- Advertisement -
- Advertisement -
ದೇಶದಲ್ಲಿ ರಾಜ್ಯಪಾಲರು ಸಾಕಷ್ಟು ದುರ್ಬಲರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟರಾದ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದಲ್ಲಿ ನಡೆದ ಏಳನೇ ದಿನದ ದೀಕ್ಷಾಂತ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ವೇಳೆ ಮನದ ಮಾತನ್ನು ಹೇಳುವ ಮೂಲಕ ಗವರ್ನರ್ ಸತ್ಯಪಾಲ್ ಮಲಿಕ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ’ದೇಶದ ರಾಜ್ಯಪಾಲರುಗಳು ಅತ್ಯಂತ ದುರ್ಬಲರಾಗಿದ್ದಾರೆ. ಅವರಿಗೆ ಒಂದು ಪತ್ರಿಕಾಗೋಷ್ಠಿ ಕರೆಯುವಷ್ಟೂ ಅಧಿಕಾರ ಇಲ್ಲದಂತಾಗಿದೆ. ನನ್ನ ಮನಸ್ಸಿನಲ್ಲಿರುವ ಸತ್ಯವನ್ನು ಹೇಳಿಕೊಳ್ಳಲೂ ಸಹ ಸಾಧ್ಯವಾಗದ ಸ್ಥಿತಿ ಉಂಟಾಗಿದೆ’ ಎಂದು ಹೇಳಿದ್ದಾರೆ.
’ದೇಶದಲ್ಲಿ ಸಂತೃಪ್ತಿಯಿಂದ ಜೀವಿಸುತ್ತಿರುವ ವರ್ಗವಿದೆ. ತಮ್ಮ ಮಕ್ಕಳಿಗೆ ಅವರು ೩೦೦ ಕೋಟಿ ರೂಪಾಯಿ ಖರ್ಚು ಮಾಡಿ, ಓದಿಸುತ್ತಾರೆ. ಆದರೆ ಬಡಮಕ್ಕಳಿಗಾಗಿ ಒಂದು ರೂಪಾಯಿ ಸಹ ನೀಡಲು ಮುಂದೆ ಬರುವುದಿಲ್ಲ’ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಪ್ಟಿನೆಂಟ್ ಗವರ್ನರ್ ಹುದ್ದೆಯ ಆಕಾಂಕ್ಷಿಯಾಗಿರುವ ಸತ್ಯಪಾಲ್ ಮಲಿಕ್, ಕಾಶ್ಮೀರದಲ್ಲಿ ಹಾಗೂ ದೇಶದಲ್ಲಿರುವ ಸ್ಥಿತಿಯ ಬಗ್ಗೆ ಸತ್ಯ ನುಡಿದಿದ್ದಾರೆ. ಕಾಶ್ಮೀರದಲ್ಲಿ ಎಲ್ಲವೂ ಸರಿಯಿದೆ ಎಂದು ಕೇಂದ್ರ ಸರ್ಕಾರ ಬಿಂಬಿಸುತ್ತಿದೆ. ಆದರೆ ಅಲ್ಲಿ ಕನಿಷ್ಠ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.
ಇನ್ನು ಈ ಹಿಂದೆ ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಯಾರೂ ಮಾತನಾಡದಂತಹ ವಾತಾವರಣವಿದೆ' ಎಂದು ಆರೋಪಿಸಿದ್ದರು. ಆಗ ರಾಜ್ಯಪಾಲ ಸತ್ಯಪಾಲ್ ಮಲಿಕ್, `
ರಾಹುಲ್ ಗಾಂಧಿ ಅವರಿಗೆ ಉಚಿತವಾಗಿ ವಿಮಾನ ಟಿಕೆಟ್ ಕೊಡಿಸುತ್ತೇವೆ. ಜಮ್ಮುಕಾಶ್ಮೀರಕ್ಕೆ ಬಂದು ನೋಡಿ ಹೋಗಲಿ’ ಎಂದು ಹೇಳಿ ವ್ಯಂಗ್ಯವಾಡಿದ್ದರು. ಆದರೆ ಈಗ ಸ್ವತಃ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರೇ ಕೇಂದ್ರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.