ಹವಾಮಾನ ವೈಪರೀತ್ಯದ ವಿರುದ್ಧ ಕೋಟ್ಯಂತರ ಯುವಜನರನ್ನು ಹೋರಾಟಕ್ಕೆ ಅಣಿನೆರೆಸುತ್ತಿರುವ ಸ್ವೀಡನ್ನ ದಿಟ್ಟ ಬಾಲೆ ಗ್ರೇತಾ ಥನ್ ಬರ್ಗ್ ಕುರಿತು ಹಿರಿಯ ಪತ್ರಕರ್ತ ಮತ್ತು ವಿಜ್ಞಾನ ಬರಹಗಾರ ನಾಗೇಶ್ ಹೆಗಡೆಯವರು ಬರೆದ ಪುಸ್ತಕ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.
“ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ಬರ್ಗ್” ಪುಸ್ತಕವನ್ನು ಬೆಂಗಳೂರಿನ ಶಾಂತಿಧಾಮ ಹೈಸ್ಕೂಲ್ ಹುಡುಗಿ ಪ್ರಿಯಾಂಕಾ ಅನಾವರಣ ಮಾಡಲಿದ್ದಾರೆ. ಕರ್ನಾಟಕದಲ್ಲಿ ಪರಿಸರ ರಕ್ಷಣೆಯ ಕುರಿತು ಕಾಳಜಿ ವಹಿಸಿ ಜಾಗೃತಿ ಮೂಡಿಸುತ್ತಿರುವ ಧಾರವಾಡದ ಚಿಂತಕ ಡಾ.ಸಂಜೀವ ಕುಲಕರ್ಣಿ, ಸಾಹಿತಿ ರೂಪಾ ಹಾಸನ ಮತ್ತು ಶಿಕ್ಷಕರಾದ ಸಂತೋಷ ಗುಡ್ಡಿಯಂಗಡಿಯವರು ’ಬಿಸಿಯುಗದ ಬಾಗಿಲಲ್ಲಿ ಹೊಸ ಪೀಳಿಗೆಯ ಪಾತ್ರ’ ವಿಚಾರದ ಕುರಿತು ಮಾತನಾಡಲಿದ್ದಾರೆ.
ಡಿಸೆಂಬರ್ 1ರ ಭಾನುವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಮಂತ್ರಿ ಮಾಲ್ ಎದುರಿಗಿನ ’ಗ್ರೀನ್ಪಾಥ್’ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. 124 ಪುಟಗಳ ಈ ಪುಸ್ತಕದ ಬೆಲೆ ರೂ 120 ಆಗಿದ್ದು, ಆಸಕ್ತರು ‘ಭೂಮಿಬುಕ್ಸ್’ 9449177628ಗೆ ವಾಟ್ಸಾಪ್ ಮಾಡುವ ಮೂಲಕ ಪುಸ್ತಕ ಖರೀದಿಸಬಹುದಾಗಿದೆ.
ವಿಶೇಷವೆಂದರೆ ಗ್ರೇತಾ ಥನ್ ಬರ್ಗ್ ಡಿಸೆಂಬರ್ 2ರಂದು ಮಾಡ್ರಿಡ್ ನಗರದಲ್ಲಿ ಆರಂಭವಾಗುತ್ತಿರುವ 25ನೇ ವಿಶ್ವ ಪರಿಸರ ಸಮಾವೇಶದಲ್ಲಿ ಮಾತಾಡಲಿದ್ದಾಳೆ. ಡಿಸೆಂಬರ್ 4ಕ್ಕೆ ಅವಳಿಗೆ ಬದಲೀ ನೊಬೆಲ್ ಪ್ರಶಸ್ತಿ ಲಭಿಸಲಿದೆ. ಇಂತಹ ಸಮಯದಲ್ಲಿಯೇ ಪುಸ್ತಕ ಬಿಡುಗಡೆಯಾಗುತ್ತಿದ್ದು ಚಳವಳಿಗೆ ಕೈಜೋಡಿಸಬಲ್ಲ ಉತ್ಸಾಹಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತವಿದೆ ಎಂದು ನಾಗೇಶ್ ಹೆಗೆಡೆ ತಮ್ಮ ಮುಖಪುಟದಲ್ಲಿ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಕುರಿತು 16ರ ಬಾಲೆ ಗ್ರೇಟಾ ತನ್ಬೆರ್ಗ್ ಮಾಡಿದ ಭಾಷಣ..