ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಕೇಂದ್ರ ಸರ್ಕಾರ ಸುಖಾಸುಮ್ಮನೆ ವಿರೋಧ ಪಕ್ಷದ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಾಂಕೇಡೆ ಕ್ರೀಡಾಂಗಣಲ್ಲಿ ಉದ್ಯಮಿಗಳು, ವೃತ್ತಿಪರರು ಮತ್ತು ಪತ್ರಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುಣೆಯಲ್ಲಿ ಆಟೋ ಮೊಬೈಲ್ ಕೇಂದ್ರದಲ್ಲಿ ಕತ್ತಲು ಆವರಿಸಿಕೊಂಡಿದೆ. ಉತ್ಪಾದನೆ ಕುಸಿತವಾಗಿದೆ. ಕೆಲಸ ಇಲ್ಲವಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಿಧಾನಗತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಖಾನೆಗಳು ಬಾಗಿಲು ಮುಚ್ಚುತ್ತಿವೆ. ಆರ್ಧಿಕ ಪರಿಸ್ಥಿತಿ ಕೆಟ್ಟುಹೋಗಿದೆ. ಆದರೂ ಭಾರತ ಸರ್ಕಾರ ವಿರೋಧ ಪಕ್ಷಗಳನ್ನು ದೂರುತ್ತಿದೆ. ಆರ್ಥಿಕ ಸ್ಥಿತಿ ಪುನಶ್ಚೇನಕ್ಕೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅದು ಆಗುತ್ತಿಲ್ಲ ಎಂದು ತಿಳಿಸಿದರು.
ಈ ಹಿಂದೆ ಮಹಾರಾಷ್ಟ್ರ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಇದೇ ರಾಜ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಎಂದು ಸಿಂಗ್ ಟೀಕಿಸಿದ್ದಾರೆ.
ದೇಶದ ಪ್ರತಿ ಮೂವರು ಯುವಕರ ಪೈಕಿ ಒಬ್ಬರಿಗೆ ಉದ್ಯೋಗವಿಲ್ಲ. ನಿರುದ್ಯೋಗ ಸಮಸ್ಯೆಯಿಂದಾಗಿ ಹಳ್ಳಿಗಳ ಹೆಚ್ಚು ಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹಳ್ಳಿಗಳು ಸಂಕಷ್ಟ ಎದುರಿಸುತ್ತಿವೆ. ಎಂದರು.
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದು ಬಿಕ್ಕಟ್ಟು ಎದುರಿಸುತ್ತಿದೆ. ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್, ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿನಿಂದ 16 ಲಕ್ಷ ಮಂದಿಗೆ ಸಂಕಷ್ಟ ಎದುರಿಸಬೇಕಾಗಿದೆ. ಅವರ ಕುಂದುಕೊರತೆ ಕೇಳಬೇಕಾದ ಸರ್ಕಾರಗಳು ಮೌನ ವಹಿಸಿದೆ. ಹೀಗಾಗಿ ತಕ್ಷಣವೇ ಪಿಎಂಸಿ ಬಿಕ್ಕಟ್ಟನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರ ಹೇಳಿಕೆಗಳನ್ನು ಮತ್ತೆ ಹೇಳೋಕೆ ಇಷ್ಟಪಡುವುದಿಲ್ಲ. ಆರ್ಥಿಕತೆ ವಿಷಯದಲ್ಲಿ ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಅದನ್ನು ಸರಿಪಡಿಸುವ ಬಗ್ಗೆ ಚಿಂತನೆ ನಡೆಸಬೇಕು. ಆರ್ಥಿಕತೆ ಕುಸಿತಕ್ಕೆ ಕಾರಣಗಳು, ಆರ್ಥಿಕತೆ ಸುಧಾರಣೆಗೆ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳುವ ಅಗತ್ಯವಿದೆ ಎಂದರು.
‘ಯುಪಿಎ ಆಡಳಿತವಿದ್ದಾಗಲೂ ಹಲವು ಸವಾಲುಗಳಿದ್ದವು. ಅವುಗಳಿಗೆ ನಾವು ಪರಿಹಾರ ಕಂಡುಕೊಂಡಿದ್ದೆವು. ಈಗ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹಿಂದಿನ ಐದು ವರ್ಷ ಸಹ ನಿಮ್ಮದೇ ಆಡಳಿತವಿತ್ತು. ಹೀಗಿರುವಾಗ ಸರಿಯಾದ ಮಾರ್ಗಸೂಚಿ ಕಂಡುಕೊಳ್ಳುವುದನ್ನು ಬಿಟ್ಟು ಸುಮ್ಮನೇ ನಮ್ಮತ್ತ ಬೊಟ್ಟು ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದೀರಿ’. ‘ಆರ್ಥಿಕ ಅಭಿವೃದ್ಧಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತ ಹೋದರೆ, ಭಾರತದ ಆರ್ಥಿಕತೆ 2024ರೊಳಗೆ 5 ಟ್ರಿಲಿಯನ್ ಡಾಲರ್ಸ್ ಗುರಿ ಮುಟ್ಟಲು ಸಾಧ್ಯವಿಲ್ಲ. ಆರ್ಥಿಕತೆಯ ಸುಧಾರಣೆಗೆ ಸೂಕ್ತ ತಂತ್ರಗಳನ್ನು ಹೆಣೆಯಬೇಕಿದೆ’ ಎಂದು ಕುಟುಕಿದರು.
ಇದಕ್ಕೂ ಮೊದಲು ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್, ಸಾರ್ವಜನಿಕ ವಲಯದ ಬ್ಯಾಂಕುಗಳ ಕೆಟ್ಟ ಸ್ಥಿತಿಗೆ ಮನಮೋಹನ್ ಸಿಂಗ್ ಮತ್ತು ಮಾಜಿ ಆರ್ಬಿಐ ಗರ್ವನರ್ ರಘುರಾಮ್ ರಾಜನ್ ಕಾರಣ ಎಂದು ಆಪಾದಿಸಿದ್ದರು. ಇದಕ್ಕೆ ಇಂದು ಮನಮೋಹನ್ ಸಿಂಗ್ ತಕ್ಕ ಉತ್ತರ ನೀಡಿದ್ದಾರೆ.