Homeಅಂಕಣಗಳುಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

ಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

- Advertisement -
- Advertisement -

ಲೇಖಕರು: ಆರ್ತಿ ಗಾರ್ಗಿ |

28ನೇ ನವೆಂಬರ್, ಬುಧವಾರ. ‘ಜೋ ಬೋಲೆ ಸೊ ನಿಹಾಲ್, ಸತ್ ಸ್ರೀ ಅಕಾಲ್’ ಎಂಬ ಘೋಷಣೆಗಳೊಂದಿಗೆ ನೂರಾರು ಸಿಖ್ ಯಾತ್ರಿಕರು ಕರ್ತಾರಪುರದ ಪುಣ್ಯಕ್ಷೇತ್ರದೆಡೆಗೆ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದರು. ದೇಶವಿಭಜನೆಯ ನಂತರ ಮೊಟ್ಟಮೊದಲ ಬಾರಿ ಭಾರತದ ಸಿಖ್ಖರು (ಭಾರತದಲ್ಲಿರುವ) ಡೇರಾ ನಾನಕ್ ಸಾಹಿಬ್‍ದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದ, ಪಾಕಿಸ್ತಾನದ ಕರ್ತಾರಪುರ ಸಾಹಿಬ್ ಗುರುದ್ವಾರದೆಡೆಗೆ ಹೋಗುತ್ತಿದ್ದರು. ಫತೆಹ್‍ಗಢ್ ಚೂರಿಯಾ ಗ್ರಾಮದ 65 ವರ್ಷದ ಸಿಖ್ ವ್ಯಕ್ತಿ, ಭಾರತ-ಪಾಕಿಸ್ತಾನದ ಗಡಿಯನ್ನು ದಾಟಿದ ಮೊದಲ ಕೆಲವರಲ್ಲಿ ಒಬ್ಬರು, “ಕೊನೆಗೂ ಈ ಕರ್ತಾರಪುರ್ ಕಾರಿಡಾರ್‍ನ ಕನಸು ನನಸಾಯಿತು” ಎಂದು ಉತ್ಸಾಹದಿಂದ ಹೇಳಿದರು.
ಇಂತಹ ಅನೇಕ ಸಿಖ್ಖರಿಗೆ ಕರ್ತಾರಪುರ ಕ್ಷೇತ್ರ ಕಣ್ಣಳತೆಯಲ್ಲಿದ್ದರೂ ಕಳೆದ 70 ವರ್ಷಗಳಿಂದ ಒಂದು ದೂರದ ಕನಸಾಗಿಯೇ ಉಳಿದಿತ್ತು. ಬುಧವಾರದಂದು, ಇವರೆಲ್ಲರ ನಿರೀಕ್ಷೆ ಸುಖಾಂತ್ಯ ಕಂಡಿತು.
ಕರ್ತಾರಪುರ್ ಸಾಹಿಬ್, ಏನಿದರ ಕತೆ?
ಜಗತ್ತಿನಾದ್ಯಂತ ಇರುವ ಸಿಖ್ಖರಿಗೆ ಕರ್ತಾರಪುರ್ ಸಾಹಿಬ್ ಗುರುದ್ವಾರ ಭಾರಿ ಪ್ರಾಮುಖ್ಯತೆ ಹೊಂದಿದ ಕ್ಷೇತ್ರವಾಗಿದೆ. ಧರ್ಮಗುರು ಗುರುನಾನಕ್ ಅವರು ತಮ್ಮ ಮೂರು ದಶಕಗಳ ಸುದೀರ್ಘ ತೀರ್ಥಯಾತ್ರೆಯ ನಂತರ ಇದೇ ಜಾಗದಲ್ಲಿ ನೆಲೆಸುವ ನಿರ್ಣಯ ತೆಗೆದುಕೊಂಡಿದ್ದರು. ಇಲ್ಲಿಯೇ ಗುರು ನಾನಕ್ ಅವರು ಕೃಷಿ ಮಾಡುತ್ತ, ಶಾಂತಿಯ ಸಂದೇಶವನ್ನು ಹರಡುತ್ತ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ಎಂದು ನಂಬಲಾಗುತ್ತದೆ. ಇಲ್ಲಿ ಅವರು ತಮ್ಮ ಸಾವಿಗಿಂತ ಮುಂಚೆ 17 ವರ್ಷಗಳನ್ನು ಕಳೆದು, ತಮ್ಮ ಶಿಷ್ಯನಾದ ಭಾಯಿ ಲೆಹ್ನಾ (ಗುರು ಅಂಗದ್) ಅವರನ್ನು ಮುಂದಿನ ಗುರುವಾಗಿ ನೇಮಿಸಿದರು. 1947 ರಲ್ಲಿ ದೇಶವಿಭಜನೆಯಾಗಿ, ಕರ್ತಾರಪುರ ಸಾಹಿಬ್ ಗುರುದ್ವಾರ ಪಾಕಿಸ್ತಾನಕ್ಕೆ ಸೇರಿತು. ಸದ್ಯಕ್ಕೆ ಅಟ್ಟಾರಿ-ವಾಘಾ ಗಡಿಯ ಪಕ್ಕದ ನರೋವಾಲ್ ನಗರದಲ್ಲಿ ಸ್ಥಿತವಾಗಿದೆ.
ಒಬ್ಬರೇ ನಾನಕರಿಗೆ ಒಂದು ಸಮಾಧಿ, ಒಂದು ಗೋರಿ
ಕರ್ತಾರಪುರ ಸಾಹಿಬ್‍ನ ಮುಖ್ಯ ಸಮುಚ್ಚಯ ಗುರು ನಾನಕ್ ಅವರ ಒಂದು ಸಮಾಧಿ ಹಾಗೂ ಒಂದು ಗೋರಿಯನ್ನು ಹೊಂದಿದೆ. ಅದರ ಹಿಂದಿನ ಜನಪದ ಕಥೆ ಇಂತಿದೆ.
ಗುರು ನಾನಕ್ ಅವರ ಸಾವಿನ ನಂತರ ಅವರ ಅಂತ್ಯಕ್ರಿಯೆಯ ವಿಷಯವಾಗಿ, ಅವರ ಹಿಂದೂ ಮತ್ತು ಮುಸ್ಲಿಮ್ ಭಕ್ತರ ನಡುವೆ ವಾಗ್ವಾದ ಶುರುವಾಯಿತು. ಹಿಂದೂ ಭಕ್ತರು ಅವರನ್ನು ದಹನ ಮಾಡಬೇಕು ಎಂದು ಪಟ್ಟುಹಿಡಿದರೆ, ಮುಸ್ಲಿಮರು ಹೂಳಬೇಕೆಂದರು. ವಾದ ವಿವಾದದಲ್ಲಿ ಮಧ್ಯರಾತ್ರಿಯಾದಾಗ, ಮಾರನೇ ದಿನ ಇದನ್ನು ಬಗೆಹರಿಸುವ ಎಂದು ಎರಡೂ ಗುಂಪುಗಳು ನಿರ್ಣಯಿಸಿ ಮಲಗಿದವು. ಆದರೆ, ಬೆಳಗ್ಗೆ ಎದ್ದಾಗ ಅವರಿಗೆ ಕಂಡಿದ್ದು, ಗುರು ನಾನಕ್ ಅವರ ದೇಹವಿಟ್ಟಿದ್ದ ಜಾಗದಲ್ಲಿ ಒಂದು ಹೂವಿನ ದೊಡ್ಡ ರಾಶಿ. ಆಗಲೂ ಒಮ್ಮತಕ್ಕೆ ಬರಲಾಗದ್ದರಿಂದ, ಆ ಹೂವಿನ ರಾಶಿಯನ್ನು ಎರಡೂ ಗುಂಪುಗಳಿಗೆ ವಿಂಗಡಿಸಲಾಯಿತು. ಮುಸ್ಲಿಮ್ ಭಕ್ತಾದಿಗಳು ಅವರಿಗನುಗುಣವಾಗಿ ಅಂತ್ಯಕ್ರಿಯೆ ಮಾಡಿದರೆ, ಹಿಂದೂಗಳು ತಮಗನುಗುಣವಾಗಿ ಮಾಡಿದರು. ಹಾಗಾಗಿ, ಕರ್ತಾರಪುರ್ ಸಾಹಿಬ್‍ನಲ್ಲಿ ಒಂದು ಸಮಾಧಿ ಮತ್ತೊಂದು ಗೋರಿ ಎರಡೂ ಇವೆ.
ಭಾರತ-ಪಾಕಿಸ್ತಾನದ ಗಡಿಯಿಂದ ಬರೀ 1 ಕಿಲೋಮೀಟರ್ ದೂರದಲ್ಲಿರುವ ಪಂಜಾಬಿನ ಡೇರಾ ಬಾಬಾ ನಾನಕ್‍ದಿಂದ ಯಾತ್ರೆ ಪ್ರಾರಂಭವಾಗುತ್ತದೆ. 4-5 ಕಿಲೋಮೋಟರ್ ದೂರದಿಂದ, ಗಡಿಯಲ್ಲಿ ನಿಂತು ಕರ್ತಾರಪುರ್ ಸಾಹಿಬ್ ಸಮುಚ್ಚಯವನ್ನು ಬರಿಗಣ್ಣಿನಿಂದ ನೋಡಬಹದು. ದೇಶವಿಭಜನೆಯ ನಂತರ ಯಾತ್ರಿಗಳು ಬೈನಾಕ್ಯುಲರ್ ಬಳಸಿ ದರ್ಶನ ಪಡೆಯುತ್ತಿದ್ದರು.
ತಮ್ಮ ಅತ್ಯಂತ ಪವಿತ್ರ ಕ್ಷೇತ್ರವು ಗಡಿಯ ಕಾರಣದಿಂದಾಗಿ ಬೇರ್ಪಟ್ಟಿರುವುದು ಸಿಖ್ ಯಾತ್ರಿಗಳಿಗೆ ಒಂದು ನೋವಿನ ವಿಷಯವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಲು ಎರಡೂ ದೇಶಗಳಿಗೆ ಇಷ್ಟು ದೀರ್ಘ ಸಮಯ ಏಕೆ ಹಿಡಿಯಿತು?
ಇಂದಿರಾ ಗಾಂಧಿಯಿಂದ ಅಟಲ್ ಬಿಹಾರಿ ವಾಜಪೇಯಿವರೆಗೆ
ಒಂದು ತಿಂಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಔಪಚಾರಿಕವಾಗಿ ಘೋಷಿಸಿದ ಈ ಕರ್ತಾರಪುರ್ ಕಾರಿಡಾರ್ ಅನ್ನು ಈ ಹಿಂದೆ ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಉಭಯದೇಶಗಳ ನಡುವಿನ ಐತಿಹಾಸಿಕ ಬಸ್ ಡಿಪ್ಲೊಮಸಿಯ ಸಂದರ್ಭದಲ್ಲಿ ಇದನ್ನು ಹೇಳಿದ್ದರು. ಪಾಕಿಸ್ತಾನವೂ ವಿಸಾ ಅಥವಾ ಪಾಸ್‍ಪೋರ್ಟ್ ಇಲ್ಲದೇ ಯಾತ್ರಿಗಳಿಗೆ ಈ ಕ್ಷೇತ್ರಕ್ಕೆ ಭೇಟಿ ನೀಡಲು ಒಂದು ಸೇತುವೆಯನ್ನು ನಿರ್ಮಿಸಲು ಒಪ್ಪಿಕೊಂಡಿತ್ತು. ಆದರೆ, ಎರಡೂ ದೇಶಗಳ ನಡುವಿನ ಶಾಂತಿ ಹೆಚ್ಚುಕಾಲ ಉಳಿಯಲಿಲ್ಲ. ಗಡಿಪ್ರದೇಶದಲ್ಲಾದ ಚಟುವಟಿಕೆಗಳಿಂದ ಕಾರ್ಗಿಲ್ ಯುದ್ಧವೇ ಆಯಿತು. ಈ ಬೆಳವಣಿಗೆ ಕಾರಿಡಾರ್‍ನ ಮಾತುಕತೆಗಳನ್ನು ಕೊನೆಗಾಣಿಸಿತು. ವಾಜಪೇಯಿ ಅವರ ಶಾಂತಿ ಉಪಕ್ರಮದ ಅಂಗವಾಗಿ ಮಾಡಿದ ಲಾಹೋರ್ ಪ್ರಯಾಣದಲ್ಲಿ ಕರ್ತಾರಪುರ್ ಕಾರಿಡಾರಿನ ಮೊದಲ ಪ್ರಸ್ತಾಪ ಸಿಗುತ್ತಾದರೂ, 1869 ರಲ್ಲೇ ಈ ವಿಷಯ ಭಾರತೀಯ ಸರಕಾರದ ಗಮನ ಸೆಳೆದಿತ್ತು.
1969 ಗುರು ನಾನಕ್ ಅವರ 500 ನೇ ಜನ್ಮಶತಾಬ್ದಿಯ ವರ್ಷವಾಗಿತ್ತು. ಅದರ ಸಂಭ್ರಮಾಚರಣೆಯ ಸಮಯದಲ್ಲಿ, ಅಂದಿನ ಪ್ರಧಾನಿಯವರು ಪಂಜಾಬ್ ಸರಕಾರಕ್ಕೆ ಆಶ್ವಾಸನೆಯೊಂದನ್ನು ನೀಡಿದ್ದರು. ಕರ್ತಾರಪುರ್ ಸಾಹಿಬ್‍ಗೆ ಪ್ರವೇಶ ಸಿಗುವಂತೆ ಪಾಕಿಸ್ತಾನದೊಂದಿಗೆ ಭೂವಿನಿಮಯ ಮಾಡಿಕೊಳ್ಳುವುದಾಗಿ ನುಡಿದಿದ್ದರು. ಕರ್ತಾರಪುರ್ ಸಾಹಿಬ್‍ಗಾಗಿ ಅದರ ಪಕ್ಕದ ಭಾರತೀಯ ಭೂಭಾಗದೊಂದಿಗೆ ವಿನಿಮಯ ಮಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದಾಗಿ ಇಂದಿರಾ ಗಾಂಧಿ ಹೇಳಿದ್ದರು. ಭಾರತದಲ್ಲಿಯ ನಂಕಾನಾ ಸಾಹಿಬ್‍ಗೆ ಪಾಕಿಸ್ತಾನದ ಯಾತ್ರಿಗಳಿಗೆ ಉಚಿತ ವೀಸಾ ನೀಡುವುದಾಗಿಯೂ ಅವರು ಹೇಳಿದ್ದರು. ಆದರೆ, ಈ ಆಶ್ವಾಸನೆಯ ತದನಂತರ ನಡೆದ ಭಾರತ-ಪಾಕಿಸ್ತಾನ್ ಯುದ್ಧ, ಬಾಂಗ್ಲಾದೇಶದ ಸೃಷ್ಟಿ, ಇವೆಲ್ಲ ಕಾರಣದಿಂದ ಕಾರಿಡಾರ್ ವಿಷಯ ಸ್ಮøತಿಪಟಲದಿಂದ ಅಳಿಸಿಹೋಯಿತು.
ಕರ್ತಾರಪುರ್ ಸಾಹಿಬ್ ಕ್ಷೇತ್ರಕ್ಕೆ ಪ್ರವೇಶವನ್ನು ಗಂಭೀರವಾಗಿ ಪರಿಗಣಿಸಿದ ಎರಡೂ ಸಂದರ್ಭಗಳಲ್ಲಿ, ಗಡಿಪ್ರದೇಶದಲ್ಲಿ ಹಿಂಸಾಚರಣೆ ಪ್ರಾರಂಭವಾಗಿ ಉಭಯದೇಶಗಳ ಸಂಬಂಧ ಹದಗೆಟ್ಟವು.
ಬುಧವಾರ, 28 ನವೆಂಬರ್‍ದಂದು ಶಾಂತಿಯ ಸಂದೇಶವನ್ನು ನೀಡುತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು “ನೀವು ಒಂದು ಹೆಜ್ಜೆಯಿಟ್ಟಲ್ಲಿ, ನಾವು ಎರಡು ಹೆಜ್ಜೆಯನ್ನಿಡುತ್ತೇವೆ”. ಅದಕ್ಕಿಂತ ಮುಂಚೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಈ ಹೆಜ್ಜೆಗೆ ತಮ್ಮ ಬೆಂಬಲ ನೀಡಿದ್ದರು. ಈ ಕರ್ತಾರಪುರ್ ಕಾರಿಡಾರ್ ಭಾರತ ಮತ್ತು ಪಾಕಿಸ್ತಾನ್ ನಡುವೆಯ ‘ಬರ್ಲಿನ್ ಗೋಡೆ’ ಯಾಗಿ ಪರಿವರ್ತನೆಯಾಗುವ ಸಾಧ್ಯತೆಯನ್ನೂ ಪ್ರಸ್ತಾಪಿಸಿದ್ದರು. ‘ಬರ್ಲಿನ್ ಗೋಡೆ ಧ್ವಂಸವಾಗುವುದು ಎಂದು ಯಾರು ನಂಬಿದ್ದರು? ಗುರು ನಾನಕ್ ಅವರ ಆಶೀರ್ವಾದದೊಂದಿಗೆ, ಈ ಕರ್ತಾರಪುರ್ ಕಾರಿಡಾರ್ ಗಡಿಗಳಾಚೆಯ ಜನರನ್ನು ಬೆಸೆಯುವ ಮಾಧ್ಯಮವಾಗಬಲ್ಲದು”. ಎಂದು ಮೋದಿ ಹೇಳಿದ್ದರು.
ಕೇಂದ್ರೀಯ ಸಚಿವೆ ಹರಸಿಮ್ರತ್ ಕೌರ್ ಅವರು ಕರ್ತಾರಪುರ್ ಕಾರಿಡಾರ್ ಉದ್ಘಾಟನೆಯ ಸಮಯದಲ್ಲಿ ಪ್ರಧಾನಮಂತ್ರಿಯ ಸಂದೇಶವನ್ನು ಒತ್ತಿಹೇಳುವಾಗಲೇ, ವಿದೇಶಾಂಗ ಸಚಿವೆ ಉಭಯ ದೇಶಗಳ ಮಧ್ಯೆ ಮಾತುಕತೆಗೆ ಇದೊಂದೇ ಕಾರಣವಾಗಲಾರದು ಎಂದರು. ಇನ್ನೂ ಕೆಲವರು, ಈ ಕಾರಿಡಾರ್‍ನಿಂದಾಗಿ ಖಾಲಿಸ್ತಾನಿ ಅಪಾಯ ಹಿಂದಿರುಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಈಗ ಹಳಿತಪ್ಪಿದ ಭಾರತ-ಪಾಕಿಸ್ತಾನದ ಮಾತುಕತೆಗಳನ್ನು ಮತ್ತೆ ಸರಿದಾರಿಗೆ ತರುವಲ್ಲಿ ಈ ಕಾರಿಡಾರ್ ಅದೃಷ್ಟಸೂಚಕವಾಗಿ ಪರಿಣಮಿಸಬಲ್ಲದೋ ಇಲ್ಲವೋ ಎನ್ನುವುದನ್ನು ಎರಡೂ ದೇಶದ ಸರಕಾರಗಳು ನಿರ್ಣಯಿಸಬೇಕಿದೆ. ಆದರೆ, ಒಂದಂತೂ ಸ್ಪಷ್ಟ, ಇಬ್ಭಾಗವಾಗಿರುವ ಎರಡೂ ದೇಶಗಳನ್ನು ಬೆಸೆಯುವುದರಲ್ಲಿ ಧರ್ಮ ಒಂದು ಸಾಧ್ಯತೆಯನ್ನು ಹುಟ್ಟುಹಾಕಬಹುದು ಎನ್ನುವುದನ್ನು ಈ ಕರ್ತಾರಪುರ್ ಕಾರಿಡಾರ್ ತೋರಿಸಿಕೊಟ್ಟಿದೆ.

ಕೃಪೆ: ಎಚ್‍ಡಬ್ಲ್ಯು ನ್ಯೂಸ್
ಕನ್ನಡಕ್ಕೆ: ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...