Homeಚಳವಳಿಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

ಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

- Advertisement -
- Advertisement -

| ಜಿ.ಆರ್.ವಿದ್ಯಾರಣ್ಯ, ಮೈಸೂರು |

ಅರಬ್ಬೀಯರ ಕುದುರೆ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭದಾಯಕವಾಗಿರುವುದು ಭಾರತದ ರಾಜಕೀಯ ಕುದುರೆ ವ್ಯಾಪಾರ. ಇದರಲ್ಲಿ ಕೊಂಡುಕೊಳ್ಳುವವರಿಗೆ ಮತ್ತು ಮಾರುವವರಿಗಷ್ಟೇ ಅಲ್ಲ, ಕುದುರೆಗೂ ಸಹ ಹೆಚ್ಚಿನ ಲಾಭವಿದೆ. ಕುದುರೆ ವ್ಯಾಪಾರಕ್ಕೆ 1969ರಲ್ಲಿ ಬುನಾದಿ ಹಾಕಿದವರು ಹರಿಯಾಣಾದ ಗಯಾರಾಮ್. ಅವರು ಹದಿನೈದು ದಿನದಲ್ಲಿ ಮೂರು ಬಾರಿ ಪಕ್ಷ ಬದಲಾಯಿಸಿ, ಕೊನೆಗೆ ಕಾಂಗ್ರೆಸ್ಸಿಗೆ ಮರಳಿ ಬಂದು ಗಯಾರಾಮ್ ನಿಂದ ಆಯಾರಾಮ್ ಆದರು. ಅಂದಿನಿಂದಲೂ ಇಂತಹ ಕುದುರೆಗಳಿಗೆ “ಆಯಾರಾಮ್-ಗಯಾರಾಂ” ಎಂಬ ಹಣೆಪಟ್ಟಿಯೂ ಸಿಕ್ಕಿದೆ. ಇದೆಲ್ಲಾ ವೈಯುಕ್ತಿಕ ಮಟ್ಟದಲ್ಲಿ ಪ್ರಾರಂಭವಾಗಿ, ನಂತರ ಪಕ್ಷಗಳಿಗೆ ಹರಡಿ, ಒಂದು ಪಕ್ಷದ ಸರಕಾರವನ್ನು ಕೆಡಹುವ ಅಥವಾ ಇನ್ನೊಂದು ಗುಂಪಿನ ಸರಕಾರವನ್ನು ರಚಿಸುವ ಕುತಂತ್ರವಾಗಿ ರೂಪುಗೊಂಡಿತು. ಸಮ್ಮಿಶ್ರ ಸರಕಾರದ ಇಂದಿನ ಕಾಲದಲ್ಲಿ ಸರಕಾರಗಳು ಬಹಳ ಅಸ್ಥಿರವಾಗಿರುತವೆ. ಅಷ್ಟೇ ಅಲ್ಲ, ಬಹುಮತ ಇರುವ ಸರಕಾರಗಳಿಗೂ ಸಹ ಈ ಆತಂಕ ತಪ್ಪಿದ್ದಲ್ಲ. ಸರಕಾರದಲ್ಲಿ 15% ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುವ ಅವಕಾಶವಿರುವುದರಿಂದ ಮಿಕ್ಕವರು ಅತೃಪ್ತರಾಗಿರುವುದು ಸಹಜ. ಇದನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಗಾಳ ಹಾಕುವುದು ಸರ್ವೇ ಸಾಮಾನ್ಯ. ಬಹುಮತದ ಸರಕಾರಗಳು ಕಡಿಮೆಯಾದಾಗನಿಂದಲೂ ಈ ವ್ಯಾಪಾರ ವೇಗ ಹಿಡಿದು, ಅದನ್ನು ನಿಯಂತ್ರಿಸಲು ಏನೇ ಸಂವಿಧಾನ ತಿದ್ದುಪಡಿ/ಕಾಯಿದೆಗಳು ಜಾರಿಗೆ ಬಂದರೂ ಇದರ ಹಾವಳಿ ಮಾತ್ರ ತಪ್ಪಿಲ್ಲ.

ಈ ಹೇಯ ವ್ಯವಹಾರದ ಇಂದಿನ ಮೇಲ್ಮಟ್ಟದ ವ್ಯಾಪಾರಿ ಭಾರತೀಯ ಜನತಾ ಪಕ್ಷ ಎಂದರೆ ತಪ್ಪಾಗಲಾರದು. ಈ ವ್ಯಾಪಾರ ಬಹಳ ಹಿಂದಿನಿಂದ ಉತ್ತರ ಭಾರತದ ರಾಜಕೀಯದಲ್ಲಿ ಪ್ರಚಲಿತವಿದ್ದರೂ ಸಹ ಇದನ್ನು ಕರ್ನಾಟಕದಲ್ಲಿ ಒಂದು ವ್ಯವಸ್ಥಿತ ಉದ್ದಿಮೆಯನ್ನಾಗಿ ಮಾಡಿದ ಶ್ರೇಯವೂ ಸಹ ಭಾಜಪಕ್ಕೆ ಸೇರುತ್ತದೆ. ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ, ರಾಜಕೀಯ ಭ್ರಷ್ಚಾಚಾರವನ್ನು ಉನ್ನತ ಮಟ್ಟಕ್ಕೆ ಏರಿಸಿದ ಶ್ರೇಯ ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಚುನಾವಣೆಯಲ್ಲಿ ಎಷ್ಟೇ ಸ್ಥಾನ ಬರಲಿ ಹಣದ ಬಲದ ಮೇಲೆ ತಮ್ಮ ಸರಕಾರ ರಚಿಸಲು ಅಥವಾ ಬೇರೆ ಪಕ್ಷದ ಸರಕಾರ ಬೀಳಿಸಲು ಸಾಧ್ಯ ಎಂದು ಬಲವಾಗಿ ನಂಬಿ ಕಾರ್ಯಗತವಾಗಿರುವ ಪಕ್ಷ ಬಿಜೆಪಿ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರದ ಕೈಗೊಂಬೆಗಳಾಗಿ ಆಡುತ್ತಿರುವ ದೆಹಲಿ ಪೋಲೀಸ್, ಐಬಿ, ಲೋಕಾಯುಕ್ತ, ಆಯಕರ ವಿಭಾಗ, ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ಅನ್ವೇಷಣ ಅಭಿಕರಣ ಮುಂತಾದ ಸ್ವಾಯುತ್ತ ರಾಜಕೀಯೇತರ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು, ಕುದುರೆ ವ್ಯಾಪಾರಕ್ಕಿಳಿದಿರುವ ಹೆಗ್ಗಳಿಕೆಯೂ ಸಹ ಬಿಜೆಪಿಯದ್ದಾಗಿರುತ್ತದೆ. ಇಲ್ಲಿ ಖರೀದಿಸಲ್ಪಟ್ಟ ಕುದುರೆಗಳು ಎಷ್ಟೇ ಹೀನಾಯ ಮಟ್ಟದ್ದಾಗಿದ್ದರೂ ಸಹ ಅವುಗಳು ಬಿಜೆಪಿ ಸೇರಿದ ಕೂಡಲೇ ಅವುಗಳ ಎಲ್ಲಾ ಪಾಪವೂ ಪರಿಹಾರವಾಗಿ, ಎಲ್ಲಾ ಆರೋಪಗಳೂ ಮಾಯವಾಗುತ್ತವೆ. ಭಾಜಪದ ನಾಯಕರನ್ನು ಈ ಹಿಂದೆ ಬಾಯಿಗೆ ಬಂದಂತೆ ಬೈದು, ಹೀಯಾಳಿಸಿದ್ದ ಕುದುರೆಗಳು ತಮ್ಮ ಹೊಸ ನಾಯಕರ ಪಾದವನ್ನು ನೆಕ್ಕುತ್ತಾ ಅವರ ಗುಣಗಾನ ಮಾಡಲು ಪ್ರಾರಂಭಿಸುತ್ತವೆ.

ರಾಜಕೀಯ ಕುದುರೆಗಳು ಬಹುತೇಕ ಕಪ್ಪು ಬಣ್ಣದ್ದೇ ಆಗಿರುವುದರಿಂದ ಅವುಗಳನ್ನು ಖರೀದಿಸಲು ಪೆಟ್ಟಿಗೆ ತುಂಬ ಹಣವೇ ಬೇಕು ಎಂದೇನಿಲ್ಲ, ಕೆಲವೊಮ್ಮೆ ಹೆಸರಿಗೆ ತಕ್ಕಂತೆ ಬ್ಲ್ಯಾಕ್ ಮೇಲ್ ಮಾಡಲು ಅವರ ಹಿಂದಿನ ಅಪರಾಧಿಕ ಜೀವನದ ಜಾತಕ ಅಥವಾ ಆರ್ಥಿಕ ವ್ಯವಾಹರದ ದಾಖಲೆಗಳೂ ಸಹ ಉಪಯೋಗಕ್ಕೆ ಬರುತ್ತವೆ. ಕುದುರೆಗಳನ್ನು ಖೆಡ್ಡಾಗೆ ಕೆಡವಲು ಕೆಲವೊಮ್ಮೆ ಹನಿ ಟ್ರಾಪ್ ವಿಧಾನವನ್ನೂ ಬಳಸಲಾಗುತ್ತದೆ. ಕುದುರೆ ವ್ಯಾಪಾರ ಈಗ ಎಲ್ಲಾ ಪಕ್ಷಗಳಿಗೆ ತಲೆ ನೋವಾಗಿರುವ ತೂಗುಕತ್ತಿಯಾಗಿದೆ. ಪಕ್ಷದ ಕುದುರೆಗಳಿಗೆ ಒಂದು ತಂತ್ರವಾದರೆ ನಿರ್ದಲೀಯ ಕುದುರೆಗಳಿಗೆ ಬೇರೊಂದು ತಂತ್ರ, ಮುಖ್ಯವಾಗಿ ಹಣ ಮತ್ತು ಅಧಿಕಾರದ ಲಾಲಸೆ ಒಡ್ಡಬಹುದು. ಆದರೂ ಯಾವಾಗ, ಯಾವ ಕುದುರೆ ಯಾವ ಕಡೆಗೆ ಹಾರಬಹುದು ಎಂಬುದು ಊಹಿಸಲೂ ಅಸಾಧ್ಯ.

ಒಂದು ಮಟ್ಟಕ್ಕೆ ತಲುಪಿದ ನಂತರ ಮತ್ತು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಹಿರಿಯ ರಾಜಕಾರಣಿಗಳು ತಮ್ಮ ಅನೈತಿಕ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿ, ಅಥವಾ ತಮ್ಮ ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಸಲುವಾಗಿ, ಕುದುರೆ ವ್ಯಾಪಾರದಲ್ಲಿ ಭಾಗಿಯಾಗುತ್ತಾರೆ.ಒಂದು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವರಾಗಿ ಒಳ್ಳೆಯ ಹೆಸರು ಮಾಡಿದಂತಹ ವ್ಯಕ್ತಿ, ಎಲ್ಲಾ ಹಂತದಲ್ಲಿಯೂ ಪಕ್ಷದಿಂದ ಎಲ್ಲಾ ಸವಲತ್ತುಗಳನ್ನು ಭೋಗಿಸಿದ್ದ “ಕುದುರೆ” ಇನ್ನೊಂದು ಪಕ್ಷಕ್ಕೆ ಹಾರಿರುವುದು ವಿರಳವಾದರೂ ಸಹ ಇದು ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯ ಅಧೋಗತಿಯನ್ನು ದರ್ಶಿಸುತ್ತದೆ. ಈ ತಂತ್ರಗಾರಿಕೆಯಿಂದ ಬಿಜೆಪಿ ಈಗಾಗಲೇ ಬಹುಮತ ಇಲ್ಲದಿದ್ದರೂ ಸಹ ಜಮ್ಮು-ಕಾಶ್ಮೀರ, ಬಿಹಾರ, ಮೇಘಾಲಯ, ಮಿಝೊರಾಮ್, ನಾಗಾಲ್ಯಾಂಡ್, ಗೋವಾ ರಾಜ್ಯದಲ್ಲಿ ಸರಕಾರ ರಚಿಸಲು ಸಾಧ್ಯವಾಯಿತು. ಕರ್ನಾಟಕದಲ್ಲೂ ಸಮಯಪ್ರಜ್ಞೆ ತೋರಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿಯವರು ತ್ವರಿತವಾಗಿ “ದೋಸ್ತಿ” ಮಾಡಿಕೊಳ್ಳದಿದ್ದರೆ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಉಂಟಾಗುತ್ತಿತ್ತು. ದೋಸ್ತಿ ಒಳ್ಳೆಯದೋ ಕೆಟ್ಟದ್ದೋ ಬೇರೆ ವಿಷಯ.

ಕುದುರೆಗಳು ಒಂದು ರೀತಿಯ ಶೇರು ಮಾರುಕಟ್ಟೆಯ ಶೇರುಗಳಂತೆ. ಅವನ್ನು ಕೊಂಡುಕೊಳ್ಳಲೇ ಬೇಕೆಂದೇನಿಲ್ಲ, “ಧನವಂತರು” ಅದರಲ್ಲಿ ಆಸಕ್ತಿ ತೋರಿದರೂ ಸಾಕು, ಅವುಗಳ ಬೆಲೆ ಮೇಲೇರಲು ಪ್ರಾರಂಭವಾಗುತ್ತದೆ. ಕೂಡಲೇ ಪಕ್ಷದ ಚಾವಟಿಗಾರ (ವ್ಹಿಪ್ ಮಾಸ್ಟರ್) ಕುದುರೆಗಳನ್ನು ಲಾಯದಲ್ಲಿ ಕೂಡಿಹಾಕಲು ಪ್ರಾರಂಭಿಸುತ್ತಾನೆ. ಕೆಲವೊಮ್ಮೆ ಕುದುರೆಗಳು ತಾವಾಗಿಯೇ ಕೆನೆಯಲು ಪ್ರಾರಂಭಿಸುತ್ತವೆ, ಆಗ ಅವಕ್ಕೆ ಸರಿಯಾಗಿ ಹುಲ್ಲು, ಮೇವು ಹಾಕಬೇಕಾಗುತ್ತದೆ; ಇಲ್ಲದಿದ್ದಲ್ಲಿ ಸರಕಾರವನ್ನು ಕೆಡವಲು ಸದಾ ಸಿದ್ಧವಾಗಿರುವ ಇನ್ನೊಂದು ಪಕ್ಷ ತನ್ನ ಕೆಲಸ ಚುರುಕುಗೊಳಿಸಲು ಪ್ರಾರಂಭಿಸುತ್ತದೆ. ಈ ವ್ಯಾಪಾರಕ್ಕೆ ಇಷ್ಟೊಂದು ಭವಿಷ್ಯವಿರುವುದನ್ನು ಬಹಳ ಹಿಂದೆಯೇ ಗಮನಿಸಿದ ಹಲವು ಸಂಪನ್ಮೂಲ ರಾಜಕೀಯ ಮುಖಂಡರು ಇಂತಹ ಕುದುರೆಗಳನ್ನು ಕೂಡಿಹಾಕಲು ತಮ್ಮದೇ ಆದ ಪಂಚತಾರಾ ರಿಸಾರ್ಟ್ ಲಾಯಗಳನ್ನು ಪ್ರಾರಂಭಿಸಿದ್ದಾರೆ.

ಇಂತಹ ಕುದುರೆ ವ್ಯಾಪಾರದಲ್ಲಿ ಹೊಸದೊಂದು ಅಧ್ಯಾಯವನ್ನು ಇದೀಗ ದೇಶದ ಪ್ರಧಾನಿಯವರು ಸೇರಿಸಿದ್ದಾರೆ. ಒಂದು ಚುನಾಯಿತ ಸರಕಾರವನ್ನು, ಅದರ ಮುಖ್ಯಸ್ಥೆಯಾದ ಮಹಿಳಾ ಮುಖ್ಯಮಂತ್ರಿಯನ್ನು ಹೆದರಿಸಲು ಆ ಪಕ್ಷದ ಎಷ್ಟೋ ಕುದುರೆಗಳು ತಮ್ಮ ಸಂಪರ್ಕದಲ್ಲಿರುವುದಾಗಿಯೂ, ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಲ್ಲಿನ ರಾಜ್ಯ ಸರಕಾರ ಬೀಳುವುದಾಗಿಯೂ ಭವಿಷ್ಯ ನುಡಿದಿದ್ದಾರೆ. ಇದು ಕೇವಲ ಚುನಾವಣೆಯ ಪ್ರಚಾರದ ಭರದಲ್ಲಿ ಹೇಳಿದ “ಜುಮ್ಲಾ”ವೋ, ಬೆದರಿಕೆ ಸಂದೇಶವೋ, ಪ್ರಧಾನ ಮಂತ್ರಿಗಳ ಸೋಲಿನ ಭೀತಿಯೋ, ಚುನಾವಣೆ ಸಮಯದಲ್ಲಿ ಒಂದು ರಾಜ್ಯದ ರಾಜಕೀಯ ಪಕ್ಷದಲ್ಲಿ ಸಂದೇಹ ಮೂಡಿಸಿ ಒಳ ಜಗಳ ಪ್ರಾರಂಭಿಸುವ ಹುನ್ನಾರವೋ ಅಥವಾ ಬೇಹುಗಾರಿಕೆ ಸಂಸ್ಥೆಯನ್ನು ಬಳಸಿಕೊಂಡು, ಮಾಹಿತಿ ಸಂಗ್ರಹಿಸಿ, ಮಾಡಿರುವ ಭವಿಷ್ಯವಾಣಿಯೋ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ಮತ್ತು ಭಾರತದ ರಾಜ್ಯ ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಮಾರಕ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು.

“ನಿಮ್ಮ ಶಾಸಕರು ನಮ್ಮ ಹಿಡಿತದಲ್ಲಿದ್ದಾರೆ” ಎಂಬ ಹೇಳಿಕೆ ಓರ್ವ ದೇಶದ ಪ್ರಧಾನಿಯ ಬಾಯಿಯಿಂದ ಬರುವ ಮಾತಲ್ಲ; ಇದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಈ ಹಿಂದೆಯೂ ನಮ್ಮ ಪ್ರಧಾನಿ ದೇಶದ ಪರಮಾಣು ಅಸ್ತ್ರದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಪ್ರಧಾನ ಮಂತ್ರಿಗಳು ದೇಶದ ಸಂವಿಧಾನದ ನಿಜವಾದ ಚೌಕೀದಾರ್ ಆಗಿದ್ದಲ್ಲಿ ಅವರು ಈ ಕುತಂತ್ರದಲ್ಲಿ ಭಾಗಿಯಾಗದೇ, ಬಹಿರಂಗವಾಗಿ ಶಾಸಕರ ಹೆಸರನ್ನು ಹೇಳಬೇಕಿತ್ತು. ಇತ್ತೀಚೆಗೆ ಭಾಜಪದ ಹಿರಿಯ ನಾಯಕ ಆಡ್ವಾಣಿಯವರ ಮಾತಿನಂತೆ “ದೇಶ ಮೊದಲು, ಪಕ್ಷ ನಂತರ, ವೈಯುಕ್ತಿಕ ಸ್ವಾರ್ಥ ಕೊನೆಗೆ” ಎಂಬುದು ಏನಾದರೂ ಭಾರತೀಯ ಜನತಾ ಪಕ್ಷದ ವೇದವಾಕ್ಯವಾಗಿದ್ದಲ್ಲಿ ಪ್ರಧಾನಿಗಳು ದೇಶದ ಹಿತವನ್ನು ಎತ್ತಿ ಹಿಡಿದು,ಈ ಕುದುರೆಗಳ ವ್ಯಾಪಾರದ ಆಟವನ್ನು ನಿಲ್ಲಿಸಬೇಕಿತ್ತು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಎಲಾ ಪಕ್ಷಗಳೂ ಸಹ ಪ್ರಧಾನಿಗಳ ಈ ಬೇಜವಾಬ್ದಾರಿಯುತ ಹೇಳಿಕೆಯನ್ನು ತೀವ್ರವಾಗಿ ಖಂಡಿಸಬೇಕು. ರಾಜ್ಯ ಸರಕಾರಗಳು ಅಸ್ಥಿರವಾದಷ್ಟೂ ಆಡಳಿತ ವ್ಯವಸ್ಥೆ ಕುಸಿಯುತ್ತದೆ. ಸರಕಾರಿ ಅಧಿಕಾರಿಗಳು ಅಂಕುಶವಿಲ್ಲದವರಂತೆ ವರ್ತಿಸುತ್ತಾ, ಜನ ಸಾಮಾನ್ಯರ ಕೆಲಸ ಬಿಟ್ಟು ತಮ್ಮ ಸ್ವಂತ ಗೂಡನ್ನು ಬೆಚ್ಚಗೆ ಮಾಡಿಕೊಳ್ಳುವ ಕೆಲಸದಲ್ಲಿ ಮಗ್ನರಾಗುತ್ತಾರೆ. ಭ್ರಷ್ಟಾಚಾರ ತಾಂಡವವಾಡುತ್ತದೆ. ಜನರ ಹಾಹಾಕಾರ ಮುಗಿಲಿಗೇರುತ್ತದೆ. ಹಾಗಾಗದಿರಲಿ ಎಂದು ಆಶಿಸುತ್ತಾ ಈ ಕುದುರೆ ವ್ಯಾಪಾರಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ಜನರೇ ಕಂಡುಕೊಳ್ಳಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...