ಉತ್ತರ ಪ್ರದೇಶ ಸರ್ಕಾರವು ಸಿಎಎ ವಿರೋಧಿ ಭಾಷಣ ಮಾಡಿದ್ದಕ್ಕಾಗಿ ಡಾ. ಕಫೀಲ್ ಖಾನ್ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
2019 ರ ಡಿಸೆಂಬರ್ 12 ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾಡಿದ ಭಾಷಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಗೋರಖ್ಪುರದ ವೈದ್ಯ ಡಾ.ಕಫೀಲ್ ಖಾನ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಮೇಲೆ ಕೇಸು ದಾಖಲಿಸಿದ್ದಾರೆ.
ಎನ್ಎಸ್ಎ ಅಡಿಯಲ್ಲಿ, ವ್ಯಕ್ತಿಯು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪೊಲೀಸ್ ಅಧಿಕಾರಿಗಳು ಭಾವಿಸಿದರೆ ಆ ವ್ಯಕ್ತಿಯನ್ನು ದೀರ್ಘಾವಧಿಯವರೆಗೆ ಬಂಧನದಲ್ಲಿಡಬಹುದಾಗಿದೆ.
ಅಪರಾಧ ವಿಭಾಗದ ಎಸ್ಪಿ ಡಾ.ಅರವಿಂದ್ ಅವರು ಎನ್ಎಸ್ಎ ಅಡಿಯಲ್ಲಿ ವೈದ್ಯರನ್ನು ಬಂಧಿಸಲು ಸಾಕಷ್ಟು ಆಧಾರಗಳಿವೆ ಎಂದು ಹೇಳಿದ್ದಾರೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 12 ರಂದು ಸಿಎಎ ವಿರೋಧಿ ಪ್ರತಿಭಟನೆ ವೇಳೆ ವಿವಾದಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿರುವ ಶಿಶುವೈದ್ಯ ಕಫೀಲ್ ಖಾನ್ ಅವರನ್ನು ಬಂಧಿಸಲಾಯಿತು. ಸೋಮವಾರ ಅವರಿಗೆ ಜಾಮೀನು ನೀಡಲಾಗಿದ್ದರೂ, ಇನ್ನೂ ಅವರನ್ನು ಬಿಡುಗಡೆ ಮಾಡಿಲ್ಲ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂಬೈ ನಗರಕ್ಕೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಮುಂಬೈ ಪೊಲೀಸರ ನೆರವಿನೊಂದಿಗೆ ಜನವರಿ 29 ರಂದು ಕಫೀಲ್ರನ್ನು ಬಂಧಿಸಲಾಗಿತ್ತು.
ಫೆಬ್ರವರಿ 14ರ ಶುಕ್ರವಾರ, ಖಾನ್ ಅವರ ಪತ್ನಿ ಡಾ. ಸಬಿಸ್ಟಾ ಖಾನ್ ಅವರು ತಮ್ಮ ಅಧಿಕೃತ ಹ್ಯಾಂಡಲ್ನಿಂದ ಎನ್ಎಸ್ಎ ಅಡಿಯಲ್ಲಿ ಖಾನ್ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಯಾವುದೇ ಕಾರಣವಿಲ್ಲದೆ ಕಫೀಲ್ಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಬಿಸ್ಟಾ ಆರೋಪಿಸಿದ್ದಾರೆ.
ಡಿಸೆಂಬರ್ 13 ರಂದು ಮುಂಬೈನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವರನ್ನು ಮುಂಬಯಿಯ ಸಹರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು.
ಫೆಬ್ರವರಿ 10 ರಂದು ಕಫೀಲ್ಗೆ ಜಾಮೀನು ನೀಡಲಾಗಿದ್ದರೂ, ಅವರನ್ನು ಇನ್ನೂ ಮಥುರಾ ಜೈಲಿನಿಂದ ಬಿಡುಗಡೆ ಮಾಡಿಲ್ಲ.
ಆಗಸ್ಟ್ 2017 ರಲ್ಲಿ ಗೋರಖ್ಪುರದ ಬಿಆರ್ಡಿ ವೈದ್ಯಕೀಯ ಕಾಲೇಜಿನಲ್ಲಿ ಒಂದು ವಾರದಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಆರೋಪದ ಮೇಲೆ ವೈದ್ಯರನ್ನು ಈ ಹಿಂದೆ ಬಂಧಿಸಲಾಗಿತ್ತು. ಮಕ್ಕಳ ವಾರ್ಡ್ನಲ್ಲಿ ಅಲ್ಪ ಪ್ರಮಾಣದ ಆಮ್ಲಜನಕವಿದ್ದುದು ಆ ಸಮಯದಲ್ಲಿ ಸಾವಿಗೆ ಕಾರಣವೆಂದು ಆರೋಪಿಸಲಾಯಿತು.
ಅವರು 2017 ರ ಆಮ್ಲಜನಕ ದುರಂತದಿಂದ ಗೋರಖ್ಪುರದ ಬಿಆರ್ಡಿ ವೈದ್ಯಕೀಯ ಕಾಲೇಜಿನಿಂದ ಅಮಾನತುಗೊಂಡಿದ್ದಾರೆ. ರಾಜ್ಯ ಸರ್ಕಾರದ ತನಿಖೆಯು ಕಫೀಲ್ ಖಾನ್ ಮೇಲಿನ ಎಲ್ಲಾ ಪ್ರಮುಖ ಆರೋಪಗಳನ್ನು ತೆರವುಗೊಳಿಸಿದ ನಂತರವೂ ಅವರನ್ನು ಅಮಾನತುಗೊಳಿಸಲಾಗಿದೆ.