Homeಕರ್ನಾಟಕಗೌರಿ ಟ್ರಸ್ಟ್ ಕುರಿತು ಸುಳ್ಳು ವರದಿ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆಗೆ ನಿರ್ಧಾರ.

ಗೌರಿ ಟ್ರಸ್ಟ್ ಕುರಿತು ಸುಳ್ಳು ವರದಿ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆಗೆ ನಿರ್ಧಾರ.

ಸ್ವತಃ ತನ್ನ ಅಕ್ಕ ಗೌರಿ ಲಂಕೇಶ್‌ರವರಿಗೆ ಬಂದೂಕು ತೋರಿಸಿದ ವ್ಯಕ್ತಿ ಇಂದ್ರಜಿತ್‌ ಲಂಕೇಶ್‌ರವರಿಂದ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಮಾಡುವುದೂ ಕಷ್ಟ ಎಂದು ನಗರಗೆರೆ ರಮೇಶ್‌ ತಿಳಿಸಿದ್ದಾರೆ.

- Advertisement -
- Advertisement -

ಗೌರಿ ಟ್ರಸ್ಟ್ ಹಣಕಾಸು ವ್ಯವಹಾರದ ತನಿಖೆಗೆ ಸ್ವಾಗತ, ತನಿಖೆ ನಡೆಯದಿದ್ದರೂ ಟ್ರಸ್ಟ್‌ನ ವತಿಯಿಂದ ಸಾರ್ವಜನಿಕ ಆಡಿಟ್‌ಗೆ ಆಹ್ವಾನ ಮತ್ತು ಸುಳ್ಳು ವರದಿ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆಗೆ ನಿರ್ಧಾರ ಮಾಡಲಾಗಿದೆ ಎಂದು ಗೌರಿ ಮೀಡಿಯಾ ಟ್ರಸ್ಟ್‌ನ ನಗರಗೆರೆ ರಮೇಶ್, ಪ್ರೊ.ವಿ.ಎಸ್.ಶ್ರೀಧರ ಮತ್ತು ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊಸದಿಗಂತ ಎಂಬ ಪತ್ರಿಕೆಯೊಂದು ಗೌರಿ ಸ್ಮಾರಕ ಟ್ರಸ್ಟ್‌ನ ಮೇಲೆ ದುರುದ್ದೇಶಪೂರ್ವಕವಾದ ಸುಳ್ಳು ಆರೋಪವನ್ನು ಮಾಡಿ ವರದಿಯೊಂದನ್ನು ಪ್ರಕಟಿಸಿದೆ. ಅದರ ನಂತರ ಚಿತ್ರ ನಿರ್ದೇಶಕ ಇಂದ್ರಜಿತ್ ಅವರು ಟಿವಿ ವಾಹಿನಿಯೊಂದರ ಜೊತೆ ಮಾತನಾಡಿದ್ದಲ್ಲದೇ ಇಂದು ಪತ್ರಿಕಾಗೋಷ್ಠಿಯನ್ನೂ ನಡೆಸಿ ಮೇಲಿನ ಆರೋಪಗಳನ್ನು ಉಲ್ಲೇಖಿಸಿ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಸ್ವಾಗತಿಸುತ್ತೇವೆ, ಜೊತೆಗೆ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸುತ್ತೇವೆ ಎಂದಿದ್ದಾರೆ.

ಇವೆಲ್ಲವೂ ಅತ್ಯಂತ ಸುಳ್ಳು ಆರೋಪಗಳಷ್ಟೇ ಅಲ್ಲ, ದುರುದ್ದೇಶದಿಂದ ಕೂಡಿದೆ. ಸತ್ಯ ನುಡಿದಿದ್ದಕ್ಕೆ ಮತ್ತು ದೇಶದ ಪ್ರಜಾತಂತ್ರದ ಪರವಾಗಿ ದನಿಯೆತ್ತಿದ್ದಕ್ಕೆ ಜೀವವನ್ನೇ ಕಳೆದುಕೊಳ್ಳಬೇಕಾಗಿ ಬಂದ ಗೌರಿ ಲಂಕೇಶರ ಆಶಯಗಳನ್ನು ಮುಂದುವರೆಸುವ ಸಲುವಾಗಿ ಗೌರಿ ಸ್ಮಾರಕ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ಹಾಗೆಯೇ ಮಾಧ್ಯಮ ಪ್ರಯತ್ನವನ್ನು ಮುಂದುವರೆಸುವ ಹೊಣೆ ಹೊರುವುದಕ್ಕೋಸ್ಕರ ಗೌರಿ ಮೀಡಿಯಾ ಟ್ರಸ್ಟ್ ರೂಪುಗೊಂಡಿತು ಎಂದು ಗೌರಿ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಎಲ್‌ ಅಶೋಕ್‌ ತಿಳಿಸಿದ್ದಾರೆ.

ಇದುವರೆಗೆ ಗೌರಿ ಸ್ಮಾರಕ ಟ್ರಸ್ಟ್ 6 ಕಾರ್ಯಕ್ರಮಗಳನ್ನು ಸಂಘಟಿಸಿದ್ದು ಖ್ಯಾತ ಪತ್ರಕರ್ತ ರವೀಶ್‌ಕುಮಾರ್ ಅವರಿಗೆ ಗೌರಿ ಲಂಕೇಶ್ ರಾಷ್ಟ್ರೀಯ ಪ್ರಶಸ್ತಿಯನ್ನೂ ನೀಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಗೌರಿ ಲಂಕೇಶರ ಆಶಯವನ್ನು ಎತ್ತಿ ಹಿಡಿದು ದನಿಯೆತ್ತುತ್ತಿರುವ ಅವರ ಸಹೋದರಿ ಕವಿತಾ ಲಂಕೇಶ್‌ರು ಭಾಗವಹಿಸಿದ್ದಾರೆ. ಗೌರಿಯವರ ತಾಯಿ ಇಂದಿರಾ ಲಂಕೇಶ್‌ರೂ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿದ್ದಾರೆ. ಸ್ಮಾರಕ ಟ್ರಸ್ಟ್‌ನ ಪೋಷಕರಲ್ಲಿ ಕವಿತಾ ಲಂಕೇಶ್‌ರೂ ಸಹಾ ಒಬ್ಬರು. ಅವರುಗಳು ನಮ್ಮ ಸ್ಫೂರ್ತಿ ಹಾಗೂ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಆದರೆ ಗೌರಿ ಲಂಕೇಶ್‌ ಬದುಕಿದ್ದಾಗಲೂ ಅವರ ಆಶಯಗಳಿಗೆ ವಿರುದ್ಧವಾಗಿದ್ದ ಮತ್ತು ನಂತರವೂ ಅದೇ ರೀತಿ ಮುಂದುವರೆದಿರುವ ಇಂದ್ರಜಿತ್ ಲಂಕೇಶ್‌ರು ಎಂದೂ ಇದರಲ್ಲಿ ಭಾಗಿಯಾಗುವ ಸಾಧ್ಯತೆ ಇರಲಿಲ್ಲ ಎಂದು ಕೆ.ಎಲ್‌ ಅಶೋಕ್‌ ತಿಳಿಸಿದ್ದಾರೆ.

ರವೀಶ್‌ ಕುಮಾರ್‌ರವರಿಗೆ ಗೌರಿ ಲಂಕೇಶ್‌ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಟ್ರಸ್ಟ್‌ನ ಕಾರ್ಯಚಟುವಟಿಕೆಗಳಿಗೆ ಹಿತೈಷಿಗಳಿಂದ ಹಣ ಸಂಗ್ರಹಿಸಿದ್ದಲ್ಲದೇ, ಆಯಾ ಸಂದರ್ಭದಲ್ಲಿ ಅವನ್ನು ಸಾರ್ವಜನಿಕವಾಗಿಯೂ ಮುಂದಿಡಲಾಗಿದೆ. ಮಾಧ್ಯಮ ಸಂಸ್ಥೆಯು ತಾನು ನಡೆಸುತ್ತಿರುವ ನ್ಯಾಯಪಥ ಪತ್ರಿಕೆಯ ಓದುಗರಿಂದ ಚಂದಾ ಸಹಾ ಸಂಗ್ರಹಿಸಿದೆ. ವಾರ್ಷಿಕ ಚಂದಾ 1,000 ರೂ. ಇದ್ದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಚಂದಾದಾರರಿದ್ದಾರೆ. ಸಂಗ್ರಹಿಸಿದ ಮತ್ತು ಖರ್ಚು ಮಾಡಿದ ಎಲ್ಲಾ ಹಣಕ್ಕೂ ಲೆಕ್ಕವಿದ್ದು ಲೆಕ್ಕ ಪರಿಶೋಧಕರಿಂದ ಪರಿಶೀಲನೆಯೂ ಆಗಿದೆ. ಹಣಕಾಸಿನ ವ್ಯವಹಾರವೆಲ್ಲವೂ ಬ್ಯಾಂಕ್ ಮೂಲಕವೇ ನಡೆಯುತ್ತದಲ್ಲದೇ, ಎಲ್ಲಾ ಹಣಕಾಸಿನ ವ್ಯವಹಾರಗಳಿಗೂ ಸೂಕ್ತ ದಾಖಲಾತಿಗಳು ಇವೆ, ಪಾರದರ್ಶಕವಾಗಿವೆ.
ಹೀಗಿದ್ದೂ ಅದರ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವುದು ದುರುದ್ದೇಶದಿಂದ ಕೂಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಗೌರಿ ಮೀಡಿಯಾ ಟ್ರಸ್ಟ್‌ ಅಧ್ಯಕ್ಷರಾದ ನಗರಗೆರೆ ರಮೇಶ್ ಹೇಳಿದ್ದಾರೆ.

ಈ ಬಗ್ಗೆ ತನಿಖೆ ನಡೆಯಬೇಕು ಎಂದು ಯಾರೇ ಹೇಳಲಿ ಅದಕ್ಕೆ ನಮ್ಮ ಸ್ವಾಗತವಿದೆ. ಒಂದು ವೇಳೆ ತನಿಖೆ ನಡೆಯದಿದ್ದಲ್ಲಿ ಜನವರಿ 29ರಂದು (ಗೌರಿ ದಿನ) ನಮ್ಮ ಹಣಕಾಸಿನ ಲೆಕ್ಕಾಚಾರದ ಸಾರ್ವಜನಿಕ ಆಡಿಟ್ ಮಾಡಲು ಆಹ್ವಾನಿಸಲಾಗುವುದು. ನಮ್ಮ ಹಿತೈಷಿಗಳು ಮಾತ್ರವಲ್ಲದೇ ಯಾರೇ ಸಾರ್ವಜನಿಕರೂ ಅದನ್ನು ಪರಿಶೀಲಿಸಲು ಮುಕ್ತ ಆಹ್ವಾನ ನೀಡಲಾಗುತ್ತದೆ. ಆದರೆ ದುರಂತವೆಂದರೆ, ಗೌರಿ ಲಂಕೇಶ್‌ರವರ ಉನ್ನತ ಆದರ್ಶಗಳ ವಿರುದ್ಧವೇ ಬದುಕುತ್ತಿರುವ ವ್ಯಕ್ತಿಯು ಈಗ ಅವರ ಕುರಿತು ಮಾತನಾಡುತ್ತಿದ್ದಾರೆ. ಅವರ ಮೇಲೆ ಮತ್ತು ಸುಳ್ಳು ವರದಿ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಹಣಕಾಸಿನ ಕುರಿತ ಆರೋಪಗಳಲ್ಲದೇ ಇತರೆಲ್ಲಾ ಸುಳ್ಳು ಆರೋಪಗಳಿಗೂ ಸಂಬಂಧಪಟ್ಟವರು ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗೌರಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾದ ಮತ್ತು ಸಾರ್ವಜನಿಕ ಬದುಕಿನಲ್ಲಿ ಕಟು ಪ್ರಾಮಾಣಿಕತೆಯನ್ನು ಪಾಲಿಸಿಕೊಂಡು ಬಂದಿರುವವರಾದ ಎಚ್.ಎಸ್.ದೊರೆಸ್ವಾಮಿಯವರ ಮಡದಿಯು ತೀರಿಕೊಂಡ ದಿನವೇ ಇಂತಹ ಹೇಳಿಕೆಯನ್ನು ನೀಡಿರುವ ವಿಷಾದಕರ ಘಟನೆ ನಡೆದಿದೆ. ಸ್ವತಃ ತನ್ನ ಅಕ್ಕ ಗೌರಿ ಲಂಕೇಶ್‌ರವರಿಗೆ ಬಂದೂಕು ತೋರಿಸಿದ ವ್ಯಕ್ತಿಯಿಂದ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಮಾಡುವುದೂ ಕಷ್ಟವೇ ಎಂದು ಅವರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪತ್ರಿಕೆಗೆ ಶುಭವಾಗಲಿ…ಕೇಸರಿ ಕ್ರಿಮಿಗಳ ಪಿತೂರಿಯನ್ನು ಬಯಲಿಗೆಳೆದು ಸಮಾಜಕ್ಕೆ ತೋರಿಸಲಿ…

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...