ಭಾನುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮೂರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದ್ದಾಗಿ ಭಾರತೀಯ ಸೇನೆ ನೀಡಿರುವ ಹೇಳಿಕೆ ಶುದ್ಧ ಸುಳ್ಳು ಎಂದು ಪಾಕಿಸ್ತಾನ ಪ್ರತಿಪಾದಿಸಿದೆ. ಅಷ್ಟೇ ಅಲ್ಲದೇ ಭಾರತ ಮಾಡುತ್ತಿರುವ ವಾದದಲ್ಲಿ ಸತ್ಯಾಂಶವಿಲ್ಲ ಎಂಬುದನ್ನು ಸಾಬೀತುಪಡಿಸಲು, ಯಾವುದೇ ದೇಶದ ರಾಜತಾಂತ್ರಿಕರು ಅಥವಾ ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ಯಲು ಸಿದ್ಧವೆಂದು ಪಾಕಿಸ್ತಾನ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್ ಮತ್ತು ಕೇರನ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯ 10 ಸೈನಿಕರನ್ನು ಹತ್ಯೆಗೈದು, ಮೂರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿರುವುದಾಗಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದರು. ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಉಗ್ರರ ಶಿಬಿರಗಳನ್ನು ಉಡೀಸ್ ಮಾಡಿದೆ ಎಂದಿದ್ದರು.
ಆದರೆ ರಾವತ್ ಹೇಳಿಕೆ ಶುದ್ಧ ಸುಳ್ಳು ಎಂದು ಪಾಕಿಸ್ತಾನ ವಾದಿಸುತ್ತಿದೆ. ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸೀಫ್ ಘಫೂರ್ ಪ್ರತಿಕ್ರಿಯಿಸಿ, ದಾಳಿ ಮಾಡಲು ಅಲ್ಲಿ ಶಿಬಿರಗಳೇ ಇಲ್ಲ. ಪಾಕಿಸ್ತಾನದಲ್ಲಿರುವ ರಾಜತಾಂತ್ರಿಕರು ತಮಗೆ ಇಷ್ಟವಿರುವ ವಿದೇಶಿ ರಾಜತಾಂತ್ರಿಕರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ದು, ರಾವತ್ ಅವರ ಮಾತನ್ನು ಸಾಬೀತುಪಡಿಸಿ ತೋರಿಸಲಿ. ಪುಲ್ವಾಮಾ ದಾಳಿಯ ನಂತರ ಭಾರತೀಯ ಸೇನೆಯ ಅಧಿಕಾರಿಗಳು ಪದೇಪದೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸದಿದ್ದರೆ ಶಾಂತಿಗೆ ಭಂಗ ಉಂಟಾಗಬಹುದು ಎಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ಹತ್ತಿರ ಅಥವಾ ಚುನಾವಣೆಯ ದಿನ ಇಂತಹ ಹೊಸ ಹಸಿ ಸುಳ್ಳುಗಳು ಭಾರತದ ಸೇನೆಯಲ್ಲಿ ಹೆಚ್ಚುತ್ತಿವೆ. ಹಾಗಾಗಿ ಈ ಸುಳ್ಳು ಸುದ್ದಿಯನ್ನು ಬಹಿರಂಗ ಮಾಡಿ ಲೇಖನ ಬರೆದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಹಿನ್ನೆಲೆ ಕೋಪಗೊಂಡಿರುವ ಪಾಕಿಸ್ತಾನ ಉಭಯ ದೇಶಗಳ ನಡುವಿನ ಅಂಚೆ ವ್ಯವಹಾರವನ್ನು ನಿಷೇಧಿಸಿದೆ. ಇದರಿಂದ ಎರಡೂ ದೇಶಗಳ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.