ಪ್ರತಿ ವರ್ಷ ಸ್ವಾತಂತ್ರೋತ್ಸವದ ದಿನ ತ್ರಿವರ್ಣವುಳ್ಳ ಭಾರತದ ರಾಷ್ಟ್ರ ಧ್ವಜ ಎಲ್ಲೆಡೆ ಹಾರಾಡುವುದನ್ನು ನೀವು ನೋಡಿರುತ್ತೀರಿ. ಹಾಗೆಯೇ ಇಂದು ಕೂಡ ತ್ರಿವರ್ಣ ಧ್ವಜಗಳು ರಾರಾಜಿಸಿದವು. ಆದರೆ ಅದರ ಮಧ್ಯೆಯೇ ತ್ರಿವರ್ಣ ಧ್ವಜಕ್ಕೆ ಬದಲಾಗಿ ಕನ್ನಡ ಧ್ವಜವನ್ನು ಹಾರಿಸಿ KarnatakaJobsForKannadigas ತಂಡ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಅವರು ತ್ರಿವರ್ಣ ಧ್ವಜಕ್ಕೆ ಬದಲಾಗಿ ಕನ್ನಡ ಧ್ವಜ ಹಾರಿಸಿದ್ದೇಕೆ ಗೊತ್ತೆ?
ಕನ್ನಡ ಬಾವುಟವನ್ನೂ ಹಾರಿಸಿದ್ವಿ. ಹೌದು, ಕೇಂದ್ರ ಸರಕಾರ ಕನ್ನಡಿಗರ ಬಗ್ಗೆ ತಳೆದಿರುವ ಧೋರಣೆಯನ್ನು ನಾವು ಖಂಡಿಸುತ್ತೇವೆ. ಕನ್ನಡ ನೆಲದ ಉದ್ಯೋಗ ಕನ್ನಡಿಗರಿಗೇ ಮೀಸಲಾಗಬೇಕು, ಪ್ರವಾಹ ದುರಂತದ ಸಂದರ್ಭಗಳಲ್ಲಿ ತಾರತಮ್ಯ ಸಲ್ಲ ಎಂದು ಎಷ್ಟೇ ಆಗ್ರಹಿಸಿದರೂ ಕೇಂದ್ರ ತನ್ನ ಧೋರಣೆ ಬದಲಿಸುತ್ತಿಲ್ಲ. ಇನ್ನಾದರೂ ಕರ್ನಾಟಕದ ಬಗೆಗಿನ ತನ್ನ ನಿಲುವನ್ನು ಕೇಂದ್ರ ಬದಲಿಸಬೇಕು. ಇಲ್ಲದೇ ಇದ್ದರೆ ನಮ್ಮ ಹೋರಾಟದ ದಾರಿ ನಮಗಿದೆ ಎಂದು KarnatakaJobsForKannadigas ತಂಡದ ಹರೀಶ್ ಕುಮಾರ್ ಬಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ
ಕರ್ನಾಟಕ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು ಎಂದು ಆಗ್ರಹಿಸಿ ಬಹಳ ದಿನಗಳಿಂದಲೂ ಕರ್ನಾಟಕದಲ್ಲಿ ದಿಟ್ಟ ದನಿ ಕೇಳಿಬರುತ್ತಿದೆ. ಈ ಹೋರಾಟ ಟ್ವಿಟ್ಟರ್ ನಲ್ಲಿಯೂ ಸಾಕಷ್ಟು ಸದ್ದು ಮಾಡಿದೆ. ಸಿದ್ದರಾಮಯ್ಯ, ಎಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ ಈ ಮೂವರು ಸಹ ಟ್ವಿಟ್ಟರ್ ನಲ್ಲಿ ಈ ತಂಡದ ಪ್ರಯತ್ನಕ್ಕೆ ಪ್ರತಿಕ್ರಿಯೆ ನೀಡುವ ಹಾಗೆ ಮಾಡಲಾಗಿದೆ. ಈ ತಂಡವು ಕರ್ನಾಟಕದ ಹಲವು ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದೊಂದಿಗೆ ನಿನ್ನೆಯಿಂದ ಇಂದಿನವರೆಗೆ ಕರ್ನಾಟಕ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು ಎಂಬ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಕುರಿತು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿ ಇಂದು ಕನ್ನಡ ಧ್ವಜ ಹಾರಿಸುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಇದೇ ಸಂದರ್ಭದಲ್ಲಿ “ಸಣ್ಣ ಸಣ್ಣ ವಿಷಯಕ್ಕೂ ವರ್ಷಾನುಗಟ್ಟಲೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಇರುವ ಕನ್ನಡಿಗರಿಗೆ ಯಾವ ಸೀಮೆ ಸ್ವಾತಂತ್ರ್ಯ?” ಎಂದು ಕನ್ನಡಿಗ ಅರುಣ್ ಜಾವಗಲ್ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಕನ್ನಡದ ಅಸ್ಮಿತೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಹೋರಾಟಕ್ಕೆ ಈಗಾಗಲೇ ಸಾಕಷ್ಟು ಪರ ವಿರೋಧದ ಪ್ರತಿಕ್ರಿಯೆಗಳು ದಾಖಲಾಗಿವೆ.