1 ಕೊರೋನಾ ವೈರಸ್ ತಗುಲಿ ಸಾವಿರಾರು ಜನ ರಸ್ತೆಯಲ್ಲಿಯೇ ಮೃತಪಟ್ಟರೆ?
ಈ ಚಿತ್ರವನ್ನು ನಿಮ್ಮ ಫೇಸ್ಬುಕ್ ಅಥವಾ ವಾಟ್ಸಾಪ್ನಲ್ಲಿ ನೋಡಿರಬಹುದು. ಕೊರೋನಾ ವೈರಸ್ ತಗುಲಿ ಸಾವಿರಾರು ಜನ ರಸ್ತೆಯಲ್ಲಿಯೇ ಮೃತಪಟ್ಟಿದ್ದಾರೆ ಎಂಬ ಹೆಡ್ಲೈನ್ ಕೂಡ ಕೊಟ್ಟಿರಬಹುದು ಅಲ್ಲವೇ? ಬಹಳಷ್ಟು ಜನ ಇದನ್ನು ನಂಬಿಬಿಟ್ಟಿದ್ದಾರೆ.
ಇದನ್ನು ಫ್ಯಾಕ್ಟ್ ಚೆಕ್ ನಡೆಸುವ ಸಲುವಾಗಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸತ್ಯ ತಿಳಿದುಬಂದಿದೆ. ಅದರಂತೆ ಇದು ಕೊರೋನ ವೈರಸ್ನಿಂದ ಸತ್ತ ವ್ಯಕ್ತಿಗಳ ಚಿತ್ರವಲ್ಲ ಎಂದು ತಿಳಿದುಬಂದಿದೆ.
ಈ ಚಿತ್ರವನ್ನು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯು 2014 ರಲ್ಲಿಯೇ ಪ್ರಕಟಿಸಿದೆ. ಅವರ ಫೋಟೋ ಪ್ರಬಂಧದ ವರದಿಯ ಪ್ರಕಾರ, “ಫ್ರಾಂಕ್ಫರ್ಟ್ನಲ್ಲಿರುವ ಕಾಟ್ಜ್ಬಾಚ್ ‘ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ನಲ್ಲಿ” ಸತ್ತ 528 ಸಂತ್ರಸ್ತರನ್ನು ಸ್ಮರಿಸುವ ಸಲುವಾಗಿ ಕಲಾ ಯೋಜನೆಯ ಭಾಗವಾಗಿ ಜನರು ಪಾದಚಾರಿ ವಲಯದಲ್ಲಿ ಮಲಗಿರುವುದಾಗಿದೆ”. ಈ ಚಿತ್ರವನ್ನು ರಾಯಿಟರ್ಸ್ ತೆಗೆದಿದೆ. ಅಂದರೆ ಇದು ಅಣುಕು ಪ್ರದರ್ಶನವೇ ಹೊರತು ಸತ್ತಿರುವುದಲ್ಲ ಎಂಬುದು ಸ್ಪಷ್ಟವಾಗಿದೆ.
2 ಮಂಗಳೂರಿನಿಂದ ಬೆಂಗಳೂರುವರೆಗೆ ಆಂಬುಲೆನ್ಸ್ ಮುಂದೆ ಒಂದೇ ಪೊಲೀಸ್ ವಾಹನ ಸಂಚರಿಸಿತೇ?
ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 40 ದಿನದ ಹಸಿಗೂಸನ್ನು ಫೆಬ್ರವರಿ 6 ರಂದು ಮಂಗಳೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಝೀರೋ ಟ್ರಾಫಿಕ್ನಲ್ಲಿ ಕೇವಲ 4 ಗಂಟೆ 15 ನಿಮಿಷದಲ್ಲಿ ಆಂಬುಲೆನ್ಸ್ನಲ್ಲಿ ಸಾಗಿಸಿದ್ದರು. ಇದಕ್ಕಾಗಿ ಆ ಆಂಬುಲೆನ್ಸ್ ಡ್ರೈವರ್ ಆಗಿದ್ದ ಮೊಹಮ್ಮದ್ ಹನೀಫ್ರವರಿಗೆ ರಾಜ್ಯಾದ್ಯಂತ ಪ್ರಶಂಸೆಗಳ ಸುರಿಮಳೆಯಾಗಿತ್ತು.
ಇದಾದ ಎರಡು ಮೂರು ದಿನದ ನಂತರ ‘ಆಂಬುಲೆನ್ಸ್ವ ಹೀರೋ ಆದ. ಆಂಬುಲೆನ್ಸ್ ಮುಂದೆ ಪೊಲೀಸ್ ಜೀಪ್ ಓಡಿಸಿದ ಪೊಲೀಸರನ್ನು ಮರೆತವು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಹ ಗಾಂಧೀಜಿಯನ್ನು ಹೀರೋ ಮಾಡಿ ಸುಭಾಷ್ ಚಂದ್ರ ಬೋಸ್ರನ್ನು ಮರೆತವು. ನಮ್ಮ ದೇಶದಲ್ಲಿ ಪ್ರಚಾರಕ್ಕೆ ಮಾತ್ರ ಆದ್ಯತೆ, ನಿಷ್ಟೆಗಲ್ಲ ಎಂದು ಹಿಂದೂ ನ್ಯಾಷನಲಿಸ್ಟ್ ವಿಕಾಸ್ ವಿಕ್ಕಿ ಎಂಬುವ ಮಾಡಿದ ಪೋಸ್ಟರ್ ಎಲ್ಲಾ ಕಡೆ ಹರಿದಾಡುತ್ತಿದೆ.
ಯಮವೇಗದಲ್ಲಿ ಜೀಪ್ ಚಲಾಯಿಸುತ್ತಾ ಆಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ 2012ರ ಬ್ಯಾಚಿನ, ಬಿಜಾಪುರ ಮೂಲದ ಮಂಗಳೂರು ಸಿಟಿ ರಿಸರ್ವ್ ಪೊಲೀಸ್ ಮಾರುತಿ ಡಿ ಯವರಿಗೆ ನಮ್ಮೆಲ್ಲರ ಸಲಾಂ.. ಎಂಬ ಸಂದೇಶ ಕೂಡ ವೈರಲ್ ಆಗಿದೆ.
ಇನ್ನು ಬಿಜೆಪಿಯ ಮಹೇಶ್ ವಿಕ್ರಮ್ ಹೆಗಡೆ ಎಂಬುವವರು ಸಹ “ಮೊನ್ನೆ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಆಂಬುಲೆನ್ಸ್ನ ಮುಂದಿದ್ದ ಪೊಲೀಸ್ ಜೀಪಿನವರು ಇವರೆ” ಎಂದು ಮಾರುತಿ ಎಂಬ ಪೊಲೀಸ್ ಅಧಿಕಾರಿಯ ಫೋಟೊವನ್ನು ಫೇಸ್ಬುಕ್ನಲ್ಲಿ ಷೇರ್ ಮಾಡಿದ್ದಾರೆ.
ಬಹಳಷ್ಟು ಜನ ಆಂಬುಲೆನ್ಸ್ನ ಮುಸ್ಲಿಂ ಡ್ರೈವರ್ನನ್ನು ಮಾತ್ರ ಹೊಗಳುತ್ತಿದ್ದಾರೆ, ಆದರೆ ಹಿಂದೂ ಪೊಲೀಸ್ ಡ್ರೈವರ್ನ ಮರೆತುಬಿಟ್ಟಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಆದರೆ ಇದು ಸುಳ್ಳು ಸುದ್ದಿಯಾಗಿದೆ. ಏಕೆಂದರೆ ವಾಸ್ತವದಲ್ಲಿ ಆಂಬುಲೆನ್ಸ್ಗೆ ಮಂಗಳೂರಿನಿಂದ ಬೆಂಗಳೂರಿನವರೆಗೆ ಒಂದೇ ಪೈಲೆಟ್ ಜೀಪು ಬರಲು ಪೊಲೀಸ್ ನಿಯಮಾವಳಿಗಳಲ್ಲಿ ಅವಕಾಶವೇ ಇಲ್ಲ. ಹಾಗಾಗಿ ಆಂಬುಲೆನ್ಸ್ ಮಂಗಳೂರಿನಿಂದ ಹೊರಟಾಗ, ಅದಕ್ಕೆ ಮಂಗಳೂರು ಕಮೀಷನರ್ ವ್ಯಾಪ್ತಿಯಲ್ಲಿ ಒಂದು ಜೀಪು ಪೈಲಟ್ ಕೊಟ್ಟು, ಮಂಗಳೂರು ಜಿಲ್ಲಾ ವ್ಯಾಪ್ತಿಗೆ ಬಂದ ತಕ್ಷಣ ಮತ್ತೊಂದು ಜೀಪು, ಹಾಸದ ಗಡಿಯಿಂದ ಇನ್ನೊಂದು ಜೀಪು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಗದೊಂದು ಜೀಪು ಪೈಲಟ್ ಕೊಟ್ಟಿದೆಯೇ ಹೊರತು ಒಂದೇ ಜೀಪು ಬೆಂಗಳೂರಿನತನಕ ಬಂದಿಲ್ಲ. ಅಲ್ಲದೇ ಅವರು ಷೇರ್ ಮಾಡಿರುವ ಪೊಲೀಸ್ ಜೀಪಿನ ಫೋಟೊ ಸಹ 2016ರ ಕಲ್ಕತ್ತದ ಫೋಟೊವಾಗಿದೆಯೇ ಹೊರತು ಇಲ್ಲಿಯದಲ್ಲ.
3 ಈಸ್ಟ್ ಇಂಡಿಯಾ ಕಂಪನಿ ರಾಮನ ಚಿತ್ರವಿರುವ ನಾಣ್ಯಗಳನ್ನು ಬಿಡುಗಡೆ ಮಾಡಿತ್ತೇ?
ಪೋಸ್ಟ್ ಕಾರ್ಡ್ ಕನ್ನಡ ಫೇಸ್ಬುಕ್ ಪುಟ “ಈಸ್ಟ್ ಇಂಡಿಯಾ ಕಂಪನಿ 1818ರಲ್ಲಿಯೇ ರಾಮನ ಚಿತ್ರವಿರುವ ಮತ್ತು ಓಂ ಎಂದು ನಾಣ್ಯಗಳನ್ನು ಬಿಡುಗಡೆ ಮಾಡಿತ್ತು ಎಂದು ಹೇಳಿಕೊಂಡಿದೆ.
ಇದರ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಅದು ಸುಳ್ಳು ಎಂದು ಗೊತ್ತಾಗಿದೆ. ನಾಣ್ಯಶಾಸ್ತ್ರಜ್ಞ ಮತ್ತು ಲೇಖಕ ಮೋಹಿತ್ ಕಪೂರ್ ಇದು ಯಾರೋ ಫ್ಯಾಂಟಸಿಗಾಗಿ ಮಾಡಿರುವುದೇ ಹೊರತು ನಿಜದ ನಾಣ್ಯಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
4 ಗಾಂಜಾವು ಕೊರೋನ ವೈರಸ್ ಅನ್ನು ಕೊಲ್ಲುತ್ತದೆಯೇ?
ಈಗ ಎಲ್ಲೆಲ್ಲೂ ಕೊರೋನ ವೈರಸ್ ಮಾತು. ಇಂತಹ ಸಂದರ್ಭದಲ್ಲಿ ಹಲವು ಸುಳ್ಳು ಸುದ್ದಿಗಳು ಸಹ ಓಡಾಡುತ್ತಿವೆ. ಅದರಲ್ಲಿ ಗಾಂಜಾವು ಕರೋನ ವೈರಸ್ ಅನ್ನು ಕೊಲ್ಲುತ್ತದೆ ಎಂಬುದಾಗಿದೆ.
ಸಿನಿಮಾ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಎಂಬುವವರು ಗಾಂಜಾವು ಕೊರೋನ ವೈರಸ್ ಅನ್ನು ಕೊಲ್ಲುತ್ತದೆ, ಹಾಗಾಗಿ ಅದರ ಮಾರಾಟವನ್ನು ಕಾನೂನುಬದ್ಧಗೊಳಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಇದು ಸುಳ್ಳು ಸುದ್ದಿಯಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ. ಅದೇ ರೀತಿ ಡೆಟಾಲ್ನಿಂದ ಕೈತೊಳೆದುಕೊಂಡರೆ ಕೊರೋನ ಹರಡುವುದಿಲ್ಲ ಎಂಬ ಮತ್ತೊಂದು ಸುಳ್ಳನ್ನು ಸಹ ಹರಿಬಿಡಲಾಗಿದೆ.
5 ಕೊರೋನ ಪೀಡಿತ 20000 ಜನರನ್ನು ಕೊಲ್ಲಲು ಚೀನಾ ಕೋರ್ಟಿ ಮೆಟ್ಟಿಲೇರಿದೆಯೇ?
ಹೀಗೊಂದು ಸುದ್ದಿ ಹರಿದಾಡುತ್ತಿದೆ. ಮಧು ಪೂರ್ಣಿಮ ಕಿಶ್ವರ್ ಎಂಬ ಬಲಪಂಥೀಯ ಕಾರ್ಯಕರ್ತೆ “ಮಾನವೀಯತೆ ಇಲ್ಲದ ಕಮ್ಯುನಿಸ್ಟರು ಜನರನ್ನು ಸಾಯಿಸುತ್ತಾರೆ” ಎಂದು ಆರೋಪಿಸಿ ಎಬಿ-ಟಿಸಿ ಎಂಬುದರಲ್ಲಿ ಬಂದ ಲೇಖನ ಷೇರ್ ಮಾಡಿದ್ದಾರೆ.
ಆದರೆ ಅವರು ಹಾಕಿರುವ ಲೇಖನ ಸುಳ್ಳಾಗಿದೆ. ಮತ್ತು ಎಬಿ-ಟಿಸಿ ಎಂಬುದು ಫೇಕ್ನ್ಯೂಸ್ ಹರಡುವ ವೆಬ್ಸೈಟ್ ಆಗಿದೆ.
ಭಯಂಕರ ಫೇಕ್ ನ್ಯೂಸ್ ಗಳು ಈ ತರಹದ ಫೇಕ್ ನ್ಯೂಸ್ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.