ಈಶಾನ್ಯ ರಾಜ್ಯಗಳ ಪೈಕಿ ಮೊದಲ ಬಾರಿಗೆ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಅಂತ್ಯಗೊಂಡಿರುವ ಅಸ್ಸಾಂ ಅಕ್ಷರಶಃ ಕುದಿಯತೊಡಗಿದೆ. ಪ್ರತಿಭಟನೆಗಳನ್ನು ಹತ್ತಿಕ್ಕುವ ಸಲುವಾಗಿ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತ ಮಾಡಿದೆ. ರಾಜಧಾನಿ ಗುವಾಹಟಿ ಸೇರಿದಂತೆ ರಾಜ್ಯದ ಪ್ರಮುಖ ನಗರಳಲ್ಲಿ ಭಾರತೀಯ ಸೇನಾಪಡೆ, ಅರೆ ಸೇನಾಪಡೆಗಳು ಮತ್ತು ಪೊಲೀಸರನ್ನು ನಿಯೋಜನೆ ಮಾಡಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಕರ್ಪ್ಯೂ ವಿಧಿಸಿರುವ ನಡುವೆಯೇ ಪ್ರತಿಭಟನೆಗಳು ತೀವ್ರಗೊಂಡಿವೆ. ಸಾವಿರಾರು ಸಂಖ್ಯೆಯಲ್ಲಿ ರಸ್ತೆಗೆ ಇಳಿದಿರುವ ಪ್ರತಿಭಟನಾಕಾರರು ಟೈರ್ ಗಳಿಗೆ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸೇನೆ ಗುಂಡಿನ ದಾಳಿ ನಡೆಸಿದ್ದು ಇಬ್ಬರು ಅಸುನೀಗಿದ್ದಾರೆ. ನಾಲ್ವರು ಗಾಯಗೊಂಡಿದ್ದು ಪರಿಸ್ಥಿತಿ ಬಿಗಡಾಯಿಸಿದೆ.
ಅಸ್ಸಾಂ ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪೌರತ್ವ ನೋಂದಣಿ ನಡೆದಾಗ 40 ಲಕ್ಷ ಮಂದಿ ಪಟ್ಟಿಯಿಂದ ಹೊರಗೆ ಉಳಿದಿದ್ದರು. ಇದು ತಾರತಮ್ಯದಿಂದ ಕೂಡಿದೆ ಎಂದು ಪ್ರಶ್ನಿಸಿ ಹಲವರು ಸುಪ್ರೀಂಕೋರ್ಟ್ ಮೊರೆ ಹೋದರು. ಪರಿಣಾಮ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಎರಡನೇ ಬಾರಿಗೆ ಎನ್.ಸಿ.ಆರ್ ನಡೆಯಿತು. ಈ ಪಟ್ಟಿಯಿಂದಲೂ 19 ಲಕ್ಷ ಹೊರಗುಳಿದರು. ಇಷ್ಟೆಲ್ಲಾ ಆದಾಗಲೂ ಮೌನವಹಿಸಿದ್ದ ಅಸ್ಸಾಂ ಜನತೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ ನ ಉಭಯ ಸದನಗಳಲ್ಲಿ ಅಂಗೀಕರಿಸಿ ಕಾಯ್ದೆಯಾಗಿ ರೂಪಿಸುವ ಸಂದರ್ಭದಲ್ಲಿ ಇದರಿಂದ ಕೆರಳಿ ಅಸ್ಸಾಂ ಜನತೆ ಬೀದಿಗೆ ಇಳಿದಿದ್ದಾರೆ.
ಪ್ರತಿಭಟನೆಯಲ್ಲಿ ವಕೀಲರು, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯಕರ್ತರು, ವೈದ್ಯರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಭಾಗವಹಿಸಿದ್ದು ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಂಡಿದೆ. ಅಷ್ಟೇ ಅಲ್ಲ ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ, ಕಾನೂನುಬಾಹಿರ, ತಾರತಮ್ಯದಿಂದ ಕೂಡಿದೆ. ಧರ್ಮಾಧಾರಿತವಾಗಿದೆ ಎಂದು ಸಂಸತ್ ಒಳಗೂ ಮತ್ತು ಹೊರಗೂ ಪ್ರತಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸತೊಡಗಿದೆ. ಚಳಗಾಲದ ಅಧಿವೇಶನದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಭಾರೀ ಸದ್ದು ಮಾಡಿದ್ದು ಕಲಾಪವನ್ನು ನುಂಗಿ ಹಾಕಿದೆ. .
ಅಸ್ಸಾಂನಲ್ಲಿ ಪರಿಸ್ಥಿಗೆ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಶಿಲ್ಲಾಂಗ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕರ್ಪ್ಯೂ ವಿಧಿಸಲಾಗಿದೆ. ಕರ್ಪ್ಯೂ ವಿಧಿಸಿರುವ ನಡುವೆಯೇ ರಾತ್ರಿಯೂ ಪ್ರತಿಭಟನೆಗಳು ನಡೆದಿವೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವುದರಿಂದ ಶಾಲಾ-ಕಾಲೇಜುಗಳಿಗೆ ಡಿಸೆಂಬರ್ 22ರವರೆಗೆ ರಜೆ ಘೋಷಿಸಿದೆ. ತ್ರಿಪುರ, ಪಶ್ಚಿಮಬಂಗಾಳ ಮೊದಲಾದ ಅಂತರ್ ರಾಜ್ಯಗಳ ರೈಲು ಸೇವೆಯನ್ನು ಸ್ಥಗಿತೊಳಿಸಲಾಗಿದೆ. ವಿಮಾನಯಾನವೂ ಸ್ಥಬ್ದವಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಸ್ಸಾಂ ರಾಜ್ಯದ 10 ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ, ಎಸ್.ಎಂ.ಎಸ್ ಸೇವೆಯವನ್ನು ಸರ್ಕಾರ ಸ್ಥಗಿತಗೊಳಿಸಿದೆ. ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುವುದು ಮತ್ತು ಶಾಂತಿಯನ್ನು ಕದಡುವುದನ್ನು ತಡೆಯಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಇದು ಅನಿವಾರ್ಯ ಎಂದು ಸರ್ಕಾರ ಹೇಳಿದೆ.
ಮೊನ್ನೆ ತಾನೆ ರಾಜ್ಯಸಭೆಯಲ್ಲಿ ಬಹುಮತದಿಂದ ಅಂಗೀಕರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ಅಕ್ಟೋಬರ್ 31, 2014 ರೊಳಗೆ ದೇಶಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಪಾರ್ಸಿ, ಜೈನ, ಬುದ್ದಿಸ್ಟ್ ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಲ್ಲಿ ಮುಸ್ಲಿಂ ಸಮುದಾಯದ ಹೆಸರನ್ನು ಉಲ್ಲೇಖಿಸದೇ ಅವರನ್ನು ಪೌರತ್ವದಿಂದ ಹೊರಗಿಡುವ ಪ್ರಯತ್ನ ಸಂವಿಧಾನ ನೀಡುರುವ ಮೂಲಭೂತ ಹಕ್ಕುಗಳಿಗೆ ವಿರುದ್ದವಾಗಿದ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರ್ ಲೋಕಸಭೆಯಲ್ಲಿ ಹೇಳಿದ್ದು ಇದರ ಬಗ್ಗೆ ಚರ್ಚೆ ನಡೆಯಬೇಕಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೆ ದಕ್ಷಿಣ ರಾಜ್ಯಗಳಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಅಸ್ಸಾಂ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಇದೀಗ ದಕ್ಷಿಣಕ್ಕೂ ಹಬ್ಬಿದೆ. ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪ್ರತಿಭಟನೆ ನಡೆಸಿ ಪೌರತ್ವ ಕಾಯ್ದೆಗೆ ತನ್ನ ವಿರೋಧ ದಾಖಲಿಸಿದೆ. ಚೆನ್ನೈಸಯಿದಾಪೇಟೆಯಲ್ಲಿ ಯುವ ನೇತಾರ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಆಡಳಿತಾರೂಢ ಎಐಎಡಿಎಂಕೆ ತಮಿಳು ವಿರೋಧಿ, ಅಲ್ಪಸಂಖ್ಯಾತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಡಿಎಂಕೆ ಆರೋಪಿಸಿದೆ. ಇದೇ ವೇಳೆ ಡಿಎಂಕೆ ಮುಖ್ಯಸ್ಥ ಡಿಸೆಂಬರ್ 17ರಮದು ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆನೀಡಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ಕೇರಳದಲ್ಲಿ ಸಿಎಬಿ ಮತ್ತು ಎನ್ಆರ್ಸಿಗಳನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲೂ ಪ್ರತಿಭಟನೆಗಳು ಶುರುವಾಗಿವೆ. ಉತ್ತರ ಕರ್ನಾಟಕದ ಕಲಬುರುಗಿಯಲ್ಲಿ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್.ಸಿ.ಆರ್ ಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಪ್ರತಿಭಟನೆಗಳು ಇನ್ನಷ್ಟು ತೀವ್ರಗೊಳ್ಳಲಿವೆ ಎಂಬ ಮುನ್ಸೂಚನೆ ದೊರೆತಿದೆ.
ಅಸ್ಸಾಂ ಒಪ್ಪಂದ 1987ರಲ್ಲಿ ಉಲ್ಲೇಖಿಸಿರುವಂತೆ 1971 ಮಾರ್ಚ್ 24ರ ಮಧ್ಯರಾತ್ರಿಯೊಳಗೆ ವಲಸೆ ಬಂದಿರುವವರು ಈ ದೇಶದಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದೆ. ಇದೇ ಮಾದರಿಯನ್ನು ದೇಶಾದ್ಯಂತ ಅನುಸರಿಸಲಾಗುವುದೇ ಎಂಬ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಸ್ಪಷ್ಟಪಡಿಸಿಲ್ಲ. ಆದರೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಪೌರತ್ವ ನೋಂದಣಿ ಮತ್ತು ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕು ಎಂದು ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ ಜೆಡಿಯು ತನ್ನ ನಿಲುವನ್ನು ಪರಿಶೀಲಿಸುವಂತೆಯೂ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಪಶ್ಚಿಮ ಬಂಗಾಳ, ಕೇರಳ ಮತ್ತು ಪಂಜಾಬ್ ರಾಜ್ಯಗಳು ಸಂವಿಧಾನ ವಿರೋಧಿ ಎನ್.ಸಿ.ಆರ್ ಅನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಹೀಗಾಗಿ ಬಿಜೆಪಿ ಯಾವ ಮಾರ್ಗ ಅಸುಸರಿಸಲಿದೆ ಎಂಬುದನ್ನು ನೋಡಬೇಕು.