Homeಅಂಕಣಗಳುತಾಯಿ ಮತ್ತು ಪಿಶಾಚಿ: ಒಂದು ಸಿನಿಮಾ ಕಥೆ...

ತಾಯಿ ಮತ್ತು ಪಿಶಾಚಿ: ಒಂದು ಸಿನಿಮಾ ಕಥೆ…

- Advertisement -
- Advertisement -

 ಗೌರಿ ಲಂಕೇಶ್
14 ಮಾರ್ಚ್, 2007 (`ಕಂಡಹಾಗೆ’ ಸಂಪಾದಕೀಯದಿಂದ)
ತಮ್ಮ ತಂದೆಯ ಹೆಸರಲ್ಲಿ ನೀಡಲಾಗುವ `ಲಂಕೇಶ್ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದ ಸಿನಿಮಾ ಕುರಿತು…. |

ಆಕೆಯನ್ನು ಊರಿನವರೆಲ್ಲ ಶವಭಕ್ಷಕ ಪಿಶಾಚಿ ಎಂದು ಕರೆಯುತ್ತಾರೆ. ಅವಳ ಕಣ್ಣು ತಮ್ಮ ಮಕ್ಕಳ ಮೇಲೆ ಬೀಳಬಾರದೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಊರಿನಿಂದ ದೂರದಲ್ಲಿ ಏಕಾಂಗಿಯಾಗಿ, ಅರೆಹುಚ್ಚಿಯಾಗಿ ಆಕೆ ಜೀವಿಸುತ್ತಿದ್ದಾಳೆ.
ಒಮ್ಮೆ ಹತ್ತು ವರ್ಷದ ಹುಡುಗನನ್ನು ಆಕೆ ನೋಡುತ್ತಾಳೆ. ಆಕೆಯ ಕಣ್ಣು ತನ್ನ ಮೇಲೆ ಬಿತ್ತೆಂದು ಹೆದರುವ ಹುಡುಗ ತನ್ನ ತಂದೆಗೆ ಹೇಳುತ್ತಾನೆ. ಆದರೆ ತಂದೆ “ಆಕೆ ನಿನಗೆ ಏನನ್ನೂ ಮಾಡುವುದಿಲ್ಲ, ಹೆದರಬೇಡ” ಅಂತ ಹೇಳುತ್ತಾನೆ. “ಯಾಕೆ ನನಗೇನೂ ಆಗುವುದಿಲ್ಲ. ಆಕೆ ಮಕ್ಕಳ ಶವಗಳನ್ನು ತಿನ್ನುವ ಪಿಶಾಚಿ ಅಲ್ಲವೇ?” ಎಂದು ಕೇಳಿದಾಗ “ಯಾಕೆ ನಿನಗೇನು ಮಾಡುವುದಿಲ್ಲ ಯಾಕೆಂದರೆ ಆಕೆ ನಿನ್ನ ತಾಯಿ, ಅದಕ್ಕೆ” ಅಂತ ಉತ್ತರಿಸುತ್ತಾನೆ. ಆ ಹುಡುಗನಿಗೆ ಶಾಕ್ ಆಗುತ್ತೆ. ತಂದೆ ಹಳೆಯ ಕತೆ ಹೇಳುತ್ತಾ ಹೋದಂತೆ ನಮ್ಮ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮೂಢನಂಬಿಕೆ, ಮಹಿಳೆಯರ ಶೋಷಣೆ ಎಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತವೆ.
ಆಕೆಯ ಹೆಸರು ಚಂಡಿ. ಸುಂದರಿಯೂ, ದಿಟ್ಟೆಯೂಆದ ಚಂಡಿ ಊರಿನ ಸ್ಮಶಾನ ಕಾಯುವವನ ಏಕೈಕ ಪುತ್ರಿ. ತಮಗದು ಸತ್ಯ ಹರಿಶ್ಚಂದ್ರನಿಂದಲೇ ಬಳುವಳಿಯಾಗಿ ಬಂದ ದೈವಕಾರ್ಯವೆಂದು ನಂಬಿದವಳು. ಈ ದಲಿತ ಮಹಿಳೆ ನೋಡಿಕೊಳ್ಳುತ್ತಿದ್ದುದು ಮಕ್ಕಳ ಸ್ಮಶಾನವನ್ನು. ಓದು ಬರಹ ಬಲ್ಲ, ಸರ್ಕಾರಿ ನೌಕರನೂ ಆಗಿರುವ ನರಸುಗೆ ಚಂಡಿ ಮೇಲೆ ಪ್ರೇಮಾಂಕುರವಾಗಿ ಮದುವೆಯಾಗುತ್ತಾನೆ. ಒಂದು ಗಂಡು ಮಗುವೂ ಜನಿಸುತ್ತದೆ.
ಚಂಡಿಯ ಸಮಸ್ಯೆಗಳು ಆರಂಭವಾಗುವುದೇ ಅಲ್ಲಿಂದ. ಹಸುಗೂಸಿನ ತಾಯಿಯಾಗಿ, ಮಕ್ಕಳ ಶವಗಳನ್ನು ಹೂಳುವುದು ಆಕೆಗೆ ಅಸಾಧ್ಯವಾಗುತ್ತದೆ. ತನ್ನ ಮಗುವನ್ನೇ ಹೂಳುತ್ತಿರುವನೇ ಎಂಬ ಭ್ರಮೆ ಕಾಡುತ್ತದೆ. ಈ ವೃತ್ತಿ ಇನ್ನು ತನಗೆ ಬೇಕಿಲ್ಲ ಅನ್ನಿಸುತ್ತೆ. ಆದರೆ ಇದು ವಂಶಪಾರಂಪರ್ಯ ದೇವರ ಕಾರ್ಯ; ತ್ಯಜಿಸುವುದಾದರೂ ಹೇಗೆ? ಈ ತಳಮಳವನ್ನು ಗಂಡನೊಂದಿಗೆ ಹಂಚಿಕೊಳ್ಳಲು ಯತ್ನಿಸಿದರೆ, ಅವನೂ ಕಿವಿಗೊಡುವುದಿಲ್ಲ.
ಈ ಮಧ್ಯೆ ಚಂಡಿ ತುಂಬಾ ಪ್ರೀತಿಸುತ್ತಿದ್ದ ಸಂಬಂಧಿಕರ ಮಗಳನ್ನು ಚಂಡಿಯೇ ಕೊಂದಳೆಂದೂ, ಆ ಬಾಲಕಿಯ ಶವಕ್ಕೆ ತನ್ನ ಎದೆಯಿಂದ ತೊಟ್ಟಿಕ್ಕುತ್ತಿದ್ದ ಹಾಲನ್ನು ಕುಡಿಸಿದಳೆಂದೂ ಜನ ಆರೋಪಿಸುತ್ತಾರೆ. ಆಕೆಗೆ ಭೂತ ಹಿಡಿದಿದೆ ಎಂದೂ, ಆಕೆ ಮಕ್ಕಳನ್ನು ಜೀವಂತ ಭಕ್ಷಿಸು ತ್ತಾಳೆಂದೂ ಸುಳ್ಳುಗಳು ಊರಲ್ಲಿ ಹಬ್ಬುತ್ತವೆ. “ನಾನು ಹಸಿ ಬಾಣಂತಿ. ನನ್ನ ಮಗುವಿಗೆ ಕುಡಿಸಬೇಕಿರುವ ಹಾಲನ್ನು ಮಕ್ಕಳ ಶವಗಳಿಗೆ ಯಾಕೆ ನೀಡಲಿ? ಯಾರಿಗೂ ನೋವು ಕೂಡ ಮಾಡದ ನಾನು ಹಸುಗೂಸುಗಳನ್ನೇಗೆ ಬಲಿ ಪಡೆಯಲಿ” ಎಂದು ಚಂಡಿ ಗೋಗರೆದರು ಜನ ಕೇಳುವುದಿಲ್ಲ. ನರಸು ಕೂಡ ಹೆಂಡತಿಯ ಬಗ್ಗೆ ಸಂಶಯಪಡಲಾರಂಭಿಸುತ್ತಾನೆ.
ಒಂದು ರಾತ್ರಿ ಚಂಡಿ ಸ್ಮಶಾನದಲ್ಲಿದ್ದಾಗ ಅಲ್ಲಿಗೆ ಆಗಮಿಸುವ ಹಳ್ಳಿಯ ಜನ ಆಕೆ ಶವಗಳನ್ನು ಹೊರತೆಗೆದು ತಿನ್ನುತ್ತಿದ್ದಳು ಎಂದು ಆರೋಪಿಸಿ `ಶವಭಕ್ಷಕ ಪಿಶಾಚಿ’ ಎಂದು ಕೂಗಲಾರಂಭಿಸುತ್ತಾರೆ. “ಇಲ್ಲಿ ನರಿಗಳು ಬಂದು ಗುಂಡಿಯನ್ನು ತೋಡಿದ್ದವು. ಅವುಗಳನ್ನು ಓಡಿಸುತ್ತಿದ್ದೆ. ನರಸು ನೀನಾದರೂ ಹೇಳು ನಾನು ಪಿಶಾಚಿ ಅಲ್ಲ” ಎಂದು ಚಂಡಿ ಬೇಡುತ್ತಾಳೆ. ಆದರೆ ಅವಳಿಂದಾಗಿ ಸಮಾಜದಲ್ಲಿ ತನಗಿದ್ದ ಕಿಂಚಿತ್ತು ಮರ್ಯಾದೆಯೂ ಕರಗುತ್ತದೆ ಎಂದು ಭಾವಿಸುವ ನಸ್ರು “ನೀನು ಪಿಶಾಚಿ” ಎಂದು ಹೇಳಿ ತನ್ನ ಹೆಂಡತಿಯನ್ನೇ ಜೀವಂತ ನರಕಕ್ಕೆ ದೂಕುತ್ತಾನೆ.
ಅಂದಿನಿಂದ ಚಂಡಿ ಯಾರಿಗೂ ಬೇಡವಾದ ಸಾಮಾಜಿಕ ಬಹಿಷ್ಕಾರದ ಬದುಕು ಸಾಗಿಸುತ್ತಿದ್ದಾಳೆ.
ತನ್ನ ತಾಯಿ ಕಥೆ ಕೇಳಿದ ಹುಡುಗ ಮರುಗುತ್ತಾನೆ, ಸಂಕಟಪಡುತ್ತಾನೆ. ಅಮ್ಮನಿಗೆ ಹಪಹಪಿಸುತ್ತಾನೆ. ಆದರೆ ಈ ಸಮಾಜ ಆಕೆಯನ್ನು ಅವನಿಂದ ಬಹಳ ದೂರಕ್ಕೆ ತಳ್ಳಿಯಾಗಿರುತ್ತೆ. ಅದೊಮ್ಮೆ ರೈಲಿನ ಹಳಿ ಮೇಲೆ ಢಕಾಯಿತರು ಮರಗಳನ್ನು ಪೇರಿಸಿಟ್ಟು ಟ್ರೈನಿನಲ್ಲಿರುವ ಹಣವನ್ನು ದೋಚಲು ಸಜ್ಜಾಗಿರುತ್ತಾರೆ. ಅಕಸ್ಮಾತ್ತಾಗಿ ಅಲ್ಲಿಗೆ ಬರುವ `ಶವಭಕ್ಷಕ ಪಿಶಾಚಿ’ ಚಂಡಿಯನ್ನು ಕಂಡು ಅವರೆಲ್ಲ ಓಡಿ ಹೋಗುತ್ತಾರೆ. ಅಪಘಾತ ತಪ್ಪಿಸಲು ಪೇರಿಸಿಟ್ಟ ದಿಮ್ಮಿಗಳನ್ನು ಆಕೆ ಸರಿಸುತ್ತಿರುವಾಗ ರೈಲು ಆಗಮಿಸುತ್ತದೆ. ಟ್ರೈನ್ ಚಾಲಕನಿಗೆ ಗಾಡಿಯನ್ನು ನಿಲ್ಲಿಸುವಂತೆ ಸೂಚಿಸಲು ಆಕೆ ಟ್ರೈನಿನತ್ತ ಓಡುತ್ತಾಳೆ. ಆದರೆ ಚಾಲಕನಿಗೆ ಆಕೆ ಕಾಣದೆ ಚಂಡಿ ಟ್ರೈನಿನಡಿ ಸಿಕ್ಕು ಸತ್ತು ಹೋಗುತ್ತಾಳೆ.
ಢಕಾಯಿತರಿಂದ ಟ್ರೈನನ್ನು ರಕ್ಷಿಸಿದ್ದಕ್ಕೆ ಸರ್ಕಾರ ಅವಳ ಸಂಸಾರಕ್ಕೆ ಪರಿಹಾರ ಧನ ನೀಡಲು ಮುಂದಾಗುತ್ತದೆ. “ಈ ಊರಿನಲ್ಲಿ ಅವಳ ಸಂಬಂಧಿಕರು ಯಾರಾದರೂ ಇದ್ದಾರೆಯೇ?” ಎಂದು ಅಧಿಕಾರಿ ಕೇಳಿದಾಗ, ಎಲ್ಲರೂ ಸುಮ್ಮನಿರುತ್ತಾರೆ. ಹುಡುಗ ತನ್ನ ತಂದೆಯತ್ತ ನೋಡುತ್ತಾನೆ; ಸಾವಿನಲ್ಲಾದರೂ ಆಕೆ ತನ್ನ ಹೆಂಡತಿಯಾಗಿದ್ದಳು ಎಂದು ಒಪ್ಪಿಕೊಳ್ಳಲಿ ತನ್ನ ತಂದೆ ಎಂಬ ಆಶೆಯಿಂದ. ಆದರೆ ನರಸು ಕೂಡ ತುಟಿಪಿಟಿಕ್ ಅನ್ನುವುದಿಲ್ಲ. ಕೊನೆಗೆ ಹುಡುಗನೇ ಬಾಯಿಬಿಟ್ಟು ಕೂಗುತ್ತಾನೆ “ಆಕೆ ನನ್ನ ತಾಯಿ”
ಇದು `ಮಾತಿ ಮಾಯ್’ (ನನ್ನ ತಾಯಿ) ಎಂಬ ಮರಾಠಿ ಚಿತ್ರದ ಕತೆ. ಇದು ಪ್ರಖ್ಯಾತ ಬೆಂಗಾಲಿ ಲೇಖಕಿ ಮಹಾಶ್ವೇತಾ ದೇವಿ ಅವರು ಬರೆದಿರುವ ಕತೆಯನ್ನು ಆಧರಿಸಿ ಚಿತ್ರಾ ಪಾಳೇಕರ್ ನಿರ್ದೇಶಿಸಿರುವ ಚಿತ್ರ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...