| ನಾನುಗೌರಿ ಡೆಸ್ಕ್ |
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ದೆಹಲಿಗೆ ಪೂರ್ಣ ರಾಜ್ಯದ ಸ್ಥಾನ ನೀಡಬೇಕೆಂದು ದನಿಯೆತ್ತಿದ್ದಾರೆ. ಜೊತೆಗೆ ತಮ್ಮ ಯಮುನಾ ಪ್ರವಾಹ ಬಯಲು ಪ್ರದೇಶದಲ್ಲಿ ನೈಸರ್ಗಿಕ ನೀರು ಸಂಗ್ರಹದ ಹೊಸ ಯೋಜನೆಗೆ ಕೇಂದ್ರದ ಸಹಕಾರವನ್ನು ಕೋರಿದ್ದಾರೆ.
ದೆಹಲಿಯ ಹಲವು ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೂರ್ಣ ರಾಜ್ಯದ ಅಗತ್ಯತೆಯಿದೆ ಎಂದು ಒತ್ತಿ ಹೇಳಿರುವ ಕೇಜ್ರಿವಾಲ್ ದಶಕಗಳ ಹಿಂದೆಯೇ ಭರವಸೆ ನೀಡಲಾಗಿತ್ತು, ಯಶಸ್ವಿ ಕೇಂದ್ರ ಸರ್ಕಾರಗಳು ಬಂದರೂ ಸಹ ಭರವಸೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ದೆಹಲಿಯ ಹಲವು ಬಹುಮುಖ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪೂರ್ಣ ರಾಜ್ಯದ ಸ್ಥಾನಮಾನದ ವಿಷಯವನ್ನಿಟ್ಟುಕೊಂಡು ಪ್ರಚಾರ ಮಾಡಿದ್ದರು.
ಅಲ್ಲದೇ ಈಗ ದೆಹಲಿ ಸರ್ಕಾರವು ಯಮುನಾ ಪ್ರವಾಹ ಬಯಲು ಪ್ರದೇಶದಲ್ಲಿ ನೈಸರ್ಗಿಕ ನೀರು ಸಂಗ್ರಹದ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕುರಿತು ದೆಹಲಿ ಐಐಟಿ ಸೇರಿದಂತೆ ಹಲವು ಮಹತ್ವದ ಅಧ್ಯಯನಗಳು ನಡೆದಿದ್ದು ಈ ಯೋಜನೆ ಜಾರಿಯಾಗಿದ್ದೇ ಆದಲ್ಲಿ ಒಂದು ಮಾನ್ಸೂನ್ ಮಳೆಯಿಂದ ದೆಹಲಿಗೆ ಎರಡು ವರ್ಷ ಸಮರ್ಪಕವಾಗಿ ನೀರು ಒದಗಿಸಬಹುದು. ಈ ಯೋಜನೆಗೆ ಕೇಂದ್ರದ ಸಹಕಾರ ಬೇಕೆಂದು ಕೇಜ್ರಿವಾಲ್ ಕೋರಿದ್ದಾರೆ.
ಅಲ್ಲದೇ ದೆಹಲಿಯು ಕಟ್ಟುವ ತೆರಿಗೆಗೆ ಅನುಗುಣವಾಗಿ ತಮಗೆ ಸಿಗಬೇಕಿದ್ದ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 14ನೇ ಹಣಕಾಸು ಆಯೋಗದ ವರದಿಯಂತೆ ರಾಜ್ಯಗಳು ಕೇಂದ್ರ ತೆರಿಗೆಯಲ್ಲಿ ಶೇ42% ಪಾಲನ್ನು ಪಡೆಯುತ್ತಿವೆ. ಆದರೆ ದೆಹಲಿಗೆ ಕೇವಲ 325 ಕೋಟಿ ರೂಗಳನ್ನು ಮಾತ್ರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.