ಬಂಟ್ವಾಳ: ಬೇಬಿಯಣ್ಣ-ಭಟ್ಟಣ್ಣ ಭಂಡಾಟಕ್ಕೆ ಬಿರುಸು!!

0
ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿರುವ ಬಂಟ್ವಾಳ ಹೇಳಿ ಕೇಳಿ ಸಂಘ ಪರಿವಾರದ ಡಾನ್ ಕಲ್ಲಡ್ಕ ಭಟ್ಟನ ಹೆಡ್‍ಕ್ವಾಟರ್ಸ್. ಹಾಗಾಗಿ ಬಂಟ್ವಾಳ ಎಂಬುದು ಕೋಮು ಕ್ರೌರ್ಯದ ರಣರಂಗದಂತಾಗಿ ಅದ್ಯಾವುದೇ ಕಾಲವಾಗಿ ಹೋಗಿದೆ! ಈ ಕೇಸರಿ ಆಡಂಬೋಲದಲ್ಲಿ ಕಾಂಗ್ರೆಸ್‍ನ ಬಾಯಿಬಡುಕ ಬೇಬಿಯಣ್ಣ, ಯಾನೆ, ರಮಾನಾಥ ರೈ ಸ್ವಂತ ತಾಕತ್ತಿನಿಂದ ಸತತವಾಗಿ ಗೆಲ್ಲುತ್ತ ಭಜರಂಗಿ ಭೂಪರ ಬೆಚ್ಚಿ ಬೀಳಿಸುತ್ತಲೇ ಇದ್ದರು. ಆದರೆ ಈ ಬಾರಿ ರಮಾನಾಥ ರೈ ತನ್ನ ಎಡವಟ್ಟು ಮಾತುಗಾರಿಕೆ ಮಹಿಮೆಯಿಂದ ಸೋತು ಹೈರಾಣಾಗಿದ್ದಾರೆ. ಕಲ್ಲಡ್ಕನ ಕಡೆಯವರು ಹಿಂದುಗಳ ಕೆರಳಿಸಿ ತನ್ನೆಡೆ ಛೂಬಿಟ್ಟಾಗ ಚಾಕಚಕ್ಯತೆಯಿಂದ  ನಿಭಾಯಿಸಲಾಗದ ಹುಂಬ ರೈ ಕ್ಷೇತ್ರದ ಸಾಬರ ಉದ್ಧಾರ ಮಾಡಿದ್ದು ಅಷ್ಟರಲ್ಲೇ ಇದೆ. ಆದರೆ ಬೇಬಿಯಣ್ಣ ಬೇಕಾಬಿಟ್ಟಿ ಹೇಳಿಕೆಗಳು ಆತ ಕಟ್ಟರ್ ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಪರಿವಾರಕ್ಕೆ ಬೇಕಷ್ಟು ಅವಕಾಶ ಮಾಡಿಕೊಟ್ಟಿತ್ತು!
ಈಗ ಬಂಟ್ವಾಳಕ್ಕೆ ಪರಿಹಾರ ಬಂಟ ಕುಟುಂಬದ ರಾಜೇಶ್ ನಾಯ್ಕ್‍ನೆಂಬ ಹಣವಂತ ಮೊದ್ಮಣಿ ಶಾಸಕ -ಸಾಹೇಬ! ಅರ್ಥಾತ್ ದಕ್ಷಿಣ ಕನ್ನಡವೆಂಬ ಹಿಂದುತ್ವ ಪ್ರಯೋಗಶಾಲೆಯ ಮುಖ್ಯ ವಿಜ್ಞಾನಿ ಕಲ್ಲಡ್ಕ ಭಟ್ಟನ ಚೆಡ್ಡಿ ದರ್ಬಾರು ಶುರುವಿಟ್ಟುಕೊಂಡಿದೆ! ಸುಳ್ಳು-ಅಪಪ್ರಚಾರದ ಚಕ್ರವ್ಯೂಹದಲ್ಲಿ ರಮಾನಾಥ ರೈಯನ್ನು ಸಿಲುಕಿಸಿ ಹಣಿದರೂ ಕಲ್ಲಡ್ಕ ಭಟ್ಟ ರಾಜೇಶ್ ನಾಯ್ಕ್‍ನ ಭಜರಂಗಿ ಪುಂಡರ ತಂಡದ ಸೇಡು ಕಡಿಮೆಯಾಗಿಲ್ಲ. ಅನಿರೀಕ್ಷಿತ ಸೋಲಿನ ಹತಾಶೆಯಿಂದ ಕೆರಳಿರುವ ರೈ ದಕ್ಷಿಣ ಕನ್ನಡದ ಎಂಪಿಯಾಗುವ ಹಠ-ಚಟದಿಂದ ಬುಸುಗುಡುತ್ತಿದ್ದಾರೆ. ಇದು ಬೆಂಕಿ ಬ್ರ್ಯಾಂಡಿನ ಎಂಪಿ ನಳಿನ್‍ಕುಮಾರ್‍ಕಟೀಲ್ ಮತ್ತವನ ಮಾಜಿ ಗುರು ಕಲ್ಲಡ್ಕಭಟ್ಟ ಇಬ್ಬರನ್ನೂ ನಡುಗಿಸಿದೆ.
ರೈ ಮತ್ತೆ ತಲೆ ಎತ್ತದಂತೆ ಮಾಡಲು ಸ್ಕೆಚ್ ಹಾಕಿಕೊಂಡಿರುವ  ಸಂಘಪರಿವಾರ ಆತನ ಮಂತ್ರಿಗಿರಿ ಕಾಲದಲ್ಲಿ ಅಕ್ರಮ-ಅವ್ಯವಹಾರ ನಡೆದಿತ್ತೆಂದು ಬೊಬ್ಬಿರಿಯುತ್ತ ದಿನಕ್ಕೊಂದು ಸೀನ್ ಸೃಷ್ಟಿ ಮಾಡುತ್ತಿದೆ; ರೈ ಹಿಂಬಾಲಕರ ದೋನಂಬರ್ ದಂಧೆಗಳನ್ನು ಸಾರ್ವಜನಿಕರೆದುರು ಬಿಡಿಸುತ್ತಿದೆ. ರೈ ಮಾನ ಹರಾಜು ಹಾಕಲೆಂದೇ ಆತನ ಅನಾದಿಕಾಲದ ವೈರಿ ಹರಿಕೃಷ್ಣ ಬಂಟ್ವಾಳ್‍ನನ್ನು ಕಲ್ಲಡ್ಕಭಟ್ರು ಜಿಲ್ಲಾ ಬಿಜೆಪಿ “ಲೌಡ್‍ಸ್ಪೀಕರ್” ಹುದ್ದೆಗೆ ನೇಮಿಸಿದ್ದಾರೆ. ಬಂಟ್ವಾಳದಿಂದ ಒಮ್ಮೆ ಕಾಂಗ್ರೆಸ್ ಶಾಸಕನಾಗಿ ಜೀವನ ಪಾವನಮಾಡಿಕೊಳ್ಳುವ ಕನಸು ಕಾಣುತ್ತಲೇ ಮುದುಕಾಗಿರುವ ಈ ಹರಿಕೃಷ್ಣ ಕಳೆದ ಅಸೆಂಬ್ಲಿ ಎಲೆಕ್ಷನ್ ಹೊತ್ತಲ್ಲಿ ಬಿಜೆಪಿ ಪಾಲಾಗಿರುವಾತ.
ಬೇಬಿಯಣ್ಣ ಎಷ್ಟೆಂದರೂ ಬಂಟ್ವಾಳ ಹಳೆ ಹುಲಿ. ಆತನೂ ಬಿಜೆಪಿ-ಭಜರಂಗಿ ಸಂತಾನದ ಸೋಗಲಾಡಿತನ, ಮರಳುಲೂಟಿ, ಕ್ಲಬ್-ಬಾರ್ ಭಾನ್ಗಡಿ ಹಕೀಕತ್ತು ಹೇಳುವ ಕೀರ್ತನೆಯನ್ನೇ ಆರಂಭಿಸಿದ್ದಾನೆ. ಹೊಂಚಹಾಕಿ ರೈ ಬೆಂಬಲಿಗರು ಚೆಡ್ಡಿಚೋರರ ಮೇಲೆ ಮುಗಿಬಿಳುತ್ತಿದ್ದಾರೆ. “ಅವಕಳ್ಳ-ಇವಕಳ್ಳ” ಆಟ ಜೋರಾಗಿಬಿಟ್ಟಿದೆ. ಮಾಜಿ ಭಜರಂಗಿಯೂ ಹಾಲಿ ಕಾಂಗ್ರೆಸ್ ಕಟ್ಟಾಳುವೂ ಆಗಿರುವ ಲಿಗಾಡಿಯೊಬ್ಬ ತಲ್ವಾರು ಹಿರಿದಾಗಾದ ರಾಜಕೀಯ ತಲ್ಲಣದ ಸದ್ದು-ಸುದ್ದಿ ದಿನಕ್ಕೊಂದು  ಆಯಾಮ ಪಡೆಯುತ್ತಿದೆ. ಕಾಲು ಕೆರೆದು ಜಗಳಕ್ಕೆ ನಿಲ್ಲುವ  ಜಾಯಮಾನದ ಚೆಡ್ಡಿ ಬಳಗ ಮೊದಲು ಕ್ಯಾತೆ ತೆಗೆದಿತ್ತು. ರೈ ಮಂತ್ರಿ-ಶಾಸಕನಾಗಿದ್ದಾಗ ಬಂಟ್ವಾಳದಲ್ಲಿ ದೊಡ್ಡ-ದೊಡ್ಡ ಕರ್ಮಕಾಂಡವೇ ನಡೆದು ಹೋಗಿದೆಯೆಂದು ಬೊಬ್ಬಿರಿದರು ಶಾಸಕ ರಾಜೇಶ್‍ನಾಯ್ಕ್‍ನ ಸಹಚರರು ರೈ ಬಲಗೈ ಬಂಟನೂ ತಾ.ಪಂ ಸದಸ್ಯನೂ ಆಗಿರುವ ಪದ್ಮಶೇಖರ ಜೈನ್ ಅಕ್ರಮ ಜಲ್ಲಿಕಲ್ಲಿನ ಗಣಿಗಾರಿಕೆ ನಡೆಸುತ್ತಾನೆಂದು ಹುಯಿಲೆಬ್ಬಿಸಿದರು. ಹರಿಕೃಷ್ಣ ಬಂಟ್ವಾಳ್ ಮಂಗಳೂರಲ್ಲೊಂದು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸಿಗರು ಕೊಡ್ಯಮಲೆ ರಕ್ಷಿತಾರಣ್ಯದಲ್ಲಿ ಬರೋಬ್ಬರಿ 200 ಕೋಟಿಯ ಜಲ್ಲಿಕಲ್ಲು ತೆಗೆದು ತಿಂದಿದ್ದಾರೆಂದು ಅಲವತ್ತುಕೊಂಡರು. ಪದ್ಮಶೇಖರ ಜೈನ್ ಪ್ರತಿದಿನ 300 ಲೋಡ್ ಜಲ್ಲಿಕಲ್ಲು ತೆಗೆದು ಮಾರಾಟ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ಸುಮ್ಮನಿದ್ದಾರೆಂದು ಭರ್ಜರಿ ಆರೋಪ ಮಾಡಿದರು.
ಬೇಬಿಯಣ್ಣನ ಬೆಟಾಲಿಯನ್ ಸುಮ್ಮನಿರುತ್ತದಾ? ಕಾಂಗ್ರೆಸ್ ಛೋಟಾ-ಮೋಟಾ ನಾಯಕರು ಪ್ರತಿ ಪತ್ರಿಕಾಗೋಷ್ಠಿ ನಡೆಸಿದರು. ಪದ್ಮಶೇಖರ ಜೈನ್ ಅಕ್ರಮ ಮಾಡುವ ಪೈಕಿಯಲ್ಲ; ಆತ ಸುಬಗ; ಆತನ ಕಲ್ಲುಗಣಿಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪರವಾನಗಿಯಿದೆ. ಆತನದು ಪಕ್ಕಾ ಅಧಿಕೃತ ಗÀÀಣಿಗಾರಿಕೆ ಎನ್ನುತ್ತ ಒಂದಿಷ್ಟು ದಾಖಲೆ ಬಿಡುಗಡೆ ಮಾಡಿದ್ದಾರೆ. ಬೇಬಿಯಣ್ಣ ಹೆಸರು ಕೆಡಿಸಿ ಬಿಜೆಪಿ ಪರಿವಾರದ ದೊರರೆಗಳ ಕೃಪಾಕಟಾಕ್ಷ ಪಡೆಯಲು ಹವಣಿಸುತ್ತಿರುವ ಹರಿಕೃಷ್ಣನ ಬಾಲಕ್ಕೇ ಬೆಂಕಿಯಿಡಲು ಕಾಂಗ್ರೆಸ್‍ನವರು ಪ್ಲಾನು ಹಾಕಿದ್ದಾರೆ. ಹರಿಕೃಷ್ಣನ ಹತ್ತಿರದ ಬಂಧು ನಡೆಸುವ ಕ್ಲಬ್ ಮೇಲೆ ಪೊಲೀಸ್ ದಾಳಿ ನಡೆಯುವಂತೆ ತಂತ್ರ ಮಾಡುತ್ತಾರೆ. ಇದರಿಂದ ತತ್ತರಿಸಿದ ಬಿಜೆಪಿ ಬಣ ಶಾಸಕ ರಾಜೇಶ್ ನಾಯ್ಕ್‍ನ ಬಲ ಬಳಸಿ ಕಾಂಗ್ರೆಸ್ ಮುಖಂಡನ ಕ್ಲಬ್ ಮೇಲೆ ರೇಡು ಬೀಳುವಂತೆ ಮಾಡುತ್ತದೆ.
ಆ ನಂತರ ಶುರುವಾಗಿದ್ದೇ ಸ್ಯಾಂಡ್‍ವಾರ್! ಬಂಟ್ವಾಳದಲ್ಲಿ ಹರಿವ ನೇತ್ರಾವತಿ ನದಿಯಲ್ಲಿ ಜೆಸಿಬಿ, ಹಿಟಾಚಿ ಮೂಲಕ ನಡೆಯುವ ಆರ್ಭಟದ ಅಕ್ರಮ ಮರಳುಗಾರಿಕೆ ಬಿಜೆಪಿ-ಕಾಂಗ್ರೆಸ್ ಮೇಲಾಟಕ್ಕೆ “ವಸ್ತು”ವಾಗಿದೆ!! ಬಿಜೆಪಿಗರು ಮರಳು ದರೋಡೆ ರಮಾನಾಥ ರೈ ಆಪ್ತರೇ ಮಾಡುತ್ತಿದ್ದಾರೆಂದು ಕೂಗಾಡಿದರೆ, ಕಾಂಗ್ರೆಸಿಗರು ಶಾಸಕ ರಾಜೇಶ್ ನಾಯ್ಕ್‍ನ ಖಾಸಾ ಆದ್ಮಿಗಳೇ ಮರಳುದಂಧೆಯ ಕಿಂಗ್‍ಪಿನ್‍ಗಳೆಂದು ಹೇಳಿಕೆ ಒಗಾಯಿಸಿದರು. ಈ ರಾಜಕೀಯ ಜಿದ್ದಾಜಿದ್ದಿಯ ಹೋಮಕ್ಕೆ ಈಚೆಗೆ ಕುಸಿದ  ಮೂಲರಪಟ್ನ ಸೇತುವೆ ಪ್ರಕರಣ ಹವಿಸ್ಸಾಗಿದೆ ಜಗಳ್‍ಬಂದಿ ತಾರಕ ತಲುಪಿದೆ. ರಮಾನಾಥ ರೈಗಳ ಶಿಷ್ಯರ ಕಳ್ಳ ಮರಳು ದಂಧೆಯ ಒತ್ತಡ ತಡೆಯಲಾಗದೆ ಮೂಲರಪಟ್ನ ಸೇತುವೆ ಸೊಂಟ ಮುರಿದುಕೊಂಡು ಬಿತ್ತೆಂದು ಶಾಸಕ ನಾಯ್ಕ್‍ನ ಕಡೆಯವರ ವಾದವಾದರೆ, ರೈ “ವಕೀಲರ”ತರ್ಕದಂತೆ ಬಿಜೆಪಿ-ಭಜರಂಗಿಗಳ ಸ್ಯಾಂಡ್ ಮಾಫಿಯಾದ ಲಾರಿಗಳೇ ಮೂಲರಪಟ್ನ ಸೇತುವೆ ಕುಸಿಯಲು ಕಾರಣ!
ತಮಾಷೆಯೆಂದರೆ, ಬಂಟ್ವಾಳದ ಅಕ್ರಮ ಮರಳುಗಾರಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಖದೀಮರು ತೊಡಗಿಕೊಂಡಿದ್ದಾರೆ. ಎರಡೂ ಪಕ್ಷದ ಲೂಟಿಕೋರರು ಮೌನ ಒಪ್ಪಂದ ಮಾಡಿಕೊಂಡು ಪ್ರತಿದಿನ ನೂರಾರು ಲೋಡು ಮರಳೆತ್ತಿ ಮುಕ್ಕಿದ್ದಾರೆ. ಕಾನೂನುಬಾಹಿರವಾಗಿ ಯಂತ್ರಗಳನ್ನು ನದಿಯಲ್ಲಿಟ್ಟು ಮರಳು ತೆಗೆದಿದ್ದಾರೆ. ನೇತ್ರಾವತಿ ಒಡಲು ಬಗೆದು ದುಡ್ಡು ಮಾಡುವ ಪಾತಕದಲ್ಲಿ ಸ್ವಯಂಘೋಷಿತ ಬಿಜೆಪಿ ಪರಿವಾರದವರೇನೂ ಹಿಂದೆಬಿದ್ದಿಲ್ಲ. ರಾಜಕೀಯ ಅಂಗಳದಲ್ಲಿ ವೈರಿಗಳಂತೆ ಪೋಸು ಕೊಡುವ ಈ ಕಾಂಗ್ರೆಸ್-ಬಿಜೆಪಿ ಭಂಡರು ಮರಳು ಮಾಫಿಯಾ ಬಿಸ್ನೆಸ್ ರಂಗದಲ್ಲಿ ಭಾಯಿ-ಭಾಯಿ. ಆಗ ರೈ ಬಿಜೆಪಿಗರಿಗೆ ಕಡಿವಾಣ ಹಾಕಲಿಲ್ಲ; ಈಗ ಬಿಜೆಪಿ ಎಮ್ಮೆಲ್ಲೆ ರಾಜೇಶ್ ನಾಯ್ಕ್ ಕಾಂಗ್ರೆಸ್ ಕಳ್ಳರ ತಂಟೆಗೆ ಹೋಗುತ್ತಿಲ್ಲ. ದುರಂತವೆಂದರೆ, ಸಂಬಂಧಿಸಿದ ಅಧಿಕಾರಿಗಳು ಸಿಕ್ಕಷ್ಟು ಕಿಸೆಗಿಳಿಸಿ ಆರಾಮಾಗಿದ್ದಾರೆ. ನೇತ್ರಾವತಿ ನದಿ ಪಾತ್ರದ ಮರಳು ಖಾಲಿಯಾಗುತ್ತಲೇ ಇದೆ.
ಬಂಟ್ವಾಳದ ಶಾಂತಿ-ಸಾಮರಸ್ಯದ ಬದುಕಿಗಾಗಿ ಎಂದೂ ಒಂದಾಗದೆ ಮುಖಾಮುಖಿ ನಿಂತು ಧರ್ಮಕಾರಣ ಮಾಡುವ ಈ ಬಿಜೆಪಿ-ಕಾಂಗ್ರೆಸ್ ದ್ರೋಹಿಗಳು ಮರಳುಗಾರಿಕೆಯೇ ಮುಂತಾದ ಸ್ವಾರ್ಥದ ಕಳ್ಳ ವ್ಯವಹಾರದಲ್ಲಿ ಸಾಮರಸ್ಯ ತೋರಿಸುತ್ತಿದ್ದಾರೆ. ಇದೆಲ್ಲ ಅರ್ಥವಾಗದ ಅಮಾಯಕರು ಹಿಂದುತ್ವ-ಇಸ್ಲಾಮ್ ತತ್ವ ಎನ್ನುತ್ತ ಕಾಲಾಳುಗಳಂತೆ ಕಾದಾಡಿ ಸಾಯುತ್ತಿದ್ದಾರೆ. ಆ ಸಾವೇ ಬಂಡವಾಳ ಮಾಡಿಕೊಂಡು ಅಯೋಗ್ಯರು-ಅನಾಹುತಕಾರಿಗಳು ಎಂಪಿ-ಎಮ್ಮಲ್ಲೆಯಾಗುತ್ತಿದ್ದಾರೆ. ಮತ್ಯಾರೋ ಈ ಹೇತ್ಲಾಂಡಿ ಜನಪ್ರತಿನಿಧಿಗಳ ಸೂತ್ರ ಆಡಿಸುತ್ತ ಬಿಲದಿಂದಲೇ ಬಂಟ್ವಾಳದ ಆಳ್ವಿಕೆ ನಡೆಸಿದ್ದಾರೆ.
-ನಹುಷ

LEAVE A REPLY

Please enter your comment!
Please enter your name here