ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಚಿದಂಬರಂ ಅವರು ಸಾಕ್ಷ್ಯ ನಾಶಪಡಿಸುತ್ತಾರೆ ಎಂದು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಾಧಾರಗಳು ಸಿಬಿಐ ಬಳಿ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಚಿದಂಬರಂ ಬಂಧನ ಅವಧಿ ಅಕ್ಟೋಬರ್ 24ರವರೆಗೆ ಇದೆ. ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ನೀಡಿದರೆ ಪಿ.ಚಿದಂಬರಂ ಅವರು ಪರಾರಿಯಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಸಾಕ್ಷಿಧಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಹಾಗೂ ಪಯತ್ನಿಸುತ್ತಾರೆ ಎಂದು ಆರೋಪಿಸಿರುವ ಸಿಬಿಐ ವಾದದಲ್ಲಿ ಹುರುಳಿಲ್ಲ. ಇದಕ್ಕೆ ಪೂರಕ ಯಾವುದೇ ಪುರಾವೆಗಳು ಲಭ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ತಿಹಾರ್ ಜೈಲಿನಲ್ಲಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇಸ್ ಕುರಿತ ಎಲ್ಲ ವಾದ-ವಿವಾದಗಳು ಚಿದಂಬರಂ ಅವರಿಗೆ ಜಾಮೀನು ನೀಡಲು ಯಾವುದೇ ಅಡ್ಡಿಯಿಲ್ಲ ಎಂದೇ ಹೇಳುತ್ತಿವೆ. ಆದ್ದರಿಂದ ಅವರಿಗೆ ಜಾಮೀನು ನೀಡಲಾಗುವುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಸಿಬಿಐ ಪ್ರಕರಣದಲ್ಲಿ ಆರೋಪಿಯಾಗಿರುವ ಚಿದಂಬರಂ ಅವರ ವಿರುದ್ಧದ ವಾದವನ್ನು ಕೋರ್ಟ್ ತಿರಸ್ಕರಿಸಿತು. ಚಿದಂಬರಂ ಎಸ್ಎಂಎಸ್, ಪತ್ರ, ಸಂದೇಶ, ಫೋನ್ ಕರೆಗಳ ಮೂಲಕ ಹೇಗೆ ಸಾಕ್ಷ್ಯ ನಾಶ ಮಾಡಲು ಸಾಧ್ಯ ಎಂದು ಸಿಬಿಐಗೆ ಮರು ಪ್ರಶ್ನೆ ಮಾಡಿತು. ಒಂದು ಲಕ್ಷ ರೂಪಾಯಿ ಬಾಂಡ್ ಪಡೆದು, ಷರತ್ತು ಬದ್ಧ ಜಾಮೀನು ನೀಡುವುದಾಗಿ ಹೇಳಿತು.
ಐಎನ್ಎಕ್ಸ್ ಮೀಡಿಯಾ ಕೇಸ್ನಲ್ಲಿ 74 ವರ್ಷದ ಚಿದಂಬರಂ ಅವರನ್ನು ಹಲವು ನಾಟಕೀಯ ಬೆಳವಣಿಗೆಯ ನಂತರ ಸಿಬಿಐ ಆಗಸ್ಟ್ 21ರಂದು ಬಂಧಿಸಿತ್ತು. ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಲಾಗಿದ್ದು, ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ.