ಬಿಜೆಪಿಯ ಅಮಿತ್ ಶಾರನ್ನು ಕಂಡರೆ ಆಂಧ್ರದ ವೈಎಸ್ಆರ್ಪಿ ಪಕ್ಷಕ್ಕೆ ಭಯ. ಆದರೆ ಅಮಿತ್ ಶಾ ಎಂದರೆ ನನಗೆ ಅಮಿತವಾದ ಗೌರವ ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಚಿತ್ರನಟ ಪವನ್ ಕಲ್ಯಾಣ್ ತಿಳಿಸಿದ್ದಾರೆ.
ಇತ್ತೀಚಿಗೆ ತಿರುಪತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ‘ನನಗೆ ಬಿಜೆಪಿಯೊಂದಿಗೆ ಹೆಚ್ಚಿನ ಭಿನ್ನಾಭಿಪ್ರಾಯಗಳಿಲ್ಲ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡುವುದೊಂದನ್ನು ಬಿಟ್ಟು’ ಎಂದಿದ್ದಾರೆ.
ನಾನು ಯಾವಾಗ ಬಿಜೆಪಿಯಿಂದ ದೂರ ಆದೆ? ಬಿಜೆಪಿಗೆ ಹತ್ತಿರವಾಗಿಯೇ ಇದ್ದೇನೆ. ಅಮಿತ್ ಶಾ ಜೊತೆ ಪ್ರಧಾನಿ ಮೋದಿಯವರನ್ನು ಕಂಡರೆ ನನಗಿಷ್ಟ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ಜಿವಿಎಲ್ ನರಸಿಂಹರಾವ್ರವರು ಪವನ್ ಕಲ್ಯಾಣ್ ಬಿಜೆಪಿ ಬರುವುದಾದರೆ ಸ್ವಾಗತಿಸುತ್ತೇವೆ, ಅವರು ತಮ್ಮ ಜನಸೇನಾ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬಹುದು ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.
ಜನಸೇನಾ ಪಕ್ಷದ ಪವನ್ ಕಲ್ಯಾಣ್ ಇತ್ತೀಚೆಗೆ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿ ಹೊರಬಂದ ನಂತರ ಅವರು ಬಿಜೆಪಿ ಸೇರಿಲಿದ್ದಾರೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಸಿನೆಮಾ ರಂಗದಿಂದ ರಾಜಕೀಯಕ್ಕೆ ಬಂದು ಹಲವು ಯುವಜನರಲ್ಲಿ ಹೊಸ ಕನಸುಗಳನ್ನು ಬಿತ್ತಿದ್ದ ತೆಲುಗು ನಟ ತನ್ನ ಅಣ್ಣನ ಹಾದಿಯನ್ನೇ ಹಿಡಿದಂತೆ ಕಾಣಿಸುತ್ತಿದೆ. ಈ ಹಿಂದೆ ತೆಲುಗು ಪವನ್ ಕಲ್ಯಾಣ್ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಪ್ರಜಾರಾಜ್ಯ ಎನ್ನುವ ಪಕ್ಷವನ್ನು ಕಟ್ಟಿ ನಂತರ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು.
ಅದೇ ರೀತಿ ಈಗ ಅವರ ಸಹೋದರ ಪವನ್ ಕಲ್ಯಾಣ್ ಜನಸೇನಾ ಪಕ್ಷಕಟ್ಟಿದು ಇತ್ತಿಚಿನ ಇವರ ನಡೆಗಳು ಬಿಜೆಪಿಯಲ್ಲಿ ವಿಲೀನವಾಗುವ ರೀತಿಯಲ್ಲಿ ಕಾಣಿಸುತ್ತಿವೆ ಎಂದು ಹಲವರು ವಿಶ್ಲೇಷಿಸಿದ್ದಾರೆ.
ಈ ವರ್ಷ ನಡೆದ ಆಂಧ್ರ ಪ್ರದೇಶ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಸಿ.ಪಿ.ಐ ಮತ್ತು ಸಿ.ಪಿ.ಎಮ್ ಜೊತೆ ಒಕ್ಕೂಟದಲ್ಲಿ ಪವನ್ ಕಲ್ಯಾಣ್ರವರ ಜನಸೇನಾ ಕೂಡ ಸೇರಿಕೊಂಡಿತ್ತು.
ಪವನ್ ಕಲ್ಯಾಣ ಮಾತುಗಳಿಗೆ ಪ್ರತಿಕ್ರಿಯಿಸಿರುವ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಪಿ.ಮಧು ಇದು ಅವಕಾಶವಾದಿತನದ ಪರಕಾಷ್ಟೆಯಾಗಿದೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಅಮಿತ್ ಷಾ ಮತ್ತು ಬಿಜೆಪಿ ಪಕ್ಷವನ್ನು ಬೆಂಬಲಿಸುವ ಮೂಲಕ ನಿರುಂಕುಶತ್ವವನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.