Homeಮುಖಪುಟಆಡುಕಾಯುವ ಹುಡುಗಿ ಗೋದಾವರಿ ಗಂಟಿಚೋರ ಸಮುದಾಯದ ಧ್ವನಿಯಾದದ್ದು..

ಆಡುಕಾಯುವ ಹುಡುಗಿ ಗೋದಾವರಿ ಗಂಟಿಚೋರ ಸಮುದಾಯದ ಧ್ವನಿಯಾದದ್ದು..

- Advertisement -
- Advertisement -

| ಎಲೆಮರೆ-10 |

ನಾನಿಲ್ಲಿ ಪರಿಚಯಿಸುತ್ತಿರುವ ಗೋದಾವರಿ ಅವರದು ದೊಡ್ಡ ಹೆಸರೇನಲ್ಲ. ಯಾವ ಹೋರಾಟಗಾರರ ಪಟ್ಟಿಯಲ್ಲಿಯೂ ಅವರ ಹೆಸರು ಸಿಗುವುದಿಲ್ಲ, ಬದಲಾಗಿ ತೀರಾ ಸಾಮಾನ್ಯ ಸಾದಾಸೀದಾ ಮಹಿಳೆ. ವಯಸ್ಸು ಮಾಗಿದರೂ, ಗಂಟಿಚೋರ ಸಮುದಾಯವನ್ನು ಅಪರಾಧಿಗಳಂತೆ ಕಾಣುವ ಸಮಾಜದ ಬಗೆಗಿನ ಸಿಟ್ಟು ಅವರನ್ನು ಹೆಚ್ಚು ಕ್ರಿಯಾಶೀಲವಾಗಿಟ್ಟಿದೆ. 65 ವರ್ಷದ ಆಸುಪಾಸಿನ ಗೋದಾವರಿ ಅವರು ಏಳೆಂಟು ವರ್ಷಗಳಿಂದ ತಮ್ಮ ಊರಾದ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಬೆಂಡವಾಡದಲ್ಲಿ ನೆಲೆಸಿ ತನ್ನ ಗಂಟಿಚೋರ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬದುಕು ಕಲಿಸಿದ ಪಾಠವೇ ಅವರಲ್ಲಿ ಹೋರಾಟದ ಪ್ರಜ್ಞೆಯನ್ನು ರೂಪಿಸಿದೆ. ನಮ್ಮ ಹಕ್ಕುಗಳನ್ನು ಹೋರಾಟ ಮಾಡಿಯೇ ಪಡೆಯಬೇಕಿದೆ ಎನ್ನುವ ಅರಿವನ್ನು ಸಮುದಾಯದ ಮಹಿಳೆಯರಲ್ಲಿ ಯುವ ಜನತೆಯಲ್ಲಿ ಬಿತ್ತಲು ಶ್ರಮಿಸುತ್ತಿದ್ದಾರೆ.

ಗೋದಾವರಿ ಪುಟ್ಟ ಹುಡುಗಿಯಾಗಿದ್ದಾಗ ಗಂಟಿಚೋರ ಸಮುದಾಯ ದಟ್ಟ ದಾರಿದ್ರ್ಯ ಸ್ಥಿತಿಯಲ್ಲಿತ್ತು. ಈ ದಾರಿದ್ರ್ಯವೇ ಕುಲಕಸಬಾಗಿದ್ದ `ತುಡುಗು’(ಕಳ್ಳತನ) ಮಾಡಲು ಹಚ್ಚುತ್ತಿತ್ತು. ತುಡುಗು ಮಾಡುವ ಇವರ ಚಾಕಚಕ್ಯತೆ ಬೆರಗು ಹುಟ್ಟಿಸುವಂತಿತ್ತು. ತುಡುಗು ಮಾಡಿ ಸಿಕ್ಕಾಗ ಪೊಲೀಸರ ಹೊಡೆತ ಹಿಂಸೆ ಅವರ ಕುಟುಂಬವನ್ನು ದುಃಖದ ಕಡಲಲ್ಲಿ ತೇಲಿಸುತ್ತಿತ್ತು. ಇಂತಹ ಎಲ್ಲಾ ಸಂಗತಿಗಳನ್ನು ಕಣ್ತುಂಬಿಕೊಳ್ಳುತ್ತಲೇ ಗೋದಾವರಿ ಅವರು ಬೆಂಡವಾದಲ್ಲಿ ತನ್ನ ಬಾಲ್ಯ ಕಳೆದರು. ಮನೆ ಪರಿಸ್ಥಿತಿ ಸಹಕರಿಸದಿದ್ದರೂ 2ನೇ ತರಗತಿಯವರೆಗೆ ಶಾಲೆಗೆ ಹೋಗುತ್ತಿದ್ದ ಹುಡುಗಿಯನ್ನು ಶಾಲೆ ಬಿಡಿಸಿ ಆಡು ಕುರಿ ಕಾಯಲು ಹಚ್ಚಿದರು. ಆಗ ಗೋದಾವರಿ ಬಿಸಿಲು ಮಳೆ ಚಳಿಯೆನ್ನದೆ ಆಡು ಕಾಯುವ ಹುಡುಗಿಯಾಗಿ ಹೊಲ, ಕಾಡುಮೇಡುಗಳನ್ನು ಅಲೆದಳು. ಆದಾಗ್ಯೂ ಓದಬೇಕೆನ್ನುವ ಒಡಲೊಳಗಣ ಕಿಚ್ಚು ನಿಧಾನಕ್ಕೆ ಜಾಗೃತವಾಗತೊಡಗಿತು.

ಇಂತಹ ಸಂದರ್ಭದಲ್ಲಿ ಹತ್ತು ವರ್ಷ ತುಂಬುವ ಹೊತ್ತಿಗಾಗಲೆ ಮನೆಯವರು ಮದುವೆಗೆ ತಯಾರಿ ನಡೆಸಿದರು. ಮದುವೆಯಾಗಿ ಮಕ್ಕಳಿದ್ದ ಮಹಾರಾಷ್ಟ್ರದ ಗಂಡಿನೊಂದಿಗೆ ಬಾಲ್ಯವಿವಾಹ ನಡೆಯಿತು. ಕಿತ್ತು ತಿನ್ನುವ ಬಡತನದ ನೆರಳಲ್ಲಿ ಈ ಮದುವೆಯನ್ನು ತಿರಸ್ಕರಿಸುವ ಶಕ್ತಿಯಾಗಲಿ ತಿಳಿವಳಿಕೆಯಾಗಲಿ ಗೋದಾವರಿಗಿನ್ನೂ ಬಂದಿರಲಿಲ್ಲ. ಅದೇಕೋ ಹೊಂದಾಣಿಕೆಯಾಗದೆ ಗೋದಾವರಿ ಮದುವೆಯಾದವನ ಜತೆ ಬಾಳಲಿಕ್ಕಾಗದೆ ತನ್ನೂರಲ್ಲೇ ಉಳಿದರು. ಈ ಹೊತ್ತಿನಲ್ಲಿ ಕಲಿಯಬೇಕೆನ್ನುವ ತನ್ನೊಳಗಿನ ಹಂಬಲ ಮತ್ತೆ ಚಿಗುರೊಡೆಯಿತು. ಇಂತಹ ಸಂದರ್ಭದಲ್ಲಿ ಗೋದಾವರಿಯ ತಾಯಿಯೆ ಬೆಳಗಾವಿಯ ಅನಾಥ ಹೆಣ್ಣುಮಕ್ಕಳ ರಕ್ಷಣೆಯ ತಾಣವಾಗಿದ್ದ ಸ್ತ್ರೀಸೇವಾನಿಕೇತನಕ್ಕೆ ಸೇರಿದರು. ಹೀಗಿರುವಾಗ ಇಲ್ಲಿ ಆಶ್ರಯ ಪಡೆದ ಹುಡುಗಿಯರನ್ನು ಅವರ ಆಸಕ್ತಿಗನುಸಾರವಾಗಿ ಬೇರೆಬೇರೆ ಜಿಲ್ಲಾ ಸ್ತ್ರೀಸೇವಾನಿಕೇತನ ಕೇಂದ್ರಗಳಿಗೆ ವರ್ಗ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿಯ ಹಾಸ್ಟೆಲ್ ಚೆನ್ನಾಗಿದೆ, ಓದಿಸುತ್ತಾರೆ, ಕಸೂತಿ ಟೈಲರಿಂಗ್ ಕಲಿಸುತ್ತಾರೆ, ವಾರ್ಡನ್ ಒಳ್ಳೆಯವರು ಇತ್ಯಾದಿ ಸಂಗತಿಗಳ ಕೇಳಿತಿಳಿದಿದ್ದ ಗೋದಾವರಿ ಬಳ್ಳಾರಿಯನ್ನು ಆಯ್ಕೆ ಮಾಡಿಕೊಂಡು ವರ್ಗವಾದರು. ಬಳ್ಳಾರಿಗೆ ಬಂದದ್ದು ಕೂಡ ಗೋದಾವರಿ ಅವರ ಜೀವನದಲ್ಲಿ ಮತ್ತೊಂದು ತಿರುವು. ಕಾರಣ ಬಳ್ಳಾರಿಯ ಸ್ತ್ರೀಸೇವಾನಿಕೇತನದಲ್ಲಿಯೇ ಅರ್ಧಕ್ಕೆ ನಿಂತ ಶಿಕ್ಷಣವನ್ನು ಮುಂದುವರೆಸಿದರು. ಇನ್ನು ಏಳನೆ ತರಗತಿ ಮುಗಿಸುವ ಹೊತ್ತಿಗೆ ಡಿ ದರ್ಜೆ ನೌಕರರೊಬ್ಬರ ಅಕಾಲಿಕ ಮರಣದಿಂದ ತೆರವಾದ ಪಿ.ಸಿ.ಡಬ್ಲು ಎನ್ನುವ (ಪ್ಯಾಕಿಂಗ್ ಕ್ಲೀನಿಂಗ್ ವಾಚಿಂಗ್) ಎಂಬ ನೌಕರಿಯೂ ಸಿಕ್ಕಿತು.

ಗೋದಾವರಿ ಅವರು ಕೆಲಸ ಮಾಡುತ್ತಿದ್ದ ಸ್ತ್ರೀಸೇವಾನಿಕೇತನ ಬುದ್ಧಿಹೀನ ಹುಡುಗಿಯರು, ಗಂಡ ಸತ್ತವರು, ಜೈಲುಗಳಿಂದ ಬಿಡುಗಡೆಗೊಂಡ ತನ್ನವರಿಂದ ತಿರಸ್ಕøತರಾದ ಮಹಿಳೆಯರು, ಮನೆಬಿಟ್ಟು ಪ್ರೀತಿಸಿ ಮದುವೆಯಾಗಿ ಹುಡುಗರಿಂದ ವಂಚಿತರಾದವರು. ಹೀಗೆ ಅನಾಥ ಮಹಿಳೆಯರಿಗೆ ಆಶ್ರಯತಾಣವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸ್ತ್ರೀ ಸೇವಾನಿಕೇತನದಲ್ಲಿ ಇಂತಹ ನೊಂದ ಮಹಿಳೆಯರ ಸಂಗಾತಿಯಾಗಿ ಗೋದಾವರಿ ಅವರು ಕೆಲಸ ಮಾಡಿದರು. ಒಂದು ರೀತಿಯಲ್ಲಿ ಪರಿತ್ಯಕ್ತ ಅನಾಥ ಮಹಿಳೆಯರಿಗೆ ತಾಯಿಯ ಹಾಗೆ ಅವರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತರು. ಯಾವ ಬಗೆಯ ನಿರ್ಗತಿಕ ಸ್ಥಿತಿಯ ಕಾರಣಕ್ಕೆ ಗೋದಾವರಿ ಬೆಳಗಾವಿಯ ಸ್ತ್ರೀ ಸೇವಾನಿಕೇತನದಲ್ಲಿ ಸೇರಿದ್ದರೋ ಅಂತಹದ್ದೇ ಅನಾಥ ಮಹಿಳೆಯರ ಪೋಷಣೆಯ ಕೆಲಸಕ್ಕಾಗಿಯೇ ಅವರು ತನ್ನ ಜೀವನವನ್ನು ಮುಡುಪಾಗಿಟ್ಟರು.

ಗೋದಾವರಿ ಅವರಿಗೆ ಕೆಲಸ ಕೊಟ್ಟು ಆಶ್ರಯ ನೀಡಿದವರು ಆಗಿನ ಸ್ತ್ರೀಸೇವಾನಿಕೇತನದ ವಾರ್ಡನ್ ಆಗಿದ್ದ ಕಾವೇರಿ. ಇವರು ಕೊಡಗಿನ ಜನರಲ್ ಕಾರಿಯಪ್ಪ ಅವರ ಸೊಸೆ. ಇವರು ಮಹಿಳೆಯರಲ್ಲಿ ಸದಾ ಧೈರ್ಯ ತುಂಬುವ, ಉತ್ಸಾಹ ಹೆಚ್ಚಿಸುವ ಮಾತುಗಳನ್ನು ಆಡುತ್ತಿದ್ದರು. ಅವರು ಮಹಿಳೆಯರ ಒಳಗೆ ಒಂದು ಬಗೆಯ ಧೈರ್ಯವನ್ನು ತುಂಬುವ ಮಾತುಗಳನ್ನು ಆಡುತ್ತಿದ್ದರು. ಜಗತ್ತಿನ ಮಹಿಳಾ ಸಾಧಕಿಯರ ಬಗ್ಗೆ ಪರಿಚಯಿಸುತ್ತಿದ್ದರು. ಮಹಿಳೆಯರಿಗಿರುವ ಸಂವಿಧಾನಿಕ ಹಕ್ಕುಗಳ ಬಗ್ಗೆ ಪರಿಚಯಿಸುತ್ತಿದ್ದರು. ಈ ಮಾತುಗಳನ್ನು ಕೇಳುತ್ತಾ ಗೋದಾವರಿ ಒಳಗೊಂದು ಜಾಗೃತ ಮನಸ್ಸು ರೂಪುಗೊಳ್ಳತೊಡಗಿತು. ಈ ಮೂಲಕ ಅಂಬೇಡ್ಕರ್ ಮೊದಲಾದವರ ವಿಚಾರಗಳು ಓದದೆಯೂ ಗೋದಾವರಿ ಅವರ ಒಳಗೆ ವೈಚಾರಿಕತೆಯನ್ನು ರೂಪಿಸತೊಡಗಿತು. ಇವರ ಸೇವೆಯನ್ನು ಗುರುತಿಸಿ 2008 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಜಿಲ್ಲಾ ಪಂಚಾಯಿತಿಯು ಕಿತ್ತೂರುರಾಣಿ ಚೆನ್ನಮ್ಮನ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿತು. ಸ್ವಂತಕ್ಕೆ ಮಕ್ಕಳಿಲ್ಲದ ಬೇಸರ ಎಂದೂ ಕಾಡಲಿಲ್ಲ. ಬಳ್ಳಾರಿಯಲ್ಲಿರುವಷ್ಟು ದಿನ ಸೇವಾನಿಕೇತನದ ಹುಡುಗಿಯರೇ ನನಗೂ ಮಕ್ಕಳಾಗಿದ್ದರು. ಇದೀಗ ಬೆಂಡವಾಡದ ಗಂಟಿಚೋರ ಸಮುದಾಯವೇ ನನ್ನ ಕುಟುಂಬ ಇದ್ದಹಾಗೆ ಎಂದು ಭಾವಿಸುತ್ತಾರೆ.

ಹಿಂದೆ ಗಂಟಿಚೋರ ಸಮುದಾಯದವರು ಪಟ್ಟ ಪಡಿಪಾಟಲನ್ನು ಹೇಳುವಾಗ ಗೋದಾವರಿ ಅವರ ಕಣ್ಣು ನೀರಾಗುತ್ತವೆ. ತನ್ನ ಸಮುದಾಯ ಪಟ್ಟಿರಬಹುದಾದ ಪಾಡನ್ನು ಹೇಳುವಾಗ ದುಃಖದ ಕಡಲೊಡೆದಂತೆ ಬಿಕ್ಕಳಿಸುತ್ತಾರೆ. ಈಚೆಗೆ ಬಾಲೆಹೊಸೂರಲ್ಲಿ ಸವರ್ಣೀಯರ ಗಲಭೆಯಲ್ಲಿ ಗಂಟಿಚೋರ ಸಮುದಾಯದ ವ್ಯಕ್ತಿಯ ಕೊಲೆಯಾಗಿ ಸಮುದಾಯವನ್ನು ಹಿಂಸೆಗೆ ಒಳಗುಮಾಡಿದ್ದನ್ನು ವಿರೋಧಿಸಿ ಈ ಸಮುದಾಯ ಒಗ್ಗಟ್ಟಾಗಿ ಪ್ರತಿಭಟಿಸಿತು. ಬೆಳಗಾವಿಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ಸಮುದಾಯ ಒಟ್ಟಾಗಿ ತನ್ನ ಪ್ರತಿರೋಧವನ್ನು ದಾಖಲಿಸಿತು. ಈ ಸಂದರ್ಭದಲ್ಲಿ ಗೋದಾವರಿ ಅವರು ಸಮುದಾಯದ ಪ್ರತಿನಿಧಿಯಾಗಿ ಗಟ್ಟಿಧ್ವನಿಯಲ್ಲಿ ಪ್ರಭುತ್ವವನ್ನು ಪ್ರಶ್ನಿಸಿದ್ದರು.

ಗೋದಾವರಿ ನಿವೃತ್ತಿ ನಂತರ ತಾನು ಬೆಳೆದ ತನ್ನ ಹುಟ್ಟೂರಾದ ಬೆಂಡವಾಡಕ್ಕೆ ಮರಳಿ ಬಂದು ನೆಲೆಸಿದ್ದೂ ಕೂಡ ಪ್ರತಿಭಟನೆಯ ಸಂಕೇತವೆ ಎನ್ನುತ್ತಾರೆ. ನೀವು ಬಳ್ಳಾರಿಯಿಂದ ಹಳ್ಳಿಗೆ ಮರಳಿದ್ಯಾಕೆ ಎಂದರೆ, `ನನ್ನ ತಂದೆಯ ಊರಿನಲ್ಲಿಯೇ ನೆಲೆಯೂರಬೇಕೆಂಬ ಆಸೆ ಒಂದಾದರೆ ನಮ್ಮ ಗಂಟಿಚೋರ ಸಮುದಾಯವನ್ನು ಜಾಗೃತಗೊಳಿಸಬೇಕು. ನಿರಂತರ ಅನ್ಯಾಯಕ್ಕೆ ಒಳಗಾಗುವ ಈ ಸಮುದಾಯದಲ್ಲಿ ಹೋರಾಟದ ಮನೋಭಾವವನ್ನು ಮೂಡಿಸಬೇಕು ಎನ್ನುತ್ತಾರೆ. ಗಂಟಿಚೋರ ಸಮುದಾಯದಲ್ಲೂ ಕೂಡ ಸ್ಥಿತಿವಂತರಿದ್ದಾರೆ ಎನ್ನುವುದು ಬೇರೆ ಮೇಲಿನ ಜಾತಿಗಳವರಿಗೆ ತಿಳಿಯಲಿ ಎಂದೇ ನನ್ನ ಹೊಸ ಮನೆಯನ್ನು ಇಲ್ಲಿ ಕಟ್ಟಿಸಿದ್ದು. ಈಗ ನನ್ನ ಮನೆಯೇ ಇಲ್ಲಿನ ಗಂಟಿಚೋರ ಸಮುದಾಯದ ಹೋರಾಟಕ್ಕೆ ಒಂದು ಕೇಂದ್ರವಾಗಿದೆ. ನಮ್ಮ `ಗಂಟಿಚೋರ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ’ ರೂಪುಗೊಂಡದ್ದು ಈ ಮನೆಯಲ್ಲಿಯೇ ಎನ್ನುತ್ತಾರೆ. ಹೀಗೆ ಅಕ್ಷರದ ಬೆಳಕಿನಲ್ಲಿ ಪುಟ್ಟ ಸರಕಾರಿ ಕೆಲಸ ಮಾಡಿ ನಿವೃತ್ತಿ ಹೊಂದಿ, ಮರಳಿ ತನ್ನದೇ ಸಮುದಾಯದ ಹಕ್ಕೊತ್ತಾಯಕ್ಕಾಗಿ ದುಡಿಯುವವರ ಸಂಖ್ಯೆ ವಿರಳ. ಹೀಗಾಗಿ ಗೋದಾವರಿ ಅವರ ಸಮುದಾಯ ಪರವಾದ ಈ ಚಟುವಟಿಕೆಗಳಿಗೆ ಮಹತ್ವವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...