ಹಣ ವರ್ಗಾವಣೆ ಅಕ್ರಮ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗ್ಗೆ ಸುಮಾರು ೮:೧೫ರ ವೇಳೆಗೆ ದೆಹಲಿಯ ತಿಹಾರ್ ಜೈಲಿಗೆ ಆಗಮಿಸಿದ ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಪಕ್ಷದ ಅಂಬಿಕಾ ಸೋನಿ, ಡಿ.ಕೆ.ಸುರೇಶ್ ಸಹ ಇದ್ದರು.
ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ.ಸುರೇಶ್, ಸಹೋದರ ಡಿ.ಕೆ.ಶಿವಕುಮಾರ್ ಜತೆ ಪಕ್ಷ ಸದಾ ನಿಲ್ಲುತ್ತದೆ. ಪಕ್ಷದ ಪ್ರಮುಖರೆಲ್ಲರೂ ಡಿಕೆಶಿ ಪರ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ಪ್ರಮುಖರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.
ಇನ್ನು ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ತಿಹಾರ್ ಜೈಲಿಗೆ ಭೇಟಿ ನೀಡಿದ್ದ ಸೋನಿಯಾ ಗಾಂಧಿ, ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದರು. ಡಿಕೆಶಿ ಅವರನ್ನು ಭೇಟಿ ಮಾಡಿರಲಿಲ್ಲ. ಇಂದು ಬೆಳ್ಳಂಬೆಳಗ್ಗೆ ಡಿಕೆಶಿ ಅವರನ್ನು ಭೇಟಿ ಮಾಡಿ, ಧೈರ್ಯ ತುಂಬಿದ್ದಾರೆ. ಇತ್ತ ದೆಹಲಿ ಹೈಕೋರ್ಟ್ನಲ್ಲಿ ಇಂದು ಡಿಕೆಶಿ ಜಾಮೀನು, ಕುರಿತ ತೀರ್ಪು ಪ್ರಕಟವಾಗಲಿದೆ.