Homeರಾಜಕೀಯಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

ಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

- Advertisement -
ದೇಶದ ಚುನಾವಣೆ ಹತ್ತಿರ ಬರುತ್ತಿದೆ. ಅದನ್ನು ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗಳು ಯಾವ ತಂತ್ರ ರೂಪಿಸಬಹುದೆಂದು ದೇಶದ ಬುದ್ಧಿಜೀವಿಗಳು ಗಾಢವಾಗಿ ಯೋಚಿಸುತ್ತ ಕುಳಿತಿರಬೇಕಾದರೆ, ಮೋದಿ ಟೀಮು “ಪ್ರಧಾನಿ ಹತ್ಯೆಗೆ ಸಂಚು” ಎಂಬ ಸುದ್ದಿ ಹಬ್ಬಿಸಿ ಮಾವೊವಾದಿಗಳ ಬೇಟೆಗೆ ತೊಡಗಿದೆಯಲ್ಲ. ಇನ್ನು ಮುಂದಿನ ಕಾರ್ಯ ಯಾವುದೆಂದರೆ ಮಾವೋ ಸಾಹಿತ್ಯದ ಪುಸ್ತಕ ಇಟ್ಟುಕೊಂಡುವರ ಮೇಲೆ ದಾಳಿ ಮಾಡುವುದು. ಅವರೆಲ್ಲಾ ಮೋದಿಯನ್ನು ಮನೆಗೆ ಕರೆದು ಇಲಿಪಾಶಾಣ ಹಾಕಿ ಕೊಲ್ಲಲು ರೆಡಿ ಇದ್ದರೆಂಬ ರೆಕಾರ್ಡ್ ತಯಾರಿಸುವುದು ಅಂತೂ ಬಿಜೆಪಿಗಳು ಬರಲಿರುವ ಚುನಾವಣೆ ಎದುರಿಸಲು ಸಖತ್ತಾಗಿ ಸಾಮಗ್ರಿಗಳನ್ನೇ ಸಂಗ್ರಹಿಸತೊಡಗಿವೆಯಂತಲ್ಲಾ.
ಎಷ್ಟೇ ಆಗಲಿ ಲಾಹೋರ್‍ಗೆ ಬಸ್ ಬರುತ್ತಲೇ. ಭಾರತದ ಗಡಿಯೊಳಕ್ಕೆ ಪಾಕಿಸ್ತಾನಿಗಳನ್ನು ನುಸುಳಿಸಿಕೊಂಡು ನಮ್ಮ ದೇಶದ ಅತ್ಯಂತ ಸಮರ್ಥ 580 ಜನ ಸೈನಿಕರನ್ನು ಬಲಿಕೊಟ್ಟವರಲ್ಲದೆ ಈ ಬಿಜೆಪಿಗಳು. ಇನ್ನ ಚುನಾವಣೆ ಟೈಮಿಗೆ ಯಾವ ಯಾವ ಸಂಚು ರೂಪಿಸಿ ಅದೇನು ಮಾಡುತ್ತಾರೋ ಮೋದಿ ಪರಮಾತ್ಮನೇ ಬಲ್ಲ ಥೂತ್ತೇರಿ.
*********
ದೇಶ ಆಳಿ ಅನುಭವವಿಲ್ಲದ ಚೆಡ್ಡಿಗಳು ಯಾಕಿಂತಹ ಮನೆಮುರುಕು ಕೆಲಸಕ್ಕೆ ಕೈಹಾಕಿವೆ ಎಂದರೆ. ಅರ್ಧ ರಾತ್ರಿಯಲ್ಲಿ ನೋಟುಬ್ಯಾನು  ಮಾಡಿ ದೇಶವನ್ನೇ ಸಂಕಷ್ಟಕ್ಕೆ ದೂಡಿದವು. ಹೊಸ ನೋಟು ಕೇಸರಿ ಬಣ್ಣ ಮಿಕ್ಸ್ ಮಾಡಿದವು. ಆಮೇಲೆ ಜಿ.ಎಸ್.ಟಿ ತಂದು ಸಣ್ಣಪುಟ್ಟ ಉದ್ದಿಮೆ ಬಾಗಿಲಾಕುವಂತೆ ಮಾಡಿದವು. ಅವುಗಳ ಮುಂದೆ ಇನ್ನಾವ ಘನಕಾರ್ಯವೂ ಉಳಿದಿಲ್ಲವಾಗಿ ಮತ್ತೆ ದೇಶಕ್ಕೆ ವಕ್ಕರಿಸಲು ಮೋದಿ ಮಹಾತ್ಮ ಹುತಾತ್ಮನ ನಾಟಕ ಶುರುಹಚ್ಚಿಕೊಂಡಿದೆ.
ಇನ್ನು ಮುಂದೆ ತಾನು ದೇಶಕ್ಕಾಗಿ ಒಂದು ಚಟಾಕು ರಕ್ತ ಹರಿಸಲು ತಯಾರು ಎಂಬ ಹೃದಯವಿದ್ರಾವಕ ಭಾಷಣ ಮಾಡಲು ತಯಾರಿ ನಡೆಸಬಹುದು. ಬಿಜೆಪಿಗಳು ಯಾವುದೇ ಕೆಲಸ ಮಾಡಿದರೂ ಅದರಲ್ಲೊಂದು ಸಂಚು ಇದ್ದೇ ಇರುತ್ತದೆ. ಹಾಗೆಯೇ ಈವರೆಗಿನ ಅದರ ಆಡಳಿತವೇ ಸಂಚಿನ ಸರಮಾಲೆಯಿಂದ ಕೂಡಿದ್ದು ಮುಂದು ಕೂಡ ತನ್ನ ಅಜೆಂಡಾಗಳನ್ನು ದೇಶದ ಮೇಲೆ ಹೇರುವ ಸಂಚುಗಳಿಂದಲೇ ಮುನ್ನಡೆವ ಆ ಪಕ್ಷ ದೇಶನಾಶ ಮಾಡಲೂ ಹೇಸುವುದಿಲ್ಲವಂತಲ್ಲಾ ಥೂತ್ತೇರಿ.
*********
ಇತ್ತ ಕರ್ನಾಟಕದ ಸಮಾಚಾರ ಶಾನೆ ಮಜವಾಗಿದೆಯಲ್ಲಾ. ಇನ್ನ ಕಾವೇರಿಯಲ್ಲೇ ಪವಡಿಸಿರುವ ಸಿದ್ದು ನಿದ್ದೆಯಿಂದೆದ್ದು “ನಾನು ತಿರಗ ಮುಖ್ಯಮಂತ್ರಿ ಆಯ್ತಿನಿ” ಎಂದು ಬಿಟ್ಟರಂತಲ್ಲಾ. ಇದರಿಂದ ಪುಳಕಿತರಾದ ಸುತ್ತಲೂ ಇದ್ದ ಕುರುಬ ಸಮಾಜದ ಮಾಜಿಗಳು ಮುಂದಾದ್ರು ನಮುಗ್ಯಾವುದರ ಬೊರ್ಡು, ನಿಗಮ ಅಕಾಡೆಮಿ ಇತ್ಯಾದಿ ಅನ್ನದಂಡದ ಹುದ್ದೆಗಳನ್ನು ಕರುಣಿಸಬೇಕೆಂದು ಅಂಗಲಾಚಿದರಂತಲ್ಲಾ.
ಮುಖ್ಯಮಂತ್ರಿಗಿರಿ ಹೋದ ನೂರೇ ದಿನಕ್ಕೆ ನಿರುದ್ಯೋಗ ಎದುರಿಸುತ್ತಿರುವ ಸಿದ್ದು. ಈ ತರಹ ಹೇಳಿಕೆ ಕೊಡಬೇಕಾದರೆ ಕಾರಣವೇನೆಂದು ಮಾಧ್ಯಮದ ಮಂದಮತಿಗಳು ಸದರಿ ಹೇಳೆಕೆಯನ್ನ ಅಳೆದು ಸುರಿದು ಹಂಚುತ್ತಿರಬೇಕಾದರೆ, ಅತ್ತ ಕುಮಾರಣ್ಣ ಸಿದ್ದು ಮಾತಿಗೆ ಆಕ್ರೋಶಗೊಂಡರೂ ಅದುಮಿಟ್ಟುಕೊಂಡು ಸಂತೋಷ ಬಹಳ ಸಂತೋಷ ಎಂದರಂತಲ್ಲಾ. ಹೇಳಿಕೇಳಿ ಇದು ಸಮ್ಮಿಶ್ರ ಸರಕಾರ ಕಾಂಗೈದು ಎಪ್ಪತ್ತೈದು ಭಾಗವಾದರೆ ಜೆಡಿಎಸ್‍ದು ಇಪ್ಪತ್ತೈದು ಭಾಗ. ಆದ್ದರಿಂದ ನಾಯಿಬಾಲ ಅಲ್ಲಾಡಿಸಬೇಕೆ ಹೊರತು, ಬಾಲವೇ ನಾಯಿ ಅಲ್ಲಾಡಿಸಬಾರದು ಎಂದು ಕಡ್ಡಿರಂಗ ವಾದಿಸುತ್ತಿರಲಾಗಿ, ಇತ್ತ ರಂಗನನ್ನು ಕಂಡಲಾಗದ ಸಿಂಗರು ನಾಯಿ ದುರ್ಬಲವಾಗಿರುವಾಗ ಅಕಸ್ಮಾತ್ ಅದು ಬಾಲ ಅಲ್ಲಾಡಿಸಲು ಯತ್ನಿಸಿದಾಗ ಅದೂ ಕೂಡ ಅಲ್ಲಾಡಬೇಕಾಗುತ್ತೆ. ಒಟ್ಟು ಕುಮ್ಮಿ ಸರಕಾರ ಈಗ ಅಲ್ಲಾಡುತ್ತಿದೆ ಎಂದವಂತಲ್ಲಾ ಥೂತ್ತೇರಿ.
*********
ಸಿರ್ಸಿ ಸಿದ್ದಾಪುರ ಕಡೆಯ ಅನಂತಕುಮಾರ ಹೆಗಡೆ ಎಂಬ ತಲೆಕೆಟ್ಟ ಗಿರಾಕಿ, ತಲೆಗೆ ಏಟುಬಿದ್ದಂತೆ ಸುಮ್ಮನಿರುವಾಗ ಬಿಜಾಪುರದ ಯತ್ನಾಳ್ ಎಂಬ ಯಡವಟ್ಟನ ಮೇಲೆ ಹೆಗಡೆ ಭೂತ ಆವರಿಸಿಕೊಂಡಿದೆಯಂತಲ್ಲಾ. ಕೇರಳದಲ್ಲಿನ ಭೀಕರ ಮಳೆಗೆ ನಾಡೇ ಕೊಚ್ಚಿ ಹೋಗಿದೆ. ಜನ ಜಾನುವಾರು, ಕಟ್ಟಡ, ರಸ್ತೆಗಳು ನೀರು ಪಾಲಾಗಿದೆ, ಇಂತಹ ಪ್ರಕೃತಿ ವಿಕೋಪಕ್ಕೆ ಯತ್ನಾಳಿಗೆ ಹೊಳೆದ ಕಾರಣವೆಂದರೆ ಕೇರಳಿಗರು ಗೋವುಗಳನ್ನು ಹತ್ಯೆ ಮಾಡಿರುವುದು. ಇಂತದೇ ಅನಾಹುತ ಕೊಡಗಿನಲ್ಲೂ ಸಂಭವಿಸಿದೆ. ಆದರೆ ಯತ್ನಾಳ್ ಎಂಬ ಮೂರ್ಖನಿಗೆ ಇಲ್ಲಿಯ ಕಾರಣ ಹೊಳೆದಿಲ್ಲ. ಏಕೆಂದರೆ ಕೊಡಗು ಈಗ ಬಿಜಿಪಿ ಮಯವಾಗಿದೆ. ಸೂಕ್ಷ್ಮವಾಗಿ ನೋಡಿದರೆ ಈ ಯತ್ನಾಳ್‍ನ ಮೆದುಳಿಗೆ ಕಾರಣ ಹೊಳೆಯಬೇಕಿತ್ತು. ಅದಾವುದಪ್ಪ ಎಂದರೆ ಕೊಡಗಿನಲ್ಲಿ ವರಾಹ ಸಂತತಿಯ ಮಾರಣಹೋಮ ನಡೆಯುತ್ತಲೇ ಇದೆ. ವರಹ ವಿಷ್ಣುವಿನ ಅವತಾರ ಆ ಅವತಾರವೆತ್ತಿದ ಮಹಾವಿಷ್ಣು ಭೂದೇವಿಯನ್ನ ರಕಿÀ್ಷಸಿ ಸ್ಥಾಪಿಸದಿದ್ದರೆ ಕೊಡಗೇನು ಭೂಮಂಡಲವೇ ಇರುತ್ತಿರಲಿಲ್ಲ. ಇಂತಹ ಕಾರಣ ಮಂದಮತಿ ಯತ್ನಾಳನಿಗೆ ಈವರೆಗೆ ಹೊಳೆಯದಿರುವುದೇ ಬಿಜಾಪುರದ ದುರಂತವಲ್ಲವೆ ಥೂತ್ತೇರಿ.
*******
ಕುಮ್ಮಿ ಸರಕಾರದ ಮನರಂಜನೆ ಎಂದರೆ ರೇವಣ್ಣ. ಯಾವುದೇ ಸರಕಾರ ಘನಗಂಭೀರವಾಗಿ ಸಾಗಬಾರದು. ಅಲ್ಲಿ ಒಂದಿಷ್ಟು ಮನರಂಜನೆ ಇರಬೇಕು, ಆದರೆ ಈ ರೇವಣ್ಣನಂತಹ ರೇವಣ್ಣನನ್ನ ಇನ್ನೂ ಐದು ವರ್ಷ ಸಹಿಸಿಕೊಳ್ಳಬೇಕಲ್ಲಾ ಎಂದು ನೆನಸಿಕೊಂಡರೆ ನೇತಾಕಿಕೊಳ್ಳಬೇಕೆನಿಸುತ್ತದಲ್ಲಾ. ನೇತಾಕಿಕೊಳ್ಳೋಣವೆಂದರೆ, ಕುಮಾರಣ್ಣ ನಮ್ಮ ಸಾಲವನ್ನು ಸಂಪೂರ್ಣ ಮನ್ನ ಮಾಡಿದ್ದಾರೆ. ಇರೋಣವೆಂದರೆ ರೇವಣ್ಣ ರಾದ್ಧಾಂತ. ಅಂತೂ ನಮ್ಮ ಪಿತೃಸಮಾನರಾದ ದೇವೇಗೌಡರಿಗೆ ಕರ್ನಾಟಕದ ಮೇಲೆ ಅದೆಂತಹ ಪ್ರೀತಿಯಿತ್ತೋ ಏನೋ ಮುದ್ದಾದ ನಾಲ್ಕು ಮಕ್ಕಳನ್ನ ಕರ್ನಾಟಕದ ಮೇಲೆ ಎಸೆದಿದ್ದಾರೆ. ಆ ಪೈಕಿ ರೇವಣ್ಣನ ಜೊಲ್ಲು-ಗೊಣ್ಣೆಯನ್ನು ಯಾರಾದರೂ ಒರೆಸಲೇಬೇಕಿದೆ. ತಾಯಿ ಭವಾನಿ ನಿಜಕ್ಕೂ ಮಹಾಮಾತೆ, ಆ ಮಾತೆ ತಮ್ಮ ಪ್ರಾಣಕಾಂತನಿಗೆ ಒಂದಿಷ್ಟು ನಾಗರಿಕ ನಡವಳಿಕೆ ಕಲಿಸಿ ಕೈಬಿಟ್ಟಿದ್ದರೇ ಕನ್ನಡ ಜನತೆ ಕೃತಾರ್ಥವಾಗುತ್ತಿತ್ತು. ಈಗಲೂ ಕಾಲಮಿಂಚಿಲ್ಲ. ತಾಯಿ ಭವಾನಿ ತಮ್ಮ ಆರ್ಯಪುತ್ರನಿಗೆ ಒಳ್ಳೆ ಕಟಿಂಗ್ ಮಾಡಿಸಿ, ಒಳ್ಳೆ ಬಟ್ಟೆ ಇಕ್ಕಿ, ಹಾಗೆ ಬಾಯಿ ಮೂಗು ಕ್ಲೀನ್ ಮಾಡಿ, ಕೈಗೆ ಸಿಕ್ಕಿದ್ದನ್ನು ಎಸೆಯದಂತೆ ಬುದ್ಧಿ ಹೇಳಿ ಕಳಿಸಿದರೆ; ಕನ್ನಡ ಜನತೆ ಆರ್ಯಪುತ್ರನ ಅಭಿಮಾನಿಗಳಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ ಥೂತ್ತೇರಿ.
– ಯಾಹೂ
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ನಾಯಕ ಸುರ್ಜೇವಾಲಾಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

0
ಬಿಜೆಪಿ ಸಂಸದೆಯ ವಿರುದ್ಧದ ಅವಹೇಳನಾಕಾರಿ ಹೇಳಿಕೆ ಆರೋಪದಲ್ಲಿ ಕಾಂಗ್ರೆಸ್‌ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ....