ಪ್ರಧಾನಿ ನರೇಂದ್ರ ಮೋದಿ ಕೇದಾರನಾಥದ ಗುಹೆಯೊಳಗೆ ಥೇಟ್ ಸಾಧು ತರಹ ಕುಳಿತು ಧ್ಯಾನ ಮಾಡಿದ್ದಾರೆ. ಎಂದಿನಂತೆ ಫೋಟೊಗ್ರಾಫರ್, ಕ್ಯಾಮೆರಾಮನ್ ಜೊತೆಗಿದ್ದಾರೆ. ಫೋಟೋ, ಕ್ಲಿಪ್ಪಿಂಗ್ಸ್ ಹೊರಬಿದ್ದಿವೆ. ಈ ಕಾಲದಲ್ಲಿ ಭಕ್ತಿ ಇದ್ದವರು ಮನೆಯಲ್ಲೋ ಅಥವಾ ದೇವಸ್ಥಾನದ ಪರಿಧಿಯಲ್ಲೋ ಧ್ಯಾನ ಮಾಡುತ್ತಾರೆ. ಆದರೆ, ಗುಹೆಯೊಳಕ್ಕೆ ಹೊಕ್ಕ ಪ್ರಧಾನಿ ಯಾವ ಮಸೇಜ್ ಕೊಡುತ್ತಿದ್ದಾರೆ? ಅದು ಕೊನೆಯ ಹಂತದ ಚುನಾವಣೆ ಮುಗಿಯುವ ಮೊದಲೆ?
ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಮುಂಜಾನೆ ಕೇದಾರನಾಥ ತಲುಪಿರುವ ಅವರು ಅಲ್ಲಿ ನಡೆಯುತ್ತಿರುವ ಪುನರ್ ನಿರ್ಮಾಣದ ಕಾಮಗಾರಿ ವೀಕ್ಷಿಸಿ, ಅಲ್ಲಿನ ಪಹಾರಿ ವೇಷಭೂಷಣದಲ್ಲಿ ಮಿಂಚಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಅಲ್ಲಿ ಶಿವನ ಪೂಜೆ ಕೈಗೊಂಡ ಅವರು, ಥೇಟ್ ಸಾಧುಗಳ ತರಹ ಖಾವಿ ಡ್ರೆಸ್ ಧರಿಸಿ ಗುಹೆಯೊಂದನ್ನು ಹೊಕ್ಕು ಆಧ್ಯಾತ್ಮ ಧ್ಯಾನ ಶುರು ಮಾಡಿದ್ದಾರೆ. ನಾಳೆ ಅವರು ಬದರಿನಾಥಕ್ಕೆ ಭೇಟಿ ಕೊಡಲಿದ್ದಾರೆ.
ಚುನಾವಣಾ ಆಯೋಗದಿಂದ ಅನುಮತಿ ಪಡೆದು ಈ ಪ್ರವಾಸವನ್ನು ಅವರು ಕೈಗೊಂಡಿದ್ದಾರೆ. ಈ ಹಿಂದೆಯೂ ರುದ್ರಪ್ರಯಾಗದಲ್ಲಿರುವ ಈ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರು. ಆದರೆ ಈ ರೀತಿ ದೇವಸ್ಥಾನದಲ್ಲಿ ಕುಳಿತು ಫೋಟೊ ತೆಗೆದು ದೇಶಕ್ಕೆಲ್ಲ ಹಂಚುವುದು ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಬರುವುದಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.
ಈಗ ಚುನಾವಣಾ ಪ್ರಚಾರ ಅಂತ್ಯವಾದ ನಂತರ ಭೇಟಿ ನೀಡಿದ್ದು ಕುತೂಹಲಕರವಾಗಿದೆ. ಹೋಗುವ ಮಾರ್ಗದಲ್ಲಿ ತಾವು ತೆಗೆದ ಬೆಟ್ಟಸಾಲುಗಳ ಫೋಟೊಗಳನ್ನು ಟ್ವೀಟರ್ನಲ್ಲಿ ಹಾಕಿ ಕೊಂಡಿದ್ದಾರೆ.
ಅದಿರಲಿ, 59 ಸೀಟುಗಳ ಚುನಾವಣೆ ನಾಳೆ ನಡೆಯಲಿದೆ. ಮತದಾರರನ್ನು ಇಂಪ್ರೆಸ್ ಮಾಡಲು ಈ ಆಟವೇ ಎಂಬ ಸಂಶಯ ಕಾಡುತ್ತಿದೆ. ಒಂದು ವಾರದಿಂದ ವ್ಯಾಪಕ ಟ್ರೋಲ್ ಗೆ ಒಳಗಾಗುತ್ತಿರುವ ಅವರು ಕಾಲೆಳೆಸಿಕೊಳ್ಳಲು ಅವರು ಈಗ ಮತ್ತೆ ಆಹಾರವಾಗಿದ್ದಾರೆ. ನೆಗಿಟಿವ್ ಆರ್ ಪಾಸಿಟಿವ್ ಒಟ್ಟು ಲೈಮ್ಲೈಟ್ನಲ್ಲಿರಬೇಕು, ಸದಾ ಪ್ರಚಾರದಲ್ಲಿರಬೇಕು ಎಂಬ ಮೋದಿ ಬಯಕೆ ಮಾತ್ರ ಈಡೇರಿದೆ.
ಇದನ್ನು ಓದಿ: ಮೋದಿ ಅಮಿತ್ ಷಾ ಗೆ ಕ್ಲಿನ್ ಚಿಟ್ ಪ್ರಕರಣ: ಚುನಾವಣಾ ಆಯೋಗದಲ್ಲಿ ಭುಗಿಲೆದ್ದ ಭಿನ್ನಮತ
ಮೋದಿಗೆ ವೈರಾಗ್ಯ ಭಾವ ಕಾಡುತ್ತಿದೆಯಾ ಅಥವಾ ಮತದಾರರ ಮೇಲೆ ಪ್ರಭಾವ ಬೀರಲು, ಪ್ರಚಾರ ಅಂತ್ಯದ ನಂತರವೂ ಸುದ್ದಿಯಲ್ಲಿರಲು ಈ ನಾಟಕವೋ ತಿಳಿಯುತ್ತಿಲ್ಲ.