ಕಲಬುರಗಿಯಲ್ಲಿ ನಿನ್ನೆಯಿಂದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದೆ. ಸಾವಿರಾರು ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಜನಸಾಮಾನ್ಯರು ಅತಿ ಉತ್ಸಾಹದಿಂದ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಎಚ್.ಎಸ್. ವೆಂಕಟೇಶ ಮೂರ್ತಿ ಮತ್ತು ಕಸಾಪ ಅಧ್ಯಕ್ಷ ಮನು ಬಳಿಗಾರ್ ವಿರುದ್ಧ ಅಪಸ್ವರ ಕೇಳಿಬಂದಿದೆ.
ಮೊದಲಿಗೆ ಸರ್ವಾಧ್ಯಕ್ಷರ ನುಡಿಗಳನ್ನಾಡಿದ ಎಚ್.ಎಸ್. ವೆಂಕಟೇಶ ಮೂರ್ತಿಯವರು “ಒಕ್ಕೂಟ ವ್ಯವಸ್ಥೆಗೆ ಸಂಸ್ಕೃತ ಇಲ್ಲವೇ ಪ್ರಕೃತ ಭಾಷೆ ಅಗತ್ಯವಾಗಿದೆ. ಸಂಸ್ಕೃತಿ ರಾಷ್ಟ್ರಭಾಷೆಯಾಗಲಿ, ಭಾರತದ ಎಲ್ಲಾ ಭಾಷೆಗಳೂ ನಮ್ಮ ಮಾತೃಭಾಷೆಗಳೇ” ಎಂಬ ಭಾಷಣಕ್ಕೆ ಬಹಳಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
“ಹಿಂದೊಮ್ಮೆ ಶಿಕ್ಷಣದಲ್ಲಿ ಸಂಸ್ಕೃತದ ಹೇರಿಕೆಯನ್ನು ಇಡೀ ಕನ್ನಡ ನಾಡು ಅಣ್ಣಾವ್ರ ನೇತೃತ್ವದಲ್ಲಿ ವೀರೋಧಿಸಿ ತನ್ನ ಒಗ್ಗಟ್ಟು ತೋರಿಸಿತ್ತು.
ಈಗ ಸಂಸ್ಕೃತವನ್ನ ದೇಶದ ಸಂಪರ್ಕ ಭಾಷೆಯಾಗಿ ಅಭಿವೃದ್ಧಿಪಡಿಸಬೇಕು ಎನ್ನುವ ತಮ್ಮ ಮಾತನ್ನ ಸಮ್ಮೇಳನಾಧ್ಯಕ್ಷರು ಹಿಂದೆ ಪಡೆಯಬೇಕು. ಹೀಗೆ ಮಾತಾಡುವುದು ಕುವೆಂಪು, ಶಂಬಾ, ರಾಜ್ ಕುಮಾರ್ ಮುಂತಾದ ಹಿರಿಯ ಕನ್ನಡ ಮನಸ್ಸುಗಳನ್ನ ಅಪಮಾನ ಮಾಡಿದಂತೆ ಎಂದು ಕನ್ನಡಿಗರು ಭಾವಿಸಬೇಕು.
ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಹಿಂದೆ ಗೋಕಾಕ್ ಚಳುವಳಿ ಕಾರಣವಾಗಿ, ಗುಂಡೂರಾಯರು ಅಧಿಕಾರ ಕಳೆದುಕೊಂಡರು. ಈಗ ಕನ್ನಡದ ಅಗ್ರಮಾನ್ಯತೆಯನ್ನ ಎತ್ತಿ ಹಿಡಿಯುವ ಸರದಿ ನಿಮ್ಮದು. ಸಮ್ಮೇಳನಾಧ್ಯಕ್ಷರ ಹೇಳಿಕೆಯನ್ನ ವಿರೋಧಿಸಿ ನಿಮ್ಮ ಕನ್ನಡತನವನ್ನ ಮೆರೆಯಿರಿ” ಎಂದು ಕವಿ ಚಿದಂಬರ ನರೇಂದ್ರರವರು ಒತ್ತಾಯಿಸಿದ್ದಾರೆ.
ಸಂಸ್ಕೃತ ಕೇಳಿದರೆನೆ ಕರ್ಣದಲ್ಲಿ ಕಾದ ಸೀಸ ಉಯ್ದ ಸಂಗತಿಗಳು ಇರುವಾಗ ಅದೇಗೆ ರಾಷ್ಟ್ರಭಾಷೆಯಾಗಬೇಕೆಂದು ಪ್ರತಿಪಾದಿಸುತ್ತಿದ್ದಾರೊ ತಿಳಿಯದೊ? ಎಂದು ಈಹತಾ ಎಂಬುವವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಎಚ್ ಎಸ್ ವೆಂಕಟೇಶ ಮೂರ್ತಿಯವರು ಸಂಸ್ಕೃತ ಸಾಹಿತ್ಯ ಸಮ್ಮೇಳನ ಅಂತ ಏನಾದರೂ ಇದ್ರೆ, ಅವರು ಅದರ ಅಧ್ಯಕ್ಷತೆ ವಹಿಸಲಿ, ಅಲ್ಲಿ ಏನಾದರೂ ಹೇಳಲಿ! ಅವರ ಹೇಳಿಕೆಗೆ ನಮ್ಮ ಸಮ್ಮೇಳನ ವೇದಿಕೆಯಲ್ಲ! ಎಂದು ವಿನಯ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನು ಬಳಿಗಾರ್ ರಾಜೀನಾಮೆಗೆ ವೇದಿಕೆಯಲ್ಲಿ ಹೆಚ್ಚಿದ ಒತ್ತಡ!
ಇನ್ನು ಕಸಾಪ ಅಧ್ಯಕ್ಷ ಮನು ಬಳಿಗಾರ್ ರಾಜೀನಾಮೆ ನೀಡಬೇಕೆಂಬ ಆಗ್ರಹ ಸಾಹಿತ್ಯ ಸಮ್ಮೇಳನದ ವೇದಿಕೆಯಿಂದಲೇ ಹೆಚ್ಚಾಗುತ್ತಿದೆ. ಚಿಂತಕಿ ಕೆ.ನೀಲಾ ಮತ್ತು ಹಿರಿಯ ಸಾಹಿತಿ, ಬರಹಗಾರ ಆರ್.ಕೆ ಹುಡಗಿ ಮನು ಬಳಿಗಾರ್ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲು ಅರ್ಹರಲ್ಲ, ಅವರು ರಾಜೀನಾಮೆ ನಿಡಬೇಕೆಂದು ಒತ್ತಾಯಿಸಿದ್ದಾರೆ.
ಇಂದು ಕಲಬುರಗಿ ಜಿಲ್ಲಾ ದರ್ಶನ ಗೋಷ್ಠಿಯ ಅಧ್ಯಕ್ಷೀಯ ನುಡಿಗಳನ್ನಾಡಿದ ಆರ್.ಕೆ ಹುಡಗಿಯವರು “ಕಸಾಪ ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ಇಂತಹ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಳುವ ಸರ್ಕಾರ ಮಿತಿಮೀರಿ ಮಧ್ಯ ಪ್ರವೇಶ ಮಾಡಿತ್ತು. ಕನ್ನಡ ಸಂಸ್ಕೃತಿ ಸಚಿವರೆ ಅನುದಾನ ನೀಡದೇ ಸತಾಯಿಸಿದರು ಮಾತ್ರವಲ್ಲ ಸಮ್ಮೇಳನ ಎರಡನೇ ದಿನ ನಡೆದರೆ ಪೆಟ್ರೋಲ್ ಬಾಂಬ್ ಹಾಕುತ್ತೇವೆ ಎಂದು ಬೆದರಿಸಿದರು. ಆದರೂ ಅಧ್ಯಕ್ಷ ಮನು ಬಳಿಗಾರ್ ಸುಮ್ಮನಿದ್ದರು. ಇಂದಿನ ಸಮ್ಮೇಳನ ಅಧ್ಯಕ್ಷರಾಗಿರುವ ಎಚ್.ಎಸ್ ವೆಂಕಟೇಶ ಮೂರ್ತಿಯವರು ಸಹ ಆಗ ದನಿ ಎತ್ತಲಿಲ್ಲ” ಎಂದು ಅಸಮಾನಧಾನ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡುವ ವಿಚಾರಕ್ಕೆ ಸಚಿವರು ಅನುದಾನ ನಿಮ್ಮಪ್ಪನ ಮನೆಯದ್ದಲ್ಲೆ ಎಂಬ ದರ್ಪದ ಮಾತುಗಳನ್ನಾಡಿದ್ದಾರೆ. ಅನುದಾನ ಜನಸಾಮಾನ್ಯರು ಕಟ್ಟುವ ತೆರಿಗೆಯಿಂದ ಬಂದಿದ್ದು ಎಂಬುದನ್ನು ಅವರು ಮರೆಯಬಾರದು ಎಂದು ತಿರುಗೇಟು ನೀಡಿದ್ದಾರೆ.
ಇನ್ನು ನಿನ್ನೆಯ ಸಮ್ಮೇಳನದಲ್ಲಿ ಕಲಬುರಗಿಯ ಮಹಿಳಾ ಹೋರಾಟಗಾರ್ತಿ ಮತ್ತು ಚಿಂತಕಿ ಕೆ.ನೀಲಾ ಮಾತನಾಡಿ “ಕಸಾಪ ಈಗ ಕನ್ನಡಿಗರ ಸಂಸ್ಥೆಯಾಗಿಲ್ಲ ಬದಲಿಗೆ ಆಳುವವರ ಕೊಂಪೆಯಾಗಿದೆ. ಇದಕ್ಕೆ ಕಾರಣಕರ್ತರಾದ ಅಧ್ಯಕ್ಷ ಮನು ಬಳಿಗಾರ್ ರಾಜೀನಾಮೆ ನೀಡಬೇಕೆಂದು” ಒತ್ತಾಯಿಸಿದ್ದರು.
ಹಿಂದೆ ಯಾವ ಸಮ್ಮೇಳನದಲ್ಲಿಯೂ ಈ ರೀತಿಯ ಘಟನೆಗಳು ಜರುಗಿದ ಉದಾಹರಣೆಗಳಿಲ್ಲ. ಆದರೆ ಈ ಬಾರಿಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಮತ್ತು ಕಸಾಪ ಅಧ್ಯಕ್ಷರ ವಿರುದ್ಧ ಟೀಕೆಗಳು ಕೇಳಿ ಬಂದಿವೆ.