ಉತ್ತರಪ್ರದೇಶದ ಲಕ್ನೋದಲ್ಲಿ CAA, NRC ಮತ್ತು NPR ವಿರುದ್ದ ಅನಿರ್ದಿಷ್ಠಾವಧಿ ಪ್ರತಿಭಟನೆ ಮುಂದುವರಿದಿದೆ. ತಡೆಯಲು ಅಸಾಧ್ಯವಾದ ಚಳಿಯಲ್ಲಿಯೇ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ದ ಮಹಿಳೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಐದನೇ ದಿನವೂ ಮುಂದುವರಿದಿದೆ.
ಗೃಹ ಸಚಿವ ಅಮಿತ್ ಶಾ ಲಕ್ನೋಗೆ ಇಂದು ಭೇಟಿ ನೀಡಿ CAA ಪರ ಪ್ರಚಾರ ನಡೆಸಲಿದ್ದು, ಸೂಕ್ತ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ. ಈ ನಡುವೆ ಪ್ರತಿಭಟನಾಕಾರರ ವಿರುದ್ದ FIR ದಾಖಲಿಸಲಾಗಿದೆ.
ಸರ್ಕಾರ ನಮ್ಮ ಬಳಿ ಬಂದು ಮಾತುಕತೆ ನಡೆಸುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯುತ್ತದೆ. ಅಮಿತ್ ಶಾ ಇಂದು ಲಕ್ನೋಗೆ ಬರುತ್ತಿದ್ದಾರೆ. ಅವರು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಹಾಗಾಗಿ ಅವರು ಈ ಕುರಿತು ಸ್ಪಷ್ಟನೆ ನೀಡಬೇಕು. ಪ್ರತಿಭಟನೆ ನಡೆಸುವುದು ನಮ್ಮ ಸಂವಿಧಾನಬದ್ದ ಹಕ್ಕು. 150 ಜನರ ಮೇಲೆ FIR ದಾಖಲಿಸಲಾಗಿದೆ ಎಂದು ಪ್ರತಿಭಟನಾನಿರತ ಮಹಿಳೆಯರು ದೂರಿದ್ದಾರೆ.
ಸರ್ಕಾರ 144 ಸೆಕ್ಷನ್ ಮೂಲಕ ನಿಷಾಧಾಜ್ಞೆ ಹೇರಬಹುದು. ಆದರೆ ನಮ್ಮ ಅಭಿವ್ಯಕ್ತಿ , ಸ್ವಾತಂತ್ರ್ಯ ಮತ್ತು ಸತ್ಯದ ಮೇಲೆ ನಿಷಾಧಾಜ್ಞೆ ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದು ಸಮಾನ ಭಾರತಕ್ಕಾಗಿ ಹೋರಾಟ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿಯಲ್ಲಿ ಬುರ್ಕಾಧಾರಿ ಮಹಿಳೆಯರು No CAA, No NRC, No NPR ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.
ಸರ್ಕಾರದ ಹೊಸ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ನಮ್ಮ ದೇಶ. ಅವರು ನಮ್ಮ ಪೌರತ್ವದ ಗುರುತನ್ನು ಕೇಳುವಂತಿಲ್ಲ. ನಾವು ಇಲ್ಲಿಯೇ ಬದುಕುತ್ತಿದ್ದೇವೆ. ಮೋದಿ ಸರ್ಕಾರದಲ್ಲಿ ದೇಶದಲ್ಲಿ ಏನೋ ನಡೆಯುತ್ತಿದೆ. ಮಹಿಳೆಯರು ಬೀದಿಗೆ ಬಿದ್ದಿದ್ದಾರೆ. ನಮ್ಮ ಭವಿಷ್ಯ ಸುರಕ್ಷಿತವಾಗಿಲ್ಲ. ನಮ್ಮ ಮಕ್ಕಳು ಇಲ್ಲಿಯೇ ಇದ್ದಾರೆ. NRC, NPR, CAA ವಾಪಸ್ ಪಡೆಯುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಪೊಲೀಸರು ನಮ್ಮ ಹಾಸಿಗೆಗಳನ್ನು ಹೊತ್ತೊಯ್ದಿದ್ದಾರೆ. ಆದರೂ ದೃತಿಗೆಡುವುದಿಲ್ಲ. ಹೊಸ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ಹೋಗುವುದಿಲ್ಲ. ಮಹಿಳೆಯರು ರಾತ್ರಿಯೆಲ್ಲ ಎದ್ದಿದ್ದೇವೆ. ನಮಗೆ ತೊಂದರೆ ನೀಡುವ ಉದ್ದೇಶದಿಂದ ಸ್ನಾನದ ಕೋಣೆಗಳನ್ನು ಮುಚ್ಚಿದ್ದಾರೆ. ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಇದರಿಂದ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.