ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಮಗು ಕೂಡ ನೈಸರ್ಗದತ್ತವಾಗಿ ಭಾರತದ ಪೌರತ್ವ ಪಡೆಯುತ್ತದೆ ಎಂದು ರಾಜ್ಯಶಾಸ್ತ್ರದಲ್ಲಿ ಓದಿದ ನೆನಪು. ಪದವಿ ವ್ಯಾಸಂಗ ಮಾಡುತ್ತಿದ್ದಾಗ ರಾಜ್ಯಶಾಸ್ತ್ರದ ಪ್ರಾಧ್ಯಾಪಕರು ಪೌರತ್ವ ಹೇಗೆ ಬರುತ್ತದೆ ಎಂಬ ಬಗ್ಗೆ ತರಗತಿಯಲ್ಲಿ ಪಾಠ ಮಾಡುವಾಗ ಹೇಳಿದ್ದರು. ಅದರ ಆಧಾರದ ಮೇಲೆ ನಾನು ಇದುವರೆಗೂ ಭಾರತೀಯ ಪೌರನೆಂದು ಹೆಮ್ಮೆಯಿಂದ ಅಂದುಕೊಂಡಿದ್ದೆ. ನಾನು ಈ ದೇಶದ ಪೌರತ್ವವನ್ನು ಹುಟ್ಟಿನ ಕಾರಣದಿಂದ ಪಡೆದಿದ್ದೇನೆ ಎಂದು ಅರ್ಥಮಾಡಿಕೊಂಡಿದ್ದೆ. ಆದರೆ ಈಗ ಅನುಮಾನ ಕಾಡಲು ಶುರುವಾಗಿದೆ. ಹಾಗೆಯೇ ನನ್ನಂಥ ಹಲವರನ್ನೂ ಕೂಡ ಕಾಡತೊಡಗಿದೆ. ಇಲ್ಲಿ ನಾನು ಆಡಳಿತ ಪಕ್ಷ, ವಿರೋಧ ಪಕ್ಷ, ಪ್ರಾದೇಶಿಕ ಪಕ್ಷ, ಅಧಿಕಾರಿ, ನೌಕರ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲರೂ ಪೌರತ್ವ ಸಾಬೀತುಪಡಿಸಲೇಬೇಕು. ಇಲ್ಲಿ ಯಾರನ್ನೂ ಮಾಫ್ ಮಾಡಲು ಬರುವುದಿಲ್ಲ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಮಾಡುವ ಸಂದರ್ಭದಲ್ಲಿ ಅನುಮಾನ ಬಲವಾಗಿ ಕಾಡತೊಡಗಿದೆ. ನಾನು ಪೌರತ್ವವನ್ನು ಸಾಬೀತುಪಡಿಸಲು ಅಧಿಕಾರಿ ಮುಂದೆ ಹಾಜರಾಗಿ ದಾಖಲೆಗಳನ್ನು ನೀಡಿ ಅದು ಸಾಬೀತಾಗುವವರೆಗೂ ನಾನು ಭಾರತದ ಪ್ರಜೆ ಅಲ್ಲ. ನನ್ನಂಥೆ ಈ ದೇಶದ ಎಲ್ಲರೂ ಎರಡು ಅಥವಾ ಅದಕ್ಕಿಂತ ಹೆಚ್ಚು ದಾಖಲೆಗಳನ್ನು ಹಾಜರುಪಡಿಸಿದ ಮೇಲೆಯೇ ಪೌರರಾಗಲು ಸಾಧ್ಯ. ಸರ್ಕಾರಕ್ಕೆ ಈ ದೇಶದ ಪ್ರಜೆಗಳಾದ ಪೌರರ ಮೇಲೆ ಅನುಮಾನ ಬಂದಿದೆಯೇ ಎಂಬುದು ನನ್ನ ಮುಂದಿರುವ ಯಕ್ಷಪ್ರಶ್ನೆ.
ರಾಷ್ಟ್ರೀಯ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಗೆ ನಾನು ಸೇರಿದಂತೆ ಪ್ರತಿಯೊಬ್ಬರು ಸರ್ಕಾರ ನಿಗದಿಪಡಿಸಬಹುದಾದ ದಾಖಲೆಗಳನ್ನು ತೋರಿಸುವುದು ಕಡ್ಡಾಯ. ಅಂದರೆ ನನ್ನ ಪೌರತ್ವವನ್ನು ನಾನು ಸಾಬೀತುಪಡಿಸಬೇಕು. ನನ್ನ ಬಳಿ ಎಲ್ಲಾ ದಾಖಲೆಗಳು ಇರಬಹುದು. ಹಾಗಂತೆ ನಾನು ಪೌರತ್ವ ಪಡೆದಿದ್ದೇನೆ. ನಾನೇಕೆ ತೋರಿಸಬೇಕು ಎಂದು ಸುಮ್ಮನೆ ಕೂರುವುದಿಲ್ಲ. ಅಂದರೆ ಪ್ರತಿಯೊಬ್ಬ ಪೌರನೂ ಸರ್ಕಾರದ ಅಧಿಕಾರಿಗಳಿಂದ ಸಹಿ ಮುದ್ರೆ ಹಾಕಲ್ಪಟ್ಟ ದಾಖಲೆಗಳನ್ನು ತೋರಿಸಲೇಬೇಕು. ಅಲ್ಲಿಯವರೆಗೂ ನಾನು ಭಾರತೀಯ ಪೌರ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಅಂದಮೇಲೆ ಭಾರತೀಯರಾದ ನಾವು ಮತ್ತೊಮ್ಮೆ ದೊಡ್ಡ ಕ್ಯೂನಲ್ಲಿ ನಿಲ್ಲಲೇಬೇಕಾದಂತಹ ಅನಿವಾರ್ಯತೆ/ ಅಗತ್ಯತೆ ನಮ್ಮ ಮುಂದೆ ಬರಲಿದೆ.
ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ 14 ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದೆ. ಆ ದಾಖಲೆ ಹೊಂದಿದವರೂ ಅಧಿಕಾರಿಗಳ ಮುಂದೆ ಎಲ್ಲಾ ಕೆಲಸಗಳನ್ನು ಬಿಟ್ಟು ಹಾಜರುಪಡಿಸಿದ್ದಾರೆ. ಆದರೆ ಅವೆಲ್ಲವೂ ಅಧಿಕಾರಿಗಳಿಗೆ ಸೂಕ್ತವೆನಿಸದೇ ಇರುವುದರಿಂದ 19 ಲಕ್ಷ ಮಂದಿ ನೋಂದಣಿ ಪಟ್ಟಿಯಿಂದ ಹೊರಗೆ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ (ಎನ್.ಆರ್.ಸಿ ತುರ್ತು ಜಾರಿ ಇಲ್ಲ ಎಂದು ಸರ್ಕಾರ ಹೇಳಿದೆ.) ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿತು ಅನ್ನಿ. ಆ ಕೂಡಲೇ ಎಲ್ಲರೂ ದಾಖಲೆಗಳನ್ನು ಹೊಂದಿಸಿಕೊಳ್ಳಬೇಕು. ಇಲ್ಲದವರು ಅಧಿಕಾರಿಗಳ ಬಳಿಗೆ ಅಲೆಯಬೇಕು. ಬೇಗ ದಾಖಲೆ ಬೇಕೆಂದರೆ ಲಂಚ ಕೊಡಬೇಕು. ಇದು ಕೇವಲ ಒಬ್ಬರ ಪ್ರಶ್ನೆಯಲ್ಲ. ಇಡೀ ಕುಟುಂಬದ ದಾಖಲೆಯೇ ಇರಬೇಕಾಗುತ್ತದೆ. ಪತ್ನಿ ಬೇರೆ ರಾಜ್ಯದವರಾಗಿದ್ದರೆ ಅದಕ್ಕೂ ದಾಖಲೆ ಬೇಕು. ಅಪ್ಪ-ಅಮ್ಮಂದಿರ ದಾಖಲೆ ಇರಬೇಕು.
ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳು ನಮ್ಮೆಲ್ಲಾ ದಾಖಲೆಗಳನ್ನು ಪರಿಶೀಲಿಸಿ ಅದು ಪಕ್ಕಾ ದಾಖಲೆ ಎಂದು ಪರಿಗಣಿಸಿದ ಮೇಲೆಯೇ ನನ್ನ ಪೌರತ್ವ ಅಧಿಕೃತಗೊಳ್ಳುವುದು. ಇಲ್ಲದಿದ್ದರೆ ಪೌರತ್ವ ಇಲ್ಲವಾಗುತ್ತದೆ. ಪೌರತ್ವ ಸಾಬೀತುಪಡಿಸಲು ತಿಂಗಳುಗಟ್ಟಲೆ ಅಲೆಯುವಂತಾಗುತ್ತದೆ. ಆ ಕಾರಣಕ್ಕಾಗಿಯೇ ದೇಶಾದ್ಯಂತ ಈ ಎರಡೂ ಕಾಯ್ದೆಗಳ ವಿರುದ್ಧ ಜನರು ಗಟ್ಟಿ ದನಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು. ಬಹುತೇಕರು ಮುಸ್ಲಿಮರಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ನಂಬಿದ್ದಾರೆ ಮತ್ತು ತಿಳಿದುಕೊಂಡಿದ್ದಾರೆ. ಇದು ತಪ್ಪು ಗ್ರಹಿಕೆ. ನನ್ನ ಪೌರತ್ವವನ್ನು ಸಾಬೀತುಪಡಿಸಲು ಎಲ್ಲರಂತೆ ಸರದಿ ಸಾಲಿನಲ್ಲಿ ನಿಲ್ಲಲೇಬೇಕು.
ಅದೇ ಕಾರಣಕ್ಕೆ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪರ ಮತ ಚಲಾಯಿಸಿದ ಬಿಜೆಪಿ ಮಿತ್ರಪಕ್ಷಗಳೆಲ್ಲವೂ ಒಂದೊಂದೇ ಕಾಯ್ದೆಯಾದ ಮೇಲೆ ವಿರೋಧ ವ್ಯಕ್ತಪಡಿಸುತ್ತಿವೆ. ಈಗ ಬಂದಿರುವ ತಿಳುವಳಿಕೆ ಮತ್ತು ಎಚ್ಚರ ಮತ ಚಲಾಯಿಸುವ ಸಂದರ್ಭದಲ್ಲಿ ಇದ್ದಿದ್ದರೆ ಮಸೂದೆ ಅಂಗೀಕಾರವಾಗುತ್ತಲೇ ಇರಲಿಲ್ಲ. ಮಿತ್ರಪಕ್ಷಗಳ ಮುಖಂಡರು ತಮ್ಮ ಮೇಲಿನ ಹಗರಣಗಳು-ಆರೋಪಗಳಿಂದ ಸದ್ಯಕ್ಕೆ ಬಚಾವಾಗುವ ಸಲುವಾಗಿ ಆತುರಾತುರವಾಗಿ ಪೌರತ್ವ ತಿದ್ದುಪಡಿ ಮಸೂದೆಯ ಪರ ಮತ ಚಲಾಯಿಸುವಂತೆ ಸದಸ್ಯರ ಮೇಲೆ ಒತ್ತಡ ಹೇರಿದವು. ಊರು ಹಾಳಾದ ಮೇಲೆ ದಡ್ಡಿ ಬಾಗಿಲು ಹಾಕಿದರು ಎಂಬಂತೆ ಕಾಯ್ದೆಯಾದ ಕೂಗಿಕೊಂಡರೆ ಬಂದ ಫಲವೇನು ಅಲ್ಲವೇ?
ದೇಶದಲ್ಲಿ ಜಿಡಿಪಿ ಕುಸಿದಿದೆ. ಆರ್ಥಿಕ ಹಿಂಜರಿತವಿದೆ. ಉದ್ದಿಮೆಗಳು ಮುಚ್ಚಿಹೋಗಿವೆ. ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಉದ್ಯೋಗಗಳು ಕಡಿತವಾಗಿವೆ. ಜನರ ಕೊಳ್ಳುವ ಶಕ್ತಿ ಕುಗ್ಗಿದೆ. ಉತ್ಪಾದನೆ ಕುಂಟಿತವಾಗಿದೆ. ನಿರುದ್ಯೋಗ ಸಮಸ್ಯೆ ದೇಶವನ್ನು ಬಾಧಿಸುತ್ತಿದೆ. ಗುಂಪುಹಲ್ಲೆ- ಹತ್ಯೆಗಳು, ಅತ್ಯಾಚಾರ-ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸನ್ನಿವೇಶದಲ್ಲಿ ದೇಶವನ್ನು ಕಿತ್ತುತಿನ್ನುತ್ತಿರುವ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕಾದ ಸರ್ಕಾರ ಅನಗತ್ಯ ಕಾಯ್ದೆಗಳನ್ನು ಜಾರಿಗೆ ತಂದು ಜನರ ನೆಮ್ಮದಿಗೆ ಭಂಗ ತರುವಂತಹ ಕಾರ್ಯ ಮಾಡುವುದು ಸರಿಯಾದ ಕ್ರಮವಲ್ಲ.
ಸಣ್ಣರಾಜ್ಯ ಅಸ್ಸಾಂನಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲು 10 ಸಾವಿರ ಕೋಟಿ ರೂಪಾಯಿ ವೆಚ್ಚ ವೆಚ್ಚವಾಗಿದೆ ಎಂದು ವರದಿಗಳು ಹೇಳುತ್ತವೆ. ಇದು ನಿಜವೇ ಆದರೆ ದೊಡ್ಡ ರಾಜ್ಯಗಳಲ್ಲಿ ಇದಕ್ಕೆ ಎಷ್ಟು ಕೋಟಿಗಳು ಬೇಕಾಗಬಹುದು. ಒತ್ತೆ ಕೇಂದ್ರಗಳ ನಿರ್ಮಾಣಕ್ಕೆ ಹಣ ಎಷ್ಟು ಬೇಕು. ಅವರಿಗೆ ನಿತ್ಯವೂ ಊಟ ಹಾಕಲು ಬೇಕಾಗುವ ವೆಚ್ಚ ಎಷ್ಟು ಎಂದು ಅಂದಾಜಿಸಲು ಕೂಡ ಸಾಧ್ಯವಿಲ್ಲ. ಜನ ಹೇಗೋ ಕಷ್ಟವೋ ಸುಖವೋ ಅಂತು ಅವರೇ ಸ್ವಂತ ಬಲದಿಂದ ದುಡಿದು ತಿನ್ನುತ್ತಿದ್ದಾರೆ. ಅದಕ್ಕೂ ಕಲ್ಲು ಬೀಳುವುದಿಲ್ಲವೇ? ಸರ್ಕಾರ ಯೋಚಿಸಿ ಕಾಯ್ದೆಯನ್ನು ಹಿಂಪಡೆಯುವುದು ಒಳ್ಳೆಯದು.
(ಲೇಖಕರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು. ಲೇಖನದಲ್ಲಿರುವ ಅಭಿಪ್ರಾಯಗಳು ವ್ಯಕ್ತಿಗತವಾದವು)