ನಿರ್ದೇಶಕ, ಸಂಗೀತ ನಿದೇಶಕ ಬಸ್ರೂರು ಅವರ ಹೊಸ ಪ್ರಯತ್ನದ ಗಿರ್ಮಿಟ್ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೊದಲ ಕಮರ್ಷಿಯಲ್ ಚಿತ್ರ ಗಿರ್ಮಿಟ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದಲ್ಲಿ ಮಕ್ಕಳು ದೊಡ್ಡವರ ಧಿರಿಸಿನಲ್ಲಿ ಮನೋಜ್ಞವಾಗಿ ಅಭಿನಿಯಿಸಿದ್ದಾರೆ. ಸ್ಟಾರ್ ನಟರ ಹಿನ್ನಲೆ ಧ್ವನಿ ಕೂಡ ಸಖತ್ ಆಗಿ ಮೂಡಿ ಬಂದಿದೆ.
ಈಗ ಹೊಸ ವಿಷಯವೆಂದರೆ ಚಿತ್ರದಲ್ಲಿ ಅಭಿನಯಿಸಿರುವ ಮಕ್ಕಳು ಹೊಸ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರಗಳಿಗೆ ಧ್ವನಿ ನೀಡಿರುವ ನಟ ಯಶ್ ಮತ್ತು ರಾಧಿಕಾ ಜತೆ ಚಿತ್ರ ವೀಕ್ಷಿಸಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. ಟಿವಿ ವಾಹಿನಿಗಳ ಸಂದರ್ಶನಗಳಲ್ಲಿ ತಮ್ಮ ಆಸೆ ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಮಕ್ಕಳು ಕುಂದಾಪುರದವರು, ಇವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಾಗಿದ್ದಾರೆ. ತಮ್ಮ ನೆಚ್ಚಿನ ನಟ ಡಿ ಬಾಸ್ ಜತೆಯೂ ಚಿತ್ರ ನೋಡಬೇಕು ಎಂಬ ಇಚ್ಛೆ ಹೊರ ಹಾಕಿದ್ದಾರೆ. ನಟ ದರ್ಶನ್ ತಮ್ಮ ಬಿಡುವಿಲ್ಲದ ಶೂಟಿಂಗ್ ಸಮಯದ ಮಧ್ಯೆ ಮಕ್ಕಳ ಆಸೆ ಈಡೇರಿಸುತ್ತಾರೆ ಅಂತಾ ನೋಡಬೇಕು.
ಈ ಮಧ್ಯೆ ಚಿತ್ರಕ್ಕೆ ಮತ್ತೊಂದು ಅಚ್ಚರಿ ಸಂಗತಿ ಎದುರಾಗಿದೆ. ಚಿತ್ರದ ಟ್ರೇಲರ್ ನೋಡಿ ಮೆಚ್ಚಿಕೊಂಡಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಚಿತ್ರ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ತೆಲುಗು, ತಮಿಳು ಚಿತ್ರರಂಗಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿರುತ್ತವೆ. ಕನ್ನಡದ ಈ ಪ್ರಯತ್ನ ಮೆಚ್ಚುವಂತಹದ್ದು, ಇಂತಹ ಪ್ರಯತ್ನಗಳು ಹೆಚ್ಚಾಗಲಿ. ಚಿತ್ರಕ್ಕೆ ಡಬ್ ಮಾಡುವಂತೆ ನನಗೆ ಕೇಳಿದ್ದರೆ ಖಂಡಿತ ಮಾಡುತ್ತಿದ್ದೆ, ಎಂದು ಹೇಳಿ ಅಚ್ಚರಿ ಮೂಡಿಸಿದರು.