Homeಅಂಕಣಗಳುಭಾರತದ ಪತ್ರಕರ್ತರು ತುರ್ತಾಗಿ ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಲೇಬೇಕಿದೆ ನಾವೀಗ ಕೆಳಗೆ ಕುಸಿದಿದ್ದೇವೆ

ಭಾರತದ ಪತ್ರಕರ್ತರು ತುರ್ತಾಗಿ ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಲೇಬೇಕಿದೆ ನಾವೀಗ ಕೆಳಗೆ ಕುಸಿದಿದ್ದೇವೆ

- Advertisement -
- Advertisement -

ಸ್ವಾತಂತ್ರ್ಯಾ ನಂತರದಲ್ಲಿ ಈ ದೇಶ ಎಷ್ಟು ಗೊಂದಲ, ಗಲಿಬಿಲಿಗೆ ಈಡಾಗಲಿಕ್ಕೆ ಸಾಧ್ಯವೋ ಅದಕ್ಕೆಲ್ಲವೂ ಈಗ ಈಡಾಗುತ್ತಿದೆ. ಜನ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿದ್ದಾರೆ, ತಮ್ಮ ಆದ್ಯತೆಗಳನ್ನು ಬುಡಮೇಲು ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ದುರಂತವೂ ವಿಜೃಂಭಿಸುತ್ತಿದೆ, ವೈಭವಿಸುತ್ತಿದೆ. ದೇಶವೊಂದರ ಸಾಗುವಿಕೆಯಲ್ಲಿ ಇಂಥಾ ಸನ್ನಿವೇಶಗಳು ಸಹಜವಿರಬಹುದು, ಆದರೆ ಭಾರತದ ಮಟ್ಟಿಗೆ ಆ ಸಹಜವನ್ನೂ ಅಸಹಜವಾಗಿ ಹೇರಲಾಗುತ್ತಿರೋದು ದುರಂತ. ಬಹುಶಃ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗಲೂ ಈ ದೇಶಕ್ಕೆ ಒಂದು ಸ್ಪಷ್ಟತೆಯಿತ್ತು. ಆ ಸ್ಪಷ್ಟತೆಯಿಂದಲೇ ಜೆಪಿ ಚಳುವಳಿ ಹುಟ್ಟಿಬಂತು. ಆ ಸ್ಪಷ್ಟತೆಯಿಂದಲೇ ಹಲವು ಹತ್ತು ಕ್ರಾಂತಿಕಾರಿ ಯೋಜನೆಗಳ ಹೊರತಾಗಿಯೂ ಇಂದಿರಾ ಸೋತು ಮೂಲೆ ಸೇರಬೇಕಾಯ್ತು. ಅಂಥಾ ಸ್ಪಷ್ಟತೆಗೆ ಕಾರಣವಾದದ್ದರಲ್ಲಿ ಅಂದಿನ ಮಾಧ್ಯಮಗಳು ವೃತ್ತಿನಿಷ್ಠೆಗೆ ಕಟ್ಟುಬಿದ್ದದ್ದೂ ಒಂದು ಕಾರಣ. ಆದರೆ ಈಗ ಮಾಧ್ಯಮಗಳೇ ಸ್ಪಷ್ಟತೆಯನ್ನು ಕಳೆದುಕೊಂಡು ವೃತ್ತಿನಿಷ್ಠೆಯನ್ನು ಮಣ್ಣು ಪಾಲಾಗಿಸಿವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂಬ ಹೆಗ್ಗಳಿಕೆಯ ಮಾಧ್ಯಮ ಪ್ರಜಾಪ್ರಭುತ್ವವನ್ನು ರಕ್ಷಿಸುವುದಿರಲಿ, ಸ್ವತಃ ತನ್ನನ್ನೇ ಕಾಪಾಡಿಕೊಳ್ಳಲಾರದಷ್ಟು ದುಸ್ಥಿತಿಗೆ ಬಂದು ತಲುಪಿದೆ. ಪತ್ರಕರ್ತರ ಮೇಲೆ ಹಲ್ಲೆಗಳು ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ. ತಮ್ಮ ಮೇಲಿನ ಹಲ್ಲೆಗಳನ್ನು ಪ್ರತಿಭಟಿಸಲಾರದಷ್ಟು ಪತ್ರಿಕೋದ್ಯಮ ಸೈದ್ಧಾಂತಿಕ ರಾಜಕಾರಣದ ಗುಲಾಮನಾಗಿರುವುದು ಈ ನೆಲದ ದುರಂತವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದು ಅದನ್ನೇ ಒತ್ತಿಒತ್ತಿ ಹೇಳುತ್ತಿದೆ.

ಏಪ್ರಿಲ್ 2019 ರಲ್ಲಿ ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ (ಗಡಿರಹಿತ ಪತ್ರಕರ್ತರು) ಎನ್ನುವ ಅಂತರರಾಷ್ಟ್ರೀಯ ಸಂಸ್ಥೆಯು ತನ್ನ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿಯಲ್ಲಿ ವಿಶ್ವದ 180 ದೇಶಗಳನ್ನು ಆಯಾ ದೇಶಗಳ ಅಭಿವ್ಯಕ್ತಿ ಸ್ವಾತಂತ್ರದ ಆಧಾರದ ಮೇಲೆ ಕ್ರಮಾಂಕಗಳನ್ನು ನೀಡಲಾಗಿದೆ. ಭಾರತವು ಆ 180 ದೇಶಗಳಲ್ಲಿ 140ನೇ ಸ್ಥಾನದಲ್ಲಿದೆ; ಪಾಕಿಸ್ತಾನಕ್ಕಿಂತ ಕೇವಲ ಎರಡು ಸೂಚ್ಯಾಂಕ ಮುಂದಿದೆ. ಕಳೆದ ಮೂರು ವರ್ಷಗಳಲ್ಲಿ ಎರಡು ಸ್ಥಾನ ಕೆಳಕ್ಕೆ ಕುಸಿದಿರುವುದು ನಿಜಕ್ಕೂ ನಾವು ತಲೆ ತಗ್ಗಿಸಬೇಕಾದ ಸಂಗತಿ.
ಈ ವರದಿಗನುಗುಣವಾಗಿ, ವಿಶ್ವಾದ್ಯಂತ ಪತ್ರಕರ್ತರ ವಿರುದ್ಧ ರಾಜಕೀಯ ಮುಖಂಡರು ಹೆಚ್ಚೆಚ್ಚು ದ್ವೇಷವನ್ನು ಕಾರುತ್ತಿದ್ದಾರೆ. ಹಾಗಾಗಿ ಪತ್ರಕರ್ತರು ಅಪಾಯದ ಮತ್ತು ಆತಂಕದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಪತ್ರಕರ್ತರಿಗೆ ಸುರಕ್ಷಿತವಾಗಿರುವ ದೇಶಗಳ ಸಂಖ್ಯೆ ಕ್ಷೀಣಿಸಿದೆ ಹಾಗೂ ಮಾಧ್ಯಮದ ಹಿಡಿತವು ಸರ್ವಾಧಿಕಾರದ ಆಡಳಿತದ ಕೈಯಲ್ಲಿ ಹಸ್ತಾಂತರವಾಗುತ್ತಿದೆ.

ಏಷಿಯಾ ಪೆಸಿಫಿಕ್ ಪ್ರದೇಶದಲ್ಲಿ ನಿರಂಕುಶ ಆಳ್ವಿಕೆಯ ಪ್ರೊಪಗಾಂಡಾ, ಸೆನ್ಸರ್‍ಶಿಪ್, ಬೆದರಿಕೆ, ದೈಹಿಕ ಹಿಂಸೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ಹೆಚ್ಚುತ್ತಿದೆ. ಇದರೊಂದಿಗೆ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯ ದೊಡ್ಡ ಮಟ್ಟದಲ್ಲಿ ಪ್ರಚಾರವೂ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಫ್ಘಾನಿಸ್ತಾನ್ ಭಾರತ ಮತ್ತು ಪಾಕಿಸ್ತಾನದಲ್ಲಿ ಕೊಲೆಯಾದ ಪತ್ರಕರ್ತರ ಸಂಖ್ಯೆ ಹೆಚ್ಚಿದೆ. ಬೆದರಿಕೆಗಳು, ಅವಮಾನ ಮತ್ತು ಹಲ್ಲೆಗಳು ಅನೇಕ ದೇಶದ ಪತ್ರಕರ್ತರಿಗೆ ಮಾಮೂಲಾಗಿದೆ.

ಭಾರತದ ಪತ್ರಕರ್ತರು ಪೊಲೀಸ್‍ರಿಂದ ಹಿಂಸೆ ಮತ್ತು ಕಿರುಕುಳ ಅನುಭವಿಸುವುದಲ್ಲದೇ ರಾಜಕೀಯ ಬೆದರಿಕೆಗಳಿಗೂ ಒಳಗಾಗುತ್ತಿದ್ದಾರೆ ಎನ್ನುತ್ತಿದೆ ಆ ವರದಿ. 2018ರಲ್ಲಿ ಕನಿಷ್ಠ ಆರು ಭಾರತೀಯ ಪತ್ರಕರ್ತರ ಕೊಲೆಯಾಯಿತು, ಈ ಕೊಲೆಗಳು ಅವರ ವೃತ್ತಿಗೆ ಸಂಬಂಧಪಟ್ಟವಾಗಿದ್ದವು. ಈ ಕೊಲೆಗಳಿಂದ ಭಾರತೀಯ ಪತ್ರಕರ್ತರು ಎದುರಿಸುತ್ತಿರುವ ಅದರಲ್ಲೂ ವಿಶೇಷವಾಗಿ ಇಂಗ್ಲೀಷ್ ಹೊರತುಪಡಿಸಿ ಪ್ರಾದೇಶಿಕ ಭಾಷೆಗಳ ಪತ್ರಕರ್ತರು ಎದುರಿಸುತ್ತಿರುವ ಅಪಾಯವನ್ನು ತೋರಿಸುತ್ತಿವೆ. ವಿಪರ್ಯಾಸವೆಂದರೆ, ಪತ್ರಕರ್ತರನ್ನು ಟ್ರೋಲ್ ಮಾಡುವಂತಹ ವ್ಯಕ್ತಿಗಳ ಸೋಶಿಯಲ್ ಮೀಡಿಯಾ ಅಕೌಂಟ್‍ಗಳನ್ನು ಸ್ವತಃ ನಮ್ಮ ಪ್ರಧಾನಿಗಳೇ ಫಾಲೋ ಮಾಡುತ್ತಿದ್ದಾರೆ. ಇದರ ಪರಿಣಾಮವೆಂದರೆ 2019ರಿಂದೀಚೆಗೆ, ಅಂದರೆ ಲೋಕಸಭಾ ಚುನಾವಣೆಗೂ ಮುನ್ನ ಪತ್ರಕರ್ತರ ಮೇಲಿನ ದಾಳಿ ಹೆಚ್ಚಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಹಿಂದುತ್ವದ ಸಿದ್ಧಾಂತಕ್ಕೆ ಒಪ್ಪದ ವಿಷಯಗಳ ಬಗ್ಗೆ ಬರೆಯುವ, ಮಾತನಾಡುವ ಧೈರ್ಯ ತೋರಿಸಿದ ಪತ್ರಕರ್ತರನ್ನು ಕೊಲೆ ಮಾಡುವ ಕರೆ ಕೊಟ್ಟು ಅವರ ವಿರುದ್ಧ ವ್ಯವಸ್ಥಿತವಾದ ದ್ವೇಷ ಪ್ರಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದನ್ನು ಈ ವರದಿ ಎತ್ತಿಹಿಡಿದಿದೆ. ಅದರಲ್ಲೂ ಮಹಿಳಾ ಪತ್ರಕರ್ತರ ವಿರುದ್ಧದ ದ್ವೇಷ ಪ್ರಚಾರ ಅತ್ಯಂತ ಕೆಟ್ಟದಾಗಿತ್ತು. ಪೊಲೀಸ್ ವ್ಯವಸ್ಥೆ ಮತ್ತು ಸರಕಾರಗಳು ತಮ್ಮ ಸರಕಾರದ ಬಗ್ಗೆ ವಿಮರ್ಶಾತ್ಮಕವಾದ ಪತ್ರಕರ್ತರನ್ನು ಸುಮ್ಮನಾಗಿಸಲು ದೇಶದ್ರೋಹ ಮತ್ತು ಕ್ರಿಮಿನಲ್ ಮಾನನಷ್ಟದಂತಹ ಪುರಾತನ ಕಾಲದ ಕಾನೂನುಗಳನ್ನು ಬಳಸುತ್ತಿವೆ. ಮಾವೋವಾದಿಗಳ ಪ್ರಾಬಲ್ಯವಾಗಿರುವ ಪ್ರದೇಶಗಳಲ್ಲಿ ಮತ್ತು ಕಾಶ್ಮೀರದಿಂದ ಪತ್ರಕರ್ತರು ವರದಿ ಮಾಡುವುದೇ ದುಸ್ತರ ಕೆಲಸವಾಗಿದೆ. ಅನೇಕ ಸಲ ಸರಕಾರಗಳ ನಿರ್ದೇಶನದಂತೆ POTA ಮತ್ತು UAPA ದಂತಹ ಕಠೋರ ಕಾನೂನುಗಳ ಅಡಿಯಲ್ಲಿ ಪತ್ರಕರ್ತರು ಬಂಧನಕ್ಕೊಳಗಾಗುವುದೂ ಭಾರತದಲ್ಲಿ ಕಂಡುಬಂದಿದೆ.

ರಾಜಕೀಯ ಒತ್ತಡದಲ್ಲಿ ಪತ್ರಕರ್ತರ ಮೇಲೆ ದಾಳಿಗಳು ಮತ್ತು ಬೇಕಾಬಿಟ್ಟಿಯಾಗಿ ಆಗುವ ಬಂಧನಗಳ ಬಗ್ಗೆ ಈ ವರದಿ ಪ್ರಕಟವಾದ ನಂತರ ಚರ್ಚೆಯಾಗುತ್ತಿದೆ. ಆತಂಕದ ವಾತಾವರಣದಿಂದ ಬಹುತೇಕ ಮಾಧ್ಯಮ ಸಂಸ್ಥೆಗಳು ಸರಕಾರದ ಮುಖವಾಣಿಯಾಗಿ ಬದಲಾಗಿವೆ. ಸರಕಾರವನ್ನು, ಅದರ ನೀತಿಗಳನ್ನು ಪ್ರಶ್ನಿಸುವ, ಹಗರಣಗಳನ್ನು ಬಯಲಿಗೆಳೆಯುವ ಹಾಗೂ ಜನರ ಸಮಸ್ಯೆಗಳನ್ನು ಎತ್ತಿಹಿಡಿಯುವ ಪತ್ರಕರ್ತರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತದೆ ಹಾಗೂ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಅನೇಕರಿಗೆ ಕೊಲೆ ಬೆದರಿಕೆಗಳೂ ಸಾಮಾನ್ಯವಾಗಿವೆ.

ಇಂತಹ ಆತಂಕದ ಮತ್ತು ದಾಸ್ಯಮನೋಭಾವದ ವಾತಾವರಣದಲ್ಲಿ ಜನರ ಸಮಸ್ಯೆಗಳನ್ನು ಎತ್ತಿಹಿಡಿಯುವವರು ಯಾರು? ಭಾರತೀಯ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ನೀಡುತ್ತದೆ ಹಾಗೂ ಸಂವಿಧಾನದ 21ನೇ ಪರಿಚ್ಛೇದದಲ್ಲಿ ಜೀವ ಮತ್ತು ವೈಯಕ್ತಿಕ ಸ್ವಾತಂತ್ರದ ಹಕ್ಕನ್ನು ನೀಡಲಾಗಿದೆ. ಆದರೆ ಪತ್ರಕರ್ತರ ರಕ್ಷಣೆಗಾಗಿ ಯಾವ ಕಾನೂನು ಕಾಣುತ್ತಿಲ್ಲ.
ಪ್ರಜಾಪ್ರಭುತ್ವದ ಮುಖ್ಯ ಆಧಾರಸ್ತಂಭ ಮುಕ್ತ ಪತ್ರಿಕೋದ್ಯಮ ಹಾಗೂ ಈ ಆಧಾರಸ್ಥಂಭ ಕಳಚಿಬೀಳದಂತೆ ನೋಡಿಕೊಳ್ಳುವುದು ನಾಗರಿಕರ ಕರ್ತವ್ಯವಾಗಿದೆ. ನಿಜವಾದ ಪತ್ರಕರ್ತರ ಮತ್ತು ಪತ್ರಿಕೋದ್ಯಮದ ವಿಷಯವನ್ನು ಎತ್ತಿಹಿಡಿಯಬೇಕಾದ ಸಮಯ ಬಂದಿದೆ.
ಒಂದು ಮಾತು ಹೇಳಲೇಬೇಕು, ಈ ಎಲ್ಲಾ ಆತಂಕ ಎದುರಿಸುತ್ತಿರೋದು, ಹಲ್ಲೆಗಳನ್ನು ಅನುಭವಿಸುತ್ತಿರೋದು ಜನರ ಪರವಾಗಿ ದನಿ ಎತ್ತುತ್ತಿರುವ, ಆಡಳಿತಗಾರರನ್ನು ಪ್ರಶ್ನಿಸುತ್ತಿರುವ ಪತ್ರಿಕೋದ್ಯಮ. ಬಲಿಷ್ಠ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಂಡ ಪತ್ರಿಕೋದ್ಯಮ ಬೆಚ್ಚಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...