Homeಚಳವಳಿಗಾಂಧೀಜಿ, ಆರ್‌ಸಿಇಪಿ ಒಪ್ಪಂದ, ಇಥಿಯೋಪಿಯಾದ ಅಧ್ಯಕ್ಷ ಮತ್ತು ದೇವನೂರು ಮಹಾದೇವರವರ ಮಾತುಗಳು...

ಗಾಂಧೀಜಿ, ಆರ್‌ಸಿಇಪಿ ಒಪ್ಪಂದ, ಇಥಿಯೋಪಿಯಾದ ಅಧ್ಯಕ್ಷ ಮತ್ತು ದೇವನೂರು ಮಹಾದೇವರವರ ಮಾತುಗಳು…

ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಉತ್ಪನ್ನಗಳು ಭಾರತಕ್ಕೆ ಬಂದು ದಾಳಿ ಮಾಡುತ್ತವೆ. ಈ ಹಾಲಿನ ಯುದ್ಧವಾದರೆ, ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ಮಟಾಷ್ ಆಗುತ್ತದೆ.

- Advertisement -
- Advertisement -

‘ಆರ್ ಸಿ ಇ ಪಿ’ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ) ಒಪ್ಪಂದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ನವೆಂಬರ್ 2019ರಲ್ಲಿ ಕೇಂದ್ರ ಸರಕಾರ ತಯಾರಾಗಿದ್ದು, ಅದಕ್ಕಾಗಿ ದೇಶಾದ್ಯಂತ 24.10.2019ರಂದು ರೈತರು ಮತ್ತು ಈ ಒಪ್ಪಂದಕ್ಕೆ ವಿರೋಧವಾಗಿರುವವರಿಂದ ಪ್ರತಿಭಟನೆಗಳು ನಡೆದವು. ಅದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ 25.10.2019ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು, ಅದರ ಸಂಪೂರ್ಣ ಪಾಠ ‘ನಮ್ಮಬನವಾಸಿ’ಯಲ್ಲಿಯೂ ಪ್ರಕಟವಾಗಿದೆ. ನಮ್ಮ ಓದಿಗಾಗಿ ಇಲ್ಲಿದೆ.

ಮೊದಲೊಂದು ಪ್ರಸಂಗ ನೆನಪಿಸುವೆ. “ವಿದೇಶಿ ವಸ್ತ್ರ ಸುಡಿ” ಎಂಬ ಗಾಂಧಿ ಕರೆಯಿಂದಾಗಿ ಇಂಗ್ಲೆಂಡಿನ ಲಂಕಾಶೈರ್‌ನ ಬಟ್ಟೆ ಗಿರಣಿಗಳು ಮುಚ್ಚುವಂತಾಗಿ ಅಲ್ಲಿನ ಕಾರ್ಮಿಕರು ಗಾಂಧೀಜಿಯನ್ನು 26-09-1931 ರಲ್ಲಿ ಸುತ್ತುವರಿದು ತಮ್ಮ ಕಷ್ಟ ಹೇಳಿಕೊಂಡಾಗ ಗಾಂಧಿ ಆಡಿದ ನುಡಿಗಳು ಹೀಗಿವೆ:

“ಇಲ್ಲಿನ ನಿರುದ್ಯೋಗ ಕಂಡು ನನಗೆ ನೋವಾಗಿದೆ, ಆದರೆ ಇಲ್ಲಿ ಹಸಿವು ಮತ್ತು ಅರೆಹೊಟ್ಟೆ ಬದುಕು ಇಲ್ಲ. ಇಂಡಿಯಾದಲ್ಲಿ ನಮಗೆ ಎರಡೂ ಇದೆ. ನೀವು ಇಂಡಿಯಾದ ಹಳ್ಳಿಗಳಿಗೆ ಹೋಗಿ ನೋಡಿದರೆ ಆ ಹಳ್ಳಿಗಳ ಕಣ್ಣಲ್ಲಿ ತೀವ್ರ ಹತಾಶೆ ಕಾಣುತ್ತೆ. ಅಲ್ಲಿ ಕಾಣುವುದು ಅರೆಹೊಟ್ಟೆಯ ಎಲುಬು ಗೂಡುಗಳು, ಜೀವಂತ ಶವಗಳು. ಇವುಗಳಿಗೆ ಕೆಲಸದ ರೂಪದಲ್ಲಿ ಅನ್ನ ಕೊಟ್ಟು ಜೀವ ತುಂಬಿದರೆ ಆ ಭಾರತ ಜಗತ್ತಿಗೆ ನೆರವಾಗುತ್ತದೆ. ಈವತ್ತು ಭಾರತ ಶಾಪಕ್ಕೊಳಗಾಗಿದೆ. ನನ್ನ ದೇಶದಲ್ಲಿ, “ಈ ಅರೆಹೊಟ್ಟೆಯ ಲಕ್ಷಾಂತರ ಜನರ ಜೀವ ಕೊನೆಗೊಂಡರೆ ಉಳಿದವರು ಬದುಕುತ್ತಾರೆ” ಅನ್ನುವ ಗುಂಪೂ ಇದೆ.  ನಾನೊಂದು ಮಾನವೀಯ ವಿಧಾನವನ್ನು ಕಂಡುಕೊಂಡೆ. ಅದೇನೆಂದರೆ, ಅವರಿಗೆ ಗೊತ್ತಿರುವ ಕೆಲಸವನ್ನು ಕೊಡೋದು. ಅವರು ಅದನ್ನು ತಮ್ಮ ಜೋಪಡಿಯಲ್ಲಿ ಮಾಡುವಂತಹುದು,  ದೊಡ್ಡ ಬಂಡವಾಳ ಅಗತ್ಯ ಇಲ್ಲದ್ದು. ಈ ಉತ್ಪನ್ನಗಳ ಮಾರಾಟ ಸುಲಭವಾಗಿರುವುದು– ಅಂಥದು. ಈ ಒಂದು ಧ್ಯೇಯ ಲಂಕಾಶೈರ್ ಗಮನಕ್ಕೂ ಯೋಗ್ಯವಾಗಿದೆ”.

ಈ ಮಾತುಗಳಲ್ಲಿ ಕೇವಲ 89 ಪದಗಳಿವೆ. ಈ ನುಡಿಗಳನ್ನು ನನ್ನ ಮನಸ್ಸಲ್ಲಿ ಮೂಡಿಸಿಕೊಂಡೆ. ಗೊಮ್ಮಟನನ್ನು ಕಂಡಂತಾಯ್ತು.

ಇಲ್ಲಿ ಬರುವ ಒಂದು ವಾಕ್ಯ ಗಮನಿಸಬೇಕು- “ಅರೆಹೊಟ್ಟೆಯ ಲಕ್ಷಾಂತರ ಜನರ ಜೀವ ಕೊನೆಗೊಂಡರೆ, ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ”. ನೋಡಿದರೆ, ಇಂದು ನಮ್ಮ ಕಣ್ಣೆದುರು ಆಗುತ್ತಿರುವುದು ಇದೇ ಏನೋ ಅನಿಸಿಬಿಡುತ್ತದೆ. ನಿರುದ್ಯೋಗಿಗಳ, ರೈತರ ಆತ್ಮಹತ್ಯೆ ಲಕ್ಷಾಂತರ ಆಗುತ್ತಿದೆ. ಆಳುವವರು ಹೊಣೆಗಾರರಾಗುತ್ತಿಲ್ಲ.

ಜೊತೆಗೆ, ಮನುಷ್ಯನ ದುರಾಸೆಯ ಪರಿಣಾಮದಿಂದ ಉಂಟಾದ ಜಾಗತಿಕ ತಾಪಮಾನದಿಂದಾಗಿ ಪ್ರಕೃತಿ ಕುಪಿತಗೊಂಡು ಒಂದು ಕಡೆ ನೆರೆ ಪ್ರವಾಹದಿಂದ ಜನರ ಬದುಕು ಮುಳುಗಡೆ ಆಗುತ್ತಿದೆ. ಅದರ ಪಕ್ಕದಲ್ಲೆ ಮಳೆ ಇಲ್ಲದೆ, ಬೆಳೆ, ಜನ ಒಣಗಿ ಹೋಗುತ್ತಿದ್ದಾರೆ, ಸಾಯುತ್ತಿದ್ದಾರೆ. ಜೊತೆಗೆ ಭಾರತದ ಅರ್ಥಿಕತೆ ಕುಸಿಯುತ್ತಿದೆ. ಉದ್ಯೊಗಗಳು ಕುಸಿಯುತ್ತಿದೆ. ಈ ಕುಸಿಯುತ್ತಿರುವ ಭಾರತದ ಮೇಲೆ ಮೋದಿಶಾದ್ವಯರು, ಪೂತನಿ (ಕ್ರೋನಿ) ಬಂಡವಾಳಶಾಹಿ ಜೊತೆಗೂಡಿಕೊಂಡು ಕುಣಿದು ಕುಪ್ಪಳಿಸಿ ತುಳಿದು, ಹಾಲಿ ಇರುವ ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರಾಟ ಮಾಡಿಕೊಂಡು ಸರ್ಕಾರ ತನ್ನ ಜೀವನ ಸಾಗಿಸುವುದು ಹೆಚ್ಚುತ್ತಿದೆ. ಇದರಿಂದಲೂ ಉದ್ಯೋಗ ಉದುರಿ ಹೊಗುತ್ತಿದೆ, ಆತ್ಮಹತ್ಯೆ ಹೆಚ್ಚುತ್ತಿದೆ.

ನೋಡಿ, ಈಗ ಕೇಂದ್ರ ಸರ್ಕಾರವು, 16 ದೇಶಗಳ ನಡುವೆ ಆರ್.ಸಿ.ಇ.ಪಿ ಎಂಬ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರಕ್ಕೆ ಹೆಬ್ಬೆಟ್ಟು ಒತ್ತಲು ರೆಡಿಯಾಗಿದೆ. ಗುಟ್ಟಾಗಿ ಕೊಲೆ ಸಂಚು ಜರುಗುತ್ತಿದೆ. ಪಾರ್ಲಿಮೆಂಟ್ ಮುಂದೆನು, ಇಡುತ್ತಿಲ್ಲ. ರಾಜ್ಯಗಳನ್ನು ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ಹೆಬ್ಬೆಟ್ಟು ಒತ್ತಿದರೆ ಏನಾಗುತ್ತೆ? ಒಂದೇ ಒಂದು ಉದಾಹರಣೆ ಸಾಕು – ಭಾರತದಲ್ಲಿ ಸಣ್ಣಸಣ್ಣ ರೈತರು ಹಾಗೂ ಮತ್ತೊಂದಿಷ್ಟು ಜನಸಾಮಾನ್ಯರು ಹಾಲು ಉತ್ಪಾದನೆಯಲ್ಲಿ ತೊಡಗಿ ಇದನ್ನೆ ತಮ್ಮ ಜೀವನಾಧಾರ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ಜನ ಗ್ರಾಮೀಣ ಕಡುಬಡವರು ಇದರ ಮೇಲೇನೆ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚಾಗಿ ಮಹಿಳೆಯರ ಬದುಕು ಇದನ್ನು ಅವಲಂಬಿಸಿಯೇ ಉಸಿರಾಡುತ್ತಿದೆ. ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಉತ್ಪನ್ನಗಳು ಭಾರತಕ್ಕೆ ಬಂದು ದಾಳಿ ಮಾಡುತ್ತವೆ. ಈ ಹಾಲಿನ ಯುದ್ಧವಾದರೆ, ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ಮಟಾಷ್ ಆಗುತ್ತದೆ. ಮಹಿಳೆಯರೂ ಆತ್ಮಹತ್ಯೆಗೆ ಶರಣಾಗತೊಡಗುತ್ತಾರೆ.

ಯಾಕೆ ಪುರುಷರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮಹಿಳೆಯರು ಇಲ್ಲ, ಎಂದು ಸರ್ಕಾರ ಚಿಂತಿಸಿ ಈ ಒಪ್ಪಂದಕ್ಕೆ ರುಜು ಹಾಕುತ್ತಿರಬಹುದೇ? ಗಾಂಧಿ ಹೇಳುವ – ನನ್ನ ದೇಶದಲ್ಲಿ ಈ ಅರೆಹೊಟ್ಟೆಯ ಲಕ್ಷಾಂತರ ಜನರ  ಜೀವ ಕೊನೆಗೊಂಡರೆ ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ – ಎನ್ನುವ ಮಾತು ನಿಜವಿರಬಹುದೆ?

ಜಾಗತೀಕರಣದ ನಂತರ ಜಗತ್ತಿನ ಪ್ರವಾಹ ಇರುವುದೇ ಹೀಗೆ, ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಎಲ್ಲರೂ ಕೊಚ್ಚಿ ಹೋಗುತ್ತಿದ್ದೇವೆ.

ಕೊಚ್ಚಿ ಹೋಗುತ್ತಿರುವ ನಾವು, ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹಮದ್ ಕಡೆಗೆ ನೋಡಬೇಕಾಗಿದೆ. ಬೆಳಕು ಕಾಣಬಹುದು. ಗೊತ್ತಲ್ಲ? ಇಥಿಯೋಪಿಯಾ ಅಂದರೆ ಹಸಿವಿನಿಂದ ಎಲುಬಿನ ಗೂಡಾಗಿದ್ದ ದೇಶ. ಇಂಥ ದೇಶಕ್ಕೆ ಆತ ಪ್ರಧಾನಿಯಾಗಿ ಬರುತ್ತಾನೆ. ಇನ್ನೂ ಎರಡು ವರ್ಷಗಳು ತುಂಬಿಲ್ಲ, ಅವನ ಕಾರ್ಯವೈಖರಿಗಳು, ಯುದ್ಧವಿಲ್ಲದೆ ಎಲ್ಲವನ್ನು ಎಲ್ಲರನ್ನು ಗೆದ್ದುಕೊಳ್ಳುತ್ತಿದೆ. ಆತ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಸಂವಾದ ನಡೆಸಿದ. ಉಗ್ರಗಾಮಿ ಸಂಘಟನೆಗಳ ಜೊತೆ ಮಾತುಕತೆ ಮಾಡಿದ. ದೌರ್ಜನ್ಯ ನಡೆಸುವ ಮಿಲಿಟರಿ ಅಧಿಕಾರಿಗಳಿಗೆ ಗೇಟ್ ಪಾಸ್ ಕೊಟ್ಟ. ಜನಾಂಗೀಯ ಹಿಂಸಾಚಾರಗಳನ್ನು ಮಟ್ಟ ಹಾಕಿದ, ಯುವಜನತೆಗೆ ಉದ್ಯೋಗ ನೀಡಲು ಮುಂದಾದ. ಅಧಿಕಾರಕ್ಕೆ ಬಂದ ದಿನದಿಂದ ತನ್ನ ಕಚೇರಿ ಬಾಗಿಲನ್ನು ಅವನು ಮುಚ್ಚಲಿಲ್ಲ. ಅಷ್ಟೇ ಅಲ್ಲ, ಆತನ ಕ್ಯಾಬಿನೆಟ್ ನಲ್ಲಿ ಅರ್ಧಕ್ಕರ್ಧ ಮಹಿಳೆಯರೇ ಇದ್ದಾರೆ. ಸುಪ್ರಿಂ ಕೋರ್ಟ್ ನ್ಯಾಯಾಧೀಶರುಗಳಾಗಿ ಮಹಿಳೆಯರೇ ಇರುವಂತೆ ಎಚ್ಚರ ವಹಿಸಿದ್ದಾನೆ. ಆತ  ದೂರದ ವಿದೇಶ ಪ್ರವಾಸವನ್ನು ಮಾಡಲಿಲ್ಲ. ದ್ವೇಷದ ನಾಡಲ್ಲಿ ಶಾಂತಿ, ಕ್ಷಮೆ, ಸಹಬಾಳ್ವೆ ಕಟ್ಟತೊಡಗಿದ. ತನ್ನ ಪಕ್ಕಾ ಎದುರಾಳಿಯನ್ನು ಚುನಾವಣೆ ಆಯೋಗದ ಅಧ್ಯಕ್ಷನನ್ನಾಗಿ ಮಾಡಿದ! ಒಂದೇ ದಿನ ತನ್ನ ದೇಶದ ಮಣ್ಣಲ್ಲಿ 35 ಕೋಟಿ ಮರಗಿಡಗಳ ಸಸಿನೆಟ್ಟು ಹಸಿರು ಮಾಡತೊಡಗಿದ್ದಾನೆ. ಅಲ್ಲೂ ಒಬ್ಬ ಗೋಡ್ಸೆ ಇರುತ್ತಾನೆ. ಪ್ರದಾನಿ ಅಬಿಯ್ ಅಹಮದ್ ಹತ್ಯೆಗೆ ಪ್ರಯತ್ನಿಸುತ್ತಾನೆ. ಈ ಮರಿ ಗಾಂಧಿ ಹೇಳುತ್ತಾನೆ –“Love always wins. Killing others is a defeat. To those who tried to divide us, I want to tell you that you have not succeeded”.

ಇಷ್ಟಾದ ಮೇಲೆ, ಬಹಳ ಮುಖ್ಯವಾಗಿ ಇಥಿಯೊಪಿಯಾದ ಜೊತೆಗೆ ಯಾವಾಗಲೂ ಗಡಿ ತಕರಾರು ಮಾಡುತ್ತ ಬಡಿದಾಡುತ್ತಿದ್ದ ಪಕ್ಕದ ದೇಶ ಎರಿಟ್ರಿಯಾ ಜೊತೆ ಮಾತುಕತೆ ನಡೆಸುತ್ತಾನೆ. ವೈರಿ ದೇಶವನ್ನು ತನ್ನ ಪ್ರೀತಿಯ ವರಸೆಯಲ್ಲಿ ಗೆಲ್ಲುತ್ತಾನೆ. ಅಂತರ್ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಸೂಡಾನ್‍ನಲ್ಲಿ ಶಾಂತಿ ಮಾತುಕತೆ ಮಾಡಿಸುತ್ತಾನೆ. ಏರಿಟ್ರಿಯಾ ಸೋಮಾಲಿಯ ನಡುವೆ ಶಾಂತಿ ಒಪ್ಪಂದ ಮಾಡಿಸುತ್ತಾನೆ. ಕಿನ್ಯಾ ಮತ್ತು ಸೋಮಾಲಿಯಾ ನಡುವೆ ರಾಜಿ ಮಾಡಿಸುತ್ತಾನೆ. ಇಡೀ ಆಪ್ರಿಕಾದ ಬೆಳವಣಿಗೆಗೆ ನೀಲಿ ನಕ್ಷೆ ರೂಪಿಸುತ್ತಾನೆ.
ಇದಕ್ಕೆ ಏನು ಬೇಕು? 56 ಇಂಚಿನ ಎದೆ ಅಲ್ಲ, ಆ ಎದೆ ಒಳಗಿನ ಹೃದಯದೊಳಗೆ ಮಾನವೀಯ ಸ್ಪಂದನೆಗಳು ಬೇಕು, ಅಷ್ಟೆ.

[ಕೃತಜ್ಞತೆ: ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಇಥಿಯೋಪಿಯಾ ಪ್ರಧಾನಿ ಅಭಿ ಅಹಮದ್ ಬಗ್ಗೆ ಮಾಹಿತಿಯನ್ನು ಶ್ರೀಗೋಪಾಲಕೃಷ್ಣ ಕುಂಟಿನಿ ಅವರ ಬರಹದಿಂದ ಆಯ್ದು ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಗೋಪಾಲಕೃಷ್ಣ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.-ದೇಮ]

ಕೃಪೆ: ನಮ್ಮ ಬನವಾಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ. ಶುಕ್ರವಾರ ಹಲವಾರು ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.  ಶುಕ್ರವಾರ (ಡಿಸೆಂಬರ್ 5, 2025) ಮಧ್ಯರಾತ್ರಿಯವರೆಗೆ ಎಲ್ಲಾ...

ದ್ವೇಷ ಭಾಷಣ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ, ಕಠಿಣ ಶಿಕ್ಷೆ ಪ್ರಸ್ತಾವನೆ

ಕರ್ನಾಟಕ ಸಚಿವ ಸಂಪುಟವು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯನ್ನು ಅಂಗೀಕರಿಸಿದೆ, ದ್ವೇಷ ಭಾಷಣಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ವಿಧಿಸುವ ಕಠಿಣ ಶಿಕ್ಷೆಯ ಪ್ರಸ್ತಾವನೆಯನ್ನು ಈ...

BREAKING NEWS: ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ‘ತಾಂತ್ರಿಕ’ ಅಂತ್ಯ: 1777 ಎಕರೆ ಡಿನೋಟಿಫೈಗೆ ಒಪ್ಪಿದ ಸಚಿವ ಸಂಪುಟ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಹೋರಾಟಕ್ಕೆ ಅಂತಿಮವಾಗಿ ತಾಂತ್ರಿಕ ಜಯವೂ ಸಿಕ್ಕಿದೆ. ಡಿಸೆಂಬರ್ 4, ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

ಲೈಂಗಿಕ ಕಿರುಕುಳ ಆರೋಪ: ಪಾಲಕ್ಕಾಡ್ ಶಾಸಕನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರದ ಬೆನ್ನಲ್ಲೇ, ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್ 

ತಿರುವನಂತಪುರಂ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಕೇರಳ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.  ರಾಹುಲ್ ಮಮ್‌ಕೂಟತಿಲ್ ತಮ್ಮ ಶಾಸಕ...

ದಲಿತರು ಒಗ್ಗಟ್ಟಾಗದೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದಲಿತರು ಒಗ್ಗಟ್ಟಾಗದೆ ಇದ್ದರೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ; ನಾವು ನೂರಿನ್ನೂರು ಜನ ಪ್ರತ್ಯೇಕ ಹೋರಾಟ ಮಾಡಿದರೆ ಪ್ರಯೋಜನವಿಲ್ಲ, ಒಂದು ಕರೆ ಕೊಟ್ಟರೆ ಲಕ್ಷಾಂತರ ಜನರು ಸೇರುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ...

ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ; ನಮ್ಮಲ್ಲಿ ಹೊಲೆ-ಮಾದಿಗ ಎಂಬ ಬೇಧವಿಲ್ಲ: ದಸಂಸ ಸಂಚಾಲಕ ಹೆಣ್ಣೂರು ಶ್ರೀನಿವಾಸ್

"ದಲಿತ ಚಳವಳಿ ಯಾವುದೇ ಒಂದು ಜಾತಿಯ ಪರವಾಗಿಲ್ಲ.. ಪೌರ ಕಾರ್ಮಿಕನ ಮಗನನ್ನ ರಾಜ್ಯ ಸಂಚಾಲಕನನ್ನಾಗಿ ಮಾಡಿದೆ. ನಮ್ಮಲ್ಲಿ ಹೊಲೆಯ-ಮಾದಿಗ ಎಂಬ ಬೇಧವಿಲ್ಲ. ಈ ಚಳವಳಿ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡಿದೆ" ಎಂದು ಕರ್ನಾಟಕ...

ಚಳಿಗಾಲದ ಅಧಿವೇಶನ: ಸಂಸತ್ತಿನ ಹೊರಗೆ ‘ವಾಯು ಮಾಲಿನ್ಯದ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳಿಂದ ಪ್ರತಿಭಟನೆ

2025 ರ ಸಂಸತ್ತಿನ ಚಳಿಗಾಲದ ಅಧಿವೇಶನವು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ, ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ಗುರುವಾರ ಲೋಕಸಭೆಯಲ್ಲಿ ಮುಂದೂಡಿಕೆ...

ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಬಂಧಿಸಲ್ಪಟ್ಟು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ....