ್ಥಾಪಿಸಿದ್ದು, ಮೊಹಲ್ಲ ಕ್ಲಿನಿಕ್ಗಳು, ಹೈಟೆಕ್ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟಿದ್ದು, ವಿದ್ಯುತ್ ದರ ಅರ್ಧಕ್ಕೆ ಇಳಿಸಿದ್ದು, ನೀರಿನ ದರ ಸಂಪೂರ್ಣ ಕಡಿತಗೊಳಿಸಿ ಉಚಿತ ಮಾಡಿದ್ದು, ಆಯುಸ್ಮಾನ್ ಭಾರತ್ನ ಸುಲಭ ಯೋಜನೆ, ಮೆಟ್ರೊ ಮತ್ತು ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇನ್ನಿತರ ಹತ್ತಾರು ದೆಹಲಿಯ ಜನಪರ ಯೋಜನೆಗಳ ಸಾಲಿಗೆ ಈ ಸೋಲಾರ್ ಘಟಕಗಳು ಸೇರುತ್ತಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸಿತ್ತು. ಯಾರು ಫ್ರಿಡ್ಜ್ ಹೊಂದಿದ್ದಾರೆ, ಟೆಲಿಫೋನ್ ಹೊಂದಿದ್ದಾರೋ ಅಥವಾ ಬೈಕ್ ಹೊಂದಿರುವವರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂಬ ಕಠಿಣ ನಿಯಮವನ್ನು ರೂಪಿಸಿತ್ತು. ಇವೆಲ್ಲವೂ ಇಲ್ಲದೇ ಇರುವವರಿಗೆ ಮಾತ್ರ 5 ಲಕ್ಷ ರೂವರೆಗಿನ ಚಿಕಿತ್ಸೆ ಉಚಿತವಾಗಿತ್ತು.
ಇದಕ್ಕೆ ಸೆಡ್ಡು ಹೊಡೆದ ದೆಹಲಿ ಸರ್ಕಾರ ದೆಹಲಿಯ ನಿವಾಸಿಗಳು ಫ್ರಿಡ್ಜ್, ಟೆಲಿಫೋನ್, ಬೈಕ್ ಇದ್ದರೂ ಎಲ್ಲರೂ ಸಹ ಹೊಸ ಆರೋಗ್ಯ ಯೋಜನೆಯ ಫಲಾನುಭವಿಗಳಾಗಿದ್ದು ಸಂಪೂರ್ಣ ಉಚಿತ ಚಿಕಿತ್ಸೆ ಮಾತ್ರವಲ್ಲದೇ, ಚಿಕಿತ್ಸೆಯ ಮಿತಿಯನ್ನು ಸಹ ತೆಗೆದುಹಾಕಿ ಮಾದರಿ ಯೋಜನೆ ಎನಿಸಿಕೊಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಒಟ್ಟಿನಲ್ಲಿ ಜನರಿಗೆ ಏನೆಲ್ಲಾ ಮೂಲಭೂತ ಅವಶ್ಯಕತೆಗಳಿವೆಯೇ ಅವೆಲ್ಲವನ್ನು ಪೂರೈಸಲು ದೆಹಲಿಯ ಆಪ್ ಒಂದೊಂದೇ ದೃಢ ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಅದೊಂದು ಮಾದರಿ ಸರ್ಕಾರವಾಗಿದೆ. ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯ, ಅತಿಶಿ ಮರ್ಲೀನಾ ಇವರನ್ನು ಈ ಕಾರಣಕ್ಕೆ ಅಭಿನಂದಿಸಬೇಕಿದೆ. ದೆಹಲಿ ಸರ್ಕಾರಕ್ಕೆ ಮಾಡಲಾಗುವ ಕೆಲಸಗಳನ್ನು ಉಳಿದ ಸರ್ಕಾರಗಳು ಯಾಕೆ ಮಾಡಲಾಗುವುದಿಲ್ಲ ಎಂಬ ಪ್ರಶ್ನೆಯನ್ನು ಜನತೆ ಕೇಳಬೇಕಿದೆ ಮತ್ತು ಅದೇ ಮಾದರಿಯಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಬೇಕಿದೆ.