Homeಚಳವಳಿಗುಂಪು ಹತ್ಯೆ ತಡೆ ಮತ್ತು ಸಂತ್ರಸ್ತರ ನೆರವಿಗೆ ಸಹಾಯವಾಣಿ ಆರಂಭಿಸಿದ ಮಾನವೀಯ ಕಾರ್ಯಕರ್ತರು

ಗುಂಪು ಹತ್ಯೆ ತಡೆ ಮತ್ತು ಸಂತ್ರಸ್ತರ ನೆರವಿಗೆ ಸಹಾಯವಾಣಿ ಆರಂಭಿಸಿದ ಮಾನವೀಯ ಕಾರ್ಯಕರ್ತರು

"ನಾವು ಶುಲ್ಕ ರಹಿತ ಸಹಾಯವಾಣಿ 1800-3133-60000 ವನ್ನು ಆರಂಭಿಸಿದ್ದೇವೆ" ಎಂದು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ ಕಾರ್ಯಕರ್ತ ನದೀಮ್ ಖಾನ್, ಈ ಸಂಖ್ಯೆ ದಿನದ 24 ಗಂಟೆಯೂ ಸಕ್ರಿಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

- Advertisement -
- Advertisement -

ಕೋಮು ದ್ವೇಷದ ಬಲಿಪಶುಗಳಿಗೆ ಸಹಾಯವಾಣಿ

ತೀರಾ ಬಲಪಂಥೀಯ ಕೋಮುವಾದಿ ಹಿಂದೂತ್ವ ಗುಂಪುಗಳ ಅಟ್ಟಹಾಸ ಹೆಚ್ಚುತ್ತಿದ್ದು, ಅವರ ವಿರೋಧಿಗಳು, ವಿಶೇಷವಾಗಿ ಮುಸ್ಲಿಮರು ಗುಂಪು ದಾಳಿಗೆ ಗುರಿಯಾಗುತ್ತಿರುವ ಹಿನ್ನೆಲೆಯಲ್ಲಿಯಲ್ಲಿ ಅವರಿಗಾಗಿ ಭಾರತದ 100 ನಗರಗಳಲ್ಲಿ ಮಾನವೀಯ ಕಾರ್ಯಕರ್ತರು ಸಹಾಯವಾಣಿ ಆರಂಭಿಸಿದ್ದಾರೆ.

ಈ ಸಹಾಯವಾಣಿಯ ಮುಖ್ಯ ಉದ್ದೇಶವೆಂದರೆ, ದ್ವೇಷ ಪ್ರೇರಿತ ಅಪರಾಧಗಳು ಮತ್ತು ಗುಂಪು ಧಳಿತದ ಪ್ರಕರಣಗಳಲ್ಲಿ ಇಡೀ ಘಟನಾ ಸರಣಿಯನ್ನು ದಾಖಲಿಸಿ, ಆವರಿಗೆ ಕಾನೂನು ನೆರವು ಒದಗಿಸುವುದು.

ಭಾರತದಲ್ಲಿ ಇಂತಹ ಅಪರಾಧಗಳನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿರುವುದರಿಂದ ಇಂತಹ ಒಂದು ಅಭಿಯಾನ ಅಗತ್ಯವಾಗಿದೆ ಎಂದು ದೇಶಾದ್ಯಂತದ ಮಾನವೀಯ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರು ಸೇರಿ ಸ್ಥಾಪಿಸಿರುವ ‘ಯುನೈಟೆಡ್ ಎಗೈನ್ಸ್ಟ್ ಹೇಟ್’ (UAH) ಹೇಳಿದೆ.

“ನಾವು ಶುಲ್ಕ ರಹಿತ ಸಹಾಯವಾಣಿ 1800-3133-60000 ವನ್ನು ಆರಂಭಿಸಿದ್ದೇವೆ” ಎಂದು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ ಕಾರ್ಯಕರ್ತ ನದೀಮ್ ಖಾನ್, ಈ ಸಂಖ್ಯೆ ದಿನದ 24 ಗಂಟೆಯೂ ಸಕ್ರಿಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

“ನಾವು ಇಂತಹ ದಾಳಿಗಳಿಗೆ ಗುರಿಯಾದವರಿಗೆ ನೆರವಾಗಲು ಮತ್ತು ಅವರಿಗೆ ನ್ಯಾಯಾಲಯದಲ್ಲಿ ನ್ಯಾಯ ದೊರಕಿಸಿಕೊಡಲು ಯತ್ನಿಸುತ್ತೇವೆ. ಸರಕಾರಗಳು ಇಂತಹ ಘಟನೆಗಳ ಬಗ್ಗೆ ಬರೇ ಹೇಳಿಕೆಗಳನ್ನು ನೀಡುತ್ತಿವೆ. ಕೇಂದ್ರ ಸರಕಾರ ಏನೇ ಹೇಳಿಕೊಂಡರೂ ದಾಳಿಗಳು ತಡೆಯಿಲ್ಲದೇ ಮುಂದುವರಿದಿವೆ” ಎಂದು ಅವರು ಹೇಳಿದ್ದಾರೆ.

ತನ್ನ ಕಾರ್ಯಕರ್ತರು 100 ಭಾರತೀಯ ನಗರಗಳಲ್ಲಿ ಕಾರ್ಯಾಚರಿಸಲಿದ್ದು, ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 14 ಶೇಕಡಾ ಇರುವ ಮುಸ್ಲಿಮರೇ ಇಂತಹ ದಾಳಿಗೆ ಗುರಿಯಾಗುತ್ತಿದ್ದಾರೆ ಎಂದು ಯುಎಎಚ್ ಹೇಳಿದೆ. ಕಾರ್ಯಕ್ರಮದಲ್ಲಿ ವಕೀಲರು, ಸಾಮಾಜಿಕ ಕಾರ್ಯಕರ್ತರು, ಪ್ರಾಧ್ಯಾಪಕರು ಉಪಸ್ಥಿತರಿದ್ದು, ಇಂತದ್ದೊಂದು ಅಭಿಯಾನ ತೀರಾ ಅಗತ್ಯವಿತ್ತು ಎಂಬ ಅಭಿಪ್ರಾಯ ಎಲ್ಲರದ್ದಾಗಿತ್ತು.

ಹಿಂದೂ ಬಲಪಂಥೀಯರು ಜನರ ಮೇಲೆ ದಾಳಿಮಾಡುತ್ತಿರುವುದು ಏಕೆಂದರೆ, ಅವರು ಒಂದೋ ಮುಸ್ಲಿಮರು, ಇಲ್ಲವೇ ದಲಿತರು ಅಥವಾ ಕ್ರೈಸ್ತರು ಎಂಬ ಕಾರಣದಿಂದ ಮಾತ್ರ ಎಂದ ದಿಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅಪೂರ್ವಾನಂದ ಅವರು, ಇದಿಂದು ಭಾರತದ ವಾಸ್ತವವಿಕತೆಯಾಗಿದ್ದು, ನಾವೀ ವಾಸ್ತವಕ್ಕೆ ಕಣ್ಣುಮುಚ್ಚಿ ಕುಳಿತಿರಲು ಸಾಧ್ಯವಿಲ್ಲ ಎಂದರು.

ಧೈರ್ಯ ಹೆಚ್ಚಿದ ಬಲಪಂಥ

ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಾಗಲೇ ಆರಂಭಗೊಂಡಿದ್ದರೂ, ಅವರ ಪುನರಾಯ್ಕೆಯಿಂದ ಬಲಪಂಥೀಯರ ದುಷ್ಟ ಕಾರ್ಯಕ್ರಮಕ್ಕೆ ಬಲಬಂದಿದೆ ಎಂದು ತಜ್ಞರು ಹೇಳುತ್ತಾರೆ. ಹಲವಾರು ಮುಸ್ಲಿಮರು ಮತ್ತು ದಲಿತರ ಮೇಲೆ ದಾಳಿಗಳು ನಡೆದಿವೆ. ಕೆಲವರನ್ನು ಗುಂಪುಗಳು ಥಳಿಸಿ ಕೊಂದಿವೆ.

ದೇಶದ ಹಲವಾರು ಕಡೆಗಳಲ್ಲಿ, ಹಲವಾರು ಘಟನೆಗಳಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆದಿರುವುದು ಕೇವಲ ಅವರ ಧರ್ಮದ ಕಾರಣದಿಂದ ಮಾತ್ರ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಮುಸ್ಲಿಮರನ್ನು ಥಳಿಸಿ,  ಜೈ ಶ್ರೀ ರಾಮ್ ಎಂದು ಕೂಗುವಂತೆ ಮಾಡಲಾಗಿದೆ.

ಜೂನ್ 20ರಂದು ಮೊಹಮ್ಮದ್ ಶಹರೂಕ್ ಹಲ್ದರ್ ಕೋಲ್ಕತ್ತಾ ನಗರದಲ್ಲಿ ಮದರಸಕ್ಕೆ ಹೋಗುತ್ತಿದ್ದಾಗ, ಕೇಸರಿ ಬಾವುಟ ಹಿಡಿದು ರೈಲು ಹತ್ತಿದ ಒಂದು ಗುಂಪು, ಅವರ ಕುರ್ತಾ-ಪೈಜಾಮ, ತಲೆಯ ಟೋಪಿ ನೋಡಿ “ಜೈ ಶ್ರೀರಾಮ್” ಕೂಗುವಂತೆ ಒತ್ತಾಯಿಸಿತು. ಅವರು ಒಪ್ಪದೇ ಇದ್ದಾಗ, 20 ವರ್ಷ ಪ್ರಾಯದ ಅವರ ಮೇಲೆ ಗುಂಪು ಹಲ್ಲೆ ನಡೆಸಿತು. ಯಾವ ಸಹಪ್ರಯಾಣಿಕರೂ ಅವರ ನೆರವಿಗೆ ಬರಲಿಲ್ಲ. ಹಲ್ದರ್ ಬಾಗಿಲಿನತ್ತ ಓಡಿದಾಗ, ಗುಂಪು ಚಲಿಸುವ ರೈಲಿನಿಂದ ಹೊರದಬ್ಬಿತು. ಅವರು ಪ್ಲಾಟ್‌ಫಾರ್ಮಿಗೆ ಬಿದ್ದುದರಿಂದ ಬದುಕಿ ಉಳಿದರು.

ಈ ಕುರಿತು ಹಲ್ದರ್ ಪೊಲೀಸರಿಗೆ ದೂರು ನೀಡಿದರೂ, ಮತ್ತೆ ಹಲ್ಲೆ ನಡೆಯಬಹುದೆಂಬ ಭಯ ಅವರಿಗಿದೆ. ಮನೆಯವರೂ ಅವರನ್ನು ಹೊರಗೆ ಹೋಗಲು ಬಿಡುತ್ತಿಲ್ಲ. ತಾನೀಗ ಮದರಸಕ್ಕೂ ಹೋಗುವುದಿಲ್ಲ ಎನ್ನುವ ಅವರು, ಇನ್ನೆಂದೂ ರೈಲಿನಲ್ಲೂ ಹೋಗಲಾರೆ ಎಂಬಷ್ಟು ಆತಂಕಕ್ಕೆ ಗುರಿಯಾಗಿದ್ದಾರೆ.

ಅನ್ಸಾರಿ ಹತ್ಯೆಯ ಜಾಗೃತಿ

ಇದಕ್ಕೆ ಕೆಲವೇ ದಿನಗಳ ಮೊದಲು ಜಾರ್ಖಂಡ್‌ನ ಖರ್ಸ್ವಾನ್ ಜಿಲ್ಲೆಯಲ್ಲಿ 24 ವರ್ಷ ಪ್ರಾಯದ ತೆಬ್ರೇಜ್ ಅನ್ಸಾರಿ ಎಂಬ ಯುವಕನನ್ನು ಗುಂಪೊಂದು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಕೇವಲ ಕಳ್ಳ ಎಂಬ ಸಂಶಯ ಮಾತ್ರದಿಂದಲೇ ಕ್ರೂರ ರೀತಿಯಲ್ಲಿ ಥಳಿಸಿತ್ತು.

ಘಟನೆ ನಡೆದ ನಾಲ್ಕು ದಿನಗಳ ಬಳಿಕ, ಸಾಕಷ್ಟು ಗದ್ದಲದ ನಂತರ ಜೂನ್ 22ರಂದು ಪೊಲೀಸರು ಅನ್ಸಾರಿಯನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಗೆ ಬಂದ ಕೆಲವೇ ಹೊತ್ತಿನಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಮೈಯಿಡೀ ರಕ್ತಸಿಕ್ತವಾಗಿ, ದಯನೀಯ ಸ್ಥಿತಿಯಲ್ಲಿದ್ದ ಅನ್ಸಾರಿಯವರಿಗೆ ಯಾವುದೇ ಕರುಣೆ ತೋರದೇ ಹೊಡೆದು, ತುಳಿದು ಈ ಮತಾಂಧರ ಗುಂಪು ಜೈ ಶ್ರೀರಾಮ್, ಜೈ ಹನುಮಾನ್ ಕೂಗಿಸುತ್ತಿರುವುದು ವೈರಲ್ ಆದ ಮೊಬೈಲ್ ವಿಡಿಯೋದಲ್ಲಿ ಕಾಣುತ್ತದೆ. ಅವರು ಮುಸ್ಲಿಮರಾಗಿರುವುದರಿಂದ ಅವರನ್ನು ಕೊಲ್ಲಲಾಯಿತು ಎಂದು ಅವರ ಪತ್ನಿ ಮಾಧ್ಯಮಗಳ ಮುಂದೆ ರೋದಿಸುತ್ತಿದ್ದರು.

ಈ ಥಳಿಸಿ ಕೊಂದ ಗುಂಪು ಹಿಂಸಾಚಾರ ಮೊದಲಿನದ್ದೇನೂ ಅಲ್ಲ. ಕರ್ನಾಟಕದ ಕರಾವಳಿಯಲ್ಲಿ ಇಂತಹಾ ಘಟನೆಗಳು ವರ್ಷಗಳ ಹಿಂದೆ ನಡೆದಿವೆ. ಹಾಜಬ್ಬ ಎಂಬ ವೃದ್ಧ ದನದ ವ್ಯಾಪಾರಿಯನ್ನು ಬತ್ತಲೆ ಮಾಡಿ ಹೊಡೆದು ಕೊಂದ ಆರೋಪಿಗಳು ಖುಲಾಸೆಯಾಗಿ ಜೈಲಿನಿಂದ ಹೊರಗೆ ಬಂದಾಗ, ಅವರಿಗೆ ಮಾಲೆ ಹಾಕಿ ಮೆರವಣಿಗೆ ಮಾಡಿದ ನಿರ್ಲಜ್ಜ ಪ್ರಕರಣವೂ ನಡೆದಿತ್ತು.

ಆದರೆ, ಅನ್ಸಾರಿ ಹತ್ಯೆ ಬಹುಶಃ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಕಲಕಿಹಾಕಿತ್ತು. ಹಲವು ನಗರ, ಪಟ್ಟಣಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸಿದರು. ಗುಂಪುಗಳು ಥಳಿಸಿ ಕೊಲ್ಲುವ ಮೃಗೀಯ ಪರಿಪಾಠಕ್ಕೆ ಕೊನೆಹಾಕಬೇಕೆಂದು ಒತ್ತಾಯಿಸಿದರು. ಪರಿಣಾಮ? ಕ್ರಿಕೆಟಿಗನೊಬ್ಬನ ಹೆಬ್ಬೆರಳಿಗೆ ಗಾಯವಾದದ್ದಕ್ಕೆ ಟ್ವೀಟ್ ಮಾಡಲು ಸಮಯವಿದ್ದ ಪ್ರಧಾನಿಗೆ ಕೆಲದಿನಗಳ ಕಾಲ ಈ ಕುರಿತು ಒಂದೇ ಒಂದು ವಾಕ್ಯ ನಾಲಗೆಗೆ ಬರಲಿಲ್ಲ. ಬಂದರೂ ಹೇಳಿದ್ದೆಂದರೆ, ಒಂದು ಘಟನೆಗಾಗಿ ಇಡೀ ರಾಜ್ಯವನ್ನು ಹೊಣೆ ಮಾಡಬಾರದು ಎಂದಾಗಿತ್ತು. ಅಷ್ಟಾದರೂ, ಇಂತಹಾ ಘಟನೆಗಳು ನಿಂತಿವೆಯೆ? ಇಲ್ಲ! ತಡೆಯಿಲ್ಲದೇ ನಡೆಯುತ್ತಲೇ ಇವೆ.

ಜೂನ್ 28ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಟೋಪಿ ಧರಿಸಿದ್ದ ಮುಸ್ಲಿಮ್ ಯುವಕ ಜೈ ಶ್ರೀರಾಂ ಹೇಳಲು ನಿರಾಕರಿಸಿದ್ದಕ್ಕೆ ಆತನಿಗೆ ಗುಂಪೊಂದು ಅಮಾನುಷವಾಗಿ ಥಳಿಸಿದೆ. ಕಳೆದ ಭಾನುವಾರ ಬಿಜೆಪಿಯ ಯೋಗಿ ಆಡಳಿತವಿರುವ ಅದೇ ಉತ್ತರ ಪ್ರದೇಶದ ಮುಜಾಫರ್‌ಪುರದಲ್ಲಿ ಮುಸ್ಲಿಮ್ ವಿದ್ವಾಂಸರೊಬ್ಬರ ಗಡ್ಡ ಎಳೆದು ಜೈ ಶ್ರೀ ರಾಮ್ ಕೂಗುವಂತೆ ಬಲವಂತ ಮಾಡಿದ್ದಕ್ಕೆ 12  ಮಂದಿಯ ಮೇಲೆ ಕೇಸು ದಾಖಲಾಗಿದೆ.

ಈ ವರ್ಷ  ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದ್ವೇಷದಿಂದ ಕನಿಷ್ಟ 18 ದಾಳಿಗಳು ನಡೆದಿವೆ ಎಂದು factchecker.in ವೆಬ್‌ಸೈಟ್ ಹೇಳುತ್ತದೆ. ಅಲ್ ಜಜೀರಾ ಸುದ್ದಿ ಸಂಸ್ಥೆ ಈ ಕುರಿತು ಆಳುವ ಬಿಜೆಪಿಯ ಪ್ರತಿಕ್ರಿಯೆ ಪಡೆಯಲು ಹಲವಾರು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿದೆ. ‘ಮೌನಂ ಸಮ್ಮತಿ ಲಕ್ಷಣಂ’ ಎಂಬಂತೆ ಸರಕಾರ ವರ್ತಿಸುವ ಸಂಶಯ ಮೂಡಿದೆ.

ಸರಕಾರದ ವೈಫಲ್ಯವೇ ಸಹಾಯವಾಣಿಗೆ ಕಾರಣ

ಕಳೆದ ತಿಂಗಳು ಯುಎಸ್‌ಎ ಬಿಡುಗಡೆಗೊಳಿಸಿದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯಲ್ಲಿ ‘ಹಿಂದೂ ಬಲಪಂಥವು ಹಿಂದೂಯೇತರರು ಮತ್ತು ಕೆಳಜಾತಿ ಹಿಂದೂಗಳ ಮೇಲೆ ಹಿಂಸಾಚಾರ, ಬೆದರಿಕೆ ಮತ್ತು ಕಿರುಕುಳಗಳ ಆಕ್ರಮಣಕಾರಿ ಅಭಿಯಾನಕ್ಕೆ ಪ್ರೇರಣೆ ಕೊಟ್ಟಿದೆ’ ಎಂದು ಹೇಳಿತ್ತು.

2018ರಲ್ಲಿ ಸುಪ್ರೀಂಕೋರ್ಟ್ ಥಳಿಸಿ ಕೊಲ್ಲುವ ಗುಂಪು ಹಿಂಸೆ ತಡೆಗಟ್ಟಲು ಹೊಸ ಕಾನೂನು ತರುವಂತೆ ಆದೇಶಿಸಿತ್ತು. ಅದರಂತೆ ಉತ್ತರ ಪ್ರದೇಶದ ನ್ಯಾಯಾಂಗ ಆಯೋಗವು ಹೊಸ ಕಾನೂನು ತರುವಂತೆ ಆದಿತ್ಯನಾಥ ಸರಕಾರಕ್ಕೆ ಸೂಚಿಸಿದೆ.

‘2014ರಿಂದ ಹಲವರು ಸತ್ತು, ನೂರಾರು ಜನರು ಗಾಯಗೊಂಡಿರುವ ಗುಂಪು ದಾಳಿಗಳಲ್ಲಿ ಕೇವಲ ಕೈಬೆರಳೆಣಿಕೆಯ ಜನರಿಗೆ ಮಾತ್ರ ಶಿಕ್ಷೆಯಾಗಿದೆ.  ಒಂದು ರಾಷ್ಟ್ರ-ಒಂದು ಸಂಸ್ಕೃತಿ ಎಂಬ ಹಿಂದೂ ಬಲಪಂಥದ ಸಿದ್ಧಾಂತವೇ ಈ ಹೆಚ್ಚುತ್ತಿರುವ ಹಿಂಸೆಯ ಹಿಂದಿದೆ’ ಎಂದು ಹೊಸ ದಿಲ್ಲಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಮಾತ್-ಎ-ಇಸ್ಲಾಮಿ ಹಿಂದ್‌ನ ಮೌಲಾನಾ ಹಕೀಮುದ್ದೀನ್ ಹೇಳಿದ್ದಾರೆ.

“ಭಾರತವು ಬಹುಸಂಸ್ಕೃತಿಗಳ ದೇಶವಾಗಿದ್ದು ಎಲ್ಲರಿಗೂ ಬದುಕುವ ಮತ್ತು ತಮ್ಮತಮ್ಮ ಧರ್ಮಗಳನ್ನು ಅನುಸರಿಸುವ ಹಕ್ಕಿದೆ.ಇಂತಹಾ ಘಟನೆಗಳು ನಿಲ್ಲದಿದ್ದರೆ, ಅರಾಜಕತೆಗೆ ಕಾರಣವಾದೀತು. ಆದರೆ ಅದನ್ನು ನಿಲ್ಲಿಸುವ.ಸಂಕಲ್ಪ ಸರಕಾರಕ್ಕೆ ಇಲ್ಲ” ಎಂದು ಅವರು ಹೇಳಿದ್ದಾರೆ.

“ಸಹಾಯವಾಣಿಯ ಉದ್ದೇಶ ಕಾನೂನು ನೆರವು ನೀಡುವುದಾಗಿದೆ. ಅದರ ಕಾರ್ಯಗಳು ಸೀಮಿತವಾಗಿವೆ. ಏಕೆಂದರೆ, ಸರಕಾರಿ ವ್ಯವಸ್ಥೆಗೆ ಇರುವ ಬಲ ಅದಕ್ಕಿಲ್ಲ. ಸಹಾಯವಾಣಿಯ ಸ್ಥಾಪನೆಯೇ, ಸರಕಾರ ತನ್ನ ನಾಗರಿಕರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂಬದನ್ನು ತೋರಿಸುತ್ತದೆ” ಎಂದು ಸಂಘಟನೆಯ ಕಾರ್ಯಕರ್ತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗಝಾಲಾ ಜಮೀಲ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...