| ಜಿ.ಆರ್.ವಿದ್ಯಾರಣ್ಯ |
ಭಾರತೀಯ ರಿಜರ್ವ್ ಬ್ಯಾಂಕ್ ಇಂದು ತನ್ನ ಹಣಕಾಸು ನೀತಿಯ ಅಡಿಯಲ್ಲಿ ಮರುಖರೀದಿ (ರಿಪೊ) ದರವನ್ನು 25 ಅಂಕದಷ್ಟು (ಅಂದರೆ ¼%) ಕಡಿತಗೊಳಿಸಿದೆ. ಇದರಿಂದ ನೆನೆಗುದಿಗೆ ಬಿದ್ದಿರುವ ದೇಶದ ಆರ್ಥಿಕ ಪ್ರಗತಿಯ ಬಂಡಿ ಮತ್ತೆ ಹೆದ್ದಾರಿ ಹಿಡಿಯಬಹುದೆಂಬ ಆಶಯ ವ್ಯಕ್ತಪಡಿಸಿದೆ. ಭಾರತೀಯ ರಿಜರ್ವ್ ಬ್ಯಾಂಕ್ ಈ ವರ್ಷ ಆಗಲೇ ರಿಪೊ ದರವನ್ನು ಎರಡು ಬಾರಿ (ಫಬ್ರುವರಿ ಮತ್ತು ಏಪ್ರಿಲ್ ತಿಂಗಳಲ್ಲಿ) ¼% ಕಡಿಮೆ ಮಾಡಿದೆ. ಕಡಿತದಿಂದ ಬ್ಯಾಂಕುಗಳಿಗೆ ಉಪಯೋಗಿಸಲು ಕಡಿಮೆ ದರದಲ್ಲಿ ಹಣವೇನೋ ಲಭಿಸುತ್ತದೆ. ಕಡಿತದಿಂದ ಸಾಮಾನ್ಯವಾಗಿ ಎಲ್ಲಾ ರೀತಿಯ ಸಾಲದ ಮೇಲಿನ ಬಡ್ಡಿದರವೂ ಕಡಿಮೆಯಾಗಬೇಕು. ಆದರೆ ಕೇವಲ ಕಾಲು ಪ್ರತಿಶತ ಈ ಬಾರಿಯ ಇಳಿತದ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೆ ಹಸ್ತಾಂತರಿಸುವುದು ಸಂದೇಹ.
ಸುಮಾರು ಎಲ್ಲಾ ಬ್ಯಾಂಕುಗಳು ತಾವೇ ಸ್ವತಃ ಸಂಕಷ್ಟದಲ್ಲಿರುವಾಗ ತಮ್ಮ ಲಾಭಾಂಶ ಹೆಚ್ಚಿಸಿಕೊಳ್ಳುವತ್ತ ಅವರ ಗಮನ ಇರುತ್ತದೇ ವಿನಃ ಜನಸಾಮಾನ್ಯರ ಸಾಲಕ್ಕೆ ಬಡ್ಡಿದರ ಕಡಿಮೆ ಮಾಡುವುದು ಅವರ ಪ್ರಾಥಮಿಕತೆ ಆಗುವುದಿಲ್ಲ. ಹಣ ಸುಲಭವಾಗಿ ದೊರೆತ ಮಾತ್ರಕ್ಕೆ ಜನರು ಸಾಲ ಪಡೆದು ಹೊಸ ಉದ್ಯೋಗ ಪ್ರಾರಂಭಿಸುತ್ತಾರೆ ಅಥವಾ ಅವರ ಈಗಿರುವ ವಹಿವಾಟನ್ನು ವಿಸ್ತರಿಸಿಕೊಳ್ಳುತ್ತಾರೆ, ಅದರಿಂದ ದೇಶದ ಆರ್ಥಿಕ ಪ್ರಗತಿ ವೇಗ ಹಿಡಿಯುತ್ತದೆ, ಜನರಿಗೆ ಹೆಚ್ಚಿನ ಉದ್ಯೋಗವಾಕಾಶ ದೊರೆಯುತ್ತದೆ ಎಂದು ನಂಬಿದರೆ ಅದು ಶೇಖ್ ಮೊಹಮ್ಮದನ ಕನಸು.
ನಮಗೆ ತಿಳಿದಂತೆ, ಮತ್ತು ಇತ್ತೀಚೆಗೆ ಸರಕಾರ ಒಪ್ಪಿಕೊಂಡಂತೆ, ನಿರುದ್ಯೋಗಿಗಳ ಸಂಖ್ಯೆ ಸತತವಾಗಿ ಹೆಚ್ಚುತ್ತಲೇ ಇದೆ ಮತ್ತು ಕಳೆದ 45 ವರ್ಷಗಳ ಕೆಳ ಹಂತ ತಲುಪಿದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯತ್ತಿರುವ ದೊಡ್ಡ ಆರ್ಥಿಕ ಶಕ್ತಿ ಭಾರತ ಎಂದು ಬಿಂಬಿಸಲು ಮಾಧ್ಯಮಗಳು ಪೈಪೋಟಿ ನಡೆಸುತ್ತಿವೆ. ಭಾರತದ ಆರ್ಥಿಕತೆ ಔದ್ಯೋಗಿಕ ಕ್ಷೇತ್ರದ ಶಕ್ತಿಯಿಂದ ಮೇಲೇರುತ್ತಿಲ್ಲ, ಅದು ಮೇಲೇರುತ್ತಿರುವುದು ಕೇವಲ ಸೇವಾ ಕ್ಷೇತ್ರದ ಬಲದ ಮೇಲೆ. ಕೃಷಿ ವಲಯ 15% ಕೊಡುಗೆ ನೀಡಿದರೆ ಔದ್ಯೋಗಿಕ ಕ್ಷೇತ್ರದ ಕಾಣಿಕೆ 30% ಸಹ ಇಲ್ಲ.
ನಿರುದ್ಯೋಗ ಸಮಸ್ಯೆ ಸೇವಾ ಕ್ಷೇತ್ರಕ್ಕೆ ಬಲವಾದ ಅಡ್ಡಗಲ್ಲು. ಹಣ ಹೂಡಿಕೆ ಸ್ತರ ಸತತವಾಗಿ ಕಡಿಮೆಯಾಗುತ್ತಿದೆ. ಸರಕಾರದ ಖರ್ಚು ಹೆಚ್ಚುತ್ತಿದೆ. ಆಂತರಿಕ ವ್ಯಯ ಶಕ್ತಿ ಕಡಿಮೆಯಾಗುತ್ತಿದೆ. ಭಾರತಕ್ಕಿಂತ ಚೀನಾ ದೇಶದ ಜಿಡಿಪಿ ವೃದ್ಧಿ ದರ 2018-19ರಲ್ಲಿ ಸ್ವಲ್ಪ ಕಡಿಮೆ ಇದ್ದರೂ ಸಹ, ಅದರ ಗಾತ್ರ ಅಗಾಧವಾದದು. ಚೀನಾ ದೇಶ ಪ್ರತಿ ವರ್ಷ ಒಂದು ಆಸ್ಟ್ರೇಲಿಯಾದಷ್ಟು ಆರ್ಥಿಕ ಶಕ್ತಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಸಾಮರ್ಥ್ಯ ಇಟ್ಟುಕೊಂಡಿದೆ, ಆದರೆ ಕಳೆದ ವರ್ಷ ಅದು ಸೃಷ್ಟಿಸಿದ ಹೊಸ ಉದ್ಯೋಗವಕಾಶ ಕೇವಲ 1.2 ಕೋಟಿ. ಚೀನಾ ದೇಶದ ಕಾಲು ಭಾಗದಷ್ಟು ಶಕ್ತಿ ಇರುವ ಭಾರತ ಪ್ರತಿವರ್ಷ ಎರಡು ಕೋಟಿ ಹೊಸ ಉದ್ಯೋಗ ಎಲ್ಲಿಂದ ಸೃಷ್ಟಿಸಬಲ್ಲದೋ ಆ ದೇವರೇ ಬಲ್ಲ.
ಬ್ಯಾಂಕಿನಿಂದ ದೊಡ್ಡ ಮೊತ್ತದ ಸಾಲ ಪಡೆದ ಹಲವಾರು ದೊಡ್ಡ ಉದ್ಯೋಗಪತಿಗಳು ಈಗಾಗಲೇ ಪರಾರಿಯಾಗಿದ್ದಾರೆ. ಸಣ್ಣ ಪುಟ್ಟ ಸಾಲ ಪಡೆದ ಬಡವರು ಯಾರಿಗೆ ಮತ್ತು ಎಷ್ಟರ ಮಟ್ಟಿಗೆ ಕೆಲಸ ಕೊಡಬಲ್ಲರೋ ತಿಳಿಯದು. ಈಗಾಗಲೇ ಸಾಲದ ಭಾರಕ್ಕೆ ಸಿಲುಕಿರುವ ಜನರು ಆದಷ್ಟು ಬೇಗ ಋಣಮುಕ್ತವಾಗುವದನ್ನು ಚಿಂತಿಸುತ್ತಾರೆಯೇ ವಿನಃ ಹೊಸ ಸಾಲಕ್ಕೆ ಬ್ಯಾಂಕಿನ ಮುಂದೆ ಮರುದಿನ ಸರದಿಯಲ್ಲಿ ನಿಲ್ಲುವುದಿಲ್ಲ.
ಜನರ ಬ್ಯಾಂಕ್ ಠೇವಣಿ ಹಣಕ್ಕೆ ದರ ಕಡಿಮೆಯಾಗಿ, ನಿತ್ಯೋಪಯೋಗಿ ವಸ್ತುಗಳ ಬೆಲೆ ಸತತವಾಗಿ ಮೇಲೇರುತ್ತಿದ್ದರೆ ಜನರು ಹಣ ಠೇವಣಿ ಇಟ್ಟು ಪ್ರಯೋಜನವಿಲ್ಲ. ಖರ್ಚು ಮಾಡೋಣ ಎಂದು ಮುಂದಾದರೆ ಹಣದ ಮೌಲ್ಯ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಉಬ್ಬರ ಮೇಲೇರುವ ಭೀತಿಯೂ ಇರುತ್ತದೆ. ಒಟ್ಟಿನಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ಮಾಡುತ್ತಿರುವ ದರ ಕಡಿತ-ಏರಿಕೆ ಪ್ರಯೋಗಗಳು ಆರ್ಥಿಕ ಪ್ರಚೋದನೆ ನೀಡಲಿ, ದೇಶ ಮುಂದೆ ಸಾಗಲಿ ಎಂದು ಆಶಿಸೋಣ.