Homeಅಂತರಾಷ್ಟ್ರೀಯ17 ವರ್ಷದ ಹುಡುಗಿ ನೋವಾ ದಯಾಮರಣ ಪಡೆದು ಸಾವನಪ್ಪಿದ್ದು ತಿಳಿದರೆ ಬೇಸರಗೊಳ್ಳುತ್ತೀರಿ...

17 ವರ್ಷದ ಹುಡುಗಿ ನೋವಾ ದಯಾಮರಣ ಪಡೆದು ಸಾವನಪ್ಪಿದ್ದು ತಿಳಿದರೆ ಬೇಸರಗೊಳ್ಳುತ್ತೀರಿ…

- Advertisement -
- Advertisement -

| ಮುತ್ತುರಾಜು |

ಕಳೆದ 15 ವರ್ಷಗಳ ಹಿಂದೆ ಕರ್ನಾಟಕದ ಗ್ರಾಮವೊಂದರಲ್ಲಿ ನಡೆದಿದ್ದ ಘಟನೆ ಇದು. ಶಾಲೆ ಮುಗಿಸಿಕೊಂಡು ಬಂದಿದ್ದ 8 ವರ್ಷದ ಬಾಲಕಿ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಪರಿಚಸಯಸ್ಥನೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದಳು. ಆ ಘಟನೆ ನಡೆದ ನಂತರ ಆ ಊರಿನ ಜನರೆಲ್ಲಾ ಆ ಘಟನೆ ಬಗ್ಗೆ ಮಾತನಾಡತೊಡಗಿದರು. ಅವಳ ತಾಯಿ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಮಾನ ಮರ್ಯಾದೆಯ ಹೆಸರೇಳಿ ದೂರು ಕೊಡುವುದನ್ನು ಜನರೇ ತಡೆದರು. ಆದರೆ ಯಾರ ಮಾತಿಗೂ ಕಿವಿಗೊಡದ ಅವರು ದೂರು ನೀಡಿದರು. ಪೊಲೀಸರು ಆರೋಪಿಯನ್ನು ಬಂಧಿಸಿ, ಕೆಲ ದಿನಗಳ ನಂತರ ಬಿಡುಗಡೆಗೊಳಿಸಿದರು. ಆದರೆ ಆ ಬಾಲಕಿಯ ಬಗ್ಗೆ ಅನುಕಂಪದ ಹೆಸರಿನಲ್ಲಿ ಕಿರಿಕಿರಿ ಉಂಟಾಗುವಂತಹ ನುಡಿ, ಅವಳ ತಾಯಿ ಮಾಡಿದ ನಿರ್ಧಾರಕ್ಕೆ ಕೊಂಕು ಮಾತುಗಳು ಸುತ್ತಮುತ್ತಲಿನವರಿಂದಲೇ ಬರುತ್ತಲೇ ಇದ್ದವು. ಕೊನೆಗೆ ಆ ಬಾಲಕಿಯನ್ನು ಬೇರೆ ಊರಿನಲ್ಲಿಟ್ಟು ಓದಿಸಬೇಕಾಯಿತು. ನಂತರದ ಅವಳ ಜೀವನ ಸರಿ ಹೋಗಲು ಸುಮಾರು 15 ವರ್ಷಗಳೇ ಬೇಕಾಯಿತು.

ನೋವಾ ದಯವಿಟ್ಟು ಕ್ಷಮಿಸಿ ಬಿಡು

ಎಷ್ಟೇ ಪ್ರಯತ್ನಿಸಿದರೂ ಸ್ಮೃತಿ ಪಟಲದಿಂದ ಮರೆಯಾಗದ ಈ ಘಟನೆ ಮತ್ತೆ ನೆನಪಾದದ್ದು ನೆದರ್ ಲೆಂಡ್ ನ ನೋವಾ ಪೊಥವನ್ ಎಂಬ ಯುವತಿಯ ದಯಾಮರಣದಿಂದ.

ಬಾಲ್ಯದಲ್ಲಿಯೇ ಅತ್ಯಾಚಾರಕ್ಕೊಳಗಾಗಿ ಖಿನ್ನತೆ ಹಾಗು ಮಾನಸಿಕವಾಗಿ ತೊಳಲಾಟದಲ್ಲಿದ್ದ 17 ವರ್ಷದ ಯುವತಿ ನೋವಾ ಪೊಥವನ್ ಕೊನೆಗೂ ದಯಾಮರಣ ಪಡೆದು ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನೆದರ್ಲೆಂಡ್ಸ್ ನಲ್ಲಿ ನಡೆದಿದೆ.

ಈ ಕುರಿತು ಸಾವಿಗೂ ಒಂದು ದಿನ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ನೋವಾ ‘ನಾನು ಇನ್ನು ಹತ್ತು ದಿನಗಳಲ್ಲಿ ಸಾಯುತ್ತೇನೆ. ಕೆಲ ವರ್ಷಗಳ ನನ್ನ ನೋವು ಕೊನೆಗೊಳ್ಳಲಿದೆ. ಹಲವು ದಿನಗಳಿಂದ ನಾನು ಆಹಾರ ಸೇವನೆಯನ್ನು ನಿಲ್ಲಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿದ್ದವು.

11 ನೇ ವಯಸ್ಸಿನಲ್ಲಿ ಶಾಲೆಯಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ನೋವಾ ಪೊಥವನ್, ಎರಡು ವರ್ಷಗಳ ನಂತರ ಮತ್ತೆ ಇಬ್ಬರು ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದಳು. ಈ ಘಟನೆಯು ಅವಳನ್ನು ಮಾನಸಿಕವಾಗಿ ಆಘಾತಗೊಳಿಸಿತ್ತು. ಆ ನೋವಿನಿಂದ ಹೊರಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪದೇ ಪದೇ ಕಾಡುವ ಆ ಘಟನೆಗಳಿಂದ ಮುಕ್ತಿ ಪಡೆಯಲು ಕಡೆಗೆ ಇದ್ದುದ್ದು ಸಾವು ಮಾತ್ರ ಎಂದು ನಿರ್ಧರಿಸಿ ಇಹಲೋಕ ತ್ಯಜಿಸಿದ್ದಾಳೆ. ನಮ್ಮ ಭಾರತದಲ್ಲಿ ದಯಾಮರಣ ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ಆದರೆ ನೆದರ್ ಲ್ಯಾಂಡ್ ನಲ್ಲಿ ಅದಕ್ಕೆ ಅವಕಾಶವಿದೆ.

ಘಟನೆಯ ನಂತರದ ದಿನಗಳಲ್ಲಿ ಅವಳು ಬರೆದ ಡೈರಿ ಆತ್ಮಕಥನವಾಗಿ ಪುಸ್ತಕ ರೂಪ ಪಡೆದಿದೆ. ಲೈಂಗಿಕ ದಾಳಿಗೊಳಗಾದ ನಂತರ ಅವಳು ಅನುಭವಿಸಿದ ಮಾನಸಿಕ ಒತ್ತಡ, ಖಿನ್ನತೆ, ಘಟನೆಯಿಂದ ಹೊರಬರಲು ತನ್ನವರಿಂದ ಬಯಸಿದ ಮಾನಸಿಕ ಬೆಂಬಲ ಇವೆಲ್ಲವನ್ನೂ ಪುಸ್ತಕದಲ್ಲಿ ವಿವರಿಸಿದ್ದಾಳೆ.

ನೆದರ್ ಲೆಂಡ್ ನಲ್ಲಿ ನಡೆದಿರುವ ಘಟನೆಗೂ ಕರ್ನಾಟಕದಲ್ಲಿ ನಡೆದಿರುವ ಘಟನೆಗೂ ಏನು ಸಂಬಂಧ ಎಂದುಕೊಳ್ಳುತ್ತಿದ್ದೀರಾ? ದೇಶ ಯಾವುದಾದರೇನು ಲೈಂಗಿಕ ದೌರ್ಜನ್ಯದಂತಹ ಅಮಾನವೀಯ ಹಲ್ಲೆಗೆ ಎಲ್ಲೆಯಿಲ್ಲ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಘಾತಕ್ಕೊಳಗಾಗಿರುತ್ತಾರೆ. ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಸಂತ್ರಸ್ಥೆಯ ಕುಟುಂಬ, ಅಕ್ಕ ಪಕ್ಕದ ಮನೆಯವರು, ಸುತ್ತಮುತ್ತಲ ಸಮಾಜ ಎಲ್ಲರೂ ಒಂದಾಗಿ ಪ್ರೀತಿಯ ಹಾಗೂ ವಿಶ್ವಾಸದ ಸಾಂತ್ವಾನ ಹೇಳಿದಾಗ, ಬದುಕಿನ ಹೊಸ ಭರವಸೆ ತುಂಬಿದಾಗ ಮಾತ್ರ ಸಂತ್ರಸ್ಥೆ ಅದರಿಂದ ಹೊರಬರಲು ಸಾಧ್ಯ. ಇಲ್ಲವಾದರೇ ತನ್ನದಲ್ಲದ ತಪ್ಪಿಗೆ ಇಡೀ ಜೀವನ ಆ ಘಟನೆಯಿಂದ ಮಾನಸಿಕವಾಗಿ ಖಿನ್ನತೆ ಅನುಭವಿಸುತ್ತಲೇ ಇರುತ್ತಾರೆ. ಆದರೆ ನೋವಾಳ ನೋವು ಕೊನೆಯಾದದ್ದು ಸಾವಿನ ಮೂಲಕ ಎಂಬುದು ನೋವಿನ ಸಂಗತಿ.

ನೋವಾಳ ಘಟನೆ ಅತ್ಯಾಚಾರದ ನಂತರ ಸಂತ್ರಸ್ಥೆಗೆ ಒದಗಿಸಬೇಕಾದ ದೈಹಿಕ ಹಾಗೂ ಮಾನಸಿಕ ಚಿಕಿತ್ಸೆಯ ಬಗ್ಗೆ ಪ್ರಶ್ನೆಯೆತ್ತುತ್ತದೆ. ಜೊತೆಗೆ ಅತ್ಯಾಚಾರವನ್ನು ಹೇಗೆ ನೋಡಬೇಕು ಎಂಬುದನ್ನು ಚರ್ಚಿಸುತ್ತದೆ. ಅತ್ಯಾಚಾರ ನಡೆದು ಮೂರ್ನಾಲ್ಕು ವರ್ಷಗಳೇ ಕಳೆದಿದ್ದರೂ ಆ ಘಟನೆಯಿಂದ ಹೊರಬರಲಾರದೇ ಮಾನಸಿಕವಾಗಿ ಖಿನ್ನತೆ ಅನುಭವಿಸಿ ಕೊನೆಗೆ ಬದುಕಲು ಆಸೆಯೇ ಇಲ್ಲ ಎಂದು ದಯಾಮರಣ ಕೋರಿರುವುದು ದುರಂತವೇ ಸರಿ.

ಒಂದು ಅತ್ಯಾಚಾರ ಘಟನೆ ನಡೆದರೆ ಅದರಲ್ಲಿ ತಪ್ಪು ಅತ್ಯಾಚಾರವೆಸಗಿದವನದೇ ಎಂಬುದನ್ನು ಒತ್ತಿ ಒತ್ತಿ ಹೇಳಬೇಕಿದೆ. ಜೊತೆಗೆ ಮಾನ ಹೋಗುವುದು ಅಂದರೆ ಆತನದೇ ಹೊರತು ಸಂತ್ರಸ್ತೆಯದಲ್ಲ ಎಂಬುದನ್ನು ಈ ಸಮಾಜದಲ್ಲಿ ಸಾರಿ ಹೇಳಬೇಕಿದೆ. ಶೀಲ, ಪಾವಿತ್ರ್ಯ ಎಂಬುದು ಹೆಣ್ಣಿಗೆ ಮಾತ್ರ ಏಕೆ? ಅದೆಲ್ಲ ಕೇವಲ ಪೊಳ್ಳು ಮಾತು ಎಂಬುದನ್ನು ಸಂತ್ರಸ್ತೆಗೆ ತಿಳಿಸಿ ಅದರಿಂದ ಹೊರಬಂದು ಧೈರ್ಯದಿಂದ ಇರುವಂತೆ ಮಾಡಬೇಕಿದೆ. ಈ ಬಗ್ಗೆ ನೆದರ್ ಲೆಂಡ್ ಸರ್ಕಾರ ಈಗಲಾದರೂ ಯೋಚಿಸಲಿ. ಲೈಂಗಿಕ ದೌರ್ಜನ್ಯಕ್ಕೊಳಗಾಗುವವರಿಗೆ ಆಪ್ತ ಸಮಾಲೋಚನೆ ನಡೆಸಬೇಕು, ಮುಂದೆ ಯಾರಿಗೂ ಆ ಘಟನೆ ನಡೆಯದಂತೆ ಗಂಭೀರವಾಗಿ ತೆಗೆದುಕೊಳ್ಳಲಿ.

ಭಾರತದ ಪ್ರಸ್ತುತ ಸಂದರ್ಭವನ್ನು ನೋಡುವುದಾದರೆ  ಲೈಂಗಿಕ ದೌರ್ಜನ್ಯ ಪ್ರಕರಣಗಳು  ಬೆಳಕಿಗೆ ಬರಲಾರಂಭಿಸಿವೆ. ಜನರು ಪೊಲೀಸ್ ಠಾಣೆಗೆ ದೂರು ನೀಡಲು ಬರುತ್ತಿದ್ದಾರೆ. ಇತ್ತೀಚಿನ ವರದಿಗಳು ಕೂಡ ಅತಿ ಹೆಚ್ಚು ಅತ್ಯಾಚಾರಗಳು ನಡೆಯುತ್ತಿರುವುದು ಪರಿಚಯಸ್ಥರು ಹಾಗೂ ಸಂಬಂಧಿಕರಿಂದಲೇ ಎಂಬುದನ್ನು ವಿವರಿಸಿವೆ. ಆದರೆ ಕುಟುಂಬದೊಳಗೆ ನಡೆಯುವ ಅತ್ಯಾಚಾರಗಳು “ಮಾನ’ಮರ್ಯಾದೆ”ಯ ಕಾರಣಕ್ಕಾಗಿ ಗೌಣವಾಗಿಯೇ ಉಳಿಯುತ್ತವೆ.

ಇನ್ನು ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಕರಣಗಳಲ್ಲಿ, ಅಪರಾಧಿಗೆ ಶಿಕ್ಷೆಯಾಗಿ ಸಂತ್ರಸ್ತೆಗೆ ನ್ಯಾಯ ದೊರಕುವುದು ಒಂದು ರೀತಿಯ ಹರಸಾಹಸವೆಂಬಂತಾಗಿದೆ. ವರ್ಷಗಟ್ಟಲೇ ನಡೆಯುವ ವಿಚಾರಣೆ, ಪದೇ ಪದೇ ಕೋರ್ಟಿನ ಮೆಟ್ಟಿಲೇರುವುದು ಇವೆಲ್ಲವೂ ಸಂತ್ರಸ್ತೆಯ ಕುಟುಂಬವನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವಂತೆ ಮಾಡಿರುತ್ತದೆ. ಹಾಗಾಗಿ ಇನ್ನೆಲ್ಲಿ ಆಪ್ತ ಸಮಾಲೋಚನೆ?

ಭಾರತದಲ್ಲಿ ಅತ್ಯಾಚಾರದಂತಹ ಅಮಾನವೀಯ ಘಟನೆಗಳನ್ನು ತಡೆಗಟ್ಟಲು, 376, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟನೆಗಳಿಗೆ ಶಿಕ್ಷೆ ನೀಡಲು ಪೋಕ್ಸೊ ಕಾಯ್ದೆ ಇದೆ. 18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ 3 ವರ್ಷದಿಂದ ಮರಣ ದಂಡನೆಯಂತಹ ಕಠಿಣ ಶಿಕ್ಷೆ ನೀಡಬಹುದಾದ ಕಾನೂನು ‘ಪುಸ್ತಕದಲ್ಲಿದೆ’. ಆದರೂ ಈ ವರೆಗೂ ಅತ್ಯಾಚಾರಗಳ ಪ್ರಮಾಣ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಅತ್ಯಾಚಾರದಂತಹ ಕ್ರೌರ್ಯ ಹೆಚ್ಚುತ್ತಲೇ ಇವೆ. ಏಕೆಂದರೆ ಸರ್ಕಾರದ ಕಾನೂನುಗಳು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಇತರ ಸಾಮಾಜಿಕ ಕಾರಣಗಳನ್ನು ಹುಡುಕಿ ಬಗೆಹರಿಸುವಲ್ಲಿ ಬೇಕಾದ ಇಚ್ಛಾಶಕ್ತಿ ಇಲ್ಲದಿರುವುದು ಬೇಸರದ ಸಂಗತಿ.

ಅತ್ಯಾಚಾರಕ್ಕೊಳಗಾಗುವ ಸಂತ್ರಸ್ತೆಗೆ ಕುಟುಂಬದವರು, ಸರ್ಕಾರ ಹಾಗೂ ಸಮಾಜ ಎಲ್ಲರೂ ಧೈರ್ಯ ನೀಡಬೇಕು. ಜೊತೆಯಾಗಿ ನಿಲ್ಲಬೇಕು. ಇದು ನಮ್ಮ ನಿಮ್ಮೆಲ್ಲರ ಹಾಗೂ ಸರ್ಕಾರದ ಆದ್ಯ ಕರ್ತವ್ಯ. ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ದೂರು ದಾಖಲಾದಾಗಿನಿಂದ ಅಪರಾಧಿಗೆ ಶಿಕ್ಷೆಯಾಗುವವರೆಗೂ ತ್ವರಿತಗತಿಯಲ್ಲಿಯಲ್ಲಿ ವಿಚಾರಣೆ ನಡೆಯುವಂತೆ ಸರ್ಕಾರ ನೋಡಿಕೊಳ್ಳಬೇಕು. ಸಂತ್ರಸ್ತೆಗೆ ಬೇಕಾಗುವಂತಹ ನೆರವನ್ನು ಸರ್ಕಾರವೇ ನೋಡಿಕೊಳ್ಳುವಂತಾಗಬೇಕು. ಇವೆಲ್ಲವೂ ಸರಿಯಾಗಿ ನಡೆಯುತ್ತಿದೆಯೇ ಎಂಬುದರ ಬಗ್ಗೆ ಗಮನಹರಿಸಲು ಒಂದು ಸಮಿತಿಯನ್ನು ಸರ್ಕಾರ ರಚಿಸಬೇಕು.

ಮುಖ್ಯವಾಗಿ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಪಠ್ಯವಿರಬೇಕು. ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಪಾಠಗಳು ಇರಬೇಕಾದದ್ದು ಕಡ್ಡಾಯ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನಹರಿಸಲೇಬೇಕು. ಸರ್ಕಾರ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪೋಷಕರೂ ಕೂಡ ಈ ಬಗ್ಗೆ ಜಾಗೃತರಾಗಿ ಮಕ್ಕಳನ್ನು ಸ್ನೇಹಿತರಂತೆ ಮಾತನಾಡಿಸುತ್ತಾ, ಸರಿಯಾವುದು, ತಪ್ಪು ಯಾವುದು ಎಂಬುದನ್ನು ಹೇಳಬೇಕಾದ ಜವಾಬ್ದಾರಿಯಿದೆ.

ಸರ್ಕಾರಕ್ಕಿಂತ ಸಂತ್ರಸ್ತೆಯ ಕುಟುಂಬದವರು ಹಾಗೂ ಸಮಾಜದ ನಾಗರಿಕರಾದ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಕುಟುಂಬದವರು, ನೆರೆಹೊರೆಯವರು ಕೂಡ ಅನುಕಂಪದ ಹೆಸರಿನಲ್ಲಿ ಮಗುವಿಗೆ ನೋವಾಗುವಂತೆ ಮಾತನಾಡದೇ ಆ ಘಟನೆಯನ್ನು ಮರೆಯುವಂತೆ ಮಾಡಬೇಕು. ಅದಕ್ಕೂ ಮುಖ್ಯವಾಗಿ ಅತ್ಯಾಚಾರಗಳು ನಡೆಯದಂತೆ ತಡೆಯಬೇಕು. ನಮ್ಮ ಮುಂದಿನ ತಲೆಮಾರಿನವರಿಗಾಗಿ ಅತ್ಯಾಚಾರ ಮುಕ್ತ ಸಮಾಜ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...