Homeಸಾಮಾಜಿಕ‘ಅಂಧಾ ಬೀಸಾ,  ಕುತ್ತಾ ಖಾಯಾ...’

‘ಅಂಧಾ ಬೀಸಾ,  ಕುತ್ತಾ ಖಾಯಾ…’

- Advertisement -
 ಹೈ-ಕ ಹಿಂದುಳಿದಿರುವಿಕೆಯ ಮೂಲ ಕಾರಣಗಳೇನು?
ಕುಷ್ಟಗಿ: ಇಲ್ಲಿನ ಸಾಮಾಜಿಕ ಸ್ಥಿತಿಯೂ ಇದಕ್ಕೆ ಮೂಲ ಕಾರಣವಾಗಿದೆ. ಹಿಂದೆಲ್ಲ ಇಲ್ಲಿ ನೂರಾರು, ಸಾವಿರಾರು ಎಕರೆ ಕೃಷಿಭೂಮಿ ದೇಸಾಯಿಗಳು, ಶಾನುಭೋಗರು, ಗೌಡರ ಬಳಿಯೇ ಇತ್ತು. ಈ ಕೃಷಿಭೂಮಿಯಲ್ಲಿ ದುಡಿಯುತ್ತಿದ್ದ ಭೂರಹಿತರು ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ದುರ್ಬಲರಾಗುತ್ತಲೇ ಬಂದರು. ಕಾಲಕ್ರಮೇಣ ಇದು ಬದಲಾಗುತ್ತ ಬಂದರೂ, ಅಷ್ಟಿಷ್ಟು ಭೂಸುಧಾರಣೆ ಯಶಸ್ವಿಯಾದರೂ ಕೂಡ ಇಂದಿಗೂ ಇಲ್ಲಿ ಭೂರಹಿತರ ಸಂಖ್ಯೆಯೇ ಜಾಸ್ತಿ. ಭೂಮಿಯ ಹಂಚಿಕೆ ಸರಿಯಾಗಿ ಆಗದೇ ಇರುವುದೂ ಇಲ್ಲಿನ ಹಿಂದುಳಿದಿರುವಿಕೆಗೆ ಕಾರಣ.
ಸ್ವಾತಂತ್ರ್ಯಾ ನಂತರ ಎಲ್ಲಿ ದಾರಿ ತಪ್ಪಿತು?
ಕುಷ್ಟಗಿ: ನಿಜಾಮನ ಆಡಳಿತದಲ್ಲಿದ್ದ ನಮಗೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಸಿಕ್ಕಿತು. ಸಂವಿಧಾನದ 371ನೇ ವಿಧಿ ಅನುಷ್ಠಾನದಲ್ಲೂ ನಮಗೆ ಆಗಲೇ ಅನ್ಯಾಯವಾಗಿತ್ತು. ಮರಾಠವಾಡ, ವಿದರ್ಭ, ತೆಲಂಗಾಣಗಳಿಗೆ ನೀಡಿದ ಸವಲತ್ತನ್ನು ಹೈ-ಕ ಭಾಗಕ್ಕೆ ನೀಡಲು ನೆಹರೂ ನಿರಾಕರಿಸಿದರು. ಆಗಲೇ ಈ ಸವಲತ್ತು ಸಿಕ್ಕಿದ್ದರೆ ಇವತ್ತು ಇಂತಹ ಪರಿಸ್ಥಿ ಇರುತ್ತಿರಲಿಲ್ಲವೇನೋ?
 ನಂಜುಂಡಪ್ಪ ಸಮಿತಿಯ ವರದಿಯ ನಂತರವಷ್ಟೇ ಸರ್ಕಾರದ ಮಟ್ಟದಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಶುರುವಾಯಿತೇ?
ಕುಷ್ಟಗಿ: ಅನೇಕ ಸರ್ಕಾರಿ ವರದಿಗಳು ಇಲ್ಲಿನ ಹಿಂದುಳಿದಿರುವಿಕೆಯ ಬಗ್ಗೆ ಮೊದಲಿಂದ ಅಂಕಿಅಂಶಗಳ ಸಮೇತ ದಾಖಲೆ ನೀಡುತ್ತ ಬಂದಿವೆ. ಆದರೆ ಇಲ್ಲಿನ ಜನಪ್ರತಿನಿಧಿಗಳಾಗಲಿ, ಸರ್ಕಾರಗಳಾಗಲಿ ಎಂದೂ ಅವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಹಿಂದೆ ರಾಮಕೃಷ್ಣ ಹೆಗಡೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದಾಗ, ಧರ್ಮಸಿಂಗ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಮಿತಿಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣ್ಯ ಒಂದೂವರೆ ವರ್ಷ ಅಧ್ಯಯನ ಮಾಡಿ, ಇಲ್ಲಿನ ಸಮಸ್ಯೆಗಳ ಮೂಲ, ಪರಿಹಾರಗಳ ಕುರಿತು ವಿವರ ನೀಡಿದ್ದರು. ಜೆ.ಎಚ್. ಪಟೇಲ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗಲೂ ಇಲ್ಲಿನ ಹಿಂದುಳಿದಿರುವಿಕೆ ಕುರಿತು ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸಿದ್ದರು. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಚೀನಾಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೆ, ರಾಯಚೂರಿನ ಅಭಿವೃದ್ಧಿ ವಿಶ್ವದಲ್ಲೇ ಅತಿ ಕೊನೆಯ ದರ್ಜೆಯಲ್ಲಿದೆ ಎಂದು ಈ ಸಮಿತಿ ನೀಡಿದ್ದ ವರದಿಯಿಂದ ಸರ್ಕಾರಗಳು ಎಚ್ಚೆತ್ತುಗೊಳ್ಳಲಿಲ್ಲ. ಇಂದಿರಾ ಗಾಂಧಿ ಅವಧಿಯಲ್ಲಿ ದೇಶದ ಅತಿ ಹಿಂದುಳಿದ 25 ಜಿಲ್ಲೆಗಳ ಪಟ್ಟಿ ಮಾಡಿದಾಗ ಅದರಲ್ಲಿ ರಾಯಚೂರು ಇತ್ತು. ಆದರೂ ಯಾವ ಸರ್ಕಾರಗಳೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
 ನಂಜುಂಡಪ್ಪ ಸಮಿತಿ ವರದಿ ಪ್ರಕಾರ ಇಲ್ಲಿ ಅಧಿಕಾರ ಹಂಚಿಕೆಯೂ ಆಗುತ್ತಿಲ್ಲ ಅಲ್ಲವೇ?
ಕುಷ್ಟಗಿ: ಹೌದು, ಅದು ಇಲ್ಲಿವರೆಗೂ ಆಗಲೇ ಇಲ್ಲ. ಕೇವಲ ಅನುದಾನ ನೀಡಿದ್ದೇವೆ ಎಂಬುದನ್ನು ಹೈಲೈಟ್ ಮಾಡುವ ಸರ್ಕಾರಗಳು, ರಾಜಕೀಯ ಮತ್ತು ಸಾಂಸ್ಕøತಿಕ ಅಧಿಕಾರ ನೀಡುವಲ್ಲಿ ಮೋಸ ಮಾಡುತ್ತ ಬಂದಿವೆ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನ ಪ್ರಕಾರ, ಕ್ಯಾಬಿನೆಟ್‍ನಲ್ಲಿ ಕಲಬುರ್ಗಿ ವಿಭಾಗಕ್ಕೆ ಶೇ.25ರಷ್ಟು ಸಚಿವ ಸ್ಥಾನಗಳಿರಬೇಕು. ನಿಗಮ, ಮಂಡಳಿ, ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಸ್ಥಾನಗಳಲ್ಲೂ ಇದೇ ಪ್ರಮಾಣದ ಪ್ರಾತಿನಿಧ್ಯ ಇರಬೇಕು. ಇವತ್ತಿಗೂ ಅದೂ ಆಗಲೇ ಇಲ್ಲ. ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತದಷ್ಟು ಅವಿವೇಕಿ ಜನಪ್ರತಿನಿಧಿಗಳನ್ನು ನಾವು ಹೊಂದಿದ್ದೇವೆ.
 ಒಟ್ಟಾರೆ ಉತ್ತರ ಕರ್ನಾಟಕ ಹಿಂದುಳಿದಿದೆ. ಮುಂಬೈ ಕರ್ನಾಟಕಕ್ಕೆ ಅಷ್ಟೋ ಇಷ್ಟೋ ಸೌಲಭ್ಯ ಸಿಗುತ್ತಿವೆಯಲ್ಲ?
ಕುಷ್ಟಗಿ: ಇದಕ್ಕೂ ನಮ್ಮ ಬೇಜವಾಬ್ದಾರಿ ರಾಜಕಾರಣಿಗಳು ಮತ್ತು ಮುಂಬೈ ಕರ್ನಾಟಕದ ಕೆಲವು ನಾಯಕರೂ ಕಾರಣ. ನಂಜುಂಡಪ್ಪ ಸಮಿತಿ ವರದಿ ಪ್ರಕಾರ, ಐಐಟಿ ರಾಯಚೂರಿಗೆ ಸಿಗಬೇಕಿತ್ತು. ಆದರೆ ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ ಕುತಂತ್ರ ಮಾಡಿ, ಧಾರವಾಡಕ್ಕೆ ಮಂಜೂರು ಮಾಡಿಸಿಕೊಂಡರು. ಮುಂಬೈ ಕರ್ನಾಟಕದಲ್ಲಿ ಹಲವಾರು ವಿವಿಗಳಿವೆ. ತಾಂತ್ರಿಕ ವಿವಿ, ಮಹಿಳಾ ವಿವಿ, ತೋಟಗಾರಿಕಾ ವಿವಿಗಳಲ್ಲಿ ಕನಿಷ್ಟ ಎರಡನ್ನಾದರೂ ಹೈ-ಕ ಭಾಗಕ್ಕೆ ನೀಡಬೇಕಿತ್ತು.
 371ನೇ ವಿಧಿ ಲಾಗೂ ಆಯ್ತು. ಅದರ ಜಾರಿ ಹೇಗೆ ನಡೆಯುತ್ತಿದೆ?
ಕುಷ್ಟಗಿ: ನಮ್ಮ ಮತ್ತು ಹಲವು ಸಂಘಟನೆಗಳ 20 ವರ್ಷಗಳ ಹೋರಾಟಕ್ಕೆ ಮಣಿದ ಮಲ್ಲಿಕಾರ್ಜುನ ಖರ್ಗೆ ಈ ಸೌಲಭ್ಯವನ್ನು ತಂದರು. ಇದರಿಂದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಭಾಗದ ಜನರಿಗೆ ವಿಶೇಷ ಮೀಸಲಾತಿ ಸಿಗುತ್ತಿದೆ. ಆದರೆ ಅನುಷ್ಟಾನದಲ್ಲಿ ಸಮಸ್ಯೆಗಳೂ ಹಾಗೆಯೇ ಇವೆ.
 ಹೈ-ಕ ಅಭಿವೃದ್ಧಿ ಮಂಡಳಿ ಜಾಗದಲ್ಲಿ ಈಗ ಹೈ-ಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಬಂದಿದೆ. ಇದರ ಕಾರ್ಯವೈಖರಿ ಹೇಗಿದೆ?
ಕುಷ್ಟಗಿ: ಇದು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯಪಾಲರೇ ಇದರ ಮುಖ್ಯಸ್ಥರು. ಆದರೆ ವಜುಭಾಯಿ ಇವತ್ತಿಗೂ ಒಂದು ಸಭೆಗೆ ಹಾಜರಿಲ್ಲ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಒಂದು ಬಜೆಟ್‍ನಲ್ಲಿ ಈ ಮಂಡಳಿಗೆ 6 ಸಾವಿರ ಕೋಟಿ ಕೊಟ್ಟರು. ಅದರಲ್ಲಿ ಎರಡೂವರೆ ಸಾವಿರ ಕೋಟಿ ಬಳಕೆಯೇ ಆಗಲಿಲ್ಲ. ತಮ್ಮ ಕ್ಷೇತ್ರಕ್ಕೆ ರಸ್ತೆ, ಕಟ್ಟಡಕ್ಕೆ ಅನುದಾನ ಪಡೆದ ಶಾಸಕರು ಲಾಭ ಮಾಡಿಕೊಂಡರೆ ವಿನಃ ಸಾಮಾಜಿಕ ಬದಲಾವಣೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲೇ ಇಲ್ಲ. ಈ ಮಂಡಳಿಗೆ ಬರುವ ಅನುದಾನದಲ್ಲಿ ಶೇ.65ರಷ್ಟು ಕಲಬುರ್ಗಿ ಜಿಲ್ಲೆಗೇ ದಕ್ಕುವಂತೆ ಮಲ್ಲಿಕಾರ್ಜುನ ಖರ್ಗೆ ಕೈಚಳಕ ತೋರಿಸುತ್ತಾರೆ. ಉಳಿದ ಜಿಲ್ಲೆಗಳಿಗೆ ಶೇ. 35ರಷ್ಟು ಮಾತ್ರ ಸಿಗುತ್ತಿದ್ದರೂ, ಕೆಲಸಗೇಡಿ ಜನಪ್ರತಿನಿಧಿಗಳು ಸುಮ್ಮನೇ ಇದ್ದಾರೆ.
ಈ ಅನುದಾನದ ಬಳಕೆಯಾದರೂ ಸರಿಯಾಗಿ ಆಗುತ್ತಿದೆಯಾ?
ಕುಷ್ಟಗಿ: ಊಹೂಂ.. ತಮಗೆ ಲಾಭವಿರುವ ಕೆಲಸಗಳಿಗೆ ಮಾತ್ರ ಇದನ್ನು ವಿನಿಯೋಗಿಸುತ್ತಿದ್ದಾರೆಯೇ ಹೊರತು, ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಈ ಹಣವನ್ನು ಹೂಡುತ್ತಿಲ್ಲ. ಸಿಕ್ಕಾಪಟ್ಟೆ ಬಸ್, ಡ್ರೋಣ್ ಖರೀದಿಗೂ ಈ ಅನುದಾನವನ್ನೇ ಬಳಕೆ ಮಾಡಿಕೊಂಡಿದ್ದಾರೆ ಇಲ್ಲಿನ ಸ್ವಾರ್ಥಿ ಜನಪ್ರತಿನಿಧಿಗಳು. ಹೀಗಾಗಿ ಈ ಮಂಡಳಿಯ ಮೂಲ ಉದ್ದೇಶವೇ ಮಾಯವಾಗಿ, ಅನುದಾನ ದುರುಪಯೋಗ ಆಗುತ್ತಿದೆ.
 ಒಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಒಂದು ಸಮಸ್ಯೆಯಾದಂತಿದೆ…
ಕುಷ್ಟಗಿ: ರಾಜಕೀಯ ಇಚ್ಛಾಶಕ್ತಿ ಬಿಡಿ, ಇಲ್ಲಿ ಖರ್ಗೆ ಬಿಟ್ಟರೆ ಯಾವ ರಾಜಕೀಯ ನಾಯಕತ್ವವೇ ಇಲ್ಲದಂತಾಗಿದೆ. ಇವರೆಲ್ಲ ಬೆಂಗಳೂರಿನ ಮೋಹಕ್ಕೆ ಸಿಕ್ಕು ಈ ಭಾಗವನ್ನೇ ಮರೆಯುತ್ತಿದ್ದಾರೆ. ಇವರೆಲ್ಲ ಕೇವಲ ರಾಜಕೀಯ ಫಲಾನುಭವಿಗಳು ಮಾತ್ರ.
ಆಗಾಗ ಉ-ಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಲ್ಲ?
ಕುಷ್ಟಗಿ: ಇದಕ್ಕೆ ಜನಸಾಮಾನ್ಯರ ಬೆಂಬಲ ಇಲ್ಲವೇ ಇಲ್ಲ. ಉಮೇಶ ಕತ್ತಿ, ಶ್ರೀರಾಮುಲುಗಳಂತಹ ಅವಿವೇಕಿಗಳು ಮಾಡುವ ಕೆಲಸವಿದು.ಇದು ಪಕ್ಕಾ ಅಧಿಕಾರ ಕಬಳಿಕೆ ಮತ್ತು ಜಾತಿ ಹುನ್ನಾರದಿಂದ ಎಬ್ಬಿಸುವ ಕೂಗು. ದಕ್ಷಿಣ ಭಾಗವನ್ನು ಒಕ್ಕಲಿಗ  ನಾಯಕರು, ಉತ್ತರವನ್ನು ಲಿಂಗಾಯತ ನಾಯಕರು ಆಳಬೇಕೆಂಬ ಭ್ರಮೆಯಲ್ಲಿ ಹುಚ್ಚುಚ್ಚಾಗಿ ಮಾತಾಡುತ್ತಾರೆ. ಉತ್ತರದ ಅನೇಕ ಮಹನೀಯರ ಶ್ರಮದಿಂದ ಏಕೀಕರಣವಾಯಿತು. ಮೈಸೂರು ಭಾಗದ ರಾಜಕಾರಣಿಗಳಿಗೆ ಇದು ಇಷ್ಟವಿರಲಿಲ್ಲ. ಪರಿಶ್ರಮದಿಂದ ಏಕೀಕರಣವಾಗಿದೆ, ಈಗ ಪ್ರತ್ಯೇಕತೆಯ ಕೂಗು ಎತ್ತುವುದು ಮೂರ್ಖತನ. ಇದಕ್ಕೆ ಜನರು ಎಂದೂ ಸ್ಪಂದಿಸಿಲ್ಲ.
‘ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಸರ್ಕಾರಗಳು’
ಹೈ-ಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿರುವ ಡಾ. ರಜಾಕ್ ಉಸ್ತಾದ್ 371 ವಿಧಿಯ ಅನುಷ್ಠಾನದಲ್ಲಿ ಲೋಪಗಳಾದಾಗ ಧ್ವನಿ ಎತ್ತಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಸದ್ಯ ಹೈ-ಕ ಭಾಗಕ್ಕೆ ಯಾವ ಬಗೆಯ ಅಭಿವೃದ್ಧಿ ಕೆಲಸಗಳಾಗಬೇಕು ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ.
 371ನೇ ವಿಧಿ ಜಾರಿಯಾದ ಮೇಲೆ ಹೈ-ಕ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿವೆಯೇ?
ರಜಾಕ್: ಉದ್ಯೋಗ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಲಭಿಸುತ್ತಿದೆ. ಆದರೆ ಕೆಲವು ವಿಶ್ವವಿದ್ಯಾಲಂiÀiಗಳು ಮತ್ತು ಇಲಾಖೆಗಳು ಈ ಮೀಸಲಾತಿಯನ್ನು ನಿರಾಕರಿಸುವ ಯತ್ನ ಮಾಡುತ್ತಿವೆ. ಮೈಸೂರು, ಬೆಂಗಳೂರು, ಶಿವಮೊಗ್ಗ ವಿವಿಗಳಲ್ಲಿ ಹೈ-ಕ ಮೀಸಲು ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. 2018ರಲ್ಲಿ 100 ಸಿವಿಲ್ ನ್ಯಾಯಾಧೀಶರ ನೇಮಕಾತಿಯಲ್ಲಿ ಹೈ-ಕ ಮೀಸಲಾತಿಯನ್ನು ಪಾಲಿಸಲೇ ಇಲ್ಲ. ಸರ್ಕಾರ ಈ ಬಗ್ಗೆ ಕುರುಡಾಗಿಯೇ ಇತ್ತು. ಬೆಂಗಳೂರಿನ ಸಾರಿಗೆ ನಿಗಮದ ಒಬ್ಬ ಎಂ.ಡಿ., ಮೀಸಲಾತಿ ನೀಡಲು ಆಗುವುದಿಲ್ಲ ಎಂದು ಸುತ್ತೋಲೆ ಹೊರಡಿಸುತ್ತಾನೆ. ಅಂದರೆ ಪ್ರತಿ ಸಲವೂ ಮತ್ತೆ ಹೋರಾಡಿಯೇ ಈ ಸೌಲಭ್ಯ ಪಡೆಯುವಂತಹ ಸಂದರ್ಭಗಳು ಎದುರಾಗುತ್ತಿವೆ. ಸರ್ಕಾರ ಈ ಕುರಿತು ಒಂದು ಸ್ಪಷ್ಟ ನೀತಿಯನ್ನು ಜಾರಿ ಮಾಡಬೇಕಾಗಿದೆ.
 ಬಿಡುಗಡೆಗೊಂಡ ಅನುದಾನದ ಬಳಕೆ ಹೇಗಿದೆ?
ರಜಾಕ್: ರಸ್ತೆ, ಕಟ್ಟಡಗಳ ನಿರ್ಮಾಣಕ್ಕೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಹೊರತು, ಪ್ರಾಥಮಿಕ ಶಿಕ್ಷಣ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೈ-ಕ ಪ್ರಾದೇಶಿಕ ಅಭಿವೃದ್ಧ ಮಂಡಳಿಗೆ ಒದಗುವ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವ ಪದವೀಧರರ ಪ್ರಮಾಣ ಶೇ. 27ರಷ್ಟಿದ್ದರೆ, ಈ ಭಾಗದಲ್ಲಿ ಅದು ಕೇವಲ ಶೇ.9.9 ಮಾತ್ರ ಇದೆ. ಈ ಭಾಗದ ಎಲ್ಲ ವಿವಿಗಳಲ್ಲೂ ಉಚಿತ ವಸತಿ ವ್ಯಸ್ಥೆಯನ್ನು ಮಾಡುವುದು, ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಮಂಡಳಿಯೇ ತುಂಬುವ ಕೆಲಸವನ್ನು ಮಂಡಳಿಯೇ ಮಾಡಬೇಕು. ಆಗ ಮಾತ್ರ ಸುಧಾರಣೆ ಸಾಧ್ಯ.
razak ustad
- Advertisement -

 ಉದ್ಯೋಗ ಸೃಷ್ಟಿಯ ಕುರಿತಂತೆ ಏನಾದರೂ ಬೆಳವಣಿಗೆ ಆಗಿವೆಯೇ?

ರಜಾಕ್: ಕೊಪ್ಪಳ, ಬಳ್ಳಾರಿ ಭಾಗದಲ್ಲಿ ಹಲವಾರು ಉದ್ಯಮಗಳು ತಲೆ ಎತ್ತಿದ್ದರೂ ಇಲ್ಲಿನ ಯುವಕರಿಗೆ ಉದ್ಯೋಗ ಲಭಿಸುತ್ತಿಲ್ಲ. ಹೊರಗಿನ ರಾಜ್ಯಗಳ ಕಾರ್ಮಿಕರಿಗೇ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ, ಸಿ ಮತ್ತು ಡಿ ದರ್ಜೇಯ ಕೆಲಸಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ನಿಯಮ ರೂಪಿಸಬೇಕು.
 ಆರೋಗ್ಯಕ್ಕೆ ಸಂಬಂಧಿಸಿದಂತೆ ಮಂಡಳಿ ಏನು ಮಾಡಬಹುದು?
ರಜಾಕ್: ರಾಜ್ಯದಲ್ಲಿ ಪ್ರತಿ 5 ಕಿ.ಮೀಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೆ, ಇಲ್ಲಿ ಪ್ರತಿ 15 ಕಿಮೀಗೆ ಒಂದು ಆರೋಗ್ಯ ಕೇಂದ್ರವಿದೆ. ಪ್ರತಿ 20 ಕಿಮೀಗೆ ಒಂದೇ ಒಂದು ಹೆರಿಗೆ ಆಸ್ಪತ್ರೆಯಿದೆ. ಈ ನಿಟ್ಟಿನಲ್ಲಿ ಮಂಡಳಿ ಗಮನ ಹರಿಸಬೇಕು. ಹೈ-ಕದ 31 ತಾಲೂಕುಗಳಿಗೆ ನಈಗ 300 ವೈದ್ಯರ ಅಗತ್ಯವಿದೆ. ಮಂಡಳಿ ವಿಶೇಷ ಸವಲತ್ತುಗಳನ್ನು ನೀಡಿ, ವೈದ್ಯರು ಇಲ್ಲಿ ಕೆಲಸ ಮಾಡುವಂತೆ ಮಾಡಬಹುದು. ಮಂಡಳಿಗೆ ಬರುವ ಅನುದಾನದಲ್ಲಿ ಇದೇನೂ ದೊಡ್ಡ ಕೆಲಸವಲ್ಲ.
 ಬಜೆಟ್‍ನಲ್ಲಿ ಘೋಷಣೆಯಾಗುವ ಅನುದಾನ ಮಂಡಳಿಗೆ ಸರಿಯಾಗಿ ತಲುಪುತ್ತಿದೆಯೇ?
ರಜಾಕ್: ಬಜೆಟ್‍ನಲ್ಲಿ 1500 ಕೋಟಿ ಘೋಷಣೆ ಮಾಡುತ್ತಾರೆ. ಆದರೆ ಬಜೆಟ್ ಅನುಮೋದನೆ ಪಡೆಯುವಾಗ ಕೇವಲ ಸಾವಿರ ಕೋಟಿಗೆ ಅನುಮೋದನೆ ನೀಡುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಈ ಕುರಿತು ಪ್ರಶ್ನೆ ಮಾಡುವ ಛಾತಿಯನ್ನೇ ಬೆಳೆಸಿಕೊಂಡಿಲ್ಲ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...