ಇಂದು ಜನಸಂಖ್ಯೆಯ ಹೆಚ್ಚಳದ ಕಾರಣಕ್ಕೂ, ಜನರ ಧಾವಂತ ಹೆಚ್ಚಾದ ಕಾರಣಕ್ಕೂ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಪಘಾತಗಳಿಂದ ಸಾವುಗಳು ಹೆಚ್ಚುತ್ತಿವೆ. ಇವುಗಳ ಕುರಿತು ಸರ್ಕಾರ, ಸಾರಿಗೆ ಇಲಾಖೆ ಹಲವು ರೀತಿಯಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
ಈ ಅಪಘಾತಗಳಿಗೆ ಮುಖ್ಯ ಕಾರಣ ಬಹಳಷ್ಟು ಜನರು ಸಂಚಾರಿ ನಿಯಮಗಳನ್ನು ಪಾಲಿಸದಿರುವುದೇ ಆಗಿದೆ. ಕೆಲವು ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಹಲವರು ಅಮಾಯಕರು ಸಹ ತಮ್ಮದಲ್ಲದ ತಪ್ಪಿಗೆ ಅಪಘಾತಕ್ಕೊಳಗಾಗಬೇಕಾದ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಈ ಸಮಸ್ಯೆಗೆ ಸಣ್ಣ ಮಟ್ಟದಲ್ಲಿ ಆದರೆ ವಿಶಿಷ್ಟವಾಗಿ ಪರಿಹಾರ ಹುಡುಕಲು ಸರ್ಕಾರಿ ಶಾಲಾ ಶಿಕ್ಷಕರ ತಂಡವೊಂದು ಸಿದ್ದವಾಗಿದೆ.
ಅಂದರೆ ಮಕ್ಕಳಿಗೆ ಶಾಲಾ ಹಂತದಲ್ಲಿಯೆ ರಸ್ತೆ ನಿಯಮಗಳು ಏನನ್ನು ಹೇಳುತ್ತವೆ? ಅವುಗಳ ಮಹತ್ವವೇನು? ಎಂಬುದರ ಕುರಿತು ಅರಿವು ಮೂಡಿಸಲು ಉಡುಪಿ ಜಿಲ್ಲೆಯ ಶಿಕ್ಷಕರ ತಂಡವೊಂದು ಮುಂದಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆಯ ಮೇಲೆ ರಸ್ತೆ ನಿಯಮಗಳ ಚಿತ್ತಾರಗಳನ್ನು ಈ ತಂಡಿ ಚಿತ್ರಿಸಿದೆ. ಆಕರ್ಷಕವಾಗಿ ಚಿತ್ರಗಳ ಮೂಲಕ ಇಡೀ ರಸ್ತೆ ನಿಯಮಗಳು ಮಕ್ಕಳ ಮನಸ್ಸಿನಲ್ಲಿ ಇಳಿಯುವಂತೆ ಮಾಡುವ ವಿನೂತನ ಪ್ರಯತ್ನ ನಡೆಯುತ್ತಿದೆ.
ನಮ್ಮ ಶಾಲಾ ಗೋಡೆಯ ಮೇಲೆ ಚಿತ್ತಾರವನ್ನು ಅರಳಿಸಿದವರು ಸಮೀಪದ ಬೇಳೂರು, ಕೆದೂರು, ವಕ್ವಾಡಿ, ಬೀಜಾಡಿ ಮತ್ತು ವಡೇರಹೋಬಳಿ ಸರಕಾರಿ ಪ್ರೌಢಶಾಲಾ ಚಿತ್ರಕಲಾ ಅಧ್ಯಾಪಕರು. ಧನ್ಯವಾದ ಹಾಗೂ ಅಭಿನಂದನೆಗಳು ಆ ನಮ್ಮ ಚಿತ್ರಕಲಾ ಅಧ್ಯಾಪಕರಿಗೆ ಸಲ್ಲಬೇಕು. ಇವತ್ತು ಬೆಳ್ಳಿಗ್ಗೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೂ ತಮ್ಮ ಕುಂಚದಲ್ಲಿ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುವ ಈ ಮಾಹಿತಿಯನ್ನು ಅರಳಿಸಿದರು ಎನ್ನುತ್ತಾರೆ ಕುಂಭಾಶಿಯ ಶಿಕ್ಷಕಿಯಾದ ಸುಚಿತ್ರರವರು.
ಒಟ್ಟಿನಲ್ಲಿ ಈ ಶಿಕ್ಷಕರು ಮಾಡುತ್ತಿರುವ ಈ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತಲೇ ನಾವು ಕೂಡ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇತರರಿಗೂ ತಿಳಿಸಬೇಕಾಗಿದೆ. ಈ ಶಿಕ್ಷಕರನ್ನು ಉಳಿದ ಶಿಕ್ಷಕರು ಮಾದರಿಯಾಗಿ ಸ್ವೀಕರಿಸುತ್ತಾರೆಂದು ಆಶಿಸೋಣ.
ಆ ಶಿಕ್ಷಕರು ಶಾಲಾ ಗೋಡೆಗಳ ಮೇಲೆ ಬಿಡಿಸಿರುವ ಕೆಲ ಚಿತ್ರಗಳು ಇಲ್ಲಿವೆ