Homeಮುಖಪುಟಜಯ ಮಹಾಭಾರತದ ಮರುಕಥನ

ಜಯ ಮಹಾಭಾರತದ ಮರುಕಥನ

- Advertisement -
- Advertisement -

ಭಾರತದ ಮಹಾ ಕಾವ್ಯವಾದ ಮಹಾಭಾರತದ ಮೂಲಕೃತಿ “ಜಯ”. ಅದೇನೂ ಈಗ ನಾವು ಕಾಣುತ್ತಿರುವ ಮಹಾಭಾರತದಷ್ಟು ದೊಡ್ಡದಾಗಿರಲಿಲ್ಲ. ಕುಟುಂಬವೆರಡರ ದಾಯಾದಿ ಕಲಹದ ಕತೆಯು ಬಾಯಿಂದಬಾಯಿಗೆ ಹರಡಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸಿತು. ಪೀಳಿಗೆಗಳಿಂದ ಪೀಳಿಗೆಗಳಿಗೆ ದಾಟಿತು. ಹಾಗೆ ಹರಡುತ್ತಾ, ಸಂಚರಿಸುತ್ತಾ, ದಾಟುತ್ತಾ ವಿವಿಧ ಪ್ರದೇಶಗಳ ವಿವಿಧ ಸಂಸ್ಕೃತಿಗಳನ್ನು ತನ್ನದಾಗಿಸಿಕೊಳ್ಳುತ್ತಾ, ವಿವಿಧ ರೀತಿನೀತಿಗಳನ್ನು ಒಳಗೊಳ್ಳುತ್ತಾ, ವಿವಿಧ ಮಾದರಿಗಳ ಪಾತ್ರಗಳೆಲ್ಲಾ ಭಾಗವಹಿಸುತ್ತಾ ಬೃಹತ್ತಾಗಿ ಬೆಳೆದು ಮಹಾಭಾರತವಾಯಿತು.

ಮಹಾಭಾರತವೆಂಬ ಗೊಂಡಾರಣ್ಯವನ್ನು ಹೊಕ್ಕು ನೋಡಿದರೆ ನಾವು ದೇಶವೆಂದು ಈಗ ಕರೆಯುವ ಈ ಭೂಭಾಗದಲ್ಲಿ ಎಂತೆಂತಹ ಸಂಸ್ಕೃತಿಗಳಿದ್ದವು, ಸಾಮಾಜಿಕ ಪದ್ಧತಿಗಳಿದ್ದವು, ಜನರಿದ್ದರು, ಎಂತೆಂತಹ ಘನತೆ ಗೌರವಗಳಿದ್ದವು, ಯಾವ್ಯಾವ ಕಾರಣಗಳಿಂದ ಸಾಮಾಜಿಕ ಮತ್ತು ವ್ಯಕ್ತಿಗತ ಅಪಮಾನಗಳು ಮತ್ತು ಸನ್ಮಾನಗಳಾಗುತ್ತಿದ್ದವು? ಎಂತೆಂತಹ ನಮೂನೆಯ ಮನಸ್ಥಿತಿಗಳಿದ್ದವು; ಹೀಗೆ ಬಲು ಸೂಕ್ಷ್ಮ ಮತ್ತು ಸ್ಥೂಲ ವಿಚಾರಗಳೆಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತವೆ.

ರಾಜಕಾರಣ, ಧರ್ಮಕಾರಣ, ಮಾನುಷಕಾರಣ, ದ್ವೇಷಕಾರಣ, ಮೋಹಕಾರಣ, ಅಹಂಕಾರಕಾರಣ, ದೌರ್ಬಲ್ಯಕಾರಣ. ಹೀಗೆ ನಾನಾ ಕಾರಣಗಳು ಮನುಷ್ಯನಲ್ಲಿ ಮತ್ತು ಮಾನುಷ ಸಮಾಜದಲ್ಲಿ ಉಂಟುಮಾಡುವ ಪರಿಣಾಮಗಳನ್ನು ವಿವರಿಸುತ್ತದೆ ಈ ಮಹಾಭಾರತ. ಚಾತುರ್ವರ್ಣ ವ್ಯವಸ್ಥೆಯು, ಪ್ರಭುತ್ವದ ದಬ್ಬಾಳಿಕೆಯು, ಸ್ವಜನಾಸಕ್ತಿ, ಸ್ವಪರಿವಾರ ಮೋಹವು ಏನೆಲ್ಲಾ ಶೋಷಣೆಗಳನ್ನು ಮಾಡಿತು, ಎಂತೆಂತಹ ದುರಂತಗಳನ್ನು ಕಂಡಿತು ಎಂದು ಕಂಡಹಾಗೇ ವಿವರಿಸುತ್ತದೆ. ಒಳ್ಳೆಯ ಅಥವಾ ಕೆಟ್ಟ ಎಂಬ ಗೆರೆ ಎಳೆದಂತಹ ಸಿದ್ಧ ಮಾದರಿಗಳನ್ನು ಮುಂದಿಡದೇ, ಒಳ್ಳೆಯತನದ ಹಿಂದಿನ ಕರಾಳ ಮುಖವನ್ನು, ಕೆಟ್ಟದೆನ್ನುವುದರ ಹಿಂದಿನ ನೈಜತೆ ಮತ್ತು ಪ್ರಾಮಾಣಿಕತೆಯ ಗುಣವನ್ನು ಗುರುತಿಸುತ್ತದೆ.

ನಿಷ್ಪಕ್ಷಪಾತ ನಿರೂಪಣೆಯೇ ಮಹಾಭಾರತದ ಶಕ್ತಿ ಮತ್ತು ಮೌಲ್ಯ. ಪಕ್ಷಪಾತ ಮಾಡುವ ಕೃಷ್ಣನು ಕೂಡ ಶಾಪಕ್ಕೆ, ದುರ್ವಿಧಿಯ ಸಾವಿಗೆ ಬಲಿಯಾಗುತ್ತಾನೆ. ಒಳ್ಳೆಯವರೆಂದು ಕೃಷ್ಣನಿಂದ ಮತ್ತು ಭೀಷ್ಮಾದಿಗಳಿಂದ ಪ್ರಾಮಾಣೀಕರಿಸಲ್ಪಡುವ ಪಾಂಡವರು ಹಾದಿಯಲ್ಲಿ ಹೆಣಗಳಾಗಿ ಬೀಳುತ್ತಾರೆ. ಇನ್ನು ಪಾತ್ರಗಳೆಂದರೆ ಅವು ಬರಿಯ ವ್ಯಕ್ತಿಗಳಲ್ಲ. ವ್ಯಕ್ತಿತ್ವದ ಮಾದರಿಗಳು. ಶಂತನುವಿನಿಂದ ಹಿಡಿದು ಪರೀಕ್ಷಿತನವರೆಗೂ ಈಗಲೂ ನಾವು ನಮ್ಮನಮ್ಮಲ್ಲಿ ಕಾಣುತ್ತಲೇ ಇರುವ ಹಲವು ಮನಸ್ಥಿತಿಗಳ, ಹಲವು ವ್ಯಕ್ತಿತ್ವಗಳ ಮಾದರಿಗಳು.

ಹಾಗಾಗಿಯೇ ಇದು ಒಂದು ಧಾರ್ಮಿಕ ಗ್ರಂಥವಲ್ಲ. ಈ ನೆಲದ ನಿವಾಸಿಗಳಿಗೆಲ್ಲಾ, ಅವರು ಯಾವುದೇ ಧರ್ಮದವರಾಗಲಿ, ತಮ್ಮತಮ್ಮಲ್ಲಿ ಕಾಣುತ್ತಿರುವ ವ್ಯಕ್ತಿತ್ವಗಳ, ಸಂಘರ್ಷಗಳ, ಬದುಕಿನ ನೋವುನಲಿವುಗಳ ಕಾರಣ ಮತ್ತು ಪರಿಣಾಮಗಳ ಸಮಾಜೋಸಾಂಸ್ಕೃತಿಕ ಕಥನವಿದು. ನಿರಂತರವಾಗಿ ಪ್ರಯೋಗಗಳಿಗೆ ಮತ್ತು ಪರಿವರ್ತನೆಗಳಿಗೆ ಒಳಪಡುತ್ತಿದ್ದ ತಾತ್ವಿಕತೆಗಳ ವಿಶ್ಲೇಷಣೆ ಇದು. ವಿಶಾಲ ಭೂಭಾಗದ ಸಂಕೀರ್ಣ ಸಂಸ್ಕೃತಿಗೆ ಇದೊಂದು ರೂಪಕ ಇತಿಹಾಸ. ಯಾರೂ ಅಮುಖ್ಯರಲ್ಲದೇ ಸಮಾಜದ ಮತ್ತು ವ್ಯಕ್ತಿಗಳ ಆಗುಹೋಗುಗಳಿಗೆ ಕಾರಣ ಕರ್ತೃಗಳಾದವರ ಒಂದು ಮಹಾಕಾವ್ಯ.

ಈ ಮಹಾಕಾವ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ದಾರಿ ತೋರುವ ಕೃತಿ ದೇವದತ್ತ ಪಟ್ನಾಯಕರವರ ಜಯ. ಗಿರಡ್ಡಿ ಗೋವಿಂದರಾಜ ಇದನ್ನು ಕನ್ನಡಕ್ಕೆ ತಂದಿದ್ದಾರೆ.

ಈಗ ನಾವು ತಿಳಿದಿರುವ ರಿಲೀಜಿಯನ್ ಎಂಬ ಧರ್ಮದ ಪರಿಕಲ್ಪನೆಯೇ ಇಲ್ಲದಿದ್ದ ಮಹಾಭಾರತದ ಕಾಲದಲ್ಲಿಯೂ ಧರ್ಮದ ಬಗ್ಗೆ ಮಾತಾಡುತ್ತಾರೆ. ಅದನ್ನು ಎತ್ತಿ ಹಿಡಿಯುತ್ತಾರೆ. ಅದನ್ನು ಪಾಲಿಸುತ್ತಾರೆ. ಅದಕ್ಕಾಗಿ ಬದುಕುತ್ತಾರೆ. ಅದಕ್ಕಾಗಿ ಸಾಯುತ್ತಾರೆ. ಆದರೆ ಆ ಧರ್ಮವೆಂಬುದು ಅಲ್ಲಿ ಸ್ವಧರ್ಮ ಎಂಬ ಒಬ್ಬರ ಅಥವಾ ಒಂದರ ಅಥವಾ ಒಂದು ವ್ಯವಸ್ಥೆಯ ಮೂಲ ಗುಣಸ್ವಭಾವ, ರೀತಿ ಮತ್ತು ನೀತಿ. ಅದೊಂದು ಜೈವಿಕ, ಆಧ್ಯಾತ್ಮಿಕ, ತಾತ್ವಿಕ ಮತ್ತು ಸಾಮಾಜಿಕ ಅಸ್ತಿತ್ವಗಳ ಸೂಕ್ಷ್ಮ ವಿಚಾರ.

ಮಹಾಭಾರತ ಭಾರತದ ಒಂದು ಹೆಮ್ಮೆಯ ಕಾವ್ಯ. ಆದರೆ ನಿಷ್ಪಕ್ಷಪಾತವಾದ ಈ ಮಹಾಭಾರತವನ್ನು ಪರ ಅಥವಾ ವಿರೋಧದ ನೆಲೆಗಟ್ಟುಗಳಿಂದ ನೋಡದೇ ರೂಪಕ ಇತಿಹಾಸವನ್ನು ಅಭ್ಯಾಸ ಮಾಡುವಂತೆ ದೇವದತ್ತ ಜಯವನ್ನು ಬರೆದು ಮಹದುಪಕಾರ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...